ಇದೊಂದು ವಿಶಿಷ್ಟವಾದ ದೇವಾಲಯ. ಸುಮಾರು ಒಂಭತ್ತನೆಯ ಶತಮಾನಕ್ಕೆ ಸಂಬಂಧಿಸಿದ ಬಲು ಪುರಾತನ ದೇವಾಲಯ. ಅಲ್ಲದೆ ವಿಜಯನಗರ ಸಾಮ್ರಾಜ್ಯದೊಂದಿಗೂ ನಂಟನ್ನು ಹೊಂದಿರುವ ಅದ್ಭುತ ದೇವಾಲಯ. ಈ ದೇವಾಲಯದ ಕುರಿತು ತಿಳಿದವರು ಸ್ವಲ್ಪ ಜನರು ಮಾತ್ರ.
ಆದಾಗ್ಯೂ ಸಾಕಷ್ಟು ಪ್ರಭಾವಿ ದೇವಾಲಯ ಇದಾಗಿದೆ. ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುವಂತೆ ಈ ದೇವಾಲಯಕ್ಕೆ ರಾಜಗೋಪುರವಿಲ್ಲ. ಆದರೂ ಇದೊಂದು ಆಕರ್ಷಕವಾಗಿ ಕಂಡುಬರುವ ದೇವಾಲಯವಾಗಿದೆ. ಇದರ ಮುಖ್ಯ ವಿಶೇಷತೆಗಳೆಂದರೆ ಇಲ್ಲಿರುವ ಅತ್ಯದ್ಭುತ ನಂದಾ ದೀಪ.
ಸಾಂದರ್ಭಿಕ ಚಿತ್ರ, ಚಿತ್ರಕೃಪೆ: GourangaUK
ಇಲ್ಲಿಗೆ ಬರುವವರು ಸಾಮಾನ್ಯವಾಗಿ ತುಪ್ಪ್ಪವನ್ನು ತಂದು ಈ ನಂದಾದೀಪವನ್ನು ಬೆಳುಗುತ್ತಾರೆ. ಇದರಿಂದ ಒಂದಲ್ಲ ಎರಡಲ್ಲ, ಸಾಕಷ್ಟು ತೊಂದರೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಮೊದಲಿನಿಂದಲೂ ಬಂದಿದೆ. ಅಲ್ಲದೆ ಎಷ್ಟೊ ಜನರು ಒಳಿತನ್ನೂ ಸಹ ಕಂಡಿದ್ದಾರೆ.
ಮಕ್ಕಳಿಲ್ಲದವರು, ಮದುವೆಯಾಗಿ ವೈಮನಸ್ಸಿನಿಂದ ದೂರವಾದ ಸತಿ-ಪತಿಗಳು ಹಾಗೂ ಜೀವನದಲ್ಲಿ ಎಂದಿಗೂ ಅದೃಷ್ಟ ಕಾಣದವರು ಇಲ್ಲಿಗೆ ಭೇಟಿ ನೀಡಿ ದೀಪ ಬೆಳುಗುತ್ತಿರಲು ತುಪ್ಪವನ್ನು ಅರ್ಪಿಸುತ್ತಾರೆ. ಈ ರೀತಿ ಮಾಡುವುದರಿಂದ ಅವರ ಎಲ್ಲ ಕಾಮನೆಗಳು ಶೀಘ್ರವಾಗಿ ಈಡೇರಿಸಲ್ಪಡುತ್ತವೆ ಎಂಬ ನಂಬಿಕೆಯಿದೆ.
ಚಿತ್ರಕೃಪೆ: ANANDSADRAS
ಇನ್ನೊಂದು ಮುಖ್ಯ ವಿಷಯವೆಂದರೆ ಇಲ್ಲಿರುವ ಗರುಡಸ್ವಾಮಿಯ ಸನ್ನಿಧಿ. ಹೌದು ಗರುಡಸ್ವಾಮಿಯು ಇಲ್ಲಿ ವಿಶೇಷವಾದ ಅವತಾರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಅಂದರೆ, ಗರುಡನು ಇಲ್ಲಿ ಎಂಟು ಸರ್ಪಗಳನ್ನೆ ತನ್ನ ಆಭರಣಗಳನ್ನಾಗಿ ಮಾಡಿಕೊಂಡು ನೆಲೆಸಿದ್ದಾನೆ. ಕಿವಿ ಓಲೆಗಳು, ಹಾಕಿಕೊಂಡ ಹಾರಗಳು, ಭುಜದ ಆಭರಣಗಳು ಹೀಗೆ ಒಟ್ಟಾರೆ ಎಂಟು ಸರ್ಪಗಳನ್ನು ಆಭರಣವನ್ನಾಗಿ ಮಾಡಿಕೊಂಡಿದ್ದಾನೆ.
