ದಕ್ಷಿಣ ಭಾರತದ ರಾಜಯಗಳಲ್ಲಿ ಒಂದಾದ ಕೇರಳವೂ ಸಾಕಷ್ಟು ಪ್ರವಾಸಿ ಪ್ರಖ್ಯಾತಿಗಳಿಸಿದ ರಾಜ್ಯವಾಗಿದೆ. ಮುಖ್ಯವಾಗಿ ಇಲ್ಲಿ ಕಂಡುಬರುವ ಪ್ರಾಕೃತಿಕ ಸೊಬಗು ಹಾಗೂ ಅದ್ಭುತವಾದ ಹಿನ್ನೀರಿನ ತಾಣಗಳು ಪ್ರವಾಸೋದ್ಯಮಕ್ಕೆ ಹೆಚ್ಚಿನ ಕೊಡುಗೆ ನೀಡುತ್ತವೆ.
ಆದಾಗ್ಯೂ ಇಲ್ಲಿ ಧಾರ್ಮಿಕ ಪ್ರಖ್ಯಾತಿಗಳಿಸಿದ ಅನೇಕ ಕ್ಷೇತ್ರಗಳಿವೆ. ಈ ರಾಜ್ಯದಲ್ಲಿ ಪ್ರಮುಖವಾಗಿ ಎಲ್ಲೆಡೆ ದೇವಿಯ ದೇವಾಲಯಗಳು ಬಹು ಸಂಖ್ಯೆಯಲ್ಲಿ ಕಂಡುಬರುತ್ತವೆ. ಈ ದೇವಿಯನ್ನು ಭಗವತಿ ದೇವಿ ಎಂದೆ ಜನಪ್ರೀಯವಾಗಿ ಆರಾಧಿಸಲಾಗುತ್ತದೆ. ಹಾಗಾಗಿ ಕೇರಳ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಗವತಿ ದೇವಿಯ ದೇವಾಲಯಗಳಿರುವುದನ್ನು ಕಾಣಬಹುದು.
ಭಾರತದ ಪ್ರಮುಖ ಗುಹಾಂತರ ದೇವಾಲಯಗಳು
ಅದೆಷ್ಟೊ ಭಗವತಿ ದೇವಾಲಯಗಳು ಅತ್ಯಂತ ಪ್ರಾಚೀನವಾಗಿರುವುದಲ್ಲದೆ ಸಾಕಷ್ಟು ಪ್ರಭಾವಶಾಲಿ ದೇವಾಲಯಗಳಾಗಿಯೂ ಧಾರ್ಮಿಕ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಂತಹ ಹಲವಾರು ದೇವಾಲಯಗಳ ಪೈಕಿ ಕಲ್ಲೀಲ ಭಗವತಿ ದೇವಾಲಯವೂ ಸಹ ಒಂದು. ಪ್ರಸ್ತುತ ಲೇಖನದ ಮೂಲಕ ಈ ಕಲ್ಲೀಲ ದೇವಿಯ ಕುರಿತು ಹೆಚ್ಚು ತಿಳಿಯಿರಿ.
ಭಗವತಿ
ಈ ಭಗವತಿ ದೇವಿಯು ಕರುಣಾಮಯಿ ದೇವಿ ಎಂದೆ ಪ್ರಸಿದ್ಧಳಾಗಿದ್ದಾಳೆ. ಕಲ್ಲೊಳಗಿರುವ ಈಕೆ ಕರುಣಾಮಯಿ ಆಗಿರುವುದಕ್ಕೂ ಕಾರಣ ಇಲ್ಲದಿಲ್ಲ. ಇಲ್ಲಿಗೆ ಭೇಟಿ ನೀಡುವ ಅಪಾರ ಸಂಖ್ಯೆಯ ಭಕ್ತರ ನಂಬಿಕೆಯಂತೆ ಈ ಭಗವತಿ ದೇವಿ ಬೇಡಿದ ಎಲ್ಲ ವರಗಳನ್ನು ಭಕ್ತರಿಗೆ ಅನುಗ್ರಹಿಸುತ್ತಾಳಂತೆ.
