ಸಂಸ್ಕೃತದಲ್ಲಿ "ರಾಜಾ ಪ್ರತ್ಯಕ್ಷ ದೇವತಾ" ಎಂದು ಹೇಳಲಾಗುತ್ತದೆ. ಅಂದರೆ ನಾಡಿನ ಸಕಲ ಪ್ರಜೆಗಳ ಕಲ್ಯಾಣವನ್ನೆ ಬಯಸುವ ರಾಜನು ದೇವರಿಗಿಂತ ಕಮ್ಮಿ ಇಲ್ಲ ಎಂದರ್ಥ. ಯಾರೆ ಹೊಗಳಲಿ, ತೆಗಳಲಿ ಅವರನ್ನು ದ್ವೇಷಿಸದೆ ಅವರ ಉದ್ಧಾರಕ್ಕಾಗಿ ಹಗಲಿರುಳು ಚಿಂತಿಸುತ್ತ, ಅನೇಕಾನೇಕ ಸೌಕರ್ಯಗಳನ್ನು ಒದಗಿಸುವ ರಾಜನಿದ್ದರೆ ಆ ಪ್ರಜೇಗಳು ಯಾವ ಚಿಂತೆಯನ್ನು ಮಾಡಬೆಕಾಗಿಲ್ಲ.
ಆದರೆ ಇತಿಹಾಸವನ್ನು ಗಮನಿಸಿದಾಗ ಅಂತಹ ಒಳ್ಳೆಯ ರಾಜರುಗಳ ಹೆಸರು ಕೇಳಿಬರುತ್ತದಾದರೂ ಅವರ ಸಂಖ್ಯೆ ಬಲು ಕಡಿಮೆ. ಆದರೆ ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿರುವ ರಾಜನ ಕುರಿತು ನೀವು ಕೆಳಿದರೆ, ಲೇಖನದಲ್ಲಿ ಮೊದಲ ಸಾಲಿಅನಲ್ಲೆ ವಾಕ್ಯ ನಿಜಕ್ಕೂ ಅರ್ಥಗರ್ಭಿತ ಎನಿಸುತ್ತದೆ. ಇವರ ಕಾರ್ಯವೈಖರಿಯೆ ಹಾಗಿತ್ತು.
ಚಿತ್ರಕೃಪೆ: Rahul Zota
ಸಾಮ್ರಾಜ್ಯದ ಅತ್ಯುನ್ನತವಾದ ರಾಜನ ಪದವಿಯಿದ್ದರೂ ಸಹ ಇವರ ಹೃದಯ ದೀನ-ದಲಿತರ, ಬಡವರ ಕಷ್ಟಗಳಿಗೆ ಮಿಡಿಯುತ್ತಿತ್ತು. ತಮ್ಮ ಅಧಿಕಾರದ ಮದವನ್ನು ಎಂದೂ ತೋರಿದವರಲ್ಲ. ಬದಲಾಗಿ ಅದನ್ನು ಸಮಾಜಮುಖಿ ಕಾರ್ಯಗಳನ್ನು ಮಾಡುವಲ್ಲಿ ಪರಿವರ್ತಿಸಿದವರು. ಅನೇಕ ಸೌಕರ್ಯಗಳನ್ನು ನಾಡಿನ ಜನತೆಗೆ ಒದಗಿಸಿದವರು.
ಕೆ ಆರ್ ಎಸ್ ಆಣೆಕಟ್ಟು, ಭಾರತದಲ್ಲೆ ಪ್ರಪ್ರಥಮ ಬಾರಿಗೆ ವಿದ್ಯುತ್ ಬೀದಿ ದಿಪಗಳು ಬೆಂಗಳುರಿನಲ್ಲೆ ಪ್ರಾರಂಭವಾದದ್ದು, ಕರ್ನಾಟಕದಲ್ಲಿ ಜಲವಿದ್ಯುತ್ ಉತ್ಪಾದಿಸಲು ಶಿವನಸಮುದ್ರದಲ್ಲಿ ವ್ಯವಸ್ಥೆಗೊಳಿಸಲಾಗಿದ್ದು, ಕರ್ನಾಟಕದ ಮೊದಲ ಆಣೆಕಟ್ಟು ಎಂಬ ಖ್ಯಾತಿಗೆ ಪಾತ್ರವಾದ ಚಿತ್ರದುರ್ಗದ ವಾಣಿ ವಿಲಾಸ ಸಾಗರ ಸ್ಥಾಪಿಸಿದ್ದು ಹಾಗೂ ಇನ್ನೂ ಅನೇಕ ಯೋಜನೆಗಳು ಕಾರ್ಯಗತಗೊಂಡಿದ್ದು ಈ ರಾಜರ ಅವಧಿಯಲ್ಲೆ.
ಚಿತ್ರಕೃಪೆ: Christopher J. Fynn
ಈ ದೊರೆ ನಿಜಕ್ಕೂ ದೈವತ್ವದ ಸಂಭೂತರಾಗಿದ್ದರು. ಕೆಲವು ಪ್ರಸಿದ್ಧ ಇತಿಹಾಸಕಾರರು ಇವರನ್ನು ಅಶೋಕ ಚಕ್ರವರ್ತಿಗೂ ಸಹ ಹೋಲಿಸಿದ್ದಿದೆ. ಅದರಲ್ಲೂ ವಿಶೇಷವಾಗಿ ಮಹಾತ್ಮಾ ಗಾಂಧೀಜಿಯವರು ಇವರ ಆಡಳಿತ ವೈಖರಿ ಹಾಗೂ ಜನಾನುರಾಗಿಯಾಗಿರುವುದನ್ನು ಕಂಡು ಬಲು ಪ್ರಭಾವಿತರಾಗಿದ್ದರು ಮತ್ತು ಇವರನ್ನು ರಾಜರ್ಷಿ ಎಂದೆ ಕರೆದು ಇವರಾಳುತ್ತಿದ್ದ ನಾಡನ್ನು ರಾಮ ರಾಜ್ಯ ಎಂದೆ ಹೇಳಿದ್ದರು.
ಹೌದು ನೀವು ಊಹಿಸುತ್ತಿರುವುದು ನಿಜ. ಆ ದೊರೆಯೆ ಮೈಸೂರಿನ ಮಹಾರಾಜರಲ್ಲಿ ಬಲು ಪ್ರಸಿದ್ಧಿ ಪಡೆದಿದ್ದ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಅವರಿಗೆ ಮುಡಿಪಾದ ವೃತ್ತವನ್ನು ಇಂದಿಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಣಬಹುದು. ಈ ವೃತ್ತವೆ ಚುಟುಕಾಗಿ ಕೆ.ಆರ್ ವೃತ್ತ ಎಂದು ಜನಪ್ರೀಯವಾಗಿದೆ. ಟೌನ್ ಹಾಲ್, ಮೈಸೂರು ಅರಮನೆಗೆ ಅತಿ ಹತ್ತಿರದಲ್ಲಿರುವ ಪ್ರಮುಖ ರಸ್ತೆಗಳು ಒಂದಾಗುವ ಜಂಕ್ಷನ್ ಸ್ಥಳದಲ್ಲಿ ಈ ವೃತ್ತವಿದ್ದು ನಗರದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿ ಗಮನಸೆಳೆಯುತ್ತದೆ.
ಮೈಸೂರಿನಲ್ಲಿ ಏನೇನು ನೋದಬೇಕೆಂಬ ಗೊಂದಲವೆ?
ಅಕ್ಟೋಬರ್ ಸಂದರ್ಭದಲ್ಲಿ ಅಂದರೆ ದಸರಾ ಸಮಯದಲ್ಲಿ ಈ ವೃತ್ತವು ದೀಪಗಳಿಂದ ಅಲಂಕೃತಗೊಂಡಿರುವುದನ್ನು ನೋಡಿದಾಗ ಮೈಮನಗಳಲ್ಲಿ ರೋಮಾಂಚನ ಉಂಟಾಗುತ್ತದೆ. ಮೈಸೂರಿಗೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಈ ವೃತ್ತದ ಮೂಲಕ ಹಾದು ಹೋಗಲೇಬೇಕು. ಅಲ್ಲದೆ ಈ ವೃತ್ತದ ಇತಿಹಾಸ ತಿಳಿದಿರುವವರು ಇಲ್ಲೊಂದಿಷ್ಟು ಸಮಯ ಕಳೆಯಲು ಬಯಸುತ್ತಾರೆ. ಇದರ ಸುತ್ತುಮುತ್ತಲೂ ಇಂದು ಅನೇಕ ಕಚೇರಿಗಳು, ಮಾರುಕಟ್ಟೆಗಳು ಉಪಸ್ಥಿತವಿದ್ದು ವಿಹಾರಾರ್ಥವಾಗಿಯೂ ಈ ವೃತ್ತದ ಮೂಲಕ ಸಂಚರಿಸುವುದು ಖುಶಿ ನೀಡುತ್ತದೆ.