ಭಾರತದಲ್ಲಿ ದೈವದಲ್ಲಿ ನಂಬಿಕೆಯಿರಿಸಿರುವ ಜನರು ಕೋಟಿ ಕೋಟಿ. ಧಾರ್ಮಿಕ ಆಕರ್ಷಣೆಗಳಿಗೆ, ತೀರ್ಥಯಾತ್ರೆಗಳಿಗೆ ಹೋಗುವ ಜನರು ಅಪಾರ. ಭಾರತದ ಯಾವ ಮೂಲೆಯಲ್ಲಾದರೂ ಸರಿ ಧಾರ್ಮಿಕ ಪ್ರಭಾವವಿರುವ, ಶಕ್ತಿಯಿರುವ ಸ್ಥಳಗಳಿಗೆ, ದೇವಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆ ಕಮ್ಮಿ ಏನಿಲ್ಲ. ಅಂತೆಯೆ ಭಾರತದ ಎಲ್ಲ ರಾಜಯಗಳಲ್ಲಿಯೂ ಸಾಕಷ್ಟು ದೇವಾಲಯಗಳನ್ನು ಕಾಣಬಹುದು.
ತೆಲಂಗಾಣ ಇತ್ತೀಚಿಗಷ್ಟೆ ಉದಯವಾದ ಭಾರತದ 29 ನೇಯ ರಾಜ್ಯವಾಗಿದೆ. ಭಾರತದ ಎಲ್ಲ ರಾಜ್ಯಗಳಲ್ಲಿ ಕಂಡುಬರುವಂತೆಯೆ ತೆಲಂಗಾಣದಲ್ಲಿಯೂ ಸಹ ಸಾಕಷ್ಟು ಧಾರ್ಮಿಕ ಆಕರ್ಷಣೆಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಿವೆ. ದೈವ ಪ್ರಿಯ ಭಕ್ತಾದಿಗಳಿಗೆ/ಪ್ರವಾಸಿಗರಿಗೆ ಭೇಟಿ ನೀಡಲು ಸಾಕಷ್ಟು ತೀರ್ಥಕ್ಷೇತ್ರಗಳು, ಗುಡಿ ಗುಂಡಾರಗಳು ತೆಲಂಗಾಣ ರಾಜ್ಯದಲ್ಲೆಲ್ಲ ಹರಡಿವೆ.
ಪ್ರಸ್ತುತ ಲೇಖನದಲ್ಲಿ ತೆಲಂಗಾಣ ರಾಜ್ಯದ ಆಯಾ ಜಿಲ್ಲೆಗಳಲ್ಲಿರುವ ಕೆಲವು ಪ್ರಮುಖ ಹಾಗೂ ಆಯ್ದ ದೇವಾಲಯಗಳ ಕುರಿತು ತಿಳಿಸಲಾಗಿದೆ. ಈ ನೂತನ ರಾಜ್ಯಕ್ಕೆ ನೀವು ಭೇಟಿ ನೀಡುವ ಪ್ರಸಂಗ ಒದಗಿ ಬಂದರೆ ನಿಮಗೆ ಅನುಕೂಲಕರವಾದ ಸ್ಥಳದಲ್ಲಿಯೆ ಈ ದೇವಾಲಯಗಳಿದ್ದರೆ ಹಾಗು ಹೋಗಲು ಅವಕಾಶ ದೊರೆತರೆ ಖಂಡಿತವಾಗಿಯೂ ಭೇಟಿ ನೀಡಿ.
