ಬಣ್ಣ ಬಣ್ಣದ ಮುಖವಾಡಗಳು, ಮೈತುಂಬ ಹುಲ್ಲುಗಳಿಂದ ಕೂಡಿದ ವಸ್ತ್ರ, ಆಕರ್ಷಕ ನರ್ತನೆ, ಬಾಯಿಂದ ಹಾಡುಗಳು, ನೆರೆದ ಪ್ರತಿಯೊಬ್ಬರಿಗೂ ರೋಮಾಂಚನವಾಗುವಂತೆ ಕುಣಿತ ಕುಣಿಯುವುದು, ಮನರಂಜಿಸುವುದು ಇವರ ಮುಖ್ಯ ಉದ್ದೇಶ. ಎಲ್ಲೆಡೆ ಸಂತಸ ಹಾಗೂ ಸಂಭ್ರಮ. ಇವರೆ ಕುಮ್ಮಟ್ಟಿಗಳು.
ಓಣಂ ಹಬ್ಬಕ್ಕೆ ಕಾರಣವೆ ಈ ವಾಮನ ದೇವಾಲಯ!
ಚಿಕ್ಕ ಚಿಕ್ಕ ಮಕ್ಕಳು ಇವರ ವೇಷ-ಭೂಷಣ ನೋಡಿದರಂತೂ ಕಿರುಚದೆ ಇರಲಾರವು. ವಯಸ್ಕರಿಗೆ ಒಂದು ರೀತಿಯ ಉತ್ಸಾಹ. ಹಾದಿ ಬೀದಿಗಳಲ್ಲಿ ಇವರು ತಂಡಗಳಾಗಿ ಎಲ್ಲರಿಗೂ ಮನರಂಜಿಸುತ್ತಾ ಸಾಗುವುದನ್ನು ಕಂಡಾಗ ಅಲ್ಲಿನ ನಿವಾಸಿಗಳಿಗೆ ಮಾತ್ರವಲ್ಲ, ಪ್ರವಾಸಿಗರಿಗೂ ಸಂತಸವಾಗದೆ ಇರಲಾರದು.
ಸಂತೋಷ ಹಾಗೂ ಹರ್ಷಮಯ ಸ್ಥಿತಿಯನ್ನು ಪ್ರತಿನಿಧಿಸುವ ಈ ಒಂದು ವಿಶೇಷ ಉತ್ಸವ ಕೇರಳದಲ್ಲಿ ಅದರಲ್ಲೂ ವಿಶೇಷವಾಗಿ ತ್ರಿಶ್ಶೂರ್, ಪಾಲಕ್ಕಾಡ್, ಮಲಬಾರ್ ಹೀಗೆ ಉತ್ತರ ಕೇರಳದ ಹಲವು ಭಾಗಗಳಲ್ಲಿ ಅತ್ಯಂತ ಜನಪ್ರೀಯತೆ ಪಡೆದಿರುವ ಉತ್ಸವವಾಗಿದೆ. ಈ ಉತ್ಸವದ ಕುರಿತು ಮಾಹಿತಿ ನಿಮಗಾಗಿ ಈ ಲೇಖನದ ಮೂಲಕ.
ಕೇರಳದಲ್ಲಿ!
ಕುಮ್ಮಟ್ಟಿಕಲಿ ಅಥವಾ ಕುಮ್ಮಟ್ಟಿ ಕಲಿ ಆಟವು ತನ್ನದೆ ಆದ ವಿಶೇಷತೆ ಹಾಗೂ ಇತಿಹಾಸ ಹೊಂದಿರುವ ಕೇರಳಕ್ಕೆ ಮಾತ್ರವೆ ಸೀಮಿತವಾದ ವಿಶಿಷ್ಟ ಉತ್ಸವವಾಗಿದೆ ಹಾಗೂ ಸುಮಾರು 150 ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ.
ಚಿತ್ರಕೃಪೆ: Aruna
ಉಲ್ಲಾಸ, ಉತ್ಸಾಹ
ಆದಾಗ್ಯೂ ಈ ಉತ್ಸವಕ್ಕೆ ಸಂಬಂಧಿಸಿದಂತೆ ಹಲವಾರು ದಂತಕಥೆಗಳು ಹಿಂದಿನಿಂದಲೂ ಪೂರ್ವಜರಿಂದ ಹೇಳಿಕೊಂಡು ಬರಲಾಗುತ್ತಿದ್ದು ಇಂದಿಗೂ ಆ ಕಥೆಗಳು ಚಾಲ್ತಿಯಲ್ಲಿರುವ ಕಥೆಗಳಾಗಿವೆ. ವಿಶೇಷವೆಂದರೆ ಇದೊಂದು ಪ್ರದ್ರಶನಾ ಮೆರವಣಿಗೆಯ ಹಬ್ಬವಾಗಿದ್ದು ಇದರಲ್ಲಿ ಪ್ರದೇಶದ ಸಮಸ್ತ ಜನರು ಅತ್ಯಂತ ಸಂತಸದಿಂದ ಭಾಗವಹಿಸುತ್ತಾರೆ.
ಚಿತ್ರಕೃಪೆ: Ranjith Siji
ಏರುತ್ತಿರುವ ಜನಪ್ರೀಯತೆ
ಇನ್ನೊಂದು ವಿಶೇಷವೆಂದರೆ ಇದು ಬರ ಬರುತ್ತ ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವ ಪಡೆಯುತ್ತಿದೆ. ಕೆಲ ಪ್ರವಾಸಿಗರು ಈ ಉತ್ಸವದ ಕುರಿತು ತಿಳಿದುಕೊಂಡಿದ್ದು ಇಇದು ನಡೆಯುವ ಸಮಯಕ್ಕೆ ಕೇರಳಕ್ಕೆ ಭೇಟಿ ನೀಡಿ ಈ ಉತ್ಸವದ ಆನಂದ ಪಡೆಯುತ್ತಿದ್ದಾರೆ.
ಚಿತ್ರಕೃಪೆ: Ranjith Siji
ಆದರೆ ಪೌರಾಣಿಕ ಮಾತ್ರ
ಸಾಮಾನ್ಯವಾಗಿ ಗೋವಾ ರಾಜ್ಯ ತನ್ನ ಕಾರ್ನಿವಾಲ್ ಉತ್ಸವಕ್ಕೆ ಸಾಕಷ್ಟು ಹೆಸರುವಾಸಿಯಾಗಿರುವುದನ್ನು ಕೇಳಿರಬಹುದು. ಕಾರ್ನಿವಾಲ್ ಎಂದು ಕರೆಯಲಾಗುವ ಇದರಲ್ಲಿ ವಿಶೇಷ ಹಾಗೂ ವಿಭಿನ್ನ ವಸ್ತ್ರಾದಿಗಳನ್ನು ಧರಿಸಿ ಕಲಾಕಾರರು ಕುಣಿದು ಕುಪ್ಪಳಿಸುತ್ತಾರೆ.
ಚಿತ್ರಕೃಪೆ: Aruna
ವಿವಿಧ ಪಾತ್ರಗಳು
ಅದರಂತೆಯೆ ಈ ಉತ್ಸವವೂ ಸಹ ಒಂದು ಎಂದು ಹೇಳಬಹುದು. ಆದರೆ ಇಲ್ಲಿ ಗೋವಾದಂತೆ ವೇಷ ಭೂಷಣಗಳಿರುವುದಿಲ್ಲ. ಬದಲಾಗಿ ಸನಾತನ ಧರ್ಮದ ಹಲವಾರು ಪುರಾಣ ಪುಣ್ಯ ಕಥೆಗಳಲ್ಲಿ ವಿವರಿಸಲಾದ ದೇವ, ದೇವತೆಯರ, ಯಕ್ಷರ, ಕಿಂಕರರ ಕುತೂಹಲಕರ ಆಕಾರಗಳನ್ನು ನೋಡಬಹುದು. ಆಂಜನೇಯ, ರಾಮ, ಅಸುರ, ನಾರದ, ಶಿವ, ಕೃಷ್ಣ ವೇಶಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ.
