ಕರ್ನಾಟಕವು ಸಾಕಷ್ಟು ನಯನಮನೋಹರವಾದ ನಗರಗಲಿಂದ ಕೂಡಿದೆ. ಕೆಲವು ಧಾರ್ಮಿಅಕವಾಗಿ ಆಅಕರ್ಷಕವೆನಿಸಿದರೆ ಇನ್ನೂ ಕೆಲವು ಪ್ರಾಕೃತಿಕ ಸಮ್ಪತ್ತಿನಿಂದ ಕೂಡಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಅಂತಹ ಪ್ರಾಕೃತಿಕ ಸಂಪತ್ತುಗಳ ಮುತ್ತುಗಳಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಪಟ್ಟಣವೂ ಸಹ ಒಂದು.
ಮಡಿಕೇರಿ ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಸಾಕಷ್ಟು ವಾಣಿಜ್ಯ ಅಂಗಡಿ-ಮುಗ್ಗಟ್ಟುಗಳು, ಕಚೇರಿಗಳು ಇರುವ ಮಡಿಕೇರಿ ಪಟ್ಟಣವು ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ.
ಮಡಿಕೇರಿ ಅರಮನೆ, ಚಿತ್ರಕೃಪೆ: VASANTH S.N.
ಇವುಗಳಲ್ಲದೆ ಮಡಿಕೇರಿ ಒಂದು ಸುಂದರ ಪ್ರವಾಸಿ ತಾಣವೂ ಹೌದು. ಇಲ್ಲಿನ ವಾತಾವರಣ ಸದಾ ಹಿತಕರವಾಗಿರುತ್ತದೆ ಎಂದರೂ ತಪ್ಪಲ್ಲ. ಮಳೆಗಾಲ, ಚಳಿಗಾಲದ ನಂತರವಂತೂ ಪ್ರಕೃತಿಯು ಮೈನೊರೆದು ಮತ್ತೆ ಪ್ರಸನ್ನತಾ ಭಾವದಿಂದ ನಲಿಯಿತ್ತಿದ್ದಾಳೆನೋ ಅನ್ನುವಷ್ಟರ ಮಟ್ಟಿಗೆ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ.
ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಮೊದಲಿ ಸ್ಥಳಗಳನ್ನು ಊರು, ಕೇರಿ ಎಂಬೆಲ್ಲ ಪದಗಳಿಂದ ಕರೆಯುತ್ತಿದ್ದರು. ಮುದ್ದುರಾಜನು ಇಲ್ಲಿ ಆಡಲಿತ ನಡೆಸುತ್ತಿದ್ದರಿಂದ ಇದು ಮುದ್ದುರಾಜನ ಕೇರಿ ಎಂದೆ ಪ್ರಸಿದ್ಧವಾಗಿತ್ತು. ಆ ಹೆಸರೆ ಕಾಲಕ್ರಮೇಣ ಮಡಿಕೇರಿ ಎಂಬ ಹೆಸರಿನಲ್ಲಿ ಮಾರ್ಪಾಡಾಯಿತು.
ರಾಜಾ ಸೀಟ್ ಸುಂದರ ಸೂರ್ಯಾಸ್ತ, ಚಿತ್ರಕೃಪೆ: Navin Sigamany
ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇವಸ್ಥಾನವನ್ನು ಎರಡನೇ ಲಿಂಗರಾಜನು ಕಟ್ಟಿಸಿದನು. ಇಂದು ಇದು ಇಲ್ಲಿಯ ಒಂದು ಪ್ರಮುಖ ದೇವಸ್ಥಾನವೂ, ಪ್ರವಾಸಿ ತಾಣವೂ ಅಗಿದೆ. ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಧಾರ್ಮಿಕ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಅಲ್ಲದೆ ಇಲ್ಲಿರುವ ರಾಜಾಸೀಟ್, ಸಾಕಷ್ಟು ಜನಪ್ರೀಯವಾದ ನಗರದ ಪ್ರವಾಸಿ ಆಕರ್ಷಣೆಯಾಗಿದೆ. ಅರಮನೆ, ಗದ್ದಿಗೆಯು ಹೀಗೆ ಇನ್ನು ಹತ್ತುಅ ಹಲವು ಪ್ರವಾಸಿ ತಾಣಗಳನ್ನು ಇಲ್ಲಿ ಕಾಣಬಹುದು. ಇಲ್ಲಿರುವ ಅಬ್ಬಿ ಜಲಪಾತವು ಇನ್ನೊಂದು ಸುಂದರ ಪ್ರವಾಸಿ ಆಕರ್ಷಣೆ. ಮಳೆಗಾಲದ ಸಮಯದಲ್ಲಿಇದು ಮೈ ತುಂಬಿ ಬೀಳುತ್ತಿರುವುದನ್ನು ನೋಡಿದಾಗ ಎಲ್ಲಿಲ್ಲದ ಸಂಭ್ರಮ ಉಂಟಾಗುತ್ತದೆ.
ಓಂಕಾರೇಶ್ವರ ದೇವಾಲಯ, ಚಿತ್ರಕೃಪೆ: VASANTH S.N.
ಈ ಜಲಪಾತವನ್ನು ನೋಡಲು ರಾಜ್ಯದ ಎಲ್ಲಾ ಭಾಗಗಳಿಂದಲೂ ಜನರ ಬರುತ್ತಾರೆ. ಹಾಗೆ ಬಂದ ಪ್ರವಾಸಿಗರ ಮನ ತಣಿಸಿ ಅಬ್ಬಿ ಅವರನ್ನು ಬೀಳ್ಗೊಡುತ್ತದೆ. ಇನ್ನೂ ಮಡಿಕೇರಿಯ ಮಂಜನ್ನು ನೋಡುತ್ತಿದ್ದರೆ ಯಾವುದೊ ಲೋಕಕ್ಕೆ ವಿಹರಿಸಿದಂತಾಗುತ್ತದೆ. ಕವಿ ಶ್ರೀ ಜಿ ಪಿ ರಾಜರತ್ನಮ್ ಅವರು ಮಡಿಕೇರೀಲಿ ಮಂಜು' ಎಂಬ ಕವಿತೆಯಲ್ಲಿ ಇಲ್ಲಿನ ಮಂಜಿನ ಕುರಿತು ವರ್ಣಿಸಿದ್ದನ್ನು ಕಾಣಬಹುದು.
ಮೈಸೂರಿನಂತೆ ಮಡಿಕೇರಿಯೂ ಸಹ ದಸರಾ ಹಬ್ಬಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಮಡಿಕೇರಿಯ ತಲಕಾವೇರಿಯಲ್ಲಿ ಹುಟ್ಟುವ ಜೀವನದಿ ಕಾವೇರಿಯು ಅಲ್ಲಿಂದ ಸುಮಾರು ಒಂದರಿಂದ ಎರಡು ಕಿ.ಮೀ ಗಳಷ್ಟು ಗುಪ್ತಗಾಮಿನಿಯಾಗಿ ಹರಿದು ಮುಂದೆ ಮತ್ತೆ ಭಾಗಮಂಡಲದಲ್ಲಿ ಪ್ರತ್ಯಕ್ಷಳಾಗುತ್ತಾಳೆ. ಇದು ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ನದಿಯು ಸಹ ಅಗಿದೆ.
ಅಬ್ಬಿ ಜಲಪಾತ, ಚಿತ್ರಕೃಪೆ: Vaishak Kallore
ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣ ;ಮಂದಲ್ ಪಟ್ಟಿ'. ಮಡಿಕೇರಿಯಿಂದ 12 ಕಿ.ಮಿ ದೂರದಲ್ಲಿದೆ.ಗಾಳಿಬೀಡು ಸಮೀಪದ ಕಾಲೂರು ಎಂಬ ಗ್ರಾಮದಲ್ಲಿದೆ. ಬೆಟ್ಟ ಗುಡ್ಡಗಳಿಂದ ಕೂಡಿದ ಮಂದಲ್ ಪಟ್ಟಿ ಪ್ರವಾಸಿಗರ ನೆಚ್ಚಿನ ತಾಣ. ಇದಕ್ಕೆ ಇನ್ನೊಂದು ಹೆಸರು ಮುಗಿಲು ಪೇಟೆ.
ಮೋಡಿ ಮಾಡುವ ಕೊಡಗು ನೋಡಿರಣ್ಣ!
ಮಡಿಕೇರಿಗೆ ತೆರಳುವುದು ಬಹಳ ಸರಳವಾಗಿದೆ. ಕರ್ನಾಟಕದ ದಕ್ಷಿಣದ ಪ್ರಮುಖ ನಗರಗಳಿಂದ ಮಡಿಕೇರಿಗೆ ನಿತ್ಯ ಬಸ್ಸು ಸೌಲಭ್ಯವಿದೆ. ಬೆಂಗಳೂರಿನಿಂದ 265 ಕಿ.ಮೀ ಗಳಷ್ಟು ದೂರದಲ್ಲಿರುವ ಮಡಿಕೇರಿಗೆ ತೆರಳಲು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳೆರಡೂ ದೊರೆಯುತ್ತವೆ. ಇಲ್ಲಿ ತಂಗಲು ಸಾಕಷ್ಟು ಹೋಟೆಲುಗಳು ಹಾಗೂ ರಿಸಾರ್ಟುಗಳು ಲಭ್ಯವಿದೆ. ಕೊಡಗು ಶೈಲಿಯ ಆಹಾರ ಬಾಯಲ್ಲಿ ನೀರೂರಿಸುತ್ತದೆ.