ತೆಲಂಗಾಣದ ಪ್ರಮುಖ ದೇವಾಲಯಗಳು:
ಯದಗಿರಿಗುಟ್ಟಾ : ಯದಾದ್ರಿ ಎಂತಲೂ ಕರೆಯಲ್ಪಡುವ ಈ ಯದಗಿರಿಗುಟ್ಟಾ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಭುವನಗಿರಿ ಎಂಬಲ್ಲಿದೆ. ಮುಖ್ಯವಾಗಿ ಇದು ವಿಷ್ಣುವಿನ ಅವತಾರವಾದ ಶ್ರಿ ನರಸಿಂಹದೇವರ ದೇವಸ್ಥಾನದಿಂದಾಗಿ ಹೆಸರುವಾಸಿಯಾಗಿದೆ. ಈ ದೇವಾಲಯವನ್ನು ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಎಂದು ಕರೆಯುತ್ತಾರೆ ಹಾಗೂ ಪ್ರತಿ ವರ್ಷ ಇಲ್ಲಿ ಬ್ರಹ್ಮೋತ್ಸವವನ್ನು ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ಹೈದರಾಬಾದ್ ನಗರದಿಂದ 60 ಕಿ.ಮೀ ಹಾಗೂ ರಾಯಗಿರಿಯಿಂದ ಮೂರು ಕಿ.ಮೀ ದೂರವಿದೆ. ರಾಯಗಿರಿಯಲ್ಲಿ ರೈಲು ನಿಲ್ದಾಣವಿದ್ದು ಈ ದೇವಾಲಯ ತಲುಪಲು ಅನುಕೂಲಕರವಾಗಿದೆ.
ಚಿತ್ರಕೃಪೆ: Adityamadhav83
ತೆಲಂಗಾಣದ ಪ್ರಮುಖ ದೇವಾಲಯಗಳು:
ಭದ್ರಾಚಲಂ ದೇವಸ್ಥಾನ : ಭದ್ರಾಚಲಂ ಭಾರತದ ದಕ್ಷಿಣ ಭಾಗದ ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣ ಹಾಗೂ ಪ್ರಬುದ್ಧ ತೀರ್ಥ ಕ್ಷೇತ್ರ. ಗೋದಾವರಿ ನದಿಯ ತಟದ ಮೇಲೆ ನೆಲೆಸಿರುವ ಭದ್ರಾಚಲಂ ನಗರವು ದೇಶದಾದ್ಯಂತ ಪ್ರಖ್ಯಾತಿಯನ್ನು ಗಳಿಸಿದೆ, ಏಕೆಂದರೆ ಈ ಪ್ರದೇಶವನ್ನು ಶ್ರೀ ರಾಮ ಹಾಗೂ ಆತನ ಧರ್ಮ ಪತ್ನಿ ಸೀತೆಯು ನೆಲೆಸಿದ್ದ ನಿವಾಸ ಸ್ಥಾನ ಎಂದು ಹೇಳಲಾಗುತ್ತದೆ. ಶ್ರೀ ರಾಮನ ಹೆಸರಿನಿಂದಾಗಿಯೇ ಭದ್ರಾಚಲಂ ಹಿಂದುಗಳ ಪಾಲಿಗೆ ಪ್ರಸಿದ್ಧ ಯಾತ್ರಾ ಸ್ಥಳವೆನಿಸಿದೆ.
ಚಿತ್ರಕೃಪೆ: Trived m96
ತೆಲಂಗಾಣದ ಪ್ರಮುಖ ದೇವಾಲಯಗಳು:
ಮೇರು ಋಷಿ ಹಾಗೂ ಮೇನಕೆಯ ಸಮಾಗಮದಿಂದ ಹುಟ್ಟಿದ ಭದ್ರ ಎಂಬ ಭಕ್ತನಿಂದ ಈ ಪಟ್ಟಣಕ್ಕೆ ಭದ್ರಾಚಲಂ ಎಂಬ ಹೆಸರು ಬಂದಿದೆ. ಭದ್ರಾಚಲಂ ನಗರವು, ಶ್ರೀ ರಾಮನ ಜನ್ಮ ಸ್ಥಾನವಲ್ಲ ಎಂಬುದೊಂದನ್ನು ಹೊರತುಪಡಿಸಿದರೆ ಅಯೋಧ್ಯೆಯ ನಂತರದ ಎರಡನೇ ಪ್ರಮುಖ ಸ್ಥಳವಾಗಿದೆ.
