ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಪರಿಶ್ಶಿನಿಕಡುವು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದೆ. ಇದು ಮೂಲತಃ ಮುತ್ತಪ್ಪನ ದೇವಾಲಯದಿಂದಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಅದರಲ್ಲೂ ವಿಶೇಷವಾಗಿ ಮುತ್ತಪ್ಪನನ್ನು ಕರ್ನಾಟಕದ ಕೊಡಗು ಹಾಗೂ ಮಂಗಳೂರಿನ ಕೆಲವು ಸ್ಥಳಗಳಲ್ಲಿಯೂ ಆರಾಧಿಸಲಾಗುತ್ತದೆ.
ನಿಮಗಿಷ್ಟವಾಗಬಹುದಾದ : ಕೇರಳದ ಏಳು ಆಶ್ಚರ್ಯಕರ ದೇವಾಲಯಗಳು
ಮುತ್ತಪ್ಪ, ಮೂಲತಃ ತಿರುವಪ್ಪನ ಹಾಗೂ ವೆಳ್ಳಾಟಂ ಎರಡು ಅಂಶಗಳ ಸಮಾಗಮವಾಗಿದೆ. ಅಂದರೆ ಮುತ್ತಪ್ಪ ಶಿವ ಹಾಗೂ ವಿಷ್ಣುವಿನ ಅಂಶವಿರುವ ದೈವ ರೂಪಿ. ತೆಯ್ಯಂ ಜನಾಂಗದವರ ಪ್ರಮುಖ ಆರಾಧ್ಯ ದೈವ. ಇವರು ದಕ್ಷಿಣ ಕನ್ನಡದಲ್ಲಿ ಕಂಡುಬರುವಂತೆ ಭೂತದ ಕೋಲದಂತಹ ಆಚರೆಣೆಯಾದ ತಿರುವಪ್ಪನ ಹಾಗೂ ವೆಳ್ಳಾಟಂ ಅನ್ನು ಆಚರಿಸುತ್ತಾರೆ.
ಚಿತ್ರಕೃಪೆ: Dexsolutions
ಈ ಆಚರಣೆಯಲ್ಲಿ ಅದರಲ್ಲೂ ವಿಶೇಷವಾಗಿ ಪರಿಶ್ಶಿನಿಕಡುವಿನ ಮುತ್ತಪ್ಪನ ದೇವಾಲಯದಲ್ಲಿ ಶಿವನ ಕಿರೀಟ ಹಾಗೂ ವಿಷ್ಣುವಿನ ಕಿರೀಟ ಹೋಲುವಂತಹ ಕಿರೀಟಗಳನ್ನು ಧರಿಸಿ ನಾಟ್ಯವಾಡುತ್ತ ಮುತ್ತಪ್ಪನನ್ನು ಆರಾಧಿಸಲಾಗುತ್ತದೆ. ರೋಚಕ ಸಂಗತಿಯೆಂದರೆ ಮುತ್ತಪ್ಪನಿಗೆ ಕಳ್ಳು (ಹೆಂಡ) ಹಾಗೂ ಮೀನನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಯಾವುದೆ ಬೇಧ ಭಾವವಿಲ್ಲದೆ ಎಲ್ಲ ರೀತಿಯ ಜನರು ಈ ದೇವಾಲಯಕ್ಕೆ ಪ್ರವೇಶ ಮಾಡಬಹುದು.
ಚಿತ್ರಕೃಪೆ: Challiyan
ದಂತಕಥೆಯ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿ ನಂಬೂದಿರಿ ಬ್ರಾಹ್ಮಣನೊಬ್ಬ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದ. ಬಹಳ ಕಾಲ ಕಳೆದರೂ ಅವನಿಗೆ ಮಕ್ಕಳಾಗಲಿಲ್ಲ. ಇದರಿಂದ ಅವನು ಬೇಸರ ಪಡುತ್ತಿದ್ದ. ಅವನ ಪತ್ನಿ ಪರಮ ಶಿವಭಕ್ತೆ. ದೇವರಿಗೆ ಬಲಿಯೊಂದನ್ನು ನೀಡಿ ಪ್ರಾರ್ಥಿಸಿದಳು. ಆ ರಾತ್ರಿ ಅವಳಿಗೆ ಕನಸಿನಲ್ಲಿ ದೈವ ದರ್ಶನವಾಯಿತು. ನಂತರ ಮರುದಿನ ನದಿಯಲ್ಲಿ ಸ್ನಾನ ಮಾಡಿ ಮರಳುವಾಗ ಮಗುವೊಂದು ಹೂವಿನ ಬುಟ್ಟಿಯಲ್ಲಿರುವುದು ಕಾಣಿಸಿತು. ಆಗ ಆಕೆ ಸಂತಸಪಟ್ಟು ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಗಂಡನಿಗೆ ನಡೆದ ಸಂಗತಿ ತಿಳಿಸಿದಳು.