ಚಿತ್ರಕೃಪೆ: Ranjithsiji
ಬರಿಗೈಯಿಂದ ಮರಳಲಾರರು
ಈ ಭಗವತಿ ದೇವಿಯ ದರ್ಶನ ಪಡೆದು ಯಾರೆ ಆಗಲಿ ಬರಿಗೈಯಿಂದ ಮರಳಲು ಸಾಧ್ಯವೆ ಇಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ಈ ಶಕ್ತಿ ದೇವಿಯನ್ನು ಕರುಣಾಮಯಿ ಎಂದೆ ಜನರು ಕೊಂಡಾಡುತ್ತಾರೆ. ಇನ್ನೂ ಹೆಸರಿಗೆ ಸಂಬಂಧಿಸಿದಂತೆ ಈ ದೇವಿಯು ಅತಿ ಪ್ರಾಚೀನವಾದ ಬೃಹದಾಕಾರದ ಕಲ್ಲಿನಲ್ಲಿ ವಾಸವಾಗಿದ್ದಾಳೆ. ಅಂತೆಯೆ ಇವಳನ್ನು ಕಲ್ಲೀಲ ಭಗವತಿ ದೇವಿ ಎಂದು ಕರೆಯಲಾಗಿದೆ.
ಚಿತ್ರಕೃಪೆ: Ranjithsiji
ದಂತಕಥೆ
ಈ ಕ್ಷೇತ್ರಕ್ಕೆ ಸಂಬಂಧಿಸಿದ ದಂತಕಥೆಯಂತೆ, ಒಂದೊಮ್ಮೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರು ಕಾಡಿನಲ್ಲಿ ಅಲೆಯುತ್ತ ಒಣ ಕಟ್ಟಿಗೆ, ಹಣ್ಣು ಹಂಪಲಗಳನ್ನು ಹುಡುಕುತ್ತ ಜೀವನ ಸಾಗಿಸುತ್ತಿದ್ದರು. ಆದರೆ ಒಮ್ಮೆ ಬರಗಾಲದ ಸ್ಥಿತಿ ಎದುರಾಗಿ ಅವರಿಗೆ ತಿನ್ನಲು ಎನ್ನು ದಕ್ಕದಾಯಿತು.
ಚಿತ್ರಕೃಪೆ: Sreejith K
ಜೀವನ ನಿರ್ವಹಣೆ
ಯಾರ ಉಸಾಬರಿಗೂ ಹೋಗದ, ಕೇವಲ ತಮ್ಮ ಜೀವನ ನಿರ್ವಹಣೆಯನ್ನು ಸರಳವಾಗಿ ಮಾಡಿಕೊಂಡಿದ್ದ ಆ ಜನರು ಬರಗಾಲದಿಂದ ಬೇಸತ್ತು ತಮ್ಮ ದೇವರನ್ನು ಕುರಿತು ದಿನವೂ ಪ್ರಾರ್ಥಿಸುತ್ತಿದ್ದರು. ಅವರ ಕಷ್ಟ ಕಂಡು ಮರುಗಿದ ದೇವಿಯು ಅವರನ್ನು ಉದ್ಧರಿಸಲು ನಿರ್ಧರಿಸಿದಳು.
ಚಿತ್ರಕೃಪೆ: Dpradeepkumar
ಸ್ತ್ರೀ ಪ್ರತ್ಯಕ್ಷ
ಹೀಗೊಂದು ದಿನ ಆ ಬುಡಕಟ್ಟು ಜನರು ಎಂದಿನಂತೆ ಕಾಡಿನಲ್ಲಿ ಕಟ್ಟಿಗೆಗಳನ್ನು ಹುಡುಕುತ್ತ ಅಲೆಯುತ್ತಿದ್ದಾಗ ದೈವ ಕಾಂತಿ ಹೊಂದಿದ್ದ ಒಬ್ಬ ಸ್ತ್ರೀಯು ಬೃಹದಾಕಾರದ ಬಂಡೆಗಲೊಂದಿಗೆ ನಿರಾಯಾಸವಾಗಿ ಆಡುತ್ತಿರುವುದನ್ನು ಗಮನಿಸಿದರು.
