'ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ' ಎನ್ನುವ ಮಾತು ನಿಜಕ್ಕೂ ಎಷ್ಟು ಅದ್ಭುತ ಅಲ್ಲವಾ? ಕಲ್ಪನೆ, ಅದಕ್ಕೆ ಸರಿಯಾದ ರೂಪ ಕೊಡುವುದು ಕಲೆಗಾರನ ಕೈ ಚಳಕದಲ್ಲಿ ಅಡಗಿರುತ್ತದೆ. ಅಂತಹ ಒಂದು ವಿಶೇಷವಾದ ಅದ್ಭುತ ಕಲೆ ಮರಳಿನಲ್ಲಿ ಅರಳಿದೆ. ಅದೆಲ್ಲಿ ಎನ್ನುವ ಕುತೂಹಲವೇ? ಹಾಗಾದರೆ ಬನ್ನಿ ಮೈಸೂರಿಗೆ... ಸುಂದರ ಕಲೆಯ ಸಿರಿಯನ್ನು ಕಣ್ತುಂಬಿಕೊಳ್ಳಿ...
ಮತ್ಸ್ಯ ಕನ್ನಿಕೆಯ ನೃತ್ಯ, ಮತ್ತೊಂದೆಡೆ ವನ್ಯ ಮೃಗಗಳ ಹಿಂಡು, ಮೆರವಣಿಗೆ ಹೊರಟ ರಾಜಪರಿವಾರ ಹೀಗೆ ಅನೇಕ ಕಲಾಕೃತಿಗಳನ್ನು ಮರಳಿನಲ್ಲೇ ಸೃಷ್ಟಿಸಿರುವವರು ಎಮ್. ಎನ್. ಗೌರಿ. ಈಕೆಯ ಕಲೆಯ ಕೌಶಲ್ಯ ಭಾರತದೆಲ್ಲೆಡೆ ಹರಡಿದೆ.
PC: wikimedia.org
ಎಲ್ಲಿದೆ ಈ ತಾಣ
ಮೈಸೂರಿನ ಕೆ.ಸಿ ಲೇಔಟ್ನಲ್ಲಿ ಬರುವ ಜಾಕಿ ಕ್ವಾಟ್ರಸ್ಅಲ್ಲಿ ಇಡಲಾಗಿದೆ. ಒಂದು ಎಕರೆ ತೆಂಗಿನ ತೋಟದಲ್ಲಿ ಈ ಕಲೆ ಕಂಗೊಳಿಸುತ್ತಿದೆ. ಇಲ್ಲಿ ಕೇವಲ ಬೆರಳೆಣಿಕೆಯದ್ದಲ್ಲ. ಪ್ರತಿವರ್ಷವೂ ಹೊಸ ಹೊಸ ಮರಳಿನ ಶಿಲ್ಪಗಳು ತಲೆ ಎತ್ತುತ್ತವೆ. ಭಾರತದಲ್ಲೇ ಮೊಟ್ಟ ಮೊದಲ ಮರಳು ಶಿಲ್ಪ ಸಂಗ್ರಹಾಲಯ ಎನ್ನುವ ಹಿರಿಮೆ ಇದರದ್ದು. ಸಂಗ್ರಹಾಲಯಕ್ಕೆ ಹಾನಿಯಾಗದಂತೆ ಕಾಪಾಡಲು ಪ್ಲ್ಯಾಸ್ಟಿಕ್ ಚಾವಣಿ ಮಾಡಲಾಗಿದೆ.
ಶಿಲ್ಪಗಳ ಸಿರಿ
ಎಲ್ಲಾ ಧರ್ಮವೂ ಒಂದೇ ಎನ್ನುವ ಭಾವೈಕ್ಯತೆ ಮೆರೆಯುವ ಕಲಾಕೃತಿಗಳು, ದೇವಿಯ ಕಲಾಕೃತಿ, ಮಹಾಭಾರತದಲ್ಲಿ ಯುದ್ಧಕ್ಕೆ ಹೊರಟ ಶ್ರೀಕೃಷ್ಣಾರ್ಜುನ ಸಂಭಾಷಣೆಯ ಕಲಾಕೃತಿ, ಮಕ್ಕಳನ್ನು ಆಕರ್ಷಿಸುವ ಟಾಮ್ ಅಂಡ್ ಜರ್ರಿ, ಹುಲಿ, ಸಿಂಹ, ನವಿಲು, ಗರುಡ, ಆನೆ, ಹೀಗೆ ಅನೇಕ ಪ್ರಾಣಿಗಳ ಚಿತ್ರಾಕೃತಿಗಳು ಮೂಡಿಬಂದಿವೆ.
ಹತ್ತಿರದ ಆಕರ್ಷಣೆ
ಮೈಸೂರು ಅರಮನೆ, ಮೈಸೂರು ಪ್ರಾಣಿ ಸಂಗ್ರಹಾಲಯ, ಚಾಮುಂಡಿ ಬೆಟ್ಟಗಳು ಈ ಸಂಗ್ರಹಾಲಯಕ್ಕೆ ಹತ್ತಿರವೇ ಇರುವುದರಿಂದ ಇಲ್ಲಿಗೂ ಒಮ್ಮೆ ಭೇಟಿ ನೀಡಬಹುದು.
ಇತರ ಮಾಹಿತಿ
ಪ್ರತಿದಿನವೂ ವೀಕ್ಷಕರಿಗಾಗಿ ಬೆಳಗ್ಗೆ 8.30 ರಿಂದ ಸಂಜೆ 6.30ರ ವರೆಗೆ ತೆರೆದಿರುತ್ತದೆ. ಬೆಂಗಳೂರಿನಿಂದ 152 ಕಿ.ಮೀ. ದೂರ ಸಾಗಿದರೆ ಸಂಗ್ರಹಾಲಯ ಸಿಗುತ್ತದೆ.