ಚಿತ್ರಕೃಪೆ: Adityamadhav83
ತೆಲಂಗಾಣದ ಪ್ರಮುಖ ದೇವಾಲಯಗಳು:
ಕಾಲೇಶ್ವರ ಮುಕ್ತೇಶ್ವರಸ್ವಾಮಿ ದೇವಾಲಯ : ತೆಲಂಗಾಣದ ಕರೀಂ ನಗರ ಜಿಲ್ಲೆಯ ಮಹದೇವಪುರ ತಾಲೂಕಿನಲ್ಲಿ ಈ ದೇವಾಲಯವಿದೆ. ಇದೊಂದು ವಿಶಿಷ್ಟ ದೇವಸ್ಥಾನವಾಗಿದ್ದು ಇಲ್ಲಿ ಒಂದೆ ಕಲ್ಲಿನಲ್ಲಿ ಎರಡು ಶಿವಲಿಂಗಗಳಿವೆ. ಒಂದು ಶಿವನಿಗೆ ಮುಡಿಪಾಗಿದ್ದರೆ ಇನ್ನೊಂದು ಯಮಧರ್ಮರಾಯನಿಗೆ ಮುಡಿಪಾಗಿದೆ. ಹೀಗಾಗಿ ಈ ದೇವಾಲಯವನ್ನು ಕಾಲೇಶ್ವರ ಮುಕ್ತೇಶ್ವರಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ. ಗೋದಾವರಿ ನದಿ ತಟದಲ್ಲಿರುವ ಈ ಕ್ಷೇತ್ರವನ್ನು ದಕ್ಷಿಣ ಗಂಗೋತ್ರಿ ಎಂತಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Kalyan131
ತೆಲಂಗಾಣದ ಪ್ರಮುಖ ದೇವಾಲಯಗಳು:
ಜ್ಞಾನ ಸರಸ್ವತಿ ದೇವಾಲಯ : ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಬಾಸರ ಪಟ್ಟಣದಲ್ಲಿ ಜ್ಞಾನಕ್ಕೆ ಅಧಿದೇವತೆ ಎನ್ನಲಾಗುವ ಸರಸ್ವತಿ ದೇವಿಗೆ ಮುಡಿಪಾದ ಈ ವಿಶಿಷ್ಟ ದೇವಾಲಯವಿದೆ. ಸರಸ್ವತಿಯ ದೇಗುಲಗಳು ಅತ್ಯಂತ ವಿರಳ ಹಾಗೂ ಅಪರೂಪವಾಗಿರುವುದರಿಂದ ಈ ದೇವಾಲಯ ಸಾಕಷ್ಟು ಮಹತ್ವಪಡೆದಿದೆ.
ಚಿತ್ರಕೃಪೆ: RameshSharma
ತೆಲಂಗಾಣದ ಪ್ರಮುಖ ದೇವಾಲಯಗಳು:
ಕೊಂಡಗಟ್ಟು ಆಂಜನೇಯ ದೇವಾಲಯ : ಕರೀಮನಗರದಿಂದ 35 ಕಿ.ಮೀ ದೂರದಲ್ಲಿರುವ ಈ ದೇವಾಲಯ ವಿಶೇಷವಾಗಿದ್ದು ಆಂಜನೇಯಸ್ವಾಮಿಗೆ ಮುಡಿಪಾಗಿದೆ. ಸುಮಾರು 300 ವರ್ಷಗಳ ಹಿಂದೆ ದನಗಾಹಿಯೊಬ್ಬನಿಂದ ಈ ದೇವಾಲಯದ ನಿರ್ಮಾಣವಾಗಿದೆ ಎಂಬ ಪ್ರತೀತಿಯಿದೆ. ಪ್ರಸ್ತುತ ದೇವಾಲಯದ ರಚನೆಯನ್ನು 160 ವರ್ಷಗಳ ಹಿಂದೆ ಕೃಷ್ಣರಾವ್ ದೇಶಮುಖ ಎಮ್ಬುವವರು ನಿರ್ಮಿಸಿದರು ಎನ್ನಲಾಗಿದೆ. ಸಂತಾನ ಬಯಸುವ ಹೆಣ್ಣು 40 ದಿನಗಳ ಕಾಲ ನಿತ್ಯ ಇಲ್ಲಿ ಭಕ್ತಿ ನಂಬಿಕೆಗಳಿಂದ ಪೂಜಿಸಿದರೆ ಸಂತಾನ ಭಾಗ್ಯ ಪ್ರಾಪ್ತವಾಗುತ್ತದೆ ಎನ್ನಲಾಗಿದೆ.
