ಹೌದು, ನೀವು ಕೇಳಿದ್ದು ಸರಿ. ಈ ಶಿಖರವನ್ನು ಮಹಾರಾಷ್ಟ್ರ ರಾಜ್ಯದ "ಮೌಂಟ್ ಎವರೆಸ್ಟ್" ಎಂದೆ ಪ್ರೀತಿಯಿಂದ ಸಂಭೋದಿಸಲಾಗುತ್ತದೆ. ಭೂಮಟ್ಟದಿಂದ ಈ ಅದ್ಭುತ ಪರ್ವತ ಶಿಖರ ಎತ್ತರ 5400 ಅಡಿಗಳು. ಮಹಾರಾಷ್ಟ್ರದ ಅತಿ ಎತ್ತರದ ಶಿಖರ ಎಂಬ ಖ್ಯಾತಿಗೆ ಪಾತ್ರವಾಗಿದೆ.
ನಿಮಗಿಷ್ಟವಾಗಬಹುದಾದ : ಧಡ್ ಧಡ್ ಎಂದು ಹೃದಯ ಬಡಿಯುವಂತೆ ಮಾಡುವ ಲೋಹಗಡ್
ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಈ ಅದ್ಭುತ ಪರ್ವತವನ್ನು ಇದರ ಪೂರ್ವದ ಬುಡಲ್ಲಿರುವ ಬಾರಿ ಎಂಬ ಹಳ್ಳಿಯಿಂದ ಸಂಪೂರ್ಣವಾಗಿ ನೋಡಬಹುದು. ಅಲ್ಲದೆ ಬಾರಿ ಹಳ್ಳಿಯು ಅಹ್ಮದ್ ನಗರ ಜಿಲ್ಲೆಯ ಪ್ರವಾಸಿ ಗ್ರಾಮ ಭಂಡಾರಧಾರಾದಿಂದ ಕೇವಲ ಆರು ಕಿ.ಮೀ ದೂರದಲ್ಲಿದೆ.
ಚಿತ್ರಕೃಪೆ: Ankur P
ಅಲ್ಲದೆ ಮುಂಬೈ-ನಾಶಿಕ್ ಮಾರ್ಗದಲ್ಲಿ ಬರುವ ಇಗತ್ಪುರಿಯಿಂದಲೂ ಸಹ ಭಂಡಾರಧಾರಾ ತಲುಪಿ ಅಲ್ಲಿಂದ ಬಾರಿ ಹಳ್ಳಿಗಳಿಗೆ ನಿಮ್ಮ ವಾಹನದಲ್ಲೊ ಅಥವಾ ಬಾಡಿಗೆ ವಾಹನಗಳಲ್ಲೊ ತೆರಳಿ ಪಶ್ಚಿಮಘಟ್ಟಗಳ ಈ ರೋಮಾಂಚಕ ಶಿಖರಕ್ಕೆ ಚಾರಣವನ್ನು ಕೈಗೊಳ್ಳಬಹುದಾಗಿದೆ.
ನಿಮಗೆ ರೈಲಿನಲ್ಲಿ ಪ್ರಯಾಣಿಸುವ ಇಷ್ಟವಿದ್ದಲ್ಲಿ ಮುಂಬೈನಿಂದ ಕಸರಾದ ಮೂಲಕ ರೈಲು ಮಾರ್ಗವಿದ್ದು ಕಸರಾದಿಂದ ಕಳಸುಬಾಯಿ ಶಿಖರಕ್ಕೆ ಚಾರಣ ಕೈಗೊಳ್ಳಬಹುದಾದ ಹಳ್ಳಿಗಳಿಗೆ ಸಂಚಾರಿ ಸೌಲಭ್ಯವಿದೆ. ಕಸರಾದಿಂದ ಖಾಸಗಿಯಾಗಿಯೂ ವಾಹನಗಳು ಲಭ್ಯವಿದ್ದು ಬಾಡಿಗೆಗೆ ತೆಗೆದುಕೊಂಡು ತೆರಳಬಹುದು.
ಚಿತ್ರಕೃಪೆ: Fitrangi
ಕಳಸುಬಾಯಿ ಶಿಖರ ಚಾರಣವು ಮೊದ ಮೊದಲು ಸರಳದಿಂದ ಕಷ್ಟಕರವಾಗಿದ್ದು ಕಳಸುಬಾಯಿಯ ದರ್ಶನ ಮಾಡಬೆಕೆಂಬ ಹೆಬ್ಬಯಕೆಯಿರುವ ಹಾಗೂ ತಲುಪಲೇಬೇಕೆಂಬ ಇಚ್ಛೆಯುಳ್ಳ ಚಾರಣಿಗರು ಇದನ್ನು ಏರುತ್ತಾರೆ. ಪೂರ್ವದಲ್ಲಿರುವ ಬಾರಿ ಹಳ್ಳಿಯಿಂದ ಈ ಚಾರಣವನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ.
ಒಂದೊಮ್ಮೆ ಏರಲು ಪ್ರಾರಂಭಿಸಿದಾಗ ಮುಂದೆ ಸಾಗುತ್ತ ಪ್ರವರ ನದಿಯ ಉಪನದಿಯಾದ ವಾಕಿ ನದಿಯ ಉಗಮ ಸ್ಥಾನವಿದೆ. ಅದರ ಸನಿಹದಲ್ಲೆ ಆಂಜನೇಯನ ಚಿಕ್ಕ ದೇಗುಲವೊಂದಿದ್ದು ಚಾರಣ ಪ್ರಾರಂಭದ ಮುಖ್ಯ ಗುರುತಾಗಿ ಇದನ್ನು ಪರಿಗಣಿಸಲಾಗುತ್ತದೆ. ಈ ದೇವಾಲಯದ ಹಿಂಭಾಗದಿಂದ ಎತ್ತರದ ಶಿಖರಕ್ಕೆ ನೇರ ಚಾರಣ ಪ್ರಾರಂಭವಾಗುತ್ತದೆ.
ಚಿತ್ರಕೃಪೆ: Elroy Serrao
ಅಲ್ಲಲ್ಲಿ ಮೊನಚಾದ ಏರುಗಳಿರುವುದರಿಂದ ಹಿಂದೆ ಸಾಕಷ್ಟು ಜರಿದ ಉದಾಹರಣೆಗಳಿವೆ. ಆದ್ದರಿಂದ ಕೆಲ ಏರುವ ಸ್ಥಳಗಳಲ್ಲಿ ಕಬ್ಬಿಣದ ಏಣಿಗಳನ್ನು ಆಧಾರವಾಗಿ ಹಿಡಿದುಕೊಂಡು ಸುರಕ್ಷಿತವಾಗಿ ಏರುವಂತೆ ಮಾಡಲಾಗಿದೆ. ಮೆಟ್ಟಿಲುಗಳನ್ನು ಕೆಲವೆಡೆ ನಿರ್ಮಿಸಲಾಗಿದೆ.
ನಿಮಗಿಷ್ಟವಾಗಬಹುದಾದ : ಮಹಾಬಳೇಶ್ವರ ಒಂದು ರುದ್ರಮಯ ಗಿರಿಧಾಮ
ಒಂದೊಮ್ಮೆ ಶಿಖರ ತಲುಪಿದ ಮೇಲೆ ಚಿಕ್ಕದಾದ ಬಯಲು ಪ್ರದೇಶ ಕಂಡುಬರುತ್ತದೆ. ಇಲ್ಲಿ ಸ್ಥಳೀಯ ದೇವಿಯಾದ ಕಳಸುಬಾಯಿಗೆ ಮುಡಿಪಾದ ಚಿಕ್ಕ ದೇವಾಲಯವಿದೆ. ದಮ್ತಕಥೆಯ ಪ್ರಕಾರ, ಕಳಸುಬಾಯಿ ಮನೆಗೆಲಸದವಳಾಗಿದ್ದರೂ ಪರಮ ದೈವಿ ಭಕ್ತೆಯಾಗಿದ್ದಳು. ಮನೆಯೊಡತಿಯ ಕಾಟ ತಾಳಲಾರದೆ ಈ ಬೆಟ್ಟದಲ್ಲಿ ಮಾಯವಾದಳು.
ಕಳಸುಬಾಯಿ ದೇವಾಲಯ, ಚಿತ್ರಕೃಪೆ: Elroy Serrao
ಹೀಗಾಗಿ ಇದಕ್ಕೆ ಕಳಸುಬಾಯಿ ಶಿಖರ ಎಂತಲೂ ಹಾಗೂ ಆಕೆಯ ಗೌರವಾರ್ಥವಾಗಿ ದೇವಾಲಾವನ್ನೂ ನಿರ್ಮಿಸಲಾಗಿದೆ. ಪ್ರತಿ ಮಂಗಳವಾರ ಹಾಗೂ ಗುರುವಾರಗಳಂದು ಅರಚಕರೊಬ್ಬರಿಂದ ಇಲ್ಲಿ ಪ್ರಾರ್ಥನೆ ನಡೆಯುತ್ತದೆ. ಅಲ್ಲದೆ ನವರಾತ್ರಿ ಸಂದರ್ಭದಲ್ಲಿ ಕೆಳಗಿರುವ ಹಳ್ಳಿಗಳಿಂದ ಸಾಕಷ್ಟು ಜನರು ಈ ಶಿಖರ ದೇವಾಲಯಕ್ಕೆ ಭೇಟಿ ನೀಡುತ್ತಾರೆ.