ನಾಗಗಳೆಂದರೆ ಸಾಕು, ಹಿಂದುಗಳಲ್ಲಿ ಅಪಾರವಾದ ಭಕ್ತಿ ಹಾಗೂ ನಂಬಿಕೆಗಳಿರುವುದನ್ನು ಗಮನಿಸಬಹುದು. ಕೆಲವು ವಿದ್ವಾಂಸರು, ಜ್ಯೋತಿಷಿಗಳು ಹಾಗೂ ಪೌರಾಣಿಕ ಗ್ರಂಥಗಳ ಪ್ರಕಾರ, ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ ಎಂಬ ಸಾಮಾನ್ಯವಾದ ನಂಬಿಕೆಯಿದೆ.
ನಾಗದೋಷವಿದ್ದರೆ ಜೀವನದಲ್ಲಿ ಸಾಕಷ್ಟು ಅಡೆ-ತಡೆಗಳು ಉಂಟಾಗುತ್ತವೆ ಎಂಬ ನಂಬಿಕೆಯೂ ಸಾಮಾನ್ಯವಾಗಿ ಮೊದಲಿನಿಂದಲೂ ಸಾಕಷ್ಟು ಭಾರತೀಯರಲ್ಲಿದೆ. ಆ ಕಾರಣದಿಂದಾಗಿ ನಾಗ ಕ್ಷೇತ್ರಗಳು ಸಾಕಷ್ಟು ಮಹತ್ವ ಪಡೆದ ಕ್ಷೇತ್ರಗಳಾಗಿ ಕಂಡುಬರುತ್ತವೆ. ಇದು ನಿಜವೊ ಅಥವಾ ಸುಳ್ಳೊ ಎಂಬುದು ಅವರವರ ಭಕ್ತಿ ಹಾಗೂ ನಂಬಿಕೆಗೆ ಬಿಟ್ಟಿದ್ದು. ಆದರೆ ಧಾರ್ಮಿಕ ಪ್ರವಾಸಿ ದೃಷ್ಟಿಯಿಂದ ನಾಗಕ್ಷೇತ್ರಗಳು ಸಾಕಷ್ಟು ಬೇಡಿಕೆ ಹೊಂದಿವೆ.
ಭಾರತದಲ್ಲಿ ನಾಗದೋಷಗಳಿಂದ ಮುಕ್ತಿ ಪಡೆಯುವ ಕೆಲವು ಗಮನಾರ್ಹ ಕ್ಷೇತ್ರಗಳಿದ್ದು ಆ ಸ್ಥಳಗಳು ಸದಾ ಸಮಯ ಭಕ್ತಾದಿಗಳಿಂದ ತುಂಬಿರುತ್ತದೆ. ಆ ಮಟ್ಟಿಗೆ ಹೇಳುವುದಾದರೆ ಕರ್ನಾಟಕದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಅತ್ಯಂತ ಪ್ರಸಿದ್ಧಿ ಪಡೆದ ಸರ್ಪಕ್ಷೇತ್ರವೆಂದೆ ಹೇಳಬಹುದು. ದೇಶದ ಮೂಲೆ ಮೂಲೆಗಳಿಂದ ಜನರು ಈ ಕ್ಷೇತ್ರಕ್ಕೆ ಸರ್ಪದೋಷದಿಂದ ಪರಿಹಾರ ಪಡೆಯಲೆಂದು ಭೇಟಿ ನೀಡುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ
ಇನ್ನುಳಿದಂತೆ ಆಂಧ್ರದ ಶ್ರೀಕಾಳಹಸ್ತಿಯಾಗಿರಬಹುದು ಅಥವಾ ದೊಡ್ಡಬಳ್ಳಾಪುರದ ಬಳಿಯಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವಾಗಿರಬಹುದು ಸರ್ಪದೋಷ ನಿವಾರಣೆಗೆಂದು ಸಾಕಷ್ಟು ಮಹತ್ವ ಪಡೆದ ಕ್ಷೇತ್ರಗಳಾಗಿವೆ. ಆದರೆ ಪ್ರಸ್ತುತ ಲೇಖನದಲ್ಲಿ ಬೆಂಗಳೂರು ನಗರಕ್ಕೆ ಬಲು ಹತ್ತಿರದಲ್ಲಿರುವ, ಇತ್ತೀಚಿನ ಸಮಯದಲ್ಲಿ ಸಾಕಷ್ಟು ಪ್ರಸಿದ್ಧಿಗಳಿಸುತ್ತಿರುವ ಸರ್ಪಕ್ಷೇತ್ರವೊಂದರ ಕುರಿತು ತಿಳಿಸಲಾಗಿದೆ. ಇದು ಘಾಟಿ ಸುಬ್ರಹ್ಮಣ್ಯಕ್ಕಿಂತಲೂ ಬಲು ಹತ್ತಿರದಲ್ಲಿದೆ! ನಿಮಗೂ ಸಹ ಈ ಕ್ಷೇತ್ರ ದರ್ಶನ ಮಾಡಬೇಕೆಂಬ ಆಸೆಯಿದ್ದಲ್ಲಿ ಈ ಲೇಖನ ಓದಿ ಹಾಗೂ ಒಂದೊಮ್ಮೆ ಭೇಟಿ ನೀಡಿ.
ಏನು ಕಥೆ?
ಆದರೆ, ಈ ಕ್ಷೇತ್ರದ ಕುರಿತು ತಿಳಿಯುವುದಕ್ಕೂ ಮೊದಲು ಚುಟುಕಾಗಿ ಈ ನಾಗಗಳ ಕುರಿತು ತಿಳಿಯುವುದು ಉತ್ತಮವಾಗಬಹುದು. ಮಹಾಭಾರತದ ಆದಿ ಪರ್ವದಲ್ಲಿ ನಾಗಗಳ ಕುರಿತು ಉಲ್ಲೇಖವಿದ್ದು ನಾಗಗಳನ್ನು ಉತ್ತಮವೂ ಅಲ್ಲದ ಅಪಾಯಕಾರಿಯೂ ಅಲ್ಲದ ಒಂದು ರೀತಿಯ ಮಧ್ಯದಲ್ಲಿರುವ ಜೀವಿಗಳೆಂದು ಕರೆಯಲಾಗಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Suraj Belbase
ವಿಚಿತ್ರವಾದದ್ದು
ಎಷ್ಟೊ ಪ್ರಸಂಗಗಳಲ್ಲಿ ನಾಗಗಳಿಂದ ಒಳಿತಾಗಿರುವುದು ಕಂಡುಬಂದರೆ ಇನ್ನೂ ಹಲವು ಪ್ರಸಂಗಗಳು ನಾಗಗಳ ಭಯಂಕರತೆಯನ್ನೂ ತೋರುತ್ತವೆ. ನಾಗಗಳು ಅಪಾರ ಶಕ್ತಿಯುಳ್ಳ, ಮಾಯಾ ಶಕ್ತಿಧಾರರೆಂದು ಹೇಳಲಾಗಿದ್ದು ಜನರ ಜೀವನಗಳನ್ನು ನಿಯಂತ್ರಿಸುವ ಮಾಯಾ ಶಕ್ತಿಗಳನ್ನು ಹೊಂದಿರುವ ಜೀವಿಗಳೆಂದು ಹೇಳಲಾಗಿದೆ. ಸಾಂದರ್ಭಿಕ ಚಿತ್ರ.
ಹೇಗೆ ಬಂದರು
ದಂತಕಥೆಯ ಪ್ರಕಾರ ಕಶ್ಯಪ ಮಹರ್ಷಿಗಳ ಪುತ್ರರೆ ಈ ನಾಗಗಳು ಅಥವಾ ಸರ್ಪಗಳು. ಅಷ್ಟೆ ಅಲ್ಲ ಗರುಡ ಸಹ ಈ ಮಹರ್ಷಿಯ ಸಂತಾನವೆ. ಅಲ್ಲದೆ ನಾಗ ಹಾಗೂ ಗರುಡ ಮಲ ಸಹೋದರರು. ಕಶ್ಯಪ ಮಹರ್ಷಿಗಳು ದಕ್ಷಪ್ರಜಾಪತಿಯ ಪುತ್ರಿಯರಾದ ವಿನತಾ ಹಾಗೂ ಕದ್ರುರನ್ನು ವಿವಾಹವಾಗುತ್ತಾರೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Charles Haynes
ಇಬ್ಬರು ಕಶ್ಯಪರ ಪತ್ನಿಯರು
ಸಹೋದರಿಯರಾದ ವಿನತಾ ಹಾಗೂ ಕದ್ರು ಕಶ್ಯಪರನ್ನು ತಮ್ಮ ಸೇವೆಗಳಿಂದ ಪ್ರಸನ್ನಗೊಳಿಸುತ್ತಾರೆ. ಅದಕ್ಕೆ ಬದಲಾಗಿ ಕಶ್ಯಪರು ಅವರ ಬಯಕೆ ತೀರಿಸಲು ಮುಂದಾದಾಗ ಕುತಂತ್ರಿಯಾದ ಕದ್ರು ತನಗೆ ಶೂರರಾದ ಸಾವಿರ ಸಂತಾನ ಬೇಕೆಂದು ಕೇಳಿದರೆ ವಿನತಾ ತನಗೆ ಕದ್ರುವಿನ ಮಕ್ಕಳಿಗಿಂತ ವೀರರಾದ ಇಬ್ಬರು ಸಂತಾನವೆ ಸಾಕೆಂದು ಹೇಳುತ್ತಾಳೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Srikar Kashyap
ವಿನತಾ ಪುತ್ರರು?
ಹೀಗೆ ಕದ್ರುವಿಗೆ ಹುಟ್ಟಿದ ಸಾವಿರ ಸಂತಾನಗಳೆ ನಾಗಗಳು. ಇಂದಿನ ಎಲ್ಲ ರೀತಿಯ ಸರ್ಪಗಳಿಗೆ ಪೂರ್ವಿಕರು ಇವರೆ ಎನ್ನಲಾಗಿದೆ. ನಾಗಗಳಲ್ಲಿ ಪ್ರಮುಖವಾಗಿ ಶೇಷ, ವಾಸುಕಿ ಹಾಗೂ ತಕ್ಷಕನೆಂದು ಹೇಳಲಾಗುತ್ತದೆ. ಇತ್ತ ವಿನತಾಗೆ ಜನಿಸಿದ ಪುತ್ರರೆ ಗರುಡ ಹಾಗೂ ಅರುಣ. ಮೊದಲಿನಿಂದಲೂ ಈ ಮಲಸಹೋದರರ ಮಧ್ಯೆ ಕಚ್ಚಾಟವಿತ್ತೆಂದು ಹೇಳಲಾಗುತ್ತದೆ. ಇನ್ನೂ ಪ್ರಸ್ತುತ ಲೇಖನದಲ್ಲಿರುವ ಕ್ಷೇತ್ರದ ಕುರಿತು ಮುಂದಿನ ಸ್ಲೈಡುಗಳಿಂದ ತಿಳಿಯಿರಿ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Lionel Allorge
ಕೆಂಗೇರಿ
ಇತ್ತೀಚಿನ ಕೆಲವು ಸಮಯದಿಂದ ಸಾಕಷ್ಟು ಪ್ರಸಿದ್ಧಿಗಳಿಸುತ್ತಿರುವ ಈ ಕ್ಷೇತ್ರವೆ ಮುಕ್ತಿನಾಗ ಕ್ಷೇತ್ರ. ಬೆಂಗಳೂರಿನ ಕೆಂಗೇರಿಯ ರಾಮೋಹಳ್ಳಿಯಲ್ಲಿ ಈ ಆಕರ್ಷಕ ಕ್ಷೇತ್ರವಿದ್ದು ಅಲ್ಲಿ ನಾಗಕಲ್ಲುಗಳ ಮಂಟಪ, ಹದಿನಾರು ಅಡಿ ಎತ್ತರದ ಏಳು ಹೆಡೆಗಳ ಮುಖ್ಯ ನಾಗ ಪ್ರತಿಮೆ ಹಾಗೂ ದೇವಿಯ ದೇವಾಲಯವಿರುವುದನ್ನು ಕಾಣಬಹುದು.
ಚಿತ್ರಕೃಪೆ: Akshatha Vinayak
ಜುಂಜಪ್ಪನ ಗುಡಿ ಬಯಲು
ಈ ಮೊದಲು ಅಂದರೆ 200 ವರ್ಷಗಳ ಹಿಂದೆ ಈ ಪ್ರದೇಶವನ್ನು ಸ್ಥಳೀಯರು ಜುಂಜಪ್ಪನ ಗುಡಿ ಬಯಲು ಎಂದೆ ಕರೆಯುತ್ತಿದ್ದರು. ಗೊಲ್ಲ ಸಮುದಾಯವು ಇಲ್ಲಿ ವಾಸವಾಗಿತ್ತು ಹಾಗೂ ಅವರು ನಾಗನ ಅವತಾರವೆನ್ನಲಾಗುವ ಜುಜಪ್ಪನನ್ನು ಆರಾಧಿಸುತ್ತಿದ್ದರು. ನೂರು ವರ್ಷಕ್ಕೂ ಹೆಚ್ಚಿನ ಆಯಸ್ಸಿದ್ದ 25 ಅಡಿಗಳಷ್ಟು ಉದ್ದದ ಕಳಿಂಗ ಸರ್ಪ ಇಲ್ಲಿತ್ತೆಂದು ಹೇಳಲಾಗುತ್ತದೆ. ಇಂದಿಗೂ ಇದು ಹಲವಾರು ಸರ್ಪಗಳು ಆಶ್ರಯ ಪಡೆದಿರುವ, ಗಿಡ ಮರಗಳಿಂದ ಕೂಡಿರುವ ಸುಂದರ ಪ್ರದೇಶವಾಗಿದ್ದು ಸುಬ್ರಹ್ಮಣ್ಯಸ್ವಾಮಿಯ ದಿವ್ಯ ಮನಸ್ಸಿನ ಫಲಪ್ರದವಾಗಿ ಇಲ್ಲಿ ನಾಗದೇವತೆಯ ದೇವಾಲಯ ನಿರ್ಮಾಣಗೊಂಡಿದೆ ಹಾಗೂ ಇನ್ನೂ ಕೆಲಸ ಅಲ್ಲಲ್ಲಿ ಪ್ರಗತಿಯಲ್ಲಿದೆ.
ಚಿತ್ರಕೃಪೆ: Akshatha Vinayak
ಆಕರ್ಷಕ
ಇನ್ನೂ ಇಲ್ಲಿರುವ ಹದಿನಾರು ಅಡಿಗಳಷ್ಟು ಎತ್ತರದ ಒಂದೆ ಕಲ್ಲಿನಲ್ಲಿ ಕೆತ್ತಲಾದ ನಾಗರಜಸ್ವಾಮಿಯನ್ನು ನೋಡಿದರೆ ಒಂದು ಕ್ಷಣ ಬೆರಗಾಗದೆ ಇರಲಾರದು. ಇಷ್ಟು ಎತ್ತರದ ನಾಗರಾಜನ ಪ್ರತಿಮೆ ಜಗತ್ತಿನ ಇನ್ನ್ಯಾವ ಭಾಗದಲ್ಲಿಯೂ ಕಂಡುಬರಲಾರದು. ಹಾಗಾಗಿ ಇದೊಂದು ನಾಗನ ವಿಶೇಷ ದೇವಾಲಯವಾಗಿ ಜನಪ್ರೀಯತೆಗಳಿಸುತ್ತಿದೆ.
ಚಿತ್ರಕೃಪೆ: Akshatha Vinayak
ದೈವಜ್ಞ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ
ಈ ದೇವಾಲಯವು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಟ್ರಸ್ಟ್ ಗೆ ಒಳಪಟ್ಟಿದ್ದು ಇದರ ಧರ್ಮಾಧಿಕಾರಿಯಾದ ದೈವಜ್ಞ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಯವರು ಈ ದೇವಾಲಯದ ನಿರ್ಮಾಣಕ್ಕಾಗಿ ಹಲವು ವರ್ಷಗಳು ಸತತವಾದ ಪ್ರಯತ್ನಪಟ್ಟಿದ್ದಾರೆ. ಇವರ ಅನುಯಾಯಿಗಳ ಪ್ರಕಾರ, ಇವರಿಗೆ ಸುಬ್ರಹ್ಮಣ್ಯ ದೇವರ ಕೃಪಾ ಕಟಾಕ್ಷ ದೊರಕಿದೆ ಎನ್ನಲಾಗುತ್ತದೆ.
ಚಿತ್ರಕೃಪೆ: Akshatha Vinayak
ಕಂಚೀಪುರಂ
ತಮಿಳುನಾಡಿನ ಕಂಚೀಪುರಂನ ಪದ್ಮಶ್ರಿ ಗಣಪತಿ ಸ್ಥಪತಿಯವರ ನಿಗ್ರಾಣಿಯಲ್ಲಿ ಹನ್ನೊಂದು ಕಲಾವಿದರು ಸೇರಿ ಹಗಲು ರಾತ್ರಿ ಬಲು ಭಕ್ತಿ ಹಾಗೂ ಶೃದ್ಧೆಯಿಂದ ಶಿಲ್ಪ ಶಾಸ್ತ್ರಕ್ಕನುಸಾರವಾಗಿ ಈ ಏಳು ಹೆಡೆಗಳ ನಾಗರಾಅಜನ ಪ್ರತಿಮೆಯನ್ನು ಕೆತ್ತಿದ್ದಾರೆ.
ಚಿತ್ರಕೃಪೆ: Akshatha Vinayak
ಅದ್ಭುತ
ಧರ್ಮಾಧಿಕಾರಿಯವರೆ ಹೇಳುವಂತೆ ಈ ಪ್ರತಿಮೆಯನ್ನು ಕಡಿದಾದ ನಂತರ ಅದನ್ನು ಕಂಚೀಪುರಂನಿಂದ ರಾಮೋಹಳ್ಳಿಗೆ ಕರೆ ತಂದಿರುವುದು ಒಂದು ಪವಾಡವೆ ಆಗಿದೆಯಂತೆ. ಮೂರ್ತಿ ಪೂರ್ಣಗೊಂಡ ಬಳಿಕ ಸಾಕಷ್ಟು ಭಾರವಾಗಿತ್ತು ಅದನ್ನು 32 ಚಕ್ರಗಳುಳ್ಳ ಟ್ರಕ್ ಮೇಲೆ ಏರಿಸಿದಾಗ ಟ್ರಕ್ ಪಲ್ಟಿಯಾಗುವ ಸಂದರ್ಭ ಎದುರಾಗಿತ್ತಾದರೂ ಸುಬ್ರಹ್ಮಣ್ಯನನ್ನು ನೆನೆದ ನಂತರ ಪವಾಡವೆಂಬಂತೆ ಯಾವ ಅಡೆತಡೆಯಿಲ್ಲದೆ ಟ್ರಕ್ ಸರಾಗವಾಗಿ ಚಲಿಸತೊಡಗಿತು.
ಚಿತ್ರಕೃಪೆ: Akshatha Vinayak
ಅಷ್ಟು ಜಾಗೃತವಾಗಿದೆ
ನಂತರ ಈ ಪ್ರತಿಮೆಯನ್ನು ತರುವವರೆಗೂ ಸಾಕಷ್ಟು ಕಡೆ ಅನೇಕ ಅವಿಸ್ಮರಣೀಯ ಘಟನೆಗಳು ಜರುಗಿದವೆಂದು ಶಾಸ್ತ್ರಿಗಳು ನೆನಪಿಸಿಕೊಳ್ಳುತ್ತಾರೆ. ಒಂದೊಮ್ಮೆ ಕೃಷ್ಣಗಿರಿಗೆ ತಲುಪಿದ್ದಾಗ ಆ ಸಮಯದಲ್ಲಿ ಅಲ್ಲಿ ಒಂದು ಹನಿ ಮಳೆಯಿಲ್ಲದೆ ಆ ಊರು ತತ್ತರಿಸಿಹೋಗಿತ್ತಂತೆ!
ಚಿತ್ರಕೃಪೆ: Akshatha Vinayak
ಸರ್ವರಿಗೂ ಆನಂದ
ಅಲ್ಲಿನ ಜನರಿಗೆ ಟ್ರಕ್ಕಿನಲ್ಲಿ ನಾಗರಾಜನ ಪ್ರತಿಮೆಯಿರುವ ವಿಚಾರ ತಿಳಿದು ಅಲ್ಲಿಯೆ ಪೂಜೆಗಳನ್ನು ನೆರವೇರಿಸಿದಾಗ ಪವಾಡವೆಂಬಂತೆ ಧೋ ಧೋ ಎಂದು ಮಳೆ ಸುರಿದ ನೆನಪನ್ನೂ ಸಹ ಶಾಸ್ತ್ರಿಗಳು ಮೆಲುಕು ಹಾಕಿಕೊಳ್ಳುತ್ತಾರೆ.
ಚಿತ್ರಕೃಪೆ: Akshatha Vinayak
ಮೈಸೂರು ಅರಸರು
ಹೀಗೆ ತನ್ನ ಅದ್ಭುತ ಪ್ರಯಾಣವನ್ನು ಮುಗಿಸಿ ಕೊನೆಗೆ ನಾಗರಾಜನ ಪ್ರತಿಮೆ ರಾಮೋಹಳ್ಳಿಗೆ ತಲುಪಿದಾಗ ಮೈಸೂರು ಅರಸರಾಗಿದ್ದ ಶ್ರೀಕಂಠದತ್ತ ವಡೇಯರ್ ಅವರು ಮೂರ್ತಿಯನ್ನು ಬರಮಾಡಿಕೊಂಡರಂತೆ! ಈ ಸಂದರ್ಭದಲ್ಲೂ ಸಹ ಬಣಗುಟ್ಟಿದ್ದ ಆ ಪ್ರದೇಶದಲ್ಲಿ ಮಳೆ ಬಿದ್ದು ಎಲ್ಲೆಡೆ ತಂಪು ಆವರಿಸಿತೆಂದು ಅನೇಕ ಜನ ಭಕ್ತರು ನೆನೆಯುತ್ತಾರೆ.
ಚಿತ್ರಕೃಪೆ: Akshatha Vinayak
ನಾಗರಾಜ ದೇವ
ಶಾಸ್ತ್ರಿಗಳ ಪ್ರಕಾರ, ಸುಬ್ರಹ್ಮಣ್ಯ ಸ್ವಾಮಿಯು ನಾಗರಾಜನ ಅವತಾರವೆ ಆಗಿದ್ದು ಅದರ ನಾಲ್ಕು ರೂಪಗಳು ಮಹತ್ತರವಾಗಿವೆಯಂತೆ. ಮೊದಲನೇಯ ರೂಪ ಬಾಲ್ಯಾವಸ್ಥೆಯದ್ದಾಗಿದ್ದು ಇದನ್ನು ಕುಕ್ಕು ಸುಬ್ರಹ್ಮಣ್ಯದಲ್ಲಿ ನೋಡಬಹುದಾಗಿದೆ. ಎರಡನೇಯದ್ದು ಯವ್ವನಾವಸ್ಥೆಯದ್ದಾಗಿದ್ದು ಇದನ್ನು ಪ್ರಸ್ತುತ ಘಾಟಿ ಸುಬ್ರಹ್ಮಣ್ಯದಲ್ಲಿ ನೋಡಬಹುದಾಗಿದೆ.
ಚಿತ್ರಕೃಪೆ: Akshatha Vinayak
ನಾಗನಿಗೆ
ಮೂರನೇಯ ರೂಪ ಗ್ರಹಸ್ಥಾಶ್ರಮದ್ದಾಗಿದ್ದು ಈ ರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯನ್ನು ತಮಿಳುನಾಡಿನ ಪಳನಿಯ ಮುರುಗನ್ ದೇವಾಲಯ ಹಾಗೂ ತಿರುವಣ್ಣಾಮಲೈನ ಸುಬ್ರಹ್ಮಣ್ಯಸ್ವಾಮಿಯಲ್ಲಿ ಕಾಣಬಹುದೆಂದು ಹೇಳಲಾಗುತ್ತದೆ.
ಚಿತ್ರಕೃಪೆ: Akshatha Vinayak
ಮುಕ್ತಿನಾಗ
ಇನ್ನೂ ಕೊನೆಯ ರೂಪವಾಗಿ ಬೇಡಿಕೊಂಡು ಬರುವ ಭಕ್ತಾದಿಗಳ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತ ನಾಗರಜನಾಗಿ ನೆಲೆ ನಿಂತಿರುವ ಮುಕ್ತಿ ನಾಗ ಸ್ಥಳವೆ ಆಗಿದೆ ಎಂದು ಹೇಳುತ್ತಾರೆ, ದೈವಜ್ಞ ಸುಬ್ರಹ್ಮಣ್ಯ ಶಾಸ್ತ್ರಿಗಳು. ಇಲ್ಲಿಗೆ ಬಂದು ಭಕ್ತಿಯಿಂದ ನಾಗರಾಜನನ್ನು ಪ್ರಾರ್ಥಿಸುವ ಪ್ರತಿಯೊಬ್ಬರ ತೊಂದರೆಗಳು ನಿವಾರಣೆಯಾಗುತ್ತದೆಂದು ಅವರು ಬಲವಾಗಿ ವಿವರಿಸುತ್ತಾರೆ.
ಚಿತ್ರಕೃಪೆ: Akshatha Vinayak
ಎಲ್ಲವೂ ವಿಧಿವತ್ತಾಗಿ
ಇಲ್ಲಿ ಸರ್ಪದೋಷ ಪರಿಹಾರ ಪೂಜ್ಜೆ, ಆಶ್ಲೇಷಬಲಿ ಪೂಜೆ ಹಾಗೂ ನಾಗ ಪ್ರತಿಷ್ಠಾಪನೆಗಳಂತಹ ಪೂಜೆಗಳು ಶಾಸ್ತ್ರೋಕ್ತವಾಗಿ ಹಾಗೂ ವಿಧಿವತ್ತಾಗಿ ನೆರವೇರಿಸಲಾಗುತ್ತದೆ. ನಾಗ ಪ್ರತಿಷ್ಠೆಯ ಮಂಟಪವೊಂದಿದ್ದು ಅಲ್ಲಿ ನೂರಾರು ನಾಗ ಪ್ರತಿಮೆಗಳನ್ನು ಸ್ಥಾಪಿಸಿರುವುದನ್ನು ಭೇಟಿ ನೀಡಿದಾಗ ಕಾಣಬಹುದು.
ಚಿತ್ರಕೃಪೆ: Akshatha Vinayak
ಸಾಕಷ್ಟು ಭಕ್ತರು ಬರುತ್ತಾರೆ
ಮುಕ್ತಿನಾಗ ದೇವಾಲಯದಲ್ಲಿ ನಾಗರಾಜನ ಮುಖ್ಯ ದೇವಾಲಯವಿದ್ದು ಇತರೆ ದೇವ ದೇವಿಯರ ಸನ್ನಿಧಿಗಳೂ ಸಹ ಇಲ್ಲಿರುವುದನ್ನು ಕಾಣಬಹುದು. ಆದಿ ಮುಕ್ತಿನಾಗ, ನೀಲಾಂಬಿಕೆ, ಲಕ್ಷ್ಮಿ-ನರಸಿಂಹಸ್ವಾಮಿ, ರೇಣುಕ ಎಲ್ಲಮ್ಮ, ಮೈಲಾರ ಲಿಂಗೇಶ್ವರ ಸ್ವಾಮಿ, ಪಟಾಲಮ್ಮನ ಹೀಗೆ ಹಲವು ಸನ್ನಿಧಿಗಳನ್ನು ಕಾಣಬಹುದು. ಮೈಲಾರ ಲಿಂಗೇಶ್ವರ ಸ್ವಾಮಿ ಸನ್ನಿಧಿ.
ಚಿತ್ರಕೃಪೆ: Akshatha Vinayak
ಶಕ್ತಿ ದೇವಿ
ರೇಣುಕ ಎಲ್ಲಮ್ಮನ ದೇಗುಲವು ಇಲ್ಲಿದ್ದು ಸಾಕಷ್ಟು ಜನ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Akshatha Vinayak
ದೇವಾಲಯಕ್ಕೆ
ರೇಣುಕ ಎಲ್ಲಮ ದೇವಿಯ ದೇವಾಲಯದ ಪ್ರವೇಶ ಮಾರ್ಗ. ಇದರ ಆಸು ಪಾಸಿನಲ್ಲೆ ಇತರೆ ಚಿಕ್ಕ ದೇಗುಲಗಳಿರುವುದನ್ನು ಕಾಣಬಹುದು.
ಚಿತ್ರಕೃಪೆ: Akshatha Vinayak
ಗಂಗಮಾಳಮ್ಮ
ಎಲ್ಲಮ್ಮನ ಸನ್ನಿಧಾನದ ಆವರಣದಲ್ಲೆ ಇರುವ ಮತ್ತೊಂದು ಶಕ್ತಿ ದೇವತೆಯಾದ ಗಂಗಮಾಳಮ್ಮನವರ ಸನ್ನಿಧಿ.
ಚಿತ್ರಕೃಪೆ: Akshatha Vinayak
ಪಟಾಲಮ್ಮನವರು
ಬೆಂಗಳೂರಿನಲ್ಲಿ ಸಾಕಷ್ಟು ಜನಪ್ರೀಯವಾದ ಪಟಾಲಮ್ಮನವರ ಸನ್ನಿಧಿಯನ್ನೂ ಸಹ ಮುಕ್ತಿನಾಗ ಕ್ಷೇತ್ರದಲ್ಲಿ ಕಾಣಬಹುದಾಗಿದೆ.
ಚಿತ್ರಕೃಪೆ: Akshatha Vinayak
ಲಕ್ಷ್ಮಿನರಸಿಂಹನಾಗಿ
ವಿಷ್ಣು ಲಕ್ಷ್ಮಿ ಸಮೇತ ಲಕ್ಷ್ಮಿ- ನರಸಿಂಹನಾಗಿ ನೆಲೆ ನಿಂತಿರುವ ಸನ್ನಿಧಿ.
ಚಿತ್ರಕೃಪೆ: Akshatha Vinayak
ಹೇಗೆ ತಲುಪಬಹುದು
ಮುಕ್ತಿನಾಗ ಕ್ಷೇತ್ರವು ಬೆಂಗಳೂರು-ಮೈಸುರು ರಸ್ತೆಯಲ್ಲಿ ದೊಡ್ಡ ಆಲದಮರಕ್ಕೆ ಹೋಗುವ ಮಾರ್ಗದಲ್ಲಿ ಕೆಂಗೇರಿಯಿಂದ ಸುಮಾರು ಆರು ಕಿ.ಮೀ ಗಳಷ್ಟು ದೂರದಲ್ಲಿದೆ. ಕೆ ಆರ್ ಮಾರುಕಟ್ಟೆಯಿಂದ ರಾಮೋಹಳ್ಳಿಗೆ ಬಿಎಂಟಿಸಿ ಬಸ್ಸುಗಳು ಲಭ್ಯವಿದೆ. ರಾಮೋಹಳ್ಳಿಗೆ ತಲುಪಿ ಅಲ್ಲಿಂದ ಶೇರ್ ಆಟೋಗಳ ಮೂಲಕ ಮುಕ್ತಿನಾಗವನ್ನು ತಲುಪಬಹುದಾಗಿದೆ. ರಾಮೋಹಳ್ಳಿಯಿಂದ ಮುಕ್ತಿನಾಗ ಒಂದು ಕಿ.ಮೀ ಹಾಗೂ ಬೆಂಗಳೂರು ನಗರ ಬಸ್ಸು ನಿಲ್ದಾಣದಿಂದ 18 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Akshatha Vinayak