ಶ್ರವಣಬೆಳಗೊಳ ಎಂದಾಕ್ಷಣ ಮನಸ್ಸಿಗೆ ಬರುವುದು ಏಕಶಿಲಾ ಮೂರ್ತಿ ಗೊಮಟೇಶ್ವರ. ಗಂಗರ ಆಳ್ವಿಕೆಯಲ್ಲಿ ಶ್ರೀಮಂತ ಗೊಂಡ ಈ ಪ್ರದೇಶ ಅನೇಕ ಐಸತಿಹಾಸಿಕ ಹಾಗೂ ಪವಿತ್ರ ಕ್ಷೇತ್ರಗಳನ್ನು ಒಳಗೊಂಡಿದೆ. ಇಲ್ಲಿರುವ ಕನ್ನಡ ಹಾಗೂ ತಮಿಳು ಭಾಷೆಯ ಶಾಸನಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಜೈನರ ಪವಿತ್ರ ಕ್ಷೇತ್ರವಾದ ಇಲ್ಲಿ ಅಕ್ಕನ ಬಸದಿ ಎನ್ನುವ ದೇಗುಲವನ್ನು ನೋಡಬಹುದು.
ಹೊಯ್ಸಳರ ರಾಜ ವೀರ ಬಲ್ಲಾಳನ ಕಾಲದಲ್ಲಿ ನಿರ್ಮಿಸಲಾಯಿತು. ಈ ದೇಗುಲ ಚಂದ್ರಮೌಳಿಯ ಪತ್ನಿ ಅಚಲದೇವಿಯ ಸವಿ ನೆನಪಿಗೆ ನಿರ್ಮಿಸಲಾಯಿತು ಎನ್ನವ ಇತಿಹಾಸವಿದೆ. 1181ರಲ್ಲಿ ನಿರ್ಮಾಣಗೊಂಡ ಈ ಬಸದಿ ಜೈನರ 23ನೇ ತೀರ್ಥಂಕರ ಪಾರ್ಶ್ವನಾಥನಿಗೆ ಮೀಸಲಾಗಿದೆ. ಇದು ಭಾರತದ ಪುರಾತತ್ವ ಸಂರಕ್ಷಣಾ ಇಲಾಖೆಯ ಅಧೀನದಲ್ಲಿದೆ. ಹಾಗಾಗಿಯೇ ಇಲ್ಲಿಯ ಕೆತ್ತನೆ ಹಾಗೂ ವಾಸ್ತುಶಿಲ್ಪಗಳು ಸುರಕ್ಷಿತಗೊಂಡಿವೆ ಎನ್ನಲಾಗುತ್ತದೆ.
PC: en.wikipedia.org
ಕಲಾ ಇತಿಹಾಸಕಾರ ಆಡರ್ಮ್ ಹಾರ್ಡಿಯ ಪ್ರಕಾರ ಈ ಬಸದಿ ಸರಳವಾದ ಸುಂದರ ಕೆತ್ತನೆಗಳಿಂದ ಕೂಡಿದೆ. ಒಳಭಾಗದಲ್ಲಿ ವಿಶಾಲವಾದ ಮಂಟಪ, ಗರ್ಭಗೃಹ, ಏಳು ತಲೆಯ ಹಾವಿನ ಮೇಲೆ ನಿಂತಿರುವ ಪಾರ್ಶ್ವನಾಥ ತೀರ್ಥಂಕರರು, ಸುಂದರವಾದ ಸುಕನಾಸಿ ಹಾಗೂ ಪ್ರತಿಯೊಂದು ಗೋಡೆ ಮತ್ತು ಕಂಬಗಳ ಮೇಲೆ ವಿಶೇಷವಾದ ಸೂಕ್ಷ್ಮ ಕಲಾಕೃತಿಗಳಿವೆ.
PC: en.wikipedia.org
ಬಸದಿಯ ದ್ವಾರದ ಮುಖವು ವಾಸ್ತು ಪ್ರಕಾರ ಪೂರ್ವ ದಿಕ್ಕಿನಲ್ಲಿದೆ. ಬಸಿದಿಯು ಐದು ಅಧಿಷ್ಠಾನದಲ್ಲಿ ನಿಂತಿರುವುದು ವಿಶೇಷ. ಇದರ ಗೋಪುರವು ಸಮತಟ್ಟಾಗಿದೆ. ಬಸದಿಯ ಒಳ ಹಾಗೂ ಹೊರ ಭಾಗದಲ್ಲಿರುವ ಕಂಬಗಳು ಬಹಳ ಸುಂದರವಾದ ನಾಜೂಕು ಕೆತ್ತನೆಯಿಂದ ಆಕರ್ಷಿಸುತ್ತವೆ. ಸ್ವಲ್ಪ ಗುಡ್ಡ ಪ್ರದೇಶದಲ್ಲಿಯೇ ಆವರಿಸಿಕೊಂಡಿರುವ ಈ ದೇಗುಲ ಜೈನ ಭಕ್ತಾಧಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.
PC: en.wikipedia.org
ಈ ಬಸದಿಯ ಹೊರವಲಯವು ಬಹಳ ವಿಶಾಲ ಹಾಗೂ ಶಾಂತ ವಾತಾವರಣದಿಂದ ಕೂಡಿದೆ. ವಾರದ ರಜೆಯಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮನ ತಣಿಯುವುದು. ಇದಕ್ಕೆ ಹತ್ತಿರದಲ್ಲಿಯೇ ಚಂದ್ರ ಗಿರಿ ಹಾಗೂ ಇಂದ್ರಗಿರಿ ಬೆಟ್ಟದಲ್ಲಿ ಚಾರಣ ಮಾಡಬಹುದು. ಬೆಂಗಳೂರಿನಿಂದ 158 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಅನೇಕ ಸಾರಿಗೆ ವ್ಯವಸ್ಥೆಗಳಿವೆ. ಹಾಸನದ ಆವೃತ್ತಿಯಲ್ಲಿ ಈ ಕ್ಷೇತ್ರ ಇರುವುದರಿಂದ ನಗರ ಭಾಗದಲ್ಲಿ ಅನುಕೂಲಕ್ಕೆ ತಕ್ಕಂತಹ ವಸತಿ ಸೌಲಭ್ಯವನ್ನು ಹೊಂದಬಹುದು.