ಚಿತ್ರಕೃಪೆ: Manasa.mani
ತೆಲಂಗಾಣದ ಪ್ರಮುಖ ದೇವಾಲಯಗಳು:
ಆಲಂಪೂರ ನವಬ್ರಹ್ಮೇಶ್ವರತೀರ್ಥ : ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯಲ್ಲಿರುವ ಆಲಂಪೂರವನ್ನು ದಕ್ಷಿಣಕಾಶಿ ಎಂತಲೂ ನವಬ್ರಹ್ಮೇಶ್ವರತೀರ್ಥ ಎಂತಲೂ ಕರೆಯುತ್ತಾರೆ. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳ ಸಂಗಮ ಸ್ಥಳವಾಗಿರುವ ಆಲಂಪೂರ ತನ್ನಲ್ಲಿರುವ ಒಂಭತ್ತು ಶಿವ ದೇವಾಲಯಗಳಿಂದಾಗಿ ಪ್ರಸಿದ್ಧವಾಗಿದೆ. ಈ ದೇವಾಲಯಗಳ ಮಹತ್ವವನ್ನು ಸ್ಕಂದ ಪುರಾಣದಲ್ಲೂ ಸಹ ಉಲ್ಲೇಖಿಸಲಾಗಿದೆ. ಈ ಎಲ್ಲ ಒಂಭತ್ತು ದೇವಾಲಯಗಳು 7 ನೇಯ ಶತಮಾನದ್ದಾಗಿವೆ. ಆಲಂಪೂರದಲ್ಲಿರುವ ಸಂಗಮೇಶ್ವರ ದೇವಾಲಯ.
ಚಿತ್ರಕೃಪೆ: Adityamadhav83
ತೆಲಂಗಾಣದ ಪ್ರಮುಖ ದೇವಾಲಯಗಳು:
ಬಿರ್ಲಾ ಮಂದಿರ : ಬಿರ್ಲಾ ಫೌಂಡೇಶನ್ ನಿಂದ 1976 ರಲ್ಲಿ ನಿರ್ಮಿಸಲಾದ ಈ ಮಂದಿರವು ತೆಲಂಗಾಣದ ರಾಜಧಾನಿ ನಗರವಾದ ಹೈದರಾಬಾದಿನಲ್ಲಿದೆ. ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿರುವ ಈ ದೇವಾಲಯವು ನೋಡಲು ವಿಶಾಲ ಹಾಗೂ ಅದ್ಭುತವಾಗಿದ್ದು ನಗರದ ನೌಬತ್ ಪಹಾಡ್ ಎಂಬ 280 ಅಡಿಗಳಷ್ಟು ಎತ್ತರದ ಚಿಕ್ಕ ಗುಡ್ಡವೊಂದರ ಮೇಲಿದೆ. ವೆಂಕಟೇಶ್ವರನಿಗೆ ಮುಡಿಪಾದ ದೇವಾಲಯ ಇದಾಗಿದೆ.