ಚಿತ್ರಕೃಪೆ: Ranjithsiji
ಕಾಂತಿಯುಕ್ತ
ಆಕೆಯ ಮುಖವು ಬಲು ತೇಜಸ್ಸಿನಿಂದ ಕೂಡಿತ್ತು. ದೇಹವು ಪ್ರಭಾವಳಿಯಿಂದ ಸುತ್ತುವರೆದಿತ್ತು. ದೈತ್ಯ ಗಾತ್ರದ ಕಲ್ಲುಗಳನ್ನು ಮಕ್ಕಳು ಆಟಿಕೆ ಆಡುವಂತೆ ಅವುಗಳೊಂದಿಗೆ ಆಡುತ್ತಿದ್ದುದನ್ನು ಗಮನಿಸಿದ ಆ ಬುಡಕಟ್ಟು ಜನರು ದಿಗ್ಭ್ರಾಂತರಾಗಿ ಆಕೆಯ ಮುಂದೆ ಬಂದರು.
ಚಿತ್ರಕೃಪೆ: Ranjithsiji
ಛಾವಣಿ
ಹಾಗೆ ಆ ಬುಡಕಟ್ಟು ಜನರು ಮುಂದೆ ಬರುತ್ತಿದ್ದಂತೆಯೆ ಆ ಸ್ತ್ರೀಯು ಒಂದು ಹೆಬ್ಬಂಡೆಯನ್ನು ಛಾವಣಿಯನ್ನಾಗಿ ಮಾಡಿಕೊಂಡು ಇನ್ನೊಂದು ಬಂಡೆಯನ್ನು ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡು ಅದರಲ್ಲಿ ಪ್ರವೇಶಿಸಿ ಬಿಟ್ಟಳು. ನಂತರ ಅವರಿಗೆ ತಾನು ಯಾರು ಎಂಬುದನ್ನು ಒಳಗಿನಿಂದಲೆ ಹೇಳಿ ಆಶೀರ್ವಾದಿಸಿದಳು.
ಚಿತ್ರಕೃಪೆ: Ranjithsiji
ಎಲ್ಲರಲ್ಲೂ ಸಂತಸ
ಆಕೆ ಹೇಳಿದ ಪ್ರಕಾರ ಆಕೆಯೆ ಭಗವತಿ ದೇವಿ ಎಂದೂ ಹಾಗೂ ಅವಳು ಆ ಜನರ ಸಕಲ ಕಷ್ಟಗಳನ್ನು ನಿವಾರಿಸಲು ಬಂದಿರುವುದಾಗಿ ತಿಳಿದುಬಂದಿತು. ಇದರಿಂದ ಸಂತಸಗೊಂಡ ಆ ಜನರು ಆಕೆಯನ್ನು ಆರಾಧಿಸುತ್ತ ಅಲ್ಲಿಯೆ ನಿವಾಸಿಸಬೇಕೆಂದು ಪ್ರಾರ್ಥಿಸಿಕೊಂಡರು.
ಚಿತ್ರಕೃಪೆ: Ranjithsiji
ಅಂದಿನಿಂದ ಪ್ರಸಿದ್ಧ
ಇದಕ್ಕೊಪ್ಪಿದ ಆ ಭಗವತಿ ದೇವಿಯು ತಾನು ಎಂದಿಗೂ ಇಲ್ಲಿಯೆ ವಾಸವಿರುವುದಾಗಿಯೂ, ತನ್ನನ್ನು ಅರಸಿಕೊಂಡು ಬರುವವರ ಸಕಲ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸುವುದಾಗಿಯೂ ಅಭಯ ನೀಡಿದಳು. ಅಂದಿನಿಂದೆ ಕಲ್ಲಿನ ಗುಹೆಯೊಳಗಿರುವ ಕಲ್