ವೈಗೈ ನದಿ ದಡದ ಮೇಲೆ ಇರುವ ಪ್ರಾಚೀನ ನಗರ ಮಧುರೈ. ಇಲ್ಲಿ ಬಣ್ಣ ಬಣ್ಣದ ಗೋಪುರಗಳಿಂದ ಭಕ್ತರನ್ನು ಆಕರ್ಷಿಸುವ ದೇಗುಲವೇ ಮೀನಾಕ್ಷಿ ಅಮ್ಮನ ದೇವಸ್ಥಾನ. 2500 ವರ್ಷಗಳ ಇತಿಹಾಸ ಹೊಂದಿರುವ ಈ ಪವಿತ್ರ ಕ್ಷೇತ್ರ ಮಧುರೈನ ಹೃದಯ ಭಾಗದಲ್ಲಿದೆ. 12 ಭವ್ಯ ಗೋಪುರಗಳನ್ನು ಒಳಗೊಂಡಿರುವ ಈ ದೇಗುಲದಲ್ಲಿ ಶಿವ ಹಾಗೂ ಪಾರ್ವತಿ ದೇವಿಯನ್ನು ಆರಾಧಿಸಲಾಗುತ್ತದೆ. ಈ ಗೋಪುರಗಳಲ್ಲಿ ದಕ್ಷಿಣ ಗೋಪುರವು ಅತ್ಯಂತ ಎತ್ತರ ಹಾಗೂ ಪುರಾತನ ಗೋಪುರ.
ಮಧುರೈ ದೇಗುಲ ಬೆಂಗಳೂರಿನಿಂದ 437 ಕಿ.ಮೀ. ವ್ಯಾಪ್ತಿಯಲ್ಲಿದೆ. ರೈಲ್ವೆ ಮಾರ್ಗ, ವಿಮಾನ ಮಾರ್ಗ ಹಾಗೂ ರಸ್ತೆ ಮಾರ್ಗಗಳ ಸೌಲಭ್ಯವಿದೆ. ನಗರ ಪ್ರದೇಶದಲ್ಲೇ ಇರುವುದರಿಂದ ಉತ್ತಮ ವಸತಿ ಸೌಲಭ್ಯಗಳನ್ನು ಪಡೆಯಬಹುದು. ಇಲ್ಲಿಗೆ ಬರಲು ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್. ಮಧುರೈ ಪವಿತ್ರ ಕ್ಷೇತ್ರಗಳಿಗಷ್ಟೇ ಅಲ್ಲದೆ ಜವಳಿ ಉದ್ಯಮ ಹಾಗೂ ಮಲ್ಲಿಗೆ ಬೆಳೆ ಬೆಳೆಯುವುದರಲ್ಲೂ ಪ್ರಸಿದ್ಧಿ ಪಡೆದಿದೆ.
ಮದುರೈ ಬಗ್ಗೆ ಹೆಚ್ಚಿನ ಜಾಗಗಳ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಒಂದು ಕಥೆ
ಪುರಾಣದ ಪ್ರಕಾರ ಶಿವನು ಪಾರ್ವತಿಯ ವಿವಾಹವಾಗಲು ಭೂಮಿಗೆ ಬಂದನು. ಆ ಸಮಯದಲ್ಲಿ ಪಾರ್ವತಿಯು ನಗರವನ್ನು ಆಳುತ್ತಿದ್ದಳು. ವಿವಾಹ ನಿಶ್ಚಿತವಾಗಿ, ಪಾರ್ವತಿಯ ಸಹೋದರ ವಿಷ್ಣುವು ಮದುವೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ವೈಕುಂಠದಿಂದ ಹೋಗುತ್ತಿದ್ದನು. ಆ ಸಮಯದಲ್ಲಿ ಇಂದ್ರನ ಮಹಿಮಾ ಆಟದಿಂದ ಮೋಸ ಹೋಗಿ ವಿವಾಹ ಸ್ಥಳಕ್ಕೆ ಹೋಗಲು ತಡವಾಯಿತು. ಅಷ್ಟರಲ್ಲಿ ಸ್ಥಳೀಯ ದೇವರಾದ ತಿರುಪ್ಪರಂ ಕುಂದ್ರಮ್ ನೆರವಾದನು ಎಂಬ ಇತಿಹಾಸವಿದೆ. ಹಾಗಾಗಿ ಪ್ರತಿವರ್ಷ ಇಲ್ಲಿಚಿತಿರೈ ತಿರುವಿಳ ಎಂದು ಆಚರಿಸಲಾಗುತ್ತದೆ.
PC: en.wikipedia.org
ಇತಿಹಾಸ
ಈ ದೇವಾಲಯವು 7 ನೇ ಶತಮಾನದ ಇತಿಹಾಸವನ್ನು ಹೊಂದಿದೆ. 1310ರಲ್ಲಿ ಮುಸ್ಲಿಂ ಆಕ್ರಮಣಕಾರ ಮಲಿಕ್ ಕಾಫರ್ ದೇವಸ್ಥಾನವನ್ನು ಕೊಳ್ಳೆಹೊಡೆದಿದ್ದ. ಜೊತೆಗೆ ಎಲ್ಲಾ ಪುರಾತನ ಪುರಾವೆಗಳನ್ನು ನಾಶಮಾಡಿದ್ದ ಎನ್ನಲಾಗುತ್ತದೆ.
PC: en.wikipedia.org
ದೇಗುಲದ ರಚನೆ
ಈ ದೇಗುಲವು ಪುರಾತನ ನಗರ ಮಧುರೈನ ಭೌಗೋಳಿಕ ಮತ್ತು ಧಾರ್ಮಿಕ ಅನುಷ್ಠಾನಗಳ ಕೇಂದ್ರವಾಗಿದೆ. ದೇಗುಲದ ಸುತ್ತಲಿನ ಗೋಡೆಗಳು ಹಾಗೂರಸ್ತೆಗಳನ್ನು ಏಕ ಕೇಂದ್ರೀಯ ಕೋಟೆಯ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ಪ್ರಾಚೀನ ತಮಿಳು ಗ್ರಂಥ ಒಂದರ ಪ್ರಕಾರ ದೇವಸ್ಥಾನದ ರಸ್ತೆಗಳು ತಾವರೆ ಮತ್ತು ಅದರ ದಳದಂತೆ ಹರಡಿಕೊಂಡಿವೆ ಎಂದು ಹೇಳುತ್ತದೆ.
PC: en.wikipedia.org
ದೇಗುಲದ ಉದ್ದ-ಅಗಲ
ಈ ದೇವಸ್ಥಾನವು 45 ಎಕರೆ ವಿಸ್ತೀರ್ಣದಲ್ಲಿದೆ. 254 ಮೀಟರ್ ಉದ್ದ ಹಾಗೂ 237 ಮೀ. ಅಗಲವನ್ನು ಹೊಂದಿರುವ ಒಂದು ದೊಡ್ಡ ದೇಗುಲ. ಈ ದೇಗುಲವು 12 ಗೋಪುರಗಳನ್ನು ಒಳಗೊಂಡಿದ್ದು, ಅದರಲ್ಲಿ ದಕ್ಷಿಣದ ಗೋಪುರವು 170 ಅಡಿ ಎತ್ತರವನ್ನು ಹೊಂದಿದೆ.
PC: en.wikipedia.org
ದೇಗುಲದ ಒಳಗೆ
ಈ ದೇವಸ್ಥಾನದಲ್ಲಿ ಅನೇಕ ದೇವರ ವಿಗ್ರಹಗಳಿವೆ. ಶಿವನ ಗುಡಿಯು ಸಂಕೀರ್ಣದ ಕೇಂದ್ರಭಾಗದಲ್ಲಿದೆ. ದೇಗುಲದ ಹೊರಗೆ ಏಕ ಶಿಲೆಯಿಂದ ಕೆತ್ತಿದ ದೊಡ್ಡ ಗಣೇಶನ ವಿಗ್ರಹವಿದೆ. ಮೀನಾಕ್ಷಿ ಗುಡಿಯು ಶಿವನ ಗುಡಿಯ ಎಡಭಾಗದಲ್ಲಿದೆ.
PC: en.wikipedia.org
ಪವಿತ್ರ ಕೆರೆ
ದೇವಸ್ಥಾನದ ಒಳ ಭಾಗದಲ್ಲಿರುವ ಒಂದು ಪವಿತ್ರ ಕೆರೆ ಪೂರ್ತಮರೈ ಕೆರೆ. ಇದನ್ನು ಬಹಳ ಪೂಜ್ಯನೀಯ ಸ್ಥಳವೆಂದು ಪರಿಗಣಿಸಲಾಗಿದೆ. ಈ ಕೆರೆಯಲ್ಲಿ ಯಾವುದೇ ಜಲಚರಗಳು ಇಲ್ಲದಿರುವುದು ಈ ಕೆರೆಯ ವಿಶೇಷ. ಶಿವನು ಕೊಕ್ಕರೆಯೊಂದಕ್ಕೆ ಇಲ್ಲಿ ಯಾವುದೇ ಜಲಚರಗಳು ಬೆಳೆಯುವುದಿಲ್ಲ ಎಂದು ಮಾತು ಕೊಟ್ಟಿದ್ದನು ಹಾಗಾಗಿಯೇ ಇಲ್ಲಿ ಜಲಚರಗಳಿಲ್ಲ ಎಂದು ಹೇಳಲಾಗುತ್ತದೆ.
ಸಾವಿರ ಕಂಬದ ಮಂಟಪ
ಮೀನಾಕ್ಷಿ ಅಮ್ಮನ ಸಾವಿರ ಕಂಬದ ಮಂಟಪವನ್ನು ನೆಲ್ಲೆಯಪ್ಪರ್ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ 985 ಕಂಬಗಳು ಕೆತ್ತನೆಯನ್ನು ಹೊಂದಿದೆ. ಈ ದೇಗುಲದಲ್ಲಿ ಅಷ್ಟ ಶಕ್ತಿ ಮಂಟಪವೂ ಇದೆ. ದೇವಾಲಯಕ್ಕೆ ಬರುವಾಗ ಸಿಗುವ ಮೊದಲ ಮಂಟಪ. ಇಲ್ಲಿ ಎಂಟು ದೇವತೆಗಳ ಮೂರ್ತಿಗಳಿವೆ. ಆದ್ದರಿಂದಲೇ ಅಷ್ಟ ಶಕ್ತಿ ಮಂಟಪ ಎಂದು ಕರೆಯುತ್ತಾರೆ.
PC: en.wikipedia.org