ಚಿತ್ರಕೃಪೆ: Pauk
ತೆಲಂಗಾಣದ ಪ್ರಮುಖ ದೇವಾಲಯಗಳು:
ಚಿಲ್ಕೂರು ಬಾಲಾಜಿ : ತೆಲಂಗಾಣ ರಾಜ್ಯದ ಪ್ರಮುಖ ನಗರ ಪ್ರದೇಶವಾದ ಹೈದರಾಬಾದ್ ನಗರದ ಪ್ರವಾಸಿ ಆಕರ್ಷಣೆಗಳಲ್ಲೊಂದಾದ ಒಸ್ಮಾನ್ ಸಾಗರ ಕೆರೆಯ ದಡದಲ್ಲಿ ನೆಲೆಸಿರುವ ಬಾಲಾಜಿ ಅಥವಾ ವೆಂಕಟೇಶ್ವರನ ದೇವಸ್ಥಾನವು ಒಂದು ಜನಪ್ರೀಯ ದೇವಸ್ಥಾನವಾಗಿದ್ದು, ಹೈದರಾಬಾದಿನಲ್ಲಿರುವ ಅತಿ ಪುರಾತನ ದೇವಾಲಯಗಳ ಪೈಕಿ ಒಂದಾಗಿದೆ. ವಿಶೇಷವೆಂದರೆ ಈ ದೇವಸ್ಥಾನವು ಭಕ್ತರಿಂದ ಯಾವುದೆ ರೀತಿಯ ಕಾಣಿಕೆಗಳನ್ನಾಗಲಿ, ದೇಣಿಗೆಯನ್ನಾಗಲಿ ಪಡೆಯುವುದಿಲ್ಲ. ಅಲ್ಲದೆ ಇಲ್ಲಿ ದೇವರ ಹುಂಡಿಯೂ ಸಹ ಇರಿಸಲಾಗಿಲ್ಲ.
ಚಿತ್ರಕೃಪೆ: Adityamadhav83
ತೆಲಂಗಾಣದ ಪ್ರಮುಖ ದೇವಾಲಯಗಳು:
ಸ್ವತಂತ್ರವಾಗಿ ಸರ್ಕಾರದೊಂದಿಗೆ ಹೋರಾಡಿ ಸರ್ಕಾರದ ನಿಯಂತ್ರಣಕ್ಕೂ ಒಳಪಡದ ಈ ದೇವಾಲಯಕ್ಕೆ ಎಲ್ಲರಿಗೂ ಒಂದೆ ರೀತಿಯ ಪ್ರವೇಶವಿದ್ದು ಯಾವ ಗಣ್ಯ ವ್ಯಕ್ತಿಯಾದರೂ ಸರಿ ವಿಶೇಷವಾದ ಪ್ರವೇಶ ಇಲ್ಲವೆ ಇಲ್ಲ. ಇನ್ನೊಂದು ವಿಶೇಷವೆಂದರೆ ವಿದೇಶಕ್ಕೆ ಹೊರಡಬಯಸುವ ಅನೇಕರು ಇಲ್ಲಿ ವಿಸಾ ಸ್ವೀಕೃತಿಗಾಗಿ ಪ್ರಾರ್ಥಿಸಲು ಬರುತ್ತಾರೆ ಅಲ್ಲದೆ ಬಹುತೇಕರ ಈ ರೀತಿಯ ಬೆಡಿಕೆಗಳು ಈ ಬಾಲಾಜಿಯ ದರುಶನದ ನಂತರ ಈಡೇರಿಸಲ್ಪಟ್ಟಿವೆಯಂತೆ! ಹೀಗಾಗಿ ಈ ಬಾಲಾಜಿಯನ್ನು ಪ್ರೀತಿಯಿಂದ ವಿಸಾ ಬಾಲಾಜಿ ಎಂದೂ ಸಹ ಕರೆಯುತ್ತಾರೆ.
ತೆಲಂಗಾಣದ ಪ್ರಮುಖ ದೇವಾಲಯಗಳು:
ರಾಮಪ್ಪ ಗುಡಿ : ರಾಮಪ್ಪ ದೇವಾಲಯವೆಂದೆ ಪ್ರಖ್ಯಾತವಾದ ಇದು ಶಿವನಿಗೆ ಮುಡಿಪಾದ ದೇವಾಲಯವಾಗಿದೆ. ಐತಿಹಾಸಿಕ ಮಹತ್ವ ಪಡೆದಿರುವ ಈ ದೇಗುಲವು ವಾರಂಗಲ್ ಜಿಲ್ಲೆಯ ವೆಂಕಟಾಪುರ ತಾಲೂಕಿನ ಪಾಲಂಪೇಟ್ ಗ್ರಾಮದಲ್ಲಿದೆ. ರಾಮಪ್ಪ ಎಂಬ ಶಿಲ್ಪಿಯು ಈ ದೇವಾಲಯದ ನಿರ್ಮಾಣ ಮಾಡಿದುದರಿಂದ ಇದಕ್ಕೆ ರಾಮಪ್ಪ ದೇವಾಲಯ ಎಂದು ಹೆಸರು ಬಂದಿದೆಯಂತೆ. ಸ್ಥಳ ಪುರಾಣದಂತೆ ಇಲ್ಲಿನ ಗರ್ಭಗುಡಿಯ ಛಾವಣಿಯ ಇಟ್ಟಿಗೆಗಳು ಎಷ್ಟೊಂದು ಹಗುರವಾಗಿದೆಯೆಂದರೆ ನೀರಿನಲ್ಲಿ ತೇಲುತ್ತವೆಯಂತೆ! ಕೆತ್ತನೆಯು ಅದ್ಭುತವಾಗಿದ್ದು ನೋಡಲು ಆಕರ್ಷಕವಾಗಿದೆ.
