ನಾರ್ಥ್ ಕೆನರಾ ಎಂತಲೂ ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಒಂದು ಕೊಂಕಣ ಜಿಲ್ಲೆ. ಉತ್ತರಕ್ಕೆ ಗೋವಾ ರಾಜ್ಯ ಹಾಗೂ ಬೆಳಗಾವಿ ಜಿಲ್ಲೆ, ಪೂರ್ವಕ್ಕೆ ಧಾರವಾಡ ಹಾಗೂ ಹಾವೇರಿ ಜಿಲ್ಲೆ, ದಕ್ಷಿಣಕ್ಕೆ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆ, ಪಶ್ಚಿಮಕ್ಕೆ ಅರಬ್ಬಿ ಸಮುದ್ರದಿಂದ ಈ ಜಿಲ್ಲೆಯು ಆವೃತವಾಗಿದೆ. ಜಿಲ್ಲೆಯ ಜಿಲ್ಲಾ ಕೇಂದ್ರವಾಗಿ ಕಾರವಾರ ಪಟ್ಟಣವು ಕಾರ್ಯನಿರ್ವಹಿಸುತ್ತದೆ.
ಪಶ್ಚಿಮ ಘಟ್ಟಗಳ ಭವ್ಯ ಪರ್ವತ ಸಿರಿಗಳಲ್ಲಿ ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯು ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವವನ್ನು ಪಡೆದಿದ್ದು ಹಲವಾರು ಗಮ್ಯವಾದಂತಹ ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ನೋಡಬಹುದಾಗಿದೆ. ಸಮರ್ಪಕವಾದ ರಸ್ತೆಗಳ ಜಾಲ ಹಾಗೂ ಸುಗಮವಾದ ರೈಲು ಮಾರ್ಗಗಳನ್ನು ಹೊಂದಿರುವ ಈ ಜಿಲ್ಲೆಯನ್ನು ರಾಜ್ಯದ ವಿವಿಧ ಪ್ರಮುಖ ಪಟ್ಟಣಗಳಿಂದ ಸುಲಭವಾಗಿ ರೈಲು ಹಾಗೂ ಬಸ್ಸುಗಳ ಮೂಲಕ ತಲುಪಬಹುದಾಗಿದೆ.
ಮುಖ್ಯವಾಗಿ ಈ ಜಿಲ್ಲೆಯಲ್ಲಿ ಕಂಡುಬರುವ ಪ್ರಮುಖ ಪ್ರವಾಸಿ ತಾಣಗಳೆಂದರೆ ಅಂಕೋಲಾ, ಬನವಾಸಿ, ಭಟ್ಕಳ, ದಾಂಡೇಲಿ, ಗೋಕರ್ಣ, ಹೊನ್ನಾವರ, ಕಾರವಾರ, ಕುಮಟಾ, ಮುರುಡೇಶ್ವರ, ಸಿದ್ಧಾಪುರ, ಶಿರಸಿ ಹಾಗೂ ಯಲ್ಲಾಪುರ.
ಅಂಕೋಲಾ:
ಅಂಕೋಲಾ ಉತ್ತರ ಕನ್ನಡ ಜಿಲ್ಲೆಯ ಒಂದು ಪುಟ್ಟ ಪಟ್ಟಣವಾಗಿದ್ದು ಅರಬ್ಬಿ ಸಮುದ್ರ ಹಾಗೂ ಕಾಳಿ ನದಿಯಿಂದ ಸುಂದರವಾಗಿ ಆವೃತವಾಗಿದ್ದು ಜಿಲ್ಲೆಯ ಪ್ರವಾಸಿ ಆಕರ್ಷಣೆಯಾಗಿದೆ. ಅಲ್ಲದೆ ಈ ಪಟ್ಟಣವು ತನ್ನದೆ ಮಾವಿನ ಹಣ್ಣಿನ ತಳಿಯಾದ "ಇಶಾದ್" ಗೆ ಹೆಸರುವಾಸಿಯಾಗಿದ್ದು, ಗೋಡಂಬಿ ಹಣ್ಣುಗಳಿಗೂ ಸಹ ಪ್ರಸಿದ್ಧಿ ಪಡೆದಿದೆ.