ಹೀಗಾಗಿ ಸರ್ಪದ ಭಯವಿದ್ದವರು ಇಲ್ಲವೆ ಸರ್ಪದೋಷದಿಂದ ಬಳಲುತ್ತಿರುವವರು ಇಲ್ಲಿಗೆ ಬಂದು ಗರುಡಸ್ವಾಮಿಯನ್ನು ಪೂಜಿಸುತ್ತಾರೆ. ಇದರಿಂದ ಅವರ ಎಲ್ಲ ತೊಂದರೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಮೊದ ಮೊದಲು ಗರುಡಸ್ವಾಮಿಯು ಈ ದೇವಾಲಯದ ಪ್ರಧಾನ ದೇವನಾಗಿದ್ದ.
ಚಿತ್ರಕೃಪೆ: ANANDSADRAS
ನಂತರದ ಸಮಯದಲ್ಲಿ ಈ ಸ್ಥಳದಲ್ಲಿ ಗಿರಿವರದರಾಜ ಪೆರುಮಾಳ ಅಂದರೆ ವಿಷ್ಣುವಿನ ವಿಗ್ರಹ ದೊರೆತು ಅದನ್ನು ದೇವಾಲಯದ ಗರ್ಭಗೃಹದಲ್ಲಿ ಪ್ರಧಾನ ದೇವವಾಗಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಗಿರಿವರದರಾಜನು ತನ್ನ ಪತ್ನಿಯರಾದ ಶ್ರೀದೇವಿ ಹಾಗೂ ಭೂದೇವಿ ಸಮೇತನಾಗಿ ನೆಲೆಸಿರುವುದು ಇನ್ನೊಂದು ವಿಶೇಷ.
ದೇವಾಲಯವು ಚಿಕ್ಕೆ ಗುಡ್ಡದ ಮೇಲೆ ನೆಲೆಸಿದ್ದು ಮೆಟ್ಟಿಲುಗಳ ಮೂಲಕ ತಲುಪಬಹುದಾಗಿದೆ. ಒಂದೆ ರೇಖೆಯಲ್ಲಿ ಗರುಡಸ್ವಾಮಿ ನಂತರ ವಿಷ್ಣು ನೆಲೆಸಿರುವುದು ಇನ್ನೊಂದು ವಿಶೇಷ. ಮಲೈ ಅಂದರೆ ಬೆಟ್ಟದ ಮೇಲಿರುವ ಕಾರಣದಿಂದಾಗಿ ಇದನ್ನು ಮಲಯ ಮಂಡಲ ಪೆರುಮಾಳ ಅಥವಾ ಮಲೈ ಮಂಡಲ ಪೆರುಮಾಳ ದೇವಾಲಯ ಎಂದು ಕರೆಯಲಾಗುತ್ತದೆ.
ಏಕೈಕ ಗರುಡಸ್ವಾಮಿಯ ದೇವಾಲಯ!
ಸದ್ರಾಸ್ ಎಂಬ ಪಟ್ಟಣದಲ್ಲಿ ಈ ದೇವಾಲಯವಿದೆ. ಸದ್ರಾಸ್, ಸದುರಂಗಪಟ್ಟಿನಾಂ ಅಥವಾ ಚತುರಂಗಪಟ್ಟಿನಾಂ ಎಂಬ ಹೆಸರಿನಿಂದಲೂ ಸಹ ಗುರುತಿಸಲ್ಪಡುತ್ತದೆ. ತಮಿಳುನಾಡಿನ ಕಂಚೀಪುರಂ ಜಿಲ್ಲೆಯಲ್ಲಿರುವ ಈ ಪಟ್ಟಣವು ಚೆನ್ನೈ ನಗರದಿಂದ ಸುಮಾರು 70 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಾಡಿಗೆ ಕಾರು/ಟ್ಯಾಕ್ಸಿಗಳು ದೊರೆಯುತ್ತವೆ.