ದಕ್ಷಿಣದ ಸುಪ್ರಸಿದ್ಧ ಕಲಾವಿದರಾದ ರಜನಿಕಾಂತ್ ಅವರ ಅಭಿನಯದ ಲಿಂಗಾ ಚಿತ್ರವು ಬಿಡುಗಡೆಗೆ ಮುಂಚೆಯೆ ಸಾಕಷ್ಟು ಸದ್ದು ಮಾಡುತ್ತಿದೆ. ಅಸಂಖ್ಯಾತ ಪ್ರೇಕ್ಷಕರು, ರಜನಿಕಾಂತ್ ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಒಂದೆ ಕಾಲಿನ ಮೇಲೆ ಕಾದು ಕುಳಿತ್ತಿದ್ದಾರೆನೊ ಅನ್ನುವ ಹಾಗೆ ಕುತೂಹಲ ಕೆರಳಿಸಿದೆ ಈ ಚಿತ್ರ.
ವಿಶೇಷವೆಂದರೆ ಈ ಚಿತ್ರವನ್ನು ನಿರ್ಮಿಸಿದ್ದು ಕನ್ನಡದವರಾದ ರಾಕ್ ಲೈನ್ ವೆಂಕಟೇಶ್ ರವರು. ಅದಕ್ಕಿಂತ ಮತ್ತೊಂದು ವಿಶೇಷವೆಂದರೆ ಈ ಚಿತ್ರದ ಸಾಕಷ್ಟು ಭಾಗಗಳು ನಮ್ಮ ಕರ್ನಾಟಕದ ಕೆಲ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದ್ದು. ಇದರಿಂದ ಕರ್ನಾಟಕದ ಮೈಸಿರಿಯು ಇನ್ನೂ ಸಾಕಷ್ಟು ಜನರ ಕಣ್ಣುಗಳ ಮುಂದೆ ಹರಿದಾಡಲಿದೆ.
ವಿಶೇಷ ಲೇಖನ : ಮೈಸೂರಿನಲ್ಲೇನೇನಿದೆ?
ಪ್ರಸ್ತುತ ಲೇಖನವು ಲಿಂಗಾ ಚಿತ್ರೀಕರಣಗೊಂಡ ಕರ್ನಾಟಕದ ಆ ಕೆಲ ಕುತೂಹಲಕರ ಸ್ಥಳಗಳು ಯಾವುವೆಂಬುದರ ಕುರಿತು ತಿಳಿಸುತ್ತದೆ. ಅಷ್ಟೆ ಅಲ್ಲ, ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಸಹ ಈ ಸ್ಥಳಗಳಲ್ಲಿ ತಮ್ಮ ಅಭಿನಯ ಚಾತುರ್ಯ ತೋರಿಸಿದ್ದಾರೆ.
ಚಿತ್ರಕೃಪೆ: Saravana Kumar
ಚಾಮುಂಡೇಶ್ವರಿ ದೇವಸ್ಥಾನ : ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಸ್ಥಿತವಿರುವ ಚಾಮುಂಡೇಶ್ವರಿ ದೇವಸ್ಥಾನವು ಮೈಸೂರು ನಗರದ ಪ್ರಮುಖ ಆಕರ್ಷಣೆಗಳ ಪೈಕಿ ಮಂಚೂಣಿಯಲ್ಲಿದೆ. ಮಹಿಷಾಸುರನನು ಕೊಂದ ದುರ್ಗೆಯ ಅವತಾರವಾದ ಚಾಮುಂಡೇಶ್ವರಿ ದೇವಿಗೆ ಮುಡಿಪಾಗಿದೆ ಈ ದೇವಸ್ಥಾನ. ಪ್ರಸ್ತುತ ದೇವಿಯ 18 ಶಕ್ತಿ ಪೀಠಗಳಲ್ಲಿ ಇದೂ ಸಹ ಒಂದಾಗಿದ್ದು ಇದನ್ನು ಕ್ರೌಂಚ ಪೀಠ ಎಂದೂ ಸಹ ಕರೆಯಲಾಗುತ್ತದೆ, ಕಾರಣ ಪುರಾಣಗಳ ಕಾಲದಲ್ಲಿ ಇದು ಕ್ರೌಂಚಪುರಿಯಾಗಿತ್ತು. ಲಿಂಗಾ ಚಿತ್ರದ ಮುಹೂರ್ತದ ಶಾಟ್ ಕೂಡ ಇಲ್ಲಿ ಸಂಪನ್ನವಾಗಿದೆ.