ಚಿತ್ರಕೃಪೆ: indiawaterportal.org
ಬಸವರಾಜದುರ್ಗ ದ್ವೀಪ:
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಈ ಗಮ್ಯ ಪ್ರವಾಸಿ ತಾಣವನ್ನು ನೋಡಬಹುದು. ಅರೇಬಿಯನ್ ಸಮುದ್ರದ ಮಧ್ಯದಲ್ಲಿ ರೂಪಗೊಂಡ ದ್ವೀಪ ಇದಾಗಿದೆ. ಈ ದ್ವೀಪದಲ್ಲಿ ಕೋಟೆಯೊಂದನ್ನು ಸಹ ನೋಡಬಹುದು. ಅಲ್ಲದೆ 16 ನೇಯ ಶ್ತಮಾನದಲ್ಲಿ ನಿರ್ಮಾಣವಾದ ದೇವಾಲಯವೊಂದು ಸಹ ಇಲ್ಲಿದ್ದು ಪ್ರತಿ ವರ್ಷ ಜನವರಿ 14 ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗ್ರಾಮದ ಬೆಸ್ತರು ಕುಟುಂಬ ಸಮೇತ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಕೃತಿಯು ವಿಕೋಪಗೊಳ್ಳದೆ ತಮ್ಮನ್ನು ಕಾಪಾಡುವಂತೆ ಪ್ರಾರ್ಥಿಸುತ್ತಾರೆ.
ಚಿತ್ರಕೃಪೆ: Kumarcnaik
ಸಹಸ್ರಲಿಂಗ:
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸಹಸ್ರಲಿಂಗವು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಶಲ್ಮಲಾ ನದಿ ತಟದಲ್ಲಿ ಕಲ್ಲುಗಳ ಮೇಲೆ ಅಸಂಖ್ಯಾತ ಶಿವಲಿಂಗಗಳನ್ನು ಕೆತ್ತಲಾಗಿದ್ದು ನೋಡುಗರಲ್ಲಿ ಆಸಕ್ತಿಯನ್ನು ಮೂಡಿಸುತ್ತವೆ. ಶಿವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Unique.creator
ಮಿರ್ಜಾನ್ ಕೋಟೆ:
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿ ತೀರದಲ್ಲಿ ನೆಲೆಸಿರುವ ಮಿರ್ಜಾನ್ ಕೋಟೆ ಒಂದು ಪ್ರಮುಖ ಐತಿಹಾಸಿಕ ಕೋಟೆಯಾಗಿದೆ. ಪ್ರಸಿದ್ಧ ಕ್ಷೇತ್ರ ಗೋಕರ್ಣದಿಂದ ಸುಮಾರು 11 ಕಿ.ಮೀ ದೂರದಲ್ಲಿ ಈ ಕೋಟೆಯನ್ನು ಕಾಣಬಹುದು.
ಚಿತ್ರಕೃಪೆ: Ramnath Bhat
ಕ್ಯಾಸಲ್ ರಾಕ್:
ಕ್ಯಾಸಲ್ ರಾಕ್ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿ. ಪ್ರಸ್ತುತ ದಾಂಡೇಲಿ ಹುಲಿ ಮೀಸಲು ಪ್ರದೇಶದ ಭಾಗವಾಗಿರುವ ಈ ಹಳ್ಳಿಯು ಹಿಂದೆ 1961 ರ ವರೆಗೂ ಪೋರ್ಚುಗೀಸರ ಸುಪರ್ದಿಯಲ್ಲಿತ್ತು ಹಾಗೂ ದಾಖಲೆಗಳ ಅವಲೋಕನ ಮುಂತಾದ ಅಂತಾರಾಷ್ಟ್ರೀಯ ಪ್ರಯಾಣದ ವಿಧಿ ವಿಧಾನಗಳನ್ನು ಇಲ್ಲಿ ಅನುಸರಿಸಲಾಗುತ್ತಿತ್ತು. ಅದು ಕೂಡ ಗೋವಾ ಹಾಗೂ ಬ್ರಿಟೀಷ್ ಭಾರತದ ಪ್ರಯಾಣಿಕರ ಮಧ್ಯದಲ್ಲಿ. ಗೋವಾದ ದೂಧ್ ಸಾಗರ್ ಜಲಪಾತ ಇಲ್ಲಿಂದ ಅತಿ ಸನಿಹದಲ್ಲಿದೆ.