ಚಿತ್ರಕೃಪೆ: Ranjith Siji
ಪಾಲಕ್ಕಾಡ್
ಕುಮ್ಮಟ್ಟಿಕಲಿ ಆಚರಣೆಗೆ ಮೂಲ ಪಾಲಕ್ಕಾಡ್ ನಲ್ಲಿರುವ ದೇವಿಯ ದೇವಾಲಯ ಎಂದು ಇಲ್ಲಿನ ಪ್ರತೀತಿಯಿದೆ. ಆದಾಗ್ಯೂ ಶಿವನಿಗೆ ಸಂಬಂಧಿಸಿದಂತೆ ಈ ಉತ್ಸವ ಜನ್ಮ ಪಡೆದಿದೆ ಎಂದು ದಂತಕಥೆಯೊಂದರ ಮೂಲಕ ತಿಳಿದುಬರುತ್ತದೆ. ಹಾಗಾಗಿ ಶಿವನ ಆಚರಣೆ, ಅವನಿಗೆ ಸಂತೋಷ ನೀಡುವುದೆ ಈ ಉತ್ಸವದ ಮೂಲ ತಿರುಳು ಎನ್ನಲಾಗಿದೆ.
ಚಿತ್ರಕೃಪೆ: Ranjith Siji
ಕುಮ್ಮಟ್ಟಿಗಳು
ಕಥೆಯ ಪ್ರಕಾರ, ಕುಮ್ಮಟ್ಟಿಗಳು ಬೇರಾರೂ ಅಲ್ಲ ಶಿವನ ಭೂತ ಗಣಗಳು ಎನ್ನಲಾಗಿದೆ. ಇವರು ಹಾಡಾಡುತ್ತ, ಕುಣಿದಾಡುತ್ತ ಮಾವೇಲಿ ಅಂದರೆ ಶಿವನ ಪರಮ ಭಕ್ತನಾದ ಮಹಾಬಲಿ ಚಕ್ರವರ್ತಿಯ ರಾಜ್ಯದ ಜನರನ್ನು ಓಣಂ ಹಬ್ಬದ ಒಂದು ದಿನ ಮುಂಚೆ ಭೇಟಿ ಮಾಡಿ ತಮ್ಮ ಅಸ್ತಿತ್ವದ ಕುರಿತು ವಿಚಾರಿಸುತ್ತಾರೆನ್ನಲಾಗಿದೆ.
ಚಿತ್ರಕೃಪೆ: Ranjith Siji
ಎಲ್ಲೆಡೆ ಸಡಗರ
ಈ ಉತ್ಸವವು ಕೇವಲ ಒಂದು ದಿನ ಮಾತ್ರ ನಡೆದರೂ ಅತ್ಯಂತ ಸಡಗರ ಹಾಗೂ ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಇದು ತ್ರಿಶ್ಶೂರ್ ನಗರ, ಪಾಲಕ್ಕಾಡ್ ಹಾಗೂ ಮಲಬಾರ್ ಪ್ರದೇಶದ ಹಲವು ಭಾಗಗಳಲ್ಲಿ ಹೆಚ್ಚಾಗಿ ನಡೆಯುತ್ತದೆ.
ಚಿತ್ರಕೃಪೆ: Ranjith Siji
ವಿವಿಧ ತಂಡಗಳು
ಈ ನಗರಗಳಲ್ಲಿರುವ ಹತ್ತಾರು ಸಂಘ ಸಂಸ್ಥೆಗಳು ತಮ್ಮ ತಮ್ಮ ಕುಮ್ಮಟ್ಟಿಕಲಿ ತಂಡಗಳನ್ನು ರಚಿಸುತ್ತವೆ ಹಾಗೂ ಒಬ್ಬರಿಗಿಂತ ಒಬ್ಬರೂ ಅದ್ಭುತವಾದ ವೇಷ ಭೂಷಣಗಳನ್ನು ಅಲಂಕಾರಗಳನ್ನು ಮಾಡಿಕೊಂಡು ಬೀದಿ ಬೀದಿ ಸುತ್ತುತ್ತಾರೆ. ನೆರೆದ ಜನಸ್ತೋಮ ಬೆಕಾದಲ್ಲಿ ಇವರಿಗೆ ದಕ್ಷಿಣೆಗಳನ್ನು ನೀಡಬಹುದು.
ಚಿತ್ರಕೃಪೆ: Ranjith Siji
ತಪಗೈದಿದ್ದ
ಇನ್ನೊಂದು ಕಥೆಯ ಪ್ರಕಾರ, ಕೃಷ್ಣನ ಸಲಹೆಯಂತೆ ಹಿಂದೊಮ್ಮೆ ಅರ್ಜುನನು ಪಾಶುಪತಾಸ್ತ್ರವನ್ನು ಪಡೆಯಬೇಕೆಂಬ ಉದ್ದೆಶದಿಂದ ಹಗಲಿರುಳೆನ್ನದೆ ತನ್ಮಯನಾಗಿ ಶಿವನನ್ನು ಕುರಿತು ಕಠಿಣ ತಪಸ್ಸನ್ನಾಚರಿಸಲು ಪ್ರಾರಂಭಿಸಿದನು.
ಚಿತ್ರಕೃಪೆ: Arnab Dutta
ಅರ್ಜುನನೊಡನೆ ಕದನ
ಇದರಿಂದ ಪ್ರಸನ್ನನಾದ ಶಿವನು, ಅರ್ಜುನನ್ನು ಪರೀಕ್ಷಿಸಲೆಂದು ಪಾರ್ವತಿ ಸಮೇತನಾಗಿ ಬುಡಕಟ್ಟು ದಂಪತಿಗಳ ವೇಷದಲ್ಲಿ ಪ್ರತ್ಯಕ್ಷನಾಗಿ ಅರ್ಜುನನ ತಪಸ್ಸಿಗೆ ಭಂಗ ತಂದನು. ಇದರಿಂದ ಕೋಪಗೊಂಡ ಅರ್ಜುನ ಮಾರುವೇಷದಲ್ಲಿದ್ದ ಶಿವನೊಂದಿಗೆ ಯುದ್ದ ಮಾಡಲು ಪ್ರಾರಂಭಿಸಿದ.
ಶಿವನು ಸಂತಸಪಟ್ಟ
ಹೀಗೆ ಅರ್ಜುನನು ಎಷ್ಟೆ ಪ್ರಯತ್ನಿಸಿದರೂ ಶಿವನಿಗೆ ಅಲ್ಪ ಪ್ರಮಾಣದ ಹಾನಿಯನ್ನೂ ಸಹ ಉಂಟು ಮಾಡಲು ಅಶಕ್ತನಾದಾಗ ಅರ್ಜುನನಿಗೆ ಸಂದೇಹ ಉಂಟಾಯಿತು. ತಕ್ಷಣ ಪರಿಸ್ಥಿತಿ ಅರಿತ ಅರ್ಜುನ ಶಿವನ ಕಾಲಿಗೆ ಬಿದು ಕ್ಷಮಾಪಣೆ ಕೇಳಿದ. ಇದರಿಂದ ಶಿವನು ಅತಿ ಪ್ರಸನ್ನಗೊಂಡನಲ್ಲದೆ ಅತ್ಯಂತ ಸಂತಸಗೊಂಡನು.
ಚಿತ್ರಕೃಪೆ: wikimedia
ಕುಮ್ಮಟ್ಟಿಗಳು
ಆ ಕ್ಷಣದಲ್ಲೆ ಅರ್ಜುನನಿಗೆ ಪಾಶುಪತಾಸ್ತ್ರ ನೀಡಿದನಲ್ಲದೆ ತನ್ನ ಭೂತ ಗಣಗಳನ್ನು ಕರೆದು ಸಂತೋಷಭರಿತನಾಗಿ ಕುಣಿದು ಆನಂದಿಸುವಂತೆ ಆದೇಶಿಸಿದ. ಹೀಗಾಗಿ ಈ ಒಂದು ಉತ್ಸವವು ಪ್ರವರ್ಧಮಾನಕ್ಕೆ ಬಂದಿತು ಎನ್ನಲಾಗುತ್ತದೆ. ಈ ಉತ್ಸವವು ಓಣಂ ಹಬ್ಬದ ಸಂದರ್ಭದಲ್ಲಿ ಒಂದು ದಿನ ಮಾತ್ರ ನಡೆಯುತ್ತದೆ.
ಚಿತ್ರಕೃಪೆ: Ranjith Siji
ಪ್ರೋತ್ಸಾಹಬೇಕು
ಈ ರೀತಿಯಾಗಿ ಇದೊಂದು ಕಣ್ಣಿಗೆ ಹಬ್ಬವನ್ನುಂಟು ಮಾಡುವ ಒಂದು ದಿನದ ಅದ್ಭುತ ಉತ್ಸವವಾಗಿ ಜನರ/ಪ್ರವಾಸಿಗರ ಗಮನ ಸೆಳೆಯುತ್ತದೆ. ಇಂತಹ ಕೆಲವು ಸಾಂಪ್ರದಾಯಿಕ ಹಾಗೂ ಪುರಾತನ ಉತ್ಸವಗಳು ಇನ್ನೂ ಜೀವಂತವಿರುವುದು ಸಂತಸಕರ ವಿಷಯ. ಮುಂದಿನ ಪಿಳಿಗೆಗಳಿಗೆ ನಮ್ಮ ತನವನ್ನು ತಿಳಿಸಿ ಉಳಿಸಿಕೊಂಡು ಹೋಗುವುದಕ್ಕೆ ಇಂತಹ ಆಚರಣೆಗಳನ್ನು ಪ್ರೋತ್ಸಾಹಿಸಲೇಬೇಕಲ್ಲವೆ?
ಚಿತ್ರಕೃಪೆ: Ranjith Siji
ಎಲ್ಲರೂ ಸೇರುತ್ತಾರೆ
ಇನ್ನೊಂದು ವಿಶೇಷವೆಂದರೆ ಈ ಹಬ್ಬದಲ್ಲಿ ಎಲ್ಲರೂ ಯಾವುದೆ ರೀತಿಯ ಜಾತಿ, ಮತ, ಧರ್ಮಗಳ ಬೇಧ ಭಾವಗಳಿಲ್ಲದೆ ಒಗ್ಗಟ್ಟಾಗಿ ನೆರೆದು ಸಂಭ್ರಮ, ಸಡಗರಗಳಿಂದ ಆಚರಿಸುತ್ತಾರೆ. ನೀವೇನಾದರೂ ತ್ರಿಶ್ಶೂರ್, ಪಾಲಕ್ಕಾಡ್ ನಗರಗಳಿಗೆ ಓಣಂ ಹಬ್ಬದ ಸಂದರ್ಭದಲ್ಲಿ ಭೇಟಿ ನೀಡಿದರೆ ಈ ಉತ್ಸವದಲ್ಲಿ ಭಾಗಿಯಾಗಲು ಖಂಡಿತ ಮರೆಯಬೇಡಿ.
ಚಿತ್ರಕೃಪೆ: Ranjith Siji
ಮೈಮೇಲೆಲ್ಲ ತಪ್ಪಲುಗಳು!
ಕುಮ್ಮಟ್ಟಿಕಲಿಯಲ್ಲಿ ಭಾಗವಹಿಸಲು ಸಜ್ಜಾಗುತ್ತಿರುವ ಒಬ್ಬ ಕಲಾವಿದ.
ಚಿತ್ರಕೃಪೆ: Manojk
ನಮಗೂ ಕಿಮ್ಮತ್ತು
ಹಿರಿಯರಿಬ್ಬರನ್ನು ಪ್ರತಿನಿಧಿಸುವ ಕುಮ್ಮಟ್ಟಿಗಳು.
ಚಿತ್ರಕೃಪೆ: Ranjith Siji
ಕಣ್ಣಿಗೆ ಕಟ್ಟುವ ಅಲಂಕಾರ
ವಿವಿಧ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾದ ಮೆರವಣಿಗೆ ಸಲಕರಣೆಗಳು, ಪಾಲಕಿಗಳು ಅದ್ಭುತವಾಗಿ ಕಂಡುಬರುತ್ತವೆ.
ಚಿತ್ರಕೃಪೆ: Ranjith Siji
ಬರೀ ರೋಮಾಂಚನ
ಊರಿನ ಹಾದಿ ಬೀದಿಗಳಲೆಲ್ಲ ಈ ಮೆರವಣಿಗೆಯು ಅದ್ದೂರಿಯಾಗಿ ಸಾಗುತ್ತದೆ. ನೃತ್ಯ, ಡೋಲು, ನಗಾರಿ ಸದ್ದುಗಳು ಮನದಲ್ಲಿ ರೋಮಾಂಚಕತೆಯನ್ನುಂಟು ಮಾಡುತ್ತವೆ.
ಚಿತ್ರಕೃಪೆ: Ranjith Siji