ಚಿತ್ರಕೃಪೆ: Jayadeep Rajan
ತೆಲಂಗಾಣದ ಪ್ರಮುಖ ದೇವಾಲಯಗಳು:
ಸಾವಿರ ಖಂಬಗಳ ದೇವಾಲಯ : ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಹನುಮಕೊಂಡ ಎಂಬಲ್ಲಿದೆ ಈ ಸುಂದರ ಕೆತ್ತನೆಯ ಐತಿಹಾಸಿಕ ದೇವಾಲಯ. ರುದ್ರೇಶ್ವರಸ್ವಾಮಿ ದೇವಾಲಯ ಎಂತಲೂ ಕರೆಯಲ್ಪಡುವ ಇದು ಶಿವ, ವಿಷ್ಣು ಹಾಗೂ ಸೂರ್ಯ ದೇವರಿಗೆ ಮುಡಿಪಾಗಿದೆ. ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿದ್ದು ಶಿವ, ವಿಷ್ಣು ಹಾಗೂ ಸೂರ್ಯರ ವಿಗ್ರಹಗಳನ್ನೊಳಗೊಂಡಿವೆ.
ಚಿತ್ರಕೃಪೆ: Gopal Veeranala
ತೆಲಂಗಾಣದ ಪ್ರಮುಖ ದೇವಾಲಯಗಳು:
ವಿಶೇಷವೆಂದರೆ ಇಲ್ಲಿ ಸಾವಿರ ಖಂಬಗಳಿದ್ದು ಅವುಗಳನ್ನು ಯಾವ ರೀತಿ ವಿನ್ಯಾಸ ಮಾಡಲಾಗಿದೆ ಎಂದರೆ ಯಾವುದೆ ನಿರ್ದಿಷ್ಟ ಸ್ಥಳದಿಂದ ಯಾರಾದರಾಗಲಿ ದೇವರ ದರ್ಶನವನ್ನು ಖಂಬದ ಯಾವ ಅಡೆ ತಡೆಗಳಿಲ್ಲದೆ ಸುಸೂತ್ರವಾಗಿ ಪಡೆಯಬಹುದು. ಕಾಕತೀಯರ ಸಮಯದಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದೆ.
ಚಿತ್ರಕೃಪೆ: G41rn8
ತೆಲಂಗಾಣದ ಪ್ರಮುಖ ದೇವಾಲಯಗಳು:
ವಾರ್ಗಲ್ ಸರಸ್ವತಿ ದೇವಾಲಯ : ತೆಲಂಗಾಣದ ಮೇಡಕ್ ಜಿಲ್ಲೆಯ ವಾರ್ಗಲ್ ನಲ್ಲಿರುವ ಅಪರೂಪ ಸರಸ್ವತಿಯ ದೇವಾಲಯ ಇದಾಗಿದೆ. ಕಂಚಿ ಶಂಕರ ಮಠವು ಇದರ ನಿರ್ವಹಣೆ ನೋಡಿಕುಳ್ಳುತ್ತಿದೆ.ವಸಂತ ಪಂಚಮಿ ಹಾಗೂ ಶರದ್ ನವರಾತ್ರಿ ಉತ್ಸವಗಳನ್ನು ಇಲ್ಲಿ ಸಡಗರದಿಂದ ಆಚರಿಸಲಾಗುತ್ತದೆ. ಈ ದೇವಾಲಯ ಚಿಕ್ಕ ಬೆಟ್ಟವೊಂದರ ಮೇಲಿದ್ದು ಇದರ ಅಕ್ಕ ಪಕ್ಕದಲ್ಲೆ ಶಿವ, ಲಕ್ಷ್ಮಿ ಹಾಗೂ ಶನೇಶ್ವರನ ದೇವಾಲಯಗಳಿವೆ.
ಚಿತ್ರಕೃಪೆ: Randhirreddy
ತೆಲಂಗಾಣದ ಪ್ರಮುಖ ದೇವಾಲಯಗಳು:
ಕೀಸರಗುಟ್ಟಾ ದೇವಾಲಯ : ಶಿವ ಹಾಗೂ ಅವನ ಮಡದಿಯರಾದ ಭವಾನಿ ಹಾಗೂ ಶಿವದುರ್ಗಾಗೆ ಮುಡಿಪಾದ ದೇವಾಲಯ ಇದಾಗಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕೀಸರಗುಟ್ಟಾದಲ್ಲಿ ಈ ದೇವಾಲಯವಿದ್ದು ಹೈದರಾಬಾದ್ ನಗರದಿಂದ 40 ಕಿ.ಮೀ ಗಳಷ್ಟು ದೂರದಲ್ಲಿದೆ. ದಂತಕಥೆಯಂತೆ ಇದು ಸ್ವತಃ ರಾಮನೆ ಪ್ರತಿಷ್ಠಾಪಿಸಿದ ಶಿವಲಿಂಗವಾಗಿದೆ. ಅಲ್ಲದೆ ಇನ್ನೊಂದು ಕಥೆಯ ಪ್ರಕಾರ, ರಾಮ ಈ ಸ್ಥಳದಲ್ಲಿ ಶಿವಲಿಂಗ ಸ್ಥಾಪಿಸಲು ಇಷ್ಟಪಟ್ಟು ಆಂಜನೇಯನಿಗೆ ಕಾಶಿಯಿಂದ ಶಿವಲಿಂಗ ತರಲು ಹೇಳಿದ. ಆದರೆ ಹನುಮನು ಮರುಳುವುದು ತಡವಾದಾಗ, ಮುಹೂರ್ತ ಮೀರಿ ಹೋಗುತ್ತದೆಂದು ರಾಮನು ಶಿವನಲ್ಲಿ ಬೇಡಿಕೊಳ್ಳುತ್ತಿರುವಾಗ ಸ್ವತಃ ಶಿವನೆ ಪ್ರತ್ಯಕ್ಷನಾಗಿ ಶಿವಲಿಂಗವನ್ನು ರಾಮನಿಗೆ ನೀಡಿದ. ಹೀಗಾಗಿ ಇದು ಸ್ವಯಂಭು ಲಿಂಗವಂದು ಹೇಳಲಾಗುತ್ತದೆ.
ಚಿತ್ರಕೃಪೆ: J.M.Garg
ತೆಲಂಗಾಣದ ಪ್ರಮುಖ ದೇವಾಲಯಗಳು:
ಭ್ರಮರಾಂಬಿಕಾ ಮಲ್ಲಿಕಾರ್ಜುನಸ್ವಾಮಿ ದೇವಾಲಯ : ತೆಲಂಗಾಣದ ಮೇಡಕ್ ಜಿಲ್ಲೆಯ ಬೀರಂಗುಡದಲ್ಲಿ ಈ ದೇವಾಲಯವಿದೆ. ಇಲ್ಲಿರುವ ಬೀರಂಗುಡ ಬೆಟ್ಟವೊಂದರ ಮೇಲೆ ಶಿವನಿಗೆ ಮುಡಿಪಾದ ಈ ದೇವಾಲಯವಿದ್ದು ಸಾಕಷ್ಟು ಹೆಸರುವಾಸಿಯಾಗಿದೆ.
ಚಿತ್ರಕೃಪೆ: Dandusrikanth