ಚಿತ್ರಕೃಪೆ: Purshi
ಬನವಾಸಿ:
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬನವಾಸಿಯು ತನ್ನಲ್ಲಿರುವ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಅಲ್ಲದೆ ಕರ್ನಾಟಕದ ಅತಿ ಪುರಾತನ ಪಟ್ಟಣ ಎಂಬ ಹೆಗ್ಗಳಿಕೆಗೆ ಬನವಾಸಿಯು ಪಾತ್ರವಾಗಿದೆ. ಚೀನಾ ದೇಶದ ರಾಯಭಾರಿ ಹೂಯೆನ್ ತ್ಸಾಂಗ್ ತನ್ನ ದಾಖಲೆಗಳಲ್ಲಿ ಬನವಾಸಿಯನ್ನು ಕುರಿತು ಉಲ್ಲೇಖಿಸಿದ್ದಾನೆ.
ಚಿತ್ರಕೃಪೆ: Anannya deb
ಬನವಾಸಿ:
ಅತಿ ಕಲಾತ್ಮಕತೆಯಿಂದ ಕೂಡಿದ ಬನವಾಸಿಯ ಸುಪ್ರಸಿದ್ಧ ಮಧುಕೇಶ್ವರ ದೇವಸ್ಥಾನ.
ಚಿತ್ರಕೃಪೆ: Clt13
ದಾಂಡೇಲಿ:
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳಲಿ ನೆಲೆಸಿರುವ ಪ್ರಸಿದ್ಧ ಪ್ರವಾಸಿ ಪಟ್ಟಣ ದಾಂಡೇಲಿ. ಇಲ್ಲಿನ ವನ್ಯಜೀವಿ ಅಭಯಾರಣ್ಯದಿಂದ ತಾಣವು ಪ್ರಖ್ಯಾತವಾಗಿದೆ.
ಚಿತ್ರಕೃಪೆ: Sowmya Kidambi
ಗೋಕರ್ಣ:
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿ ತೀರದಲ್ಲಿ ನೆಲೆಸಿರುವ ತೀರ್ಥ ಕ್ಷೇತ್ರ ಪಟ್ಟಣ ಗೋಕರ್ಣ.
ಚಿತ್ರಕೃಪೆ: Uleli
ಗೋಕರ್ಣ:
ಈ ಪಟ್ಟಣದ ಮುಖ್ಯ ದೇವಾಲಯದ ಮುಖ್ಯ ದೇವ ಶಿವನ ರೂಪನಾದ ಮಹಾಬಲೇಶ್ವರ.
ಚಿತ್ರಕೃಪೆ: Vedamurthy.j
ಗೋಕರ್ಣ:
ಅಲ್ಲದೆ ಗೋಕರ್ಣದಲ್ಲಿ ಓಂ ಬೀಚ್, ಹಾಫ್ ಮೂನ್ ಬೀಚ್ ಗಳಂತಹ ಆಕರ್ಷಕ ಕಡಲ ತೀರಗಳನ್ನು ಕಾಣಬಹುದು.
ಗೋಕರ್ಣ:
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿ.
ಚಿತ್ರಕೃಪೆ: Nvvchar
ಗೋಕರ್ಣ:
ಇಲ್ಲಿನ ಕಡಲ ತೀರಗಳಲ್ಲಿ ಒಂಟೆಗಳ ಮೇಲೆ ಕುಳಿತು ಸುತ್ತುವುದು ಕೂಡ ಒಂದು ಪ್ರವಾಸಿ ಆಕರ್ಷಣೆಯಾಗಿದೆ.