ಚಿತ್ರಕೃಪೆ: Battery.7
ಮೈಸೂರು ಅರಮನೆ : ಮೈಸೂರು ನಗರದ ಹೃದಯ ಭಾಗದಲ್ಲಿರುವ ಈ ವೈಭವಯುತ ಐತಿಹಾಸಿಕ ಸ್ಮಾರಕ ಅರಮನೆಯು ಮೈಸೂರಿನ ಮುಖ್ಯ ಆಕರ್ಷಣೆಯಾಗಿದೆ. ಇಂದಿಗೂ ಮೈಸೂರು ರಾಜವಂಶಸ್ಥರ ಒಡೆತನದಲ್ಲಿರುವ ಈ ಅರಮನೆಯು ಮೈಸೂರಿನ ವೈಭವಯುತ ಸಂಸ್ಕೃತಿ ಪ್ರಮುಖ ಕುರುಹಾಗಿದೆ. ಮೈಸೂರು ರಾಜವಂಶಸ್ಥರ ಪರವಾನಿಗೆಯ ಮೆರೆಗೆ ಅರಮನೆಯ ವಸತಿ ಪ್ರದೇಶಗಳಲ್ಲಿ ಲಿಂಗಾ ಚಿತ್ರದ ಕೆಲ ಭಾಗಗಳನ್ನು ಅತಿ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ.
ವಿಶೇಷ ಲೇಖನ : ಶಿಸ್ತುಬದ್ಧ ತಯಾರಿ ದಸರೆಯ ಯಶಸ್ಸಿನ ರುವಾರಿ
ಚಿತ್ರಕೃಪೆ: Aditya Patawari
ಪಾಂಡವಪುರ : ಕರ್ನಾಟಕದ ಸಕ್ಕರೆ ನಾಡು ಎಂಬ ಖ್ಯಾತಿಯ ಮಂಡ್ಯ ಜಿಲ್ಲೆಯಲ್ಲಿರುವ ಪಾಂಡವಪುರ ಒಂದು ಪಂಚಾಯತ್ ಪಟ್ಟಣವಾಗಿದೆ. ಮಂಡ್ಯ ಜಿಲ್ಲೆಯು ಸಾಕಷ್ಟು ಧಾರ್ಮಿಕ ಹಾಗೂ ಪ್ರೇಕ್ಷಣಿಯವಾದಂತಹ ಸ್ಥಳಗಳಿಗೆ ತವರಾಗಿದೆ. ಇಲ್ಲಿನ ಕೆಲ ಪ್ರದೇಶಗಳಲ್ಲಿ ಹಲವಾರು ಕನ್ನಡ ಚಿತ್ರಗಳು ಚಿತ್ರೀಕರಣಗೊಂಡಿವೆ. ಜಿಲ್ಲೆಯ ಪಾಂಡವಪುರದಲ್ಲಿ ಲಿಂಗಾ ಚಿತ್ರದ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಪಾಂಡವಪುರದಲ್ಲಿ ಪ್ರಮುಖವಾಗಿ ಕುಂತಿ ಬೆಟ್ಟವನ್ನು ಕಾಣಬಹುದು. ಚಾರಣಕ್ಕೆ ಯೋಗ್ಯವಾದ ಬೆಟ್ಟವಾಗಿದ್ದು ಇದರ ಮೇಲಿಂದ ಕಾಣುವ ದೃಶ್ಯವು ಅಮೋಘವಾಗಿರುತ್ತದೆ.
ವಿಶೇಷ ಲೇಖನ : ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೆ
ಚಿತ್ರಕೃಪೆ: Philanthropist 1
ಮೇಲುಕೋಟೆ : ಮಂಡ್ಯ ಜಿಲ್ಲೆಯಲ್ಲಿರುವ ಮೇಲುಕೋಟೆಯೂ ಸಹ ಜಿಲ್ಲೆಯ ಪ್ರಮುಖ ಧಾರ್ಮಿಕ ಆಕರ್ಷಣೆಗಳ ಪೈಕಿ ಪ್ರಮುಖವಾಗಿದೆ. ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ ಹಾಗೂ ಬೆಟ್ಟದ ಮೇಲಿರುವ ನರಸಿಂಹ ಸ್ವಾಮಿ ದೇವಸ್ಥಾನಗಳು ಸಾಕಷ್ಟು ಜನ ಭಕ್ತಾದಿಗಳನ್ನು ಆಕರ್ಷಿಸುತ್ತವೆ. ಮೇಲುಕೋಟೆಯ ಕೆಲವು ಭಾಗಗಳಲ್ಲಿ ಲಿಂಗಾ ಚಿತ್ರದ ಚಿತ್ರೀಕರಣಗಳನ್ನು ಅದ್ದೂರಿಯಾಗಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ಕುರಿತು ಓದಲು ಬಯಸಿದರೆ ಇಲ್ಲಿ ಕ್ಲಿಕ್ ಮಾಡಿ.
