ಭೂವಿಜ್ಞಾನ ಅಥವಾ ಭೂಗರ್ಭಶಾಸ್ತ್ರ ಒಂದು ಅದ್ಭುತ ವಿಷಯವಾಗಿದ್ದು ಭೂಮಿ ರೂಪಗೊಂಡಾಗಿನಿಂದ ಅದರಲ್ಲಾದ ಬದಲಾವಣೆ, ಕಂಡುಬರುವ ವಿವಿಧ ಗುಣಲಕ್ಷಣಗಳ, ವಿವಿಧ ಶಿಲಾ ವಿನ್ಯಾಸಗಳ ಕುರಿತು ತಿಳಿಸುತ್ತದೆ. ಇಂತಹ ಕೆಲವು ವಿಚಿತ್ರ ವಿನ್ಯಾಸಗಳು ಲಕ್ಷಾಂತರ ವರ್ಷಗಳಿಂದ ಹಾಗೆ ಇದ್ದು ಇಂದು ಮಾನವನ ಕುತೂಹಲ ಕೆರಳಿಸುವ ಅಚ್ಚರಿ ಪ್ರವಾಸಿ ಆಕರ್ಷಣೆಗಳಾಗಿಯೂ ಗಮನಸೆಳೆಯುತ್ತವೆ.
ಈ ಏಳು ಪ್ರಾಕೃತಿಕ ವಿಸ್ಮಯಗಳನ್ನು ನೋಡಲೇಬೇಕು!
ಉಡುಪಿಯ ಸೇಂಟ್ ಮೇರಿಸ್ ದ್ವೀಪದ ಬಸಾಲ್ಟಿಕ್ ಶಿಲೆಗಳ ಕಡಲ ತಡಿಯ ವಿಶೇಷ ಬಂಡೆಗಳಿರಬಹುದು ಅಥವಾ ಆಂಧ್ರಪ್ರದೇಶದಲ್ಲಿರುವ ಅರಕು ಗುಹೆಗಳಾಗಿರಬಹುದು ಅಂತಹ ಕೆಲವು ಕುತೂಹಲಕರ ರಚನೆಗಳಿಗೆ ಇಂದು ಸಾಕ್ಷಿಯಾಗಿ ನಿಲ್ಲುತ್ತವೆ. ಅಷ್ಟೆ ಅಲ್ಲ, ಇವು ಅದ್ಭುತ ಪ್ರವಾಸಿ ಆಕರ್ಷಣೆಗಳಾಗಿಯೂ ಪ್ರವಾಸಿಗರ ಗಮನ ಸೆಳೆದಿವೆ.
ಅಂತಹ ಕೆಲವು ವಿಶಿಷ್ಟ ವಿನ್ಯಾಸಗಳ, ಭೂವಿಜ್ಞಾನಕ್ಕೆ ಸಂಬಂಧಿಸಿದ ಕೆಲವು ಕುತೂಹಲಕರ ರಚನೆಗಳ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಕರ್ನಾಟಕದಲ್ಲಿಯೂ ಸಹ ಭೂವಿಜ್ಞಾನಕ್ಕೆ ಸಂಬಂಧಿಸಿದಂತೆ ಕೆಲವು ಆಕರ್ಷಕ ರಚನೆಗಳಿದ್ದು ಇವು ಭೂವಿಜ್ಞಾನ ಅಧ್ಯನಕಾರರು/ವಿಜ್ಞಾನಿಗಳನ್ನು ಮಾತ್ರವಲ್ಲದೆ ಹಾಗೂ ಪ್ರವಾಸಿಗರನ್ನೂ ಸಹ ಚುಂಬಕದಂತೆ ಸೆಳೆಯುತ್ತವೆ. ಅಂತಹ ಕೆಲವು ಆಯ್ದ ರಚನೆಗಳು ನಿಮಗಾಗಿ ಈ ಲೇಖನದ ಮೂಲಕ. ಓದಿ ತಿಳಿಯಿರಿ ಹಾಗೂ ಅವಕಾಶ ಸಿಕ್ಕರೆ ಖಂಡಿತ ಒಮ್ಮೆ ಭೇಟಿ ನೀಡಿ.
ಅದ್ಭುತ
ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ 25 ಕಿ.ಮೀ ದೂರದಲ್ಲಿರುವ ಯಾಣ ಎಂಬ ಹಳ್ಳಿಯಲ್ಲಿ ಈ ವಿಸ್ಮಯಕಾರಿ ಶಿಲೆಗಳ ಎರಡು ಶಿಖರಗಳನ್ನು ಕಾಣಬಹುದಾಗಿದೆ. ಸುತ್ತಲೂ ದಟ್ಟನೇಯ ಹಸಿರಿನಿಂದ ಕೂಡಿದ ಕಾಡಿನಿಂದ ಸುತ್ತುವರೆದಿರುವ ಈ ಬೆಟ್ಟಗಳು ನೋಡಲು ರೋಮಾಂಚನಕಾರಿಯಾಗಿ ಕಂಡುಬರುತ್ತವೆ.
ಚಿತ್ರಕೃಪೆ: Vinodtiwari2608
ಐವತ್ತಕ್ಕೂ ಅಧಿಕ
ಸುಣ್ಣದ ಕಲ್ಲಿನ ವಿಶೇಷವಾದ ರಚನೆಗಳು ಇವಾಗಿದ್ದು ಸಾಕಷ್ಟು ಕುತೂಹಲ ಮೂಡಿಸುತ್ತವೆ. ಇಲ್ಲಿ ಐವತ್ತಕ್ಕೂ ಹೆಚ್ಚು ಈ ರೀತಿಯ ವಿಶೇಷವಾದ ಸುಣ್ಣದ ಕಲ್ಲಿನ ರಚನೆಗಳಿದ್ದು ಈ ನಿರ್ದಿಷ್ಟ ಎರಡು ಶಿಖರಗಳು ಹೆಚ್ಚಿನ ಗಾತ್ರ ಹಾಗೂ ಎತ್ತರ ಹೊಂದಿದ್ದು ವಿಜ್ಞಾನಿಗಳು, ಅಧ್ಯನಕಾರರು, ಪ್ರವಾಸಿಗರು ಹಾಗೂ ಧಾರ್ಮಿಕಾಸಕ್ತರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Srinivas G
ವೈಜ್ಞಾನಿಕ ಗುಣಲಕ್ಷಣ
ವೈಜ್ಞಾನಿಕವಾಗಿ ಇವು ಸ್ಟ್ಯಾಲಕ್ಟೈಟ್ ಹಾಗೂ ಸ್ಟ್ಯಾಲಗ್ಮೈಟ್ ಎಂಬ ಸುಣ್ಣದ ಕಲ್ಲುಗಳ ರಚನೆಯಾಗಿದ್ದು ವಿಶೇಷವಾದ ವೈಜ್ಞಾನಿಕ ಗುಣಲಕ್ಷಣಗಳನ್ನು ಹೊಂದಿವೆ. ಪ್ರಸ್ತುತ ಎರಡು ಶಿಖರಗಳಿಗೆ ಹೆಸರುಗಳಿದ್ದು ಒಂದನ್ನು ಭರವೇಶ್ವರ ಶಿಖರ ಎಂದು ಕರೆದರೆ ಇನ್ನೊಂದನ್ನು ಮೋಹಿನಿ ಶಿಖರ ಎಂದು ಕರೆಯಲಾಗುತ್ತದೆ.
ಚಿತ್ರಕೃಪೆ: Vinodtiwari2608
ಭೈರವೇಶ್ವರ
ಭೈರವೇಶ್ವರ ಶಿಖರದಲ್ಲಿ ಗುಹೆಯಾಕಾರ ಒಳ ದ್ವಾರವಿದ್ದು ಅದರೊಳಗೆ ಸ್ವಯಂಭು ಲಿಂಗವನ್ನು ಕಾಣಬಹುದಾಗಿದೆ. ಇನ್ನೂ ವಿಶೇಷವೆಂದರೆ ಈ ಶಿವಲಿಂಗದ ಮೇಲೆ ಮೇಲಿನಿಂದ ನೀರು ಹನಿ ಹನಿಯಾಗಿ ಸದಾ ಅಭಿಷೇಕಗೈಯುತ್ತಿರುವಂತೆ ಬೀಳುತ್ತಿರುತ್ತದೆ.
ಚಿತ್ರಕೃಪೆ: Dinesh Valke
ಗಂಗೋದ್ಭವ
ಅಲ್ಲದೆ, ಕಂಚಿನ ದುರ್ಗೆಯ ಅವತಾರವಾದ ಚಂಡಿಯ ಪ್ರತಿಮೆಯಿದ್ದು ಸಾಕಷ್ಟು ಧಾರ್ಮಿಕ ಮಹತ್ವ ಪಡೆದ ವೈಜ್ಞಾನಿಕ ವಿಶೇಷತೆಯ ಶಿಖರಗಳು ಇವಾಗಿವೆ. ಪಕ್ಕದಲ್ಲೆ ನೀರಿನ ತೊರೆಯೊಂದಿದ್ದು ಅದನ್ನು ಚಂಡಿಹೊಳೆ ಎನ್ನಲಾಗುತ್ತದೆ. ಮುಂದೆ ಈ ತೊರೆಯೆ ಹರಿದು ಉಪ್ಪಿನಪಟ್ಟಣದಲ್ಲಿ ಅಘನಾಶಿನಿ ನದಿಯೊಂದಿಗೆ ಬೆರೆಯುತ್ತದೆ. ಇದನ್ನೆ ಸ್ಥಳೀಯರು ಗಂಗೋದ್ಭವ ಎಂತಲೂ ಸಹ ಕರೆಯುತ್ತಾರೆ.
ಚಿತ್ರಕೃಪೆ: solarisgirl
ಲಾಲ್ ಬಾಗ್
ಬಹುತೇಕರು ಬೆಂಗಳೂರಿನಲ್ಲಿರುವ ಲಾಲ್ ಬಾಗ್ ಕುರಿತು ಕೇಳಿಯೆ ಕೇಳಿರುತ್ತಾರೆ. ಅಲ್ಲದೆ ಸಾಕಷ್ಟು ಜನ ಬೆಂಗಳೂರಿಗರು ಪ್ರತಿನಿತ್ಯ ಈ ಸುಂದರ ಉದ್ಯಾನಕ್ಕೆ ಭೇಟಿ ನೀಡುತ್ತಲೂ ಇರುತ್ತಾರೆ. ಆದರೆ ನಿಮಗೆ ಗೊತ್ತೆ, ಲಾಲ್ ಬಾಗ್ ನಲ್ಲಿರುವ ಕೆಂಪೇಗೌಡ ಗೋಪುರದ ಬಳಿ ಚಿಕ್ಕದಾದ ಬೆಟ್ಟ ಪ್ರದೇಶವೊಂದಿದೆ. ನಿತ್ಯವೂ ಇಲ್ಲಿ ಜನ ಕೂರುತ್ತಾರೆ, ವಿಶ್ರಾಂತಿ ಪಡೆಯುತ್ತಾರೆ, ವ್ಯಾಯಾಮ ಮಾಡುತ್ತಾರೆ. ಆದರೆ ಈ ಶಿಲಾ ರಚನೆ ಸುಮಾರು ಮೂರು ಬಿಲಿಯನ್ ವರ್ಷಗಳಷ್ಟು ಪುರಾತನವಾದ ರಚನೆ ಎಂದು!
ಚಿತ್ರಕೃಪೆ: Melanie Molitor
ವಿಸ್ಮಯ
ಹೌದು, ಇದನ್ನು ಪೆನಿನ್ಸುಲಾರ್ ನೈಸ್ ಎಂಬ ಶಿಲಾ ಸಂಕೀರ್ಣಗಳಿಗೆ ಸಂಬಂಧಿಸಿದ ರಚನೆಯಾಗಿದೆ ಎಂದು ಹೇಳಲಾಗಿದೆ. ಭೂಗರ್ಭದಲ್ಲುಂಟಾಗುವ ಹಲವಾರು ಆಂತರಿಕ ಹಾಗೂ ಉಷ್ಣತೆಯ ಕಾರಣಗಳಿಂದಾಗಿ ಕೆಲವು ಶಿಲೆಗಳು ತಮ್ಮ ಭೌತಿಕ ಹಾಗೂ ರಾಸಾಯನಿಕ ಗುಣಗಳಲ್ಲೆ ಅದ್ವಿತೀಯ ಬದಲಾವಣೆಗಳನ್ನು ಕಂಡು ಒತ್ತಡದ ಪರಿಣಾಮವಾಗಿ ಭೂಮಿಯ ಮೇಲ್ಮೈ ಮೇಲೆ ಬಂದು ನಿಲ್ಲುತ್ತವೆ. ಅಂತಹ ರಚನೆಗೆ ಸಾಕ್ಷಿಯಾಗಿದೆ ಈ ಲಾಲ್ ಬಾಗ್ ಬೆಟ್ಟ.
ಚಿತ್ರಕೃಪೆ: Nvvchar
ಅಪಾಯಕ್ಕೆ ಕರೆ
ಬೆಂಗಳೂರು ಬಳಿಯಿರುವ ಅದರಲ್ಲೂ ವಿಶೇಷವಾಗಿ ಸಂಗಮದ ಹತ್ತಿರವಿರುವ ಮೇಕೆದಾಟು ಮಿಲಿಯನ್ ವರ್ಷಗಳ ಹಿಂದೆ ರೂಪಗೊಂಡ ಗ್ರಾನೈಟ್ ಬಂಡೆಗಳ ಅಂಕು ಡೊಂಕಾದ, ಮೊನಚಾದ, ಅಲ್ಲಲ್ಲಿ 30-40 ಅಡಿಗಳಷ್ಟು ಆಳದ ಗುಂಡಿಗಳನ್ನು ಹೊಂದಿರುವ ಅತಿ ಕಡಿಮೆ ಅಗಲದ ಕ್ಯಾನಲ್ ರೀತಿಯ ಮಾರ್ಗವಾಗಿದ್ದು ಇದರಲ್ಲಿ ಕಾವೇರಿ ನದಿಯು ಅದ್ಭುತವಾಗಿ ಹರಿಯುವುದನ್ನು ಕಾಣಬಹುದು. ಇದೊಂದು ರೋಮಾಂಚನಗೊಳಿಸುವ ಪ್ರವಾಸಿ ತಾಣವಾಗಿದೆ.
ಚಿತ್ರಕೃಪೆ: Karthik Prabhu
ಬರ್ನೌಲಿ ಪ್ರಮೇಯ
ಆದರೆ ಗಮನವಿರಲಿ, ಈ ವಿಶಿಷ್ಟವಾಗಿ ವಿನ್ಯಾಸಗೊಂಡ ಗ್ರಾನೈಟ್ ಬಂಡೆಗಳ ಪಥಗಳು ಅತ್ಯಂತ ಅಪಾಯಕಾರಿಯಾಗಿವೆ. ಅಲ್ಲದೆ ಜಾರುತ್ತವೆ ಕೂಡ ವಿಶೇಷವಾಗಿ ಹೆಚ್ಚು ಮಳೆಗಾಲದಲ್ಲಿ. ಇನ್ನೊಂದು ವಿಷಯವೆಂದರೆ ಇಲ್ಲಿ ಬರ್ನೌಲಿ ಪ್ರಮೇಯವು ಅನುಷ್ಠಾನಗೊಂಡಿರುವುದನ್ನು ಕಾಣಬಹುದು. ಆ ಪ್ರಕಾರವಾಗಿ ಕಡಿಮೆ ಒತ್ತಡವಿರುವ ಸ್ಥಳದಲ್ಲಿ ನೀರು ಅತ್ಯಂತ ರಭಸವಾಗಿ ಮುನ್ನುಗ್ಗುತ್ತದೆ. ಅಂತೆಯೆ ಇಲ್ಲಿ ಕಾವೇರಿಯು ವೇಗ ಅತ್ಯದ್ಭುತವಾಗಿರುತ್ತದೆ. ಇದರಲ್ಲಿ ಈಜಬಯಸುತ್ತೆನೆಂದರೆ ಸಾಕ್ಷಾತ್ ಯಮನನ್ನು ನೋಡಿ ಬರುತ್ತೇನೆಂದು ಹೇಳಿದಂತಿರುತ್ತದೆ.
ಚಿತ್ರಕೃಪೆ: Karthik Prabhu
ಎರಡನೇಯ ದೊಡ್ಡ
ಏಷಿಯಾದಲ್ಲೆ ಎರಡನೇಯ ಅತಿ ದೊಡ್ಡ ಏಕಬಂಡೆ ಶಿಲಾ ರಚನೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮಧುಗಿರಿ. ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿ ತನ್ನ ಬೆಟ್ಟ ಕೋಟೆಗೆ ಪ್ರಸಿದ್ಧವಾಗಿದೆ. ಕೋಟೆ ಇರುವ ಈ ಮಧುಗಿರಿ ಬೆಟ್ಟವು ಲಕ್ಷಾಂತರ ವರ್ಷಗಳ ವಯಸ್ಸನ್ನು ಹೊಂದಿದ್ದು ಏಷಿಯಾ ಖಂಡದಲ್ಲೆ ಎರಡನೇಯ ಏಕಶಿಲಾ ರಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಭೂಗರ್ಭಶಾಸ್ತ್ರದಲ್ಲಿ ಒಂದು ಅಚ್ಚರಿಯ ರಚನೆ ಎಂದೆ ಹೇಳಬಹುದು.
ಚಿತ್ರಕೃಪೆ: Sangrambiswas
ದೈತ್ಯ ರಚನೆ
ಸಾವನದುರ್ಗ ಬೆಂಗಳೂರಿನಿಂದ ಸುಮಾರು 60 ಕಿ.ಮೀ ಗಳಷ್ಟು ದೂರವಿದೆ. ಹೋಗಲು ಎರಡು ಆಯ್ಕೆಗಳಿವೆ. ಒಂದು ಮಾಗಡಿ ಮೂಲಕವಾಗಿದ್ದರೆ ಇನ್ನೊಂದು ಮೈಸೂರು ರಸ್ತೆಯ ಮೂಲಕವಾಗಿದೆ. ಮಿಲಿನ ಗಟ್ಟಲೆ ವರ್ಷಗಳ, ಹಳೆಯದಾದ ಕರ್ನಾಟಕದ ಅತಿ ಎತ್ತರದ ಹಾಗೂ ಅಪಾಯಕಾರಿಯಾದ ಏಕಶಿಲಾ ಬೆಟ್ಟ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಚಿತ್ರಕೃಪೆ: Sudarshana
ಉಡುಪಿ
ಉಡುಪಿಯ ಮಲ್ಪೆ ಕಡಲ ತೀರ ಪ್ರದೇಶದಲ್ಲೆ ಕಂಡುಬರುವ ಸೇಂಟ್ ಮೇರಿಯ ದ್ವೀಪ ಸಮೂಹವು ಉಡೂಪಿಯ ಪ್ರೇಕ್ಷಣೀಯ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ಕಂಡುಬರುವ ಬಸಾಲ್ಟ್ ಶಿಲಾ ರಚನೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳಾಗಿವೆ. ಈ ರೀತಿಯಾಗಿ ಕಡಲ ತಡಿಯಲ್ಲಿ ಕಂಡುಬರುವ ಈ ಶಿಲಾ ರಚನೆಗಳು ಕರ್ನಾಟಕದ ಮಟ್ಟಿಗೆ ಇದು ಏಕೈಕವಾಗಿದೆ ಎಂದೆ ಹೇಳಬಹುದು.
ಚಿತ್ರಕೃಪೆ: Bodhisattwa
ಕೊಣಾಜೆ ಕಲ್ಲು
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿರುವ ಕೊಣಾಜೆ ಎಂಬ ಗ್ರಾಮದಲ್ಲಿರುವ ದೈತ್ಯ ಗಾತ್ರದ ಗ್ರಾನೈಟ್ ಬಂಡೆಗಲ್ಲು ಇದಾಗಿದೆ. ಇದೊಂದು ಬೆಟ್ಟದ ಮೇಲೆ ಗಾಂಭೀರ್ಯವಾಗಿ ನಿಂತಿದ್ದು ಭೂವಿಜ್ಞಾನದ ಕುತೂಹಲಕಾರಿ ರಚನೆಯಾಗಿ ಕಂಡುಬರುತ್ತದೆ. ಹಿಂದೆ ಬ್ರಿಟೀಷರು ಅರಬ್ಬಿ ಸಮುದ್ರದಲ್ಲಿ ಸಾಗುವಾಗ ಇದರ ನೋಟದಿಂದಲೆ ಈ ಪ್ರದೇಶ ಗುರುತಿಸಿ ಇದನ್ನು ಆಸ್ಸ್'ಸ್ ಇಯರ್ ಎಂದು ಅಕ್ರೆಯುತ್ತಿದ್ದರಂತೆ!
ಚಿತ್ರಕೃಪೆ: Vaikoovery
ಕೊಪ್ಪಳ
ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಹತ್ತು ಕಿ.ಮೀ ದೂರದಲ್ಲಿರುವ ಮೆಗಾಲಿಥಿಕ್ ಕಲ್ಲುಗಳ ಅತಿ ಪುರಾತನ ತಾಣ ಇದಾಗಿದೆ. ಮೆಗಾಲಿಥಿಕ್ ಎಂದರೆ ಒಂದು ಪ್ರದೇಶದ ವಿಶಿಷ್ಟವಾಗಿ ರೂಪಗೊಂಡ ಬೆಟ್ಟಗಳಲ್ಲಿರುವ ಹಲವಾರು ಬಂಡೆಗಳನ್ನು ಉಪಯೋಗಿಸಿ ನಿರ್ಮಿಸಲಾಗುವ ರಚನೆಗಳು. ಇಲ್ಲಿ ಏಕಶಿಲಾ ಬದಲಾಗಿ ಬಹು ಶಿಲೆಗಳಿರುತ್ತವೆ.
ಚಿತ್ರಕೃಪೆ: Ravibhalli