ಚಿತ್ರಕೃಪೆ: Andre Engels
ಹಡವಳ್ಳಿ:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ 20 ಕಿ.ಮೀ ದೂರದಲ್ಲಿರುವ ಹಡವಳ್ಳಿ ಒಂದು ಸಣ್ಣ ಹಳ್ಳಿ. ಈ ಹಳ್ಳಿಯು ಮುಖ್ಯವಾಗಿ ಪುರಾತನ ಜೈನ ಬಸದಿಗಳಿಂದಾಗಿ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಚಂದ್ರನಾಥ ಬಸದಿ ಜೊತೆಗೆ ಹಲವಾರಿ ಇತರೆ ಬಸದಿಗಳನ್ನು ಇಲ್ಲಿ ಕಾಣಬಹುದು. ಸದ್ಯ ಇವುಗಳು ಕಡೆಗಣಿಸಲ್ಪಟ್ಟಿದ್ದು ದುರದೃಷ್ಟ.
ಚಿತ್ರಕೃಪೆ: Sandesh Bhat
ಹೊನ್ನಾವರ:
ಕಾರವಾರ ಪಟ್ಟಣದಿಂದ 90 ಕಿ.ಮೀ ದೂರದಲ್ಲಿರುವ ಹೊನ್ನಾವರವು ಉತ್ತರ ಕನ್ನಡ ಜಿಲ್ಲೆಯ ಒಂದು ಚಿಕ್ಕ ಕರಾವಳಿ ಪಟ್ಟಣವಾಗಿದೆ. ಅಪಾರವಾದ ಪ್ರಕೃತಿ ಸೊಬಗಿನಿಂದ ಕೂಡಿರುವ ಈ ಪಟ್ಟಣವು ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ದಕ್ಷಿಣಕ್ಕೆ ಶರಾವತಿ ನದಿಯಿಂದ ಸುತ್ತುವರೆದಿದೆ. ಹೊನ್ನಾವರದ ಸುತ್ತಮುತ್ತಲು ಮುರುಡೇಶ್ವರ, ಇಡಗುಂಜಿ, ಅಪ್ಸರಕೊಂಡ, ಗೇರುಸೊಪ್ಪ, ಕರಿಕಣ್ಣಮ್ಮ ಹೀಗೆ ಗುರುತರವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Benjamín Preciado
ಇಡಗುಂಜಿ:
ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯು, ಇಡಗುಂಜಿ ಗಣಪನ ದೇವಾಲಯದಿಂದಾಗಿ ಅತಿ ಜನಪ್ರಿಯವಾಗಿದೆ. ಪ್ರತಿ ವರ್ಷ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಗಣಪನ ದರುಶನ ಕೋರಿ ಇಲ್ಲಿಗೆ ಆಗಮಿಸುತ್ತಾರೆ. ದಂತಕಥೆಯ ಪ್ರಕಾರ, ದ್ವಾಪರಯುಗದ ಅಂತ್ಯದ ಸಮಯದಲ್ಲಿ ಶ್ರೀ ಕೃಷ್ಣನು ತನ್ನ ಲೋಕಕ್ಕೆ ಮರಳುವ ಸಂದರ್ಭದಲ್ಲಿ ಭೂಲೋಕದಲ್ಲಿ ಹಾಹಾಕರವೆದ್ದಿತು. ದೃಷ್ಟ ಶಕ್ತಿಗಳು ಬೆಳೆಯುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವಲಖಿಲ್ಯ ಮುನಿಗಳು ಹವನ ಯಜ್ಞಾದಿಗಳನ್ನು ಪ್ರಾರಂಭಿಸಿದರಾದರೂ ತೊಂದರೆಗಳು ತಪ್ಪಲಿಲ್ಲ. ನಂತರ ನಾರದ ಮುನಿಯ ಸಲಹೆ ಮೆರೆಗೆ ಗಣೇಶನನ್ನು ಕುರಿತು ಇಲ್ಲಿ ನೆಲೆಸಿ ಬರುವ ವಿಘ್ನಗಳನ್ನು ನಿವಾರಿಸಬೇಕೆಂದು ಪ್ರಾರ್ಥಿಸಿದರು.
ಚಿತ್ರಕೃಪೆ: idagunji.org
ಉಂಚಳ್ಳಿ ಜಲಪಾತ:
ಲಶಿಂಗ್ಟನ್ ಜಲಪಾತ ಎಂತಲೂ ಕರೆಯಲ್ಪಡುವ ಉಂಚಳ್ಳಿ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿ ಸ್ಥಿತವಿದೆ. 381 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಅಘನಾಶಿನಿ ನದಿಯಿಂದ ರೂಪಿತವಾಗಿದೆ.
ಚಿತ್ರಕೃಪೆ: Balaji Narayanan
ಕರಿಕಣ್ಣಮ್ಮ:
ಇದು ಕಾಳಿ ದೇವಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಳಿ ಇದೆ. ದೇವಾಲಯವು ಬೆಟ್ಟದ ಮೇಲಿದ್ದು ಇದರ ಮೇಲಿಂದ ನೋಡಿದಾಗ ಹೊನ್ನಾವರ ಪ್ರದೇಶದ ಸೊಬಗು ಕಣ್ಣು ಕಟ್ಟುವಂತೆ ಮಾಡುತ್ತದೆ.
ಚಿತ್ರಕೃಪೆ: uttarakannada.nic.in
ಕಾಳಿ ನದಿ:
ಕಾರವಾರ ಪಟ್ಟಣದ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿದಿರುವ ಕಾಳಿ ನದಿಯು ಜಿಲ್ಲೆಯ ಜೀವ ನಾಡಿಯಾಗಿದೆ. ಜಲ ವಿದ್ಯುತ್ ಉತ್ಪಾದನೆಗೆಂದು ಹಲವಾರು ಆಣೆಕಟ್ಟುಗಳನ್ನು ಈ ನದಿಗೆ ಕಟ್ಟಲಾಗಿದ್ದು ಇದೊಂದು ಜಿಲ್ಲೆಯ ಪ್ರಮುಖ ನದಿಯಾಗಿದೆ. ಗಣೇಶಗುಡಿಯಲ್ಲಿರುವ ಸೂಪಾ ಆಣೆಕಟ್ಟು ಈ ನದಿಗೆ ಕಟ್ಟಲಾದ ಪ್ರಮುಖ ಆಣೆಕಟ್ಟಾಗಿದ್ದು ಈ ನದಿಯು ಅರಬ್ಬಿ ಸಮುದ್ರದಲ್ಲಿ ಸಮಾಗಮಗೊಳ್ಳುವ ಮುಂಚೆ ಸುಮಾರು 184 ಕಿ.ಮೀ ದೂರದವರೆಗೆ ಜಿಲ್ಲೆಯಲ್ಲಿ ಹರಿದಿದೆ.
ಚಿತ್ರಕೃಪೆ: Rane.abhijeet
ಸದಾಶಿವಗಡ:
ಇದು ಕಾರವಾರ ಪಟ್ಟಣದ ಬಳಿಯಿರುವ ಒಂದು ಕೋಟೆಯ ತಾಣವಾಗಿದ್ದು ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದೆ.
ನಂದನಗಡ್ಡ:
ಕಾರವಾರ ತಾಲೂಕಿನಲ್ಲಿರುವ ನಂದನಗಡ್ಡ ಒಂದು ಚಿಕ್ಕ ಕರಾವಳಿ ಹಳ್ಳಿಯಾಗಿದೆ. ಇಲ್ಲಿರುವ ಜೈ ಸಂತೋಷಿ ಮಾತೆಯ ಮಂದಿರವು ಪ್ರಮುಖವಾಗಿ ಭೇಟಿ ನೀಡಬಹುದಾದ ದೇವಿಯ ದೇವಾಲಯವಾಗಿದೆ.
ಮಾಗೋಡ ಜಲಪಾತ:
ಬೆಡ್ತಿ ನದಿಯಿಂದ ರೂಪಿತವಾದ, 200 ಮೀ. ಎತ್ತರದಿಂದ ಧುಮುಕುವ ಮಾಗೋಡು ಜಲಪಾತವು ಎರಡು ಪದರುಳ್ಳ ಜಲಪಾತವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಿಂದ 17 ಕಿ.ಮೀ ದೂರದಲ್ಲಿ ಸ್ಥಿತವಿದೆ.