ಚಿತ್ರಕೃಪೆ: Sreejithk2000
ಗಂಡನೂ ಸಹ ಸಂತಸಪಟ್ಟು ಅವನನ್ನು ಮುದ್ದಿನಿಂದ ಬೆಳೆಸಹತ್ತಿದರು. ಮಗು ದೊಡ್ಡದಾಗುತ್ತಿದ್ದಂತೆ ಹಿಂದುಳಿದ ವರ್ಗದ ಮಕ್ಕಳ ಜೊತೆ ಒಡನಾಟ ಪ್ರಾರಂಭಿಸಿದ. ಮೀನುಗಳನ್ನು ತಿನ್ನುವುದು, ಕಳ್ಳು ಕುಡಿಯುವುದೆಂದರೆ ಆತನಿಗೆ ಇಷ್ಟವಾಗುತ್ತಿತ್ತು. ಇದನ್ನು ಅರಿತ ಆತನ ಅಪ್ಪ ಅವನನ್ನು ಕುರಿತು ಕೋಪಿಸಿಕೊಂಡಾಗ ಆ ಬಾಲಕ ತನ್ನ ವಿಶ್ವರೂಪ ತೋರಿದ. ನಂತರ ದಮ್ಪತಿಗಳಿಬ್ಬರು ಆತ ಸಾಧಾರಣದವನಲ್ಲವೆಂದು ದೈವ ಸ್ವರೂಪಿಯೆಂದು ಅವನಿಗೆ ಶರಣಾಗತರಾದರು.
ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Anupama1002
ಹೀಗೆ ಆ ಬಾಲಕ ಅಲ್ಲಿಯೆ ಬೆಳೆದು ಹಿರಿಯನಾದ. ಆದರೆ ಕಳ್ಳನ್ನು ಮಾತ್ರ ಗಿಡಗಳಿಂದ ತೆಗೆದು ಕುಡಿಯುವುದನ್ನು ಬಿಡಲಿಲ್ಲ. ಹೀಗೆ ಒಮ್ಮೆ ಒಬ್ಬನ ತೊಟದಲ್ಲಿ ಗಿಡ ಏರಿ ಕಳ್ಳು ಕುಡಿಯುವಾಗ ಆ ತೋಟದ ಮಾಲಿಕ ಅವನನ್ನು ಬಾಣದಿಂದ ಹೋಡೆಯಲು ನೋಡಿದಾಗ ಎಚ್ಚರ ತಪ್ಪಿ ಬಿದ್ದು ಹೋದ. ಆತನ ಹೆಂಡತಿ ಅಲ್ಲಿಗೆ ಬಂದು ಗಿಡದ ಮೇಲಿದ್ದ ಆ ಹಿರಿಯನನ್ನು ಮುತ್ತಪ್ಪ ಕಾಪಾಡಿ ಎಂದು ಬೇಡಿಕೊಂಡಳು. ಮಲಯಾಳಂನಲ್ಲಿ ಮುತ್ತಪ್ಪ ಎಂದರೆ ಅಜ್ಜ ಅಥವಾ ಮುತ್ತಜ್ಜ ಎಂದಾಗುತ್ತದೆ.
ಕಳ್ಳು, ಸಾಂದರ್ಭಿಕ ಚಿತ್ರ, ಚಿತ್ರಕೃಪೆ: P.syamlal
ಅವನ ಕೃಪೆಯಿಂದ ಆ ತೋಟದ ಮಾಲಿಕ ಎಚ್ಚರಗೊಂಡ. ಇದರಿಂದ ಸಂತಸಪಟ್ಟ ಆತನ ಪತ್ನಿ ಮುತ್ತಪ್ಪನಿಗೆ ಬೇಯಿಸಿದ ಕಾಳು, ಕೊಬ್ಬರಿ ತುಂಡುಗಳು, ಸುಟ್ಟು ಮೀನು ಹಾಗೂ ಹೆಂಡವನ್ನು ಅರ್ಪಿಸಿದಳು. ಹೀಗಾಗಿ ಮುತ್ತಪ್ಪ ದೈವ ರೂಪ ಪಡೆದು ಕೇರಳದ ಮಲಬಾರ್ ಪ್ರದೇಶದ ಜನರ ಪ್ರಮುಖ ದೈವನಾದ. ಹೀಗಾಗಿ ಇಂದಿಗೂ ಪರಿಶ್ಶಿನಿಕಾಡುವಿನ ಮುತ್ತಪ್ಪನ ದೇವಾಲಯದಲ್ಲಿ ಮುತ್ತಪ್ಪನಿಗೆ ಹೆಮ್ಡ, ಬೇಯಿಸಿದ ಕಾಳು, ಕೊಬ್ಬರಿ ಹಾಗೂ ಮೀನನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ.