ಭಾರತದಲ್ಲಿ ಅತ್ಯಂತ ಹುರುಪು, ಉತ್ಸಾಹ ಹಾಗೂ ಸಡಗರಾದಿಗಳಿಂದ ಆಚರಿಸುವ ಕೆಲವೆ ಕೆಲವು ಪ್ರಮುಖ ಹಬ್ಬಗಳ ಪೈಕಿ ದೀಪಾವಳಿ ಹಬ್ಬವೂ ಸಹ ಒಂದು. ದೇಶಾದ್ಯಂತ ಎಲ್ಲ ಹಿಂದುಗಳು ಆಚರಿಸುವ ಹಬ್ಬ ಇದಾಗಿದ್ದು ಭಾರತದಲ್ಲಿ ಆಚರಿಸಲಾಗುವ ಅತ್ಯಂತ ದೊಡ್ಡ ಹಿಂದು ಹಬ್ಬಗಳಲ್ಲಿ ಇದನ್ನು ಒಂದಾಗಿ ಪರಿಗಣಿಸಲಾಗಿದೆ.
ಉತ್ತರ ಭಾರತದಿಂದ ಹಿಡಿದು ದಕ್ಷಿಣ ಭಾರತದವರೆಗೆ ಬಹುತೇಕ ಎಲ್ಲ ಪಟ್ಟಣಗಳು, ಮಹಾನಗರಗಳು ಹಾಗೂ ಹಳ್ಳಿಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಆದರೆ ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ಸ್ಥಳ ನಿಮಗೆ ಅಚ್ಚರಿ ಮೂಡಿಸಬಹುದು. ಏಕೆಂದರೆ ಕಳೆದ ಆರು ದಶಕಗಳಿಂದ ಇಲ್ಲಿ ದೀಪಾವಳಿಯ ಹಬ್ಬವನ್ನು ಆಚರಿಸಲಾಗುವುದೆ ಇಲ್ಲ.
ಚಿತ್ರಕೃಪೆ: Alanvel
ಹೀಗೆ ದೀಪಾವಳಿಯನ್ನು ಆಚರಿಸದಿರಲು ಈ ಗ್ರಾಮವು ತನ್ನದೆ ಆದ ವಿಚಿತ್ರ ಕಾರಣಗಳನ್ನು ಹೊಂದಿದೆ. ಏಕೆಂದರೆ ಈ ಹಬ್ಬವು ಬರುವ ಸಮಯ ಅಕ್ಟೋಬರ್-ನವಂಬರ್ ಸಮಯವಾಗಿದ್ದು ಆ ಸಮಯವು ಪ್ರಾಕೃತಿಕವಾಗಿ ಬರ ಅಥವಾ ಅನಾವೃಷ್ಠಿಗೆ ಸಂಭವವೆ ಜಾಸ್ತಿಯಾಗಿರುತ್ತದೆ.
ಅಲ್ಲದೆ ಇದು, ಬೆಳೆಗಾಗಿ ರೈತರು ಅತಿ ಹೆಚ್ಚು ಹಣ ವ್ಯಯಿಸುವ ಸಂದರ್ಭದಲ್ಲಿ ಬರುವುದರಿಂದ ಈ ಹಬ್ಬಕ್ಕೆ ಯಾವ ಮಾನ್ಯತೆಯನ್ನೂ ಇಲ್ಲಿನ ನಿವಾಸಿಗರು ನೀಡುವುದಿಲ್ಲ. ಹಿಂದೆ ಒಂದೊಮ್ಮೆ ಗ್ರಾಮದಲ್ಲಿ ಆರ್ಥಿಕವಾಗಿ ಸದೃಢವಾದ ಕುಟುಂಬಗಳು ಈ ಹಬ್ಬವನ್ನಾಚರಿಸಿತ್ತಾದರೂ ಅದರಿಂದ ಗ್ರಾಮದ ಇತರೆ ಜನರೆ ಮೇಲೆ ಕೆಟ್ಟ ಪರಿಣಾಮ ಬೀರಿ, ಕೊನೆಗೆ ಹಿರಿಯರೆಲ್ಲ ಸೇರಿ ಅವಿರೋಧವಾಗಿ ಹಬ್ಬ ಆಚರಿಸದಿರಲು ನಿರ್ಧಾರ ಕೈಗೊಂಡರಂತೆ!