ಚಿತ್ರಕೃಪೆ: Prad.gk
ನೇತ್ರಾಣಿ ದ್ವೀಪ:
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಿಂದ 19 ಕಿ.ಮೀ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ರೂಪಿತವಾದ ದ್ವೀಪ ತಾಣ ಇದಾಗಿದೆ. ಇದರ ಸುತ್ತಮುತ್ತಲು ನೀರಿನಾಳದಲ್ಲಿ ಹವಳದ ದಿಬ್ಬಗಳನ್ನು ಕಾಣಬಹುದಾಗಿದ್ದು ಬಣ್ಣ ಬಣ್ಣದ ವೈವಿಧ್ಯಮಯ ಮೀನುಗಳನ್ನು ಇಲ್ಲಿ ಕಾಣಬಹುದಾಗಿದೆ. ಸ್ಕೂಬಾ ಡೈವಿಂಗ್ ನಂತಹ ಚಟುವಟಿಕೆಗಳನ್ನು ನಡೆಸಲು ಇದು ಆದರ್ಶಪ್ರಾಯವಾಗಿದೆ.
ಸಾತೊಡ್ಡಿ ಜಲಪಾತ:
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಇರುವ ಕಲ್ಲರಮರನೆ ಘಾಟ್ ನಲ್ಲಿ ಈ ಜಲಪಾತವಿರುವುದನ್ನು ಕಾಣಬಹುದು. ಸುಮಾರು 50 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತದ ನೀರು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಕೊಡಸಳ್ಳಿ ಜಲಾಶಯದ ಹಿನ್ನೀರಿನಲ್ಲಿ ಸಮಾಗಮಗೊಳ್ಳುತ್ತದೆ.
ಚಿತ್ರಕೃಪೆ: Hema Priyadharshini
ಕುಮಟಾ:
ಕುಮಟಾ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಪಟ್ಟಣ ಹಾಗೂ ಕೊಂಕಣ ರೈಲು ಮಾರ್ಗದ ಒಂದು ಪ್ರಮುಖ ನಿಲುಗಡೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಸಿರುವ ಈ ಪಟ್ಟಣವು ಇನ್ನೊಂದೆಡೆಯಿಂದ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದ್ದು ಪ್ರವಾಸಿ ದೃಷ್ಟಿಯಿಂದ ಜನಪ್ರಿಯವಾದ ಸ್ಥಳವಾಗಿದೆ.
ಚಿತ್ರಕೃಪೆ: Kamat
ಮುರುಡೇಶ್ವರ:
ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತ ಧಾರ್ಮಿಕ ಪ್ರವಾಸಿ ಕ್ಷೇತ್ರವಾಗಿದೆ. ಅರಬ್ಬಿ ಸಮುದ್ರಕ್ಕೆ ಏದುರಾಭಿಮುಖ ಮಾಡಿ ನೆಲೆಸಿರುವ ಈ ಕ್ಷೇತ್ರಕ್ಕೆ ಪ್ರತಿ ವರ್ಷವೂ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಚಿತ್ರಕೃಪೆ: Yogesa
ಮುರುಡೇಶ್ವರ:
ಅಲ್ಲದೆ ಇಲ್ಲಿ ನಿರ್ಮಿಸಲಾಗಿರುವ ಶಿವನ ಬೃಹತ್ ಪ್ರತಿಮೆಯು ನೋಡಲು ಅತಿ ಚೆಂದವಾಗಿದ್ದು ಜಗತ್ತಿನಲ್ಲೆ ಎರಡನೇಯ ಅತಿ ಎತ್ತರದ ಶಿವನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಿತ್ರಕೃಪೆ: Lucky vivs
ಯಾಣ:
ಚಾರಣಪ್ರಿಯ ಪ್ರವಾಸಿಗರಲ್ಲಿ ಅತಿ ಜನಪ್ರಿಯವಾದ ಸ್ಥಳ ಯಾಣ ಎಂಬ ಹಳ್ಳಿ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ಹಳ್ಳಿಯು ತನ್ನಲ್ಲಿನ ಉಲ್ಕೆಯಿಂದ ವಿಶಿಷ್ಟವಾಗಿ ರಚಿತವಾದ ಭೈರವೇಶ್ವರ ಹಾಗೂ ಮೋಹಿನಿ ಶಿಖರಗಳಿಗಾಗಿ ಬಹು ಪ್ರಖ್ಯಾತವಾಗಿದೆ.
ಚಿತ್ರಕೃಪೆ: Sonarpulse