ಲಕ್ಕಾಡೀವ್ ನಡುಗಡ್ಡೆಗಳು ಎಂತಲೂ ಕರೆಯಲ್ಪಡುವ ಲಕ್ಷದ್ವೀಪವು ಭಾರತದ ಅವಿಭಾಜ್ಯ ಅಂಗವಾಗಿದ್ದು ದಕ್ಷಿಣ ಭಾರತದ ನೈರುತ್ಯಕ್ಕಿರುವ ಲಕ್ಕಾಡೀವ್ ಸಮುದ್ರದಲ್ಲಿ ರೂಪಗೊಂಡಿರುವ ಆಕರ್ಷಕ ನಡುಗಡ್ಡೆಗಳ ಸಮೂಹವಾಗಿದೆ. ಭಾರತದ ಅಧೀನಕ್ಕೆ ಒಳಪಡುವ ಈ ನಡುಗಡ್ಡೆಗಳಲ್ಲಿ ಭಾರತೀಯ ಸೈನ್ಯದ ನಿಯಂತ್ರಣವಿದೆ.
ಆದಾಗ್ಯೂ ಈ ನಡುಗಡ್ಡೆಗಳು, ಸಾಕಷ್ಟು ಪ್ರವಾಸಿ ವಿಶೇಷತೆಯನ್ನು ಹೊಂದಿರುವ ಪ್ರಸಿದ್ಧ ತಾಣವಾಗಿದೆ. ಮುಖ್ಯವಾಗಿ ಇಲ್ಲಿನ ಕಡಲ ತೀರಗಳು ಅತ್ಯಂತ ಸುಂದರವಾಗಿದ್ದು ಅದ್ಭುತ ಅನುಭವವನ್ನು ಪ್ರವಾಸಿಗರಿಗೆ ನೀಡುತ್ತದೆ. ಅಲ್ಲದೆ ಸ್ಥಳೀಯವಾಗಿ ಪ್ರಚಲಿತದಲ್ಲಿರುವ ಸಂಸ್ಕೃತಿಯು ತನ್ನದೆ ಆದ ವಿಶೇಷತೆಯನ್ನು ಹೊಂದಿದ್ದು ಕುತೂಹಲ ಕೆರಳಿಸುವಂತಿದೆ.
ಕಡಲ ತಡಿಯ ರಿಸಾರ್ಟುಗಳು, ಸಾಲು ಸಾಲಾಗಿ ನಿಂತು ಪ್ರವಾಸಿಗರನ್ನು ಸ್ವಾಗತಿಸುತ್ತಿರುವಂತಿರುವ ಪಾಮ್ ಹಾಗೂ ತೆಂಗಿನ ಮರಗಳು, ಸ್ವಚ್ಛತೆಯಿಂದ ಕೂಡಿರುವ ಶ್ವೇತ ವರ್ಣದ ಕಡಲ ತೀರದ ಮರಳು, ಕರ್ಕಶವಿಲ್ಲದ ಶಾಂತ ಪರಿಸರ ಲಕ್ಷದ್ವೀಪ ಸಮೂಹವನ್ನು ಒಂದು ಅದ್ಭುತ ಪ್ರವಾಸಿ ತಾಣವನ್ನಾಗಿ ಮಾಡಿರುವುದರಲ್ಲಿ ಸಂಶಯವಿಲ್ಲ.
ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಈ ಚಿಕ್ಕ ನಡುಗಡ್ಡೆಗಳ ಅಗಾಧ ಸೌಂದರ್ಯವನ್ನೂ ಹಾಗೂ ಆ ತಾಣದ ಕುರಿತು ಪ್ರವಾಸಿ ಮಾಹಿತಿಯನ್ನು ಪಡೆಯಿರಿ. ಚಳಿಗಾಲದ ಸಮಯ ಇಲ್ಲಿಗೆ ಭೇಟಿ ನೀಡಲು ಬಲು ಪ್ರಶಸ್ತವಾದ ಸಮಯವಾಗಿದೆ.
ಲಕ್ಕಾಡೀವ್ ಸಮುದ್ರ
ಬಹುತೇಕರು ಈ ಲಕ್ಷದ್ವೀಪ ಸಮೂಹಗಳು ಅರಬ್ಬಿ ಸಮುದ್ರದ ಭಾಗವಾಗಿದೆ ಎಂದು ತಿಳಿದಿದ್ದಾರೆ. ಆದರೆ ತಾಂತ್ರಿಕವಾಗಿ ಹೇಳಬೇಕೆಂದರೆ ಹಿಂದು ಮಹಾಸಾಗರದ ವಾಯವ್ಯಕ್ಕೆ ಅರಬ್ಬಿ ಸಮುದ್ರ ವ್ಯಾಪಿಸಿದ್ದು ಲಕ್ಕಾಡೀವ್ ಸಮುದ್ರವು ಸಂಪೂರ್ಣವಾಗಿ ಹಿಂದು ಮಹಾಸಾಗರದ ಭಾಗವಾಗಿದೆ.
ಚಿತ್ರಕೃಪೆ: Thejas
ಗಡಿಯಾಗಿದೆ
ಹಾಗಾಗಿಯೆ ಆಂಗ್ಲದಲ್ಲಿ ಲಕ್ಷದ್ವೀಪ ನಡುಗಡ್ಡೆಗಳನ್ನು ಲಕ್ಕಾಡೀವ್ ಐಲ್ಯಾಂಡ್ಸ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಈ ಲಕ್ಕಾಡೀವ್ ಸಮುದ್ರವು ಭಾರತ, ಶ್ರೀಲಂಕಾ ಹಾಗೂ ಮಾಳ್ಡಿವ್ಸ್ ದೇಶಗಳಿಗೆ ಗಡಿಯಾಗಿ ಕಂಡುಬರುತ್ತದೆ.
ಚಿತ್ರಕೃಪೆ: Sankara Subramanian
ಭೂಪ್ರದೇಶಗಳು!
ಲಕ್ಷದ್ವೀಪವು ಒಂದು ಕೇಂದ್ರಾಡಳಿತ ಪ್ರದೇಶವಾಗಿದ್ದು ಸಾಕಷ್ಟು ಭಾರತೀಯ ಸೇನಾ ಕಚೇರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ನಡುಗಡ್ಡೆಗಳ ಸಮೂಹವು ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕ ಪುಟ್ಟ ಭೂಪ್ರದೇಶಗಳನ್ನು ಹೊಂದಿದ್ದು ಮಾರ್ಮಿಕವಾಗಿ ಲಕ್ಷ ಲಕ್ಷ ದ್ವಿಪಗಳಿಂದ ಕೂಡಿರುವಂತೆ ಕಾಣುವುದರಿಂದ ಇದಕ್ಕೆ ಲಕ್ಷದ್ವೀಪ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Sankara Subramanian
ನಿಖರವಾಗಿಲ್ಲ
ಈ ನಡುಗಡ್ಡೆಗಳ ಸ್ಥಳೀಯ ಇತಿಹಾಸ ಕುರಿತಂತೆ ಯಾವುದೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ. ಆದರೂ ಈ ದ್ವಿಪಗಳ ಬಗ್ಗೆ ಮೊದಲಿನಿಂದಲೂ ಎಲ್ಲರಿಗೂ ತಿಳಿದಿತ್ತು ಎಂಬ ಅಂಶವು ಹಲವು ಪುರಾತನ ಗ್ರಂಥಗಳ ಮೂಲಕ ತಿಳಿದುಬರುತ್ತದೆ.
ಚಿತ್ರಕೃಪೆ: Sankara Subramanian
ಜಾತಕ ಕಥೆಗಳು
ಬೌದ್ಧ ಧರ್ಮದ ಆರನೇಯ ಶತಮಾನದಲ್ಲಿ ರಚಿತವಾದ ಜಾತಕ ಕಥೆಗಳಲ್ಲೂ ಸಹ ಈ ನಡುಗಡ್ಡೆಗಲ ಕುರಿತು ಉಲ್ಲೇಖವಿದೆ. ಅಲ್ಲದೆ ಹಿಂದೆ ಸಾಕಷ್ಟು ಹಡುಗು ನಾವಿಕರೂ ಸಹ ಈ ನಡುಗಡ್ಡೆಗಳು ಕುರಿತು ಅನೇಕ ಕಡೇಗಳಲ್ಲಿ ಉಲ್ಲೇಖಿಸಿದ್ದಾರೆ. ಏಳನೇಯ ಶತಮಾನದಲ್ಲಿ ಇಸ್ಲಾಂ ಧರ್ಮಪ್ರಸಾರಕರು ಇಲ್ಲಿಗೆ ಬಂದು ತಮ್ಮ ಧರ್ಮದ ಪ್ರಭಾವ ಬೀರಿದರು.
ಚಿತ್ರಕೃಪೆ: Sankara Subramanian
ಕೊನೆಯದಾಗಿ ಬ್ರಿಟೀಷರ ವಶ
ತದ ನಂತರ ಪೋರ್ಚುಗೀಸರು ಹಾಗೂ ಮಧ್ಯಕಾಲೀನದಲ್ಲಿ ಚೋಳ ಸಾಮ್ರಾಜ್ಯವೂ ಇಲ್ಲಿ ಆಡಳಿತ ನಡೆಸಿತ್ತೆಂದು ತಿಳಿದುಬರುತ್ತದೆ. ತದನಂತರ ಟಿಪ್ಪು ಸುಲ್ತಾನನ ಕೈವಶವಾಗಿ ಕೊನೆಯದಾಗಿ ಬ್ರಿಟೀಷರ ಆಡಳಿತಕ್ಕಿದು ಒಳಪಟ್ಟಿತು.
ಚಿತ್ರಕೃಪೆ: Sankara Subramanian
ಅಧೀನ
ನಂತರ ಬ್ರಿಟೀಷರು ಭಾರತವನ್ನು ತೊರೆದ ನಂತರ ಈ ನಡುಗಡ್ಡೆಗಳ ಸಮೂಹವು ಸ್ವತಂತ್ರ ಭಾರತದ ಅಧೀನಕ್ಕೊಳಪಟ್ಟು ನಂತರ ಇದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಲಾಯಿತು.
ಚಿತ್ರಕೃಪೆ: Sankara Subramanian
ಕರವಟ್ಟಿ
ಪ್ರಸ್ತುತ ಕರವಟ್ಟಿ ಪ್ರದೇಶವು ಲಕ್ಷದ್ವಿಪದ ರಾಜಧಾನಿ ಪಟ್ಟಣವಾಗಿ ಸೇವೆ ಸಲ್ಲಿಸುತ್ತದೆ ಹಾಗೂ ಈ ಪ್ರದೇಶವು ಕೇರಳ ಹೈಕೋರ್ಟ್ ವ್ಯಾಪ್ತಿಗೆ ಬರುತ್ತದೆ.
ಚಿತ್ರಕೃಪೆ: Sankara Subramanian
ಹೊಸ ಹೆಸರು
ನವಂಬರ್ 1, 1956 ರಲ್ಲಿ ನಡೆದ ರಾಜ್ಯ ಪುನರ್ವಿಂಗಡನಾ ಕಾರ್ಯದ ಬಳಿಕ ಅಂದಿನ ಮದ್ರಾಸ್ ವ್ಯಾಪ್ತಿಗೆ ಒಳಪಟ್ಟಿದ್ದ ಲಕ್ಕಾಡೀವ್ ನಡುಗಡ್ಡೆಗಳನ್ನು ವಿಭಜಿಸಿ ಪ್ರತ್ಯೇಕವಾದ ಆಡಳಿತವನ್ನು ಇಲ್ಲಿ ಕೈಗೊಳ್ಳಲಾಯಿತು. ನಂತರ ನವಂಬರ್ 1, 1973 ರಲ್ಲಿ ಇದಕ್ಕೆ ಅಧಿಕೃತವಾಗಿ ಲಕ್ಷದ್ವೀಪ ಎಂಬ ಹೆಸರನ್ನಿಡಲಾಯಿತು.
ಚಿತ್ರಕೃಪೆ: Sankara Subramanian
ನಯನಮನೋಹರ
ಹಲವಾರು ಹವಳದ ದಿಬ್ಬಗಳು, ಅತಿ ಕಡಿಮೆ ಆಳದಿಂದ ಮುಳುಗಿರುವ ಕಡಲ ತಡಿಗಳು, ಮನುಷ್ಯವಾಸವಿರುವ ನಡುಗಡ್ಡೆಗಳು, ಮನುಷ್ಯವಾಸವಿಲ್ಲದ ನಡುಗಡ್ಡೆಗಳು, ಕಡಿಮೆ ತಳವುಳ್ಳ ಭೂಪ್ರದೇಶಗಳಿಂದ ಆವೃತವಾಗಿರುವ ಲಕ್ಷದ್ವೀಪ ನೋಡಲು ನಯನಮನೋಹರವಾದ ಸಮುದ್ರದ ದೃಶ್ಯಾವಳಿಗಳನ್ನು ನೀಡುತ್ತದೆ.
ಚಿತ್ರಕೃಪೆ: Sankara Subramanian
ಮನಮೋಹಕ ನಡುಗಡ್ಡೆಗಳು
ಕರವಟ್ಟಿ, ಅಗತ್ತಿ, ಮಿನಿಕೊಯ್ ಹಾಗೂ ಅಮಿನಿ, ಬಂಗಾರಂ, ಕದ್ಮತ್ ನಡುಗಡ್ಡೆಗಳು ಕೆಲವು ಪ್ರಮುಖ ನಡುಗಡ್ಡೆಗಳಾಗಿದ್ದು ಪ್ರವಾಸೊದ್ಯಮಕ್ಕೆ ಹೆಸರುವಾಸಿಯಾದ ಸ್ಥಳಗಳಾಗಿವೆ. ಇಲ್ಲಿ ಕೆಲವು ರಿಸಾರ್ಟುಗಳಿದ್ದು ಪ್ರವಾಸಿಗರಿಗೆ ತಂಗಲು ಅನುವು ಮಾಡಿಕೊಡುತ್ತವೆ.
ಚಿತ್ರಕೃಪೆ: Amog Rajenderan
ಅಗತ್ತಿ
ಅದರಲ್ಲೂ ವಿಶೇಷವಾಗಿ ಅಗತ್ತಿ ದ್ವೀಪವು ವಾಯು ನಿಲ್ದಾಣ ಹೊಂದಿದ್ದು, ಕೇರಳದ ಕೊಚ್ಚಿ ನಗರದಿಂದ ಈ ದ್ವೀಪಕ್ಕೆ ತೆರಳಲು ನೇರವಾದ ಫ್ಲೈಟುಗಳಿವೆ. ಅಲ್ಲದೆ ಈ ದ್ವೀಪಗಳಿಗೆ ಕೇರಳದಿಂದ ಹಡುಗುಗಳ ಮೂಲಕವಾಗಿಯೂ ತಲುಪಲು ವ್ಯವಸ್ಥೆಗಳಿವೆ.
ಚಿತ್ರಕೃಪೆ: Jennifer
ಮೀನುಗಾರಿಕೆ
ಇಲ್ಲಿ ಕೈಗಾರೀಕರಣ ಬಲು ಕಷ್ಟಕರವಾಗಿರುವುದರಿಂದ ಭಾರತ ಸರ್ಕಾರವು ಪ್ರವಾಸೋದ್ಯಮವನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತದೆ. ಅಲ್ಲದೆ ಮೀನುಗಾರಿಕೆಯೂ ಸಹ ಒಂದು ವಾಣಿಜ್ಯ ಕೈಗಾರಿಕೆಯಾಗಿದೆ.
ಚಿತ್ರಕೃಪೆ: Jennifer
ಹಲವಾರು ಜಲಚರಗಳು
ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ಸಮುದ್ರದ ನೀರಿನ ಉಷ್ಣತೆಯು ವರ್ಷಪೂರ್ತಿ ಹೇಳಿಕೊಳ್ಳುವಷ್ಟು ಬದಲಾವಣೆಗೊಳಪಡುವುದಿಲ್ಲ. ಈ ಕಾರಣದಿಂದ ಇಲ್ಲಿ ಅಸಂಖ್ಯಾತ ಜಲ ಜೀವನದ ವೈವಿಧ್ಯತೆಯನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Mike Prince
ಅತ್ಯಾಕರ್ಷಕ
ಅಲ್ಲದೆ ಇಲ್ಲಿರುವ ಹವಳದ ದಿಬ್ಬಗಳ ವಿಶೇಷತೆಯೆ ಅಪಾರ. ಭಾರತದ ಇನ್ನ್ಯಾವ ಭಾಗಗಳಲ್ಲೂ ಇಷ್ಟೊಂದು ಅಮೋಘವಾದ ಹವಳದ ದಿಬ್ಬಗಳು ಕಂಡುಬರುವುದಿಲ್ಲ. ಹಾಗಾಗಿ ಇದನ್ನು ಭಾರತದ ಹವಳದ ದಿಬ್ಬಗಳ ರಾಜಧಾನಿ (ಕ್ಯಾಪಿಟಲ್ ಆಫ್ ಕೋರಲ್ ರೀಫ್) ಎಂದೆ ಕರೆಯಲಾಗುತ್ತದೆ.
ಚಿತ್ರಕೃಪೆ: Sankara Subramanian
ಪ್ರಶಸ್ತ ವಿಶ್ರಾಂತಿಧಾಮ
ಅಲ್ಲದೆ ಇಲ್ಲಿನ ಕಡಲ ತೀರಗಳು ಸಾಕಷ್ಟು ಶಾಂತಮಯವಾಗಿದ್ದು ವಿವಿಧ ಜಲಕ್ರೀಡೆಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ. ಅದಕ್ಕೆಂದೆ ಇಲ್ಲಿರುವ ಹಲವಾರು ಪ್ರವಾಸಿ ಸಂಸ್ಥೆಗಳು ವಿವಿಧ ರೀತಿಯ ಜಲ ಕ್ರೀಡೆಗಳನ್ನು ಪ್ರವಾಸಿಗರಿಗಾಗಿ ವ್ಯವಸ್ಥೆಗೊಳಿಸಿವೆ.
ಚಿತ್ರಕೃಪೆ: Mike Prince
ಹಡುಗು ಹಾಗೂ ವಿಮಾನ
ಲಕ್ಷದ್ವೀಪಕ್ಕೆ ತೆರಳುವುದು ಅಷ್ಟೊಂದು ಕಷ್ಟಕರವೇನಿಲ್ಲ. ಕೇರಳದ ಕೊಚ್ಚಿ ನಗರದಿಂದ ಫ್ಲೈಟುಗಳು ಲಭ್ಯವಿದೆ. ಅಲ್ಲದೆ ಕೊಚ್ಚಿಯಿಂದ ದೋಣಿ ಹಾಗೂ ಹಡುಗುಗಳ ಮೂಲಕವಾಗಿಯೂ ಲಕ್ಷದ್ವೀಪವನ್ನು ತಲುಪಬಹುದಾಗಿದೆ.
ಚಿತ್ರಕೃಪೆ: Mike Prince
ಕೊಚ್ಚಿಯಲ್ಲಿ ಸಿಗುತ್ತದೆ
ಆದರೆ ಲಕ್ಷದ್ವೀಪಕ್ಕೆ ತೆರಳಲು ಅನುಮತಿ ಪಡೆಯಬೇಕಾಗಿರುವುದು ಕಡ್ಡಾಯವಾಗಿದೆ. ಕೊಚ್ಚಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಕಚೇರಿಯಿದ್ದು ಆ ಮುಲಕ ಅನುಮತಿ ಪಡೆದು ಇಲ್ಲಿ ತಲುಪಬಹುದಾಗಿದೆ. ಕೊಚ್ಚಿಯ ಕೆಲವು ಪ್ರವಾಸಿ ಸಂಸ್ಥೆಗಳು ಈ ರೀತಿಯ ಪ್ರವಾಸಗಳನ್ನು ನಿಗದಿತ ಶುಲ್ಕದಲ್ಲಿ ಲಭ್ಯವಾಗುವಂತೆ ಮಾಡುತ್ತವೆ.
ಚಿತ್ರಕೃಪೆ: Sankara Subramanian
ಬಂಗಾರಂ ಹೊರತುಪಡಿಸಿ
ಲಕ್ಷದ್ವೀಪದ ಬಂಗಾರಂ ನಡುಗಡ್ಡೆಯೊಂದನ್ನು ಹೊರತು ಪಡಿಸಿ ಮಿಕ್ಕೆಲ್ಲ ಸ್ಥಳಗಳಲ್ಲಿ ಪಾನ ನಿಷೇಧವಿದೆ. ಹಾಗಾಗಿ ಪ್ರವಾಸಿಗರು ತಮ್ಮೊಡನೆ ಅಲ್ಕೋಹಾಲ್ ಅನ್ನು ಒಯ್ಯುವಂತಿಲ್ಲ. ಚಳಿಗಾಲದ ಸಮಯ ಇಲ್ಲಿಗೆ ಭೇಟಿ ನೀಡಲು ಅದ್ಭುತವಾಗಿದ್ದು ಸುಂದರ ಅನುಭೂತಿಯನ್ನು ನೀಡುತ್ತದೆ.
ಚಿತ್ರಕೃಪೆ: Sankara Subramanian