ಭಾರತವು ಅರಣ್ಯ, ನದಿ, ಭೂಮಿಗಳಿಗೆ ತನ್ನದೇ ಆದ ಮಹತ್ತರ ಪ್ರಮುಖ್ಯತೆ ನೀಡುತ್ತಾ ಬಂದಿದೆ. ಅರಣ್ಯ ಹಾಗೂ ನದಿ ಭಾರತದ ಆಸ್ತಿ. ದಿನ ನಿತ್ಯದ ಜೀವನದಲ್ಲಿ ನೀರು ಅತ್ಯವಶ್ಯಕವಾದ ಪಾತ್ರ ನಿರ್ವಹಿಸುತ್ತದೆ. ಈ ನದಿಗಳ ಬಗ್ಗೆ ಹಿಂದು ಧರ್ಮದಲ್ಲಿ ತನ್ನದೇ ಆದ ಸ್ಥಾನ-ಮಾನವನ್ನು ನೀಡಿದ್ದು ಪವಿತ್ರವಾದ ಸಪ್ತನದಿಗಳಲ್ಲಿ ಸ್ನಾನ ಮಾಡಿದವರಿಗೆ ಸಕಲ ಪಾಪ ಪರಿಹಾರವಾಗುತ್ತದೆ, ರೋಗಗಳು ನಿವಾರಣೆಯಾಗುತ್ತದೆ, ಮೋಕ್ಷ ಲಭಿಸುತ್ತದೆ ಎಂಬೆಲ್ಲಾ ಪುರಾಣಗಳಲ್ಲಿ ನದಿಗಳ ಮಹತ್ವವನ್ನು ಕಾಣಬಹುದು. ಆಶ್ಚರ್ಯವೆನೆಂದರೆ ಈ ಸಪ್ತನದಿಗಳಾದ ಗಂಗ, ಯಮುನ, ಸರಸ್ವತಿ, ಗೋದಾವರಿ, ನದಿಗಳನ್ನು ಮಾತೃ ಸ್ವರೂಪಿಯಾದ ಮಹಿಳೆಯರ ಹೆಸರು ಸೂಚಿಸಿರುವುದು ವಿಶೇಷ. ಇಂತಹ ಪವಿತ್ರವಾದ ನದಿಗಳು ಹರಿದ್ವಾರ, ವಾರಣಾಸಿ, ನಾಸಿಕ್, ತಲಕಾವೇರಿ, ಪಾಟ್ನ ಮತ್ತು ಉಜ್ಜ್ಯಿನಿ ಸ್ಥಳಗಳಲ್ಲಿ ಕಾಣಬಹುದಾಗಿದೆ.
ಪ್ರಸುತ್ತ ಲೇಖನದಲ್ಲಿ ಪವಿತ್ರವಾದ 7 ನದಿಗಳ ಬಗ್ಗೆ ತಿಳಿಯೋಣ.
ಗಂಗಾನದಿ
ಭಾರತೀಯರಿಗೆ ದೈವ ಸಮಾನವಾದ ನದಿ ಗಂಗಾ, ಗಂಗಾ ನದಿಯನ್ನು ಗಂಗೆ, ಗಂಗಾ ಮಾತೆ ಎಂದೂ ಸಹ ಕರೆಯುತ್ತಾರೆ. ಈ ನದಿ ಉತ್ತೆದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿವರೆವಿಗೂ ಸರ್ವ ಹಿಂದೂ ಧರ್ಮದವರಿಗೂ ಪೂಜ್ಯನೀಯವಾದುದು. ಇಂತಹ ನದಿಯು ಉತ್ತರಕಾಶಿಯ ಸಮೀಪದಲ್ಲಿರುವ ಗಂಗೋತ್ರಿಯಲ್ಲಿ ಹುಟ್ಟಿ ನೂರಾರು ಮೈಲು ಹರಿದು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ದಕ್ಷಿಣದಲ್ಲಿ ಸುಮಾರು 100 ಕಿ,ಮೀ ಅಂತರದಲ್ಲಿರುವ ಗಂಗಾಸಾಗರ ಎಂಬಲ್ಲಿ ಸೇರುತ್ತಾಳೆ. ಗಂಗಾ ನದಿಯು ಭಾರತದ ಅತಿ ಉದ್ದದ ನದಿ ಎಂಬ ಬಿರುದು ಮುಡಿಗೇರಿಸಿಕೊಂಡಿದ್ದಾಳೆ. ಗಂಗೆಯಲ್ಲಿ ಸ್ನಾನ ಮಾಡಿದವರ ಸಕಲ ಪಾಪ ಕಳೆಯುತ್ತದೆ ಎಂಬುದು ಹಿಂದೂ ಧರ್ಮದ ನಂಬಿಕೆಯಾಗಿದೆ. ರಾಮಾಯಾಣ ಮತ್ತು ಮಹಾಭಾರತದ ಪ್ರಕಾರ ಸತ್ತವರ ಬೂದಿಯನ್ನು ಈ ನದಿಯಲ್ಲಿ ವಿಲೀನಗೊಳಿಸಿದರೆ ಸತ್ತವರಿಗೆ ಮೋಕ್ಷ ಲಭಿಸುತ್ತದೆ ಎಂಬುದು ಪುರಾಣಗಳಲ್ಲಿ ಕಾಣಬಹುದಾಗಿದೆ.
ಯಮುನ ನದಿ
ಯಮುನಾ ನದಿಯು ಉತ್ತರ್ ಖಂಡ್ನಲ್ಲಿರುವ ಯಮುನೋತ್ರಿ ಎಂಬ ಹಿಮನದಿಯಲ್ಲಿ ಸಮುದ್ರ ಮಟ್ಟದಿಂದ 6.387 ಮೀ ಎತ್ತರದಲ್ಲಿ ಉಗಮಗೊಳ್ಳುತ್ತದೆ. ಅಲ್ಲಿಂದ ಈ ನದಿಯು ಬಂಡೆರ್ ಪೂಚ್ ಕಣಿವೆಗಳ ಮೂಲಕ ಹರಿಯುತ್ತದೆ. ದಕ್ಷಿಣದತ್ತ ಸಾಗುವ ಈ ನದಿಯು ದೆಹಲಿ, ವೃಂದಾವನ ಮತ್ತು ಮಥುರಾದ ಮೂಲಕ ಹಾದು ಹೋಗುತ್ತದೆ. ವೃಂದಾವನದ ಕೇಸಿ ಘಾಟ್ಗೆ ಸಮೀಪದ ನದಿ ತೀರವು ಪವಿತ್ರವೆಂದು ಭಾವಿಸಲಾಗುತ್ತದೆ. ಏಕೆಂದರೆ ಶ್ರೀ ಕೃಷ್ಣನು ರಾಕ್ಷಸನಾದ ಕೇಶಿಯನ್ನು ಕೊಂದ ನಂತರ ಇಲ್ಲಿಯೇ ಸ್ನಾನ ಮಾಡಿದನಂತೆ, ಹಾಗಾಗಿ ಇಲ್ಲಿ ತೀರ್ಥ ಸ್ನಾನ ಮಾಡಿದರೆ ಮುಕ್ತಿ ದೊರೆಯುತ್ತದೆಯೆಂದು ನಂಬಲಾಗುತ್ತದೆ.
ಸರಸ್ವತಿ ನದಿ
ಪುರಾತನ ಧರ್ಮ ಗ್ರಂಥಗಳು ಈ ನದಿಯ ಪಾವಿತ್ರ್ಯತೆಯ ಬಗ್ಗೆ ವಿಸ್ತಾರವಾಗಿ ಉಲ್ಲೇಖಿಸಿದೆ. ವಾಯು ಪುರಾಣದ ಪ್ರಕಾರ ಈ ನದಿಯಲ್ಲಿ ಒಮ್ಮೆ ಮಿಂದೇಳುವುದು ಗಂಗಾ ನದಿಯಲ್ಲಿನ ಒಂದು ಇಡೀ ವರ್ಷದ ಸ್ನಾನಕ್ಕೆ ಸಮ ಎಂದು ತಿಳಿಸಲಾಗಿದೆ. ಆದರೆ ಪ್ರಸಿದ್ದವಾದ ಸರಸ್ವತಿ ನದಿ ಬತ್ತಿದೆ. ವೇದಗಳ ಕಾಲದಲ್ಲಿ ತಿಳಿಸಿದಂತೆ ಉತ್ತರ ಭಾರತದಲ್ಲಿ ಈ ನದಿಯು ಹರಿಯುತ್ತಿದ್ದಳು. ತ್ರೀವೇಣಿ ಸಂಗಮದ ನದಿಗಳಲ್ಲಿ ಸರಸ್ವತಿ ಕೂಡ ಒಬ್ಬಳು. ಸರಸ್ವತಿ ನಮ್ಮ ಪುರಾಣದಲ್ಲಿ ಹೆಚ್ಚು ಮಹತ್ವ ಪಡೆದಿರುವುದನ್ನು ಕಾಣಬಹುದು.
ಗೋದಾವರಿ ನದಿ
ಗೋದಾವರಿ ನದಿ ದಕ್ಷಿಣ ಮಧ್ಯ ಭಾರತದ ಒಂದು ನದಿ. ಇದು ಮಹಾರಾಷ್ಟ್ರದ ಪಶ್ಚಿಮ ರಾಜ್ಯದಲ್ಲಿ ಆರಂಭವಾಗಿ ಆಂಧ್ರ ಪ್ರದೇಶ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. 1466 ಕಿ,ಮೀ ಉದ್ದವಿದ್ದು ಇದು ಗಂಗಾನದಿಯ ನಂತರದ ಅತಿದೊಡ್ಡ ನದಿಯಾಗಿದೆ. ಈ ನದಿಯು ಭಾರತದ ಎರಡನೇ ದೊಡ್ಡ ನದಿಯೂ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯೂ ಆಗಿದೆ. ಇದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟಿ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ಮತ್ತು ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಈ ನದಿಯನ್ನು 9ನೇ ಶತಮಾನದ ಕವಿರಾಜಮಾರ್ಗ ಕೃತಿಯಲ್ಲಿ "ಕಾವೇರಿಯಿಂದಮಾ ಗೋದಾವರಿವರಮಿಪ್ ನಾಡದಾ ಕನ್ನಡದೊಳ್" ಎಂದು ಆಕಾಲದಲ್ಲಿ ಕನ್ನಡ ನಾಡಿನ ಕುರುಹು ಕಾವೇರಿಯಿಂದ ಗೋದಾವರಿವರೆಗೆ ಇತ್ತು ಎಂದು ಹೇಳಲಾಗಿದೆ.
ಶಿಪ್ರಾ ನದಿ
ಈ ನದಿಯನ್ನು ಕಿಶಿಪ್ರಾ ನದಿ ಎಂದೂ ಸಹ ಕರೆಯಲಾಗುತ್ತದೆ. ಈ ನದಿ ಮಧ್ಯೆ ಪ್ರದೇಶದಲ್ಲಿದೆ. ಈ ನದಿಯು ಉತ್ತರದ ಧಾರ್ ಜಿಲ್ಲೆಯಿಂದ ಉತ್ತರದಿಂದಾಚೆಗೆ ಮಹಾರಾಷ್ಟ್ರದ ಚಂಬಲ್ ನದಿಗೆ ಸೇರುತ್ತದೆ. ಹಿಂದೂಗಳಿಗೆ ಇದೊಂದು ಪವಿತ್ರವಾದ ನದಿಯಾಗಿದೆ. ಈ ನದಿಯಲ್ಲಿ ಪ್ರತಿ 12 ವರ್ಷಕೊಮ್ಮೆ ಮಹಾ ಕುಂಭ ಮೇಳ ನಡೆಯುತ್ತದೆ. ಪುರಾಣಗಳ ಪ್ರಕಾರ ಈ ನದಿಗೆ ಸಂಬಂಧಿಸಿದಂತೆ ಶಿಪ್ರಾ ನದಿಯು ಸಾಕ್ಷಾತ್ ವಿಷ್ಣುವಿನ ವರಹಾವತಾರವಾಗಿದೆ.
PC:Gyanendra_Singh_Chau
ನರ್ಮದಾ ನದಿ
ನರ್ಮದಾ ನದಿ ಮಧ್ಯ ಭಾರತದಲ್ಲಿ ಹರಿಯುವ ಒಂದು ನದಿ. ಇದು ಭಾರತ ಉಪಖಂಡದ 5 ನೇಯ ಅತಿ ದೊಡ್ಡ ನದಿ ಸಹ ಆಗಿದೆ. ನರ್ಮದಾ ನದಿಯು ಉತ್ತರ ಮತ್ತು ದಕ್ಷಿಣ ಭಾರತಗಳ ನಡುವಿನ ಸಾಂಪ್ರದಾಯಿಕ ಎಲ್ಲೆ ಎಂದು ಪರಿಗಣಿಸಲ್ಪಡುತ್ತದೆ. ಮಧ್ಯ ಪ್ರದೇಶ ರಾಜ್ಯದ ಶಾಹ್ದೋಲ್ ಜಿಲ್ಲೆಯ ಅಮರಕಂಟಕ ಬೆಟ್ಟದ ನರ್ಮದಾ ಕುಂಡ ಎಂದು ಹೆಸರಾಗಿರುವ ಒಂದು ಸಣ್ಣ ಕುಂಡದಿಂದ ಉಗಮಿಸುವ ನರ್ಮದಾ ನದಿ ಮುಂದೆ ಸುಮಾರು 1312 ಕಿ,ಮೀ ಗಳಷ್ಟು ದೂರ ಪಶ್ಚಿಮಾಭಿಮುಖವಾಗಿ ಹರಿದು ಗುಜರಾತ್ನ ಖಂಬಾತ್ ಕೊಲ್ಲಿಯನ್ನು ಸೇರುತ್ತದೆ. ಹಿಂದೂ ಸಂಸ್ಕøತಿಯಲ್ಲಿ ಅತಿ ಪವಿತ್ರವಾದ ಸ್ಥಾನವನ್ನು ನರ್ಮದಾ ನದಿಗೆ ನೀಡಲಾಗಿದೆ. ಈ ನರ್ಮದಾ ನದಿಯ ಪ್ರದಕ್ಷಿಣೆ ಒಂದು ಅತಿ ಪಾವನದಾಯಕವೆಂದು ಪರಿಗಣಿಸಲ್ಪಟ್ಟಿದೆ.
ಕಾವೇರಿ ನದಿ
ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತಾಳೆ. ಮುಖ್ಯವಾಗಿ ಈ ನದಿಯ ಉದ್ದ 765 ಕಿ,ಮೀಗಳಷ್ಟಾಗಿದೆ. ಕಾವೇರಿ ಜಲಾಯನ ಪ್ರದೇಶ 27,700 ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಥ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು. ಕಾವೇರಿಯನ್ನು ದಕ್ಷಿಣ ಗಂಗೆಯೆಂದು ಪ್ರಸಿದ್ದಿ ಪಡೆದ ಕರ್ನಾಟಕದ ಮಹಾನದಿಯಾಗಿದೆ.