ಕಡುಕಾವಲರ್ ದೇವಾಲಯ, ಚಿತ್ರಕೃಪೆ: Alanvel
ಸುಮಾರು ಆರು ದಶಕಗಳ ಹಿಂದೆ ತೆಗೆದುಕೊಳ್ಳಲಾದ ಆ ನಿರ್ಧಾರವು ಇಂದಿಗೂ ಕಡ್ಡಾಯವಾಗಿ ಚಾಲ್ತಿಯಲ್ಲಿದೆ. ಹಬ್ಬದ ಸಂದರ್ಭದಲ್ಲಿ ಯಾವುದೆ ರೀತಿಯ ಪಟಾಕಿಗಳಾಗಲಿ, ಹೊಸ ತಿಂಡಿ ತಿನಿಸುಗಳಾಗಲಿ ಅಥವಾ ಹೊಸ ಬಟ್ಟೆಗಳಾಗಲಿ ಇಲ್ಲಿ ಯಾರೂ ತೆಗೆದುಕೊಳ್ಳುವುದಾಗಲಿ, ತಿನ್ನುವುದಾಗಲಿ ಅಥವಾ ಹೊಡೆಯುವುದಾಗಲಿ ಮಾಡುವುದಿಲ್ಲ.
ಅಷ್ಟೆ ಅಲ್ಲ, ಇಲ್ಲಿಂದ ಬೇರೆಡೆ ವಾಸಿಸಲು ವಲಸೆ ಹೋದವರೂ ಸಹ ತಾವು ಎಲ್ಲಿದ್ದರೂ ಸರಿ, ದಿಪಾವಳಿಯನ್ನು ಆಚರಿಸುವುದಿಲ್ಲ. ಈ ರೀತಿಯಾಗಿ ಇದೊಂದು ಕುತೂಹಲಕರ ಹಳ್ಳಿಯಾಗಿ ಸಾಕಷ್ಟು ಪ್ರವಾಸಿಗರ ಗಮನಸೆಳೆಯುತ್ತದೆ. ಅಲ್ಲದೆ ಇಲ್ಲಿರುವ ಕಡುಕಾವಲರ್ ಸ್ವಾಮಿ ದೇವಾಲಯವು ಸಾಕಷ್ಟು ವಿಶೇಷವಾಗಿದೆ.
ಐನಾರ್ ದೇವಾಲಯ, ಚಿತ್ರಕೃಪೆ: Alanvel
ಈ ಗ್ರಾಮದ ಹೆಸರೆ ಮಾಂಪಟ್ಟಿ. ಇದು ತಮಿಳುನಾಡಿ ಶಿವಗಂಗೈ ಜಿಲ್ಲೆಯಲ್ಲಿದ್ದು ಅದರ ಉತ್ತರಕ್ಕೆ 43 ಕಿ.ಮೀ ಗಳಷ್ಟು ದೂರದಲ್ಲಿದೆ. ತಿರುಪತೂರು, ಮೇಲೂರು ಹಾಗೂ ಮದುರೈಗಳಿಂದ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಮಾಂಪಟ್ಟಿ ಹೊಂದಿದೆ.
ಜಗತ್ತಿನ ಏಕೈಕ ಲಕ್ಷ್ಮಿ ಕುಬೇರ ದೇವಾಲಯ!
ಮಾಂಪಟ್ಟಿಯಲ್ಲಿ ಹಲವು ದೇವಾಲಯಗಳಿದ್ದು ಅವುಗಳಲ್ಲಿ ಎರಡು ವಿಶೇಷ ದೇವಾಲಯಗಳು ಭಕ್ತರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅವೆ ಶ್ರೀ ಕಡುಕಾವಲರ್ ಸ್ವಾಮಿ ದೇವಾಲಯ. ಇದು ಗ್ರಾಮದೇವತೆ ಹಾಗೂ ಇನ್ನೊಂದು ಕಾರಂತಮಲೈ ಐನಾರ್ ದೇವಾಲಯ.