ಚಿತ್ರಕೃಪೆ: Hari Prasad Nadig
ತೀರ್ಥಹಳ್ಳಿ : ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆಯ ಈ ಒಂದು ಪುಟ್ಟ ಪಟ್ಟಣವು ಪ್ರಾಕೃತಿಕ ದೃಷ್ಟಿಯಿಂದ ಮಾತ್ರವಲ್ಲದೆ ಧಾರ್ಮಿಕವಾಗಿಯೂ ವಿಶೇಷ ಮಹತ್ವಪಡೆದ ಸ್ಥಳವಾಗಿದೆ. ರಾಜಧಾನಿ ಬೆಂಗಳೂರು ಮಹಾನಗರದಿಂದ ಸುಮಾರು 340 ಕಿ.ಮೀ ದೂರವಿರುವ ಈ ಪಟ್ಟಣವು ಶಿವಮೊಗ್ಗ ನಗರದಿಂದ ಕೇವಲ 62 ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದೆ. ತೀರ್ಥಹಳ್ಳಿಯ ಕೆಲ ಸುಂದರ ಭಾಗಗಳಲ್ಲಿ ರಜನಿಕಾಂತ್ ಅವರ ಅದ್ದೂರಿ ಚಿತ್ರವಾದ ಲಿಂಗಾದ ಚಿತ್ರೀಕರಣವನ್ನು ಮಾಡಲಾಗಿದೆ.
ವಿಶೇಷ ಲೇಖನ : ತೀರ್ಥಹಳ್ಳಿ ಸಾರ್ಥಕ ಕ್ಷೇತ್ರ
ಚಿತ್ರಕೃಪೆ: Shuba
ಜೋಗದ ಗುಂಡಿ : "ಸಾಯೋದ್ರೊಳಗೆ ಒಮ್ಮೆ ಜೋಗದ ಗುಂಡಿ ನೋಡಬೇಕು" ಎಂಬ ನಾಣ್ಣುಡಿಯು "ಜೋಗ ಜಲಪಾತ"ದ ರುದ್ರ ರಮಣೀಯ ಸೌಂದರ್ಯವನ್ನು ಕಣ್ಣಾರೆ ಕಂಡಾಗಲೇ ಅನಿಸುವುದು ಜೀವನ ಸಾರ್ಥಕವೆಂದು. ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ ನದಿ ನೀರಿನಿಂದ ನೈಸರ್ಗಿಕವಾಗಿ ಕಣಿವೆಯಲ್ಲಿ ಕಾಣುವ ಜೋಗ ಜಲಪಾತದ ಮಹಾವೈಭವವು ಮಳೆಗಾಲದಲ್ಲಿ ನೋಡುವುದೇ ಚಂದ. ರಾಜ, ರಾಣಿ, ರೋವರ್ ಮತ್ತು ರಾಕೆಟ್ ಎಂಬ ಅಕ್ಕಪಕ್ಕದ ಜಲಪಾತಗಳು ಸೇರಿ ಜೋಗ ಜಲಪಾತವೆಂದು ಹೆಸರಾಗಿದೆ. ಇಲ್ಲಿ ಲಿಂಗಾದ ಕೆಲ್ ಭಾಗಗಳ ಚಿತ್ರೀಕರಣವನ್ನು ಮಾಡಲಾಗಿದ್ದು, ವೈಭವಯುತ ಸೆಟ್ ಗಳನ್ನೂ ಸಹ ಹಾಕಲಾಗಿತ್ತು.
ಚಿತ್ರಕೃಪೆ: ಜಿ.ಎಸ್. ಜಯಕೃಷ್ಣ ತಲವಾಟ
ಲಿಂಗನಮಕ್ಕಿ : ಲಿಂಗಮಕ್ಕಿ ಜಲಾಶಯವನ್ನು ಶರಾವತಿ ನದಿಗೆ ಅಡ್ಡಲಾಗಿ, 1964ರಲ್ಲಿ ನಿರ್ಮಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಈ ಅಣೆಕಟ್ಟು 2.4 ಕಿ.ಮೀ ಗಳಷ್ಟು ಉದ್ದವಿದ್ದು, 1819 ಅಡಿಗಳಷ್ಟು ಎತ್ತರವಿದೆ. 4368 ಘನ ಮೀ ಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಈ ಜಲಾಶಯ ಹೊಂದಿದೆ. ಇದೊಂದು ಸೂಕ್ಷ್ಮ ಪ್ರದೇಶವಾಗಿದ್ದು ಸರ್ಕಾರದ ಅನುಮತಿ ಪಡೆದು ಅಲ್ಪ ಭಾಗಗಳ ಚಿತ್ರೀಕರಣವನ್ನು ಭದ್ರತೆಯಲ್ಲಿ ಮಾಡಲಾಗಿದೆ.
ವಿಶೇಷ ಲೇಖನ : ಕರ್ನಾಟಕದ ಹೆಮ್ಮೆಯ ಆಣೆಕಟ್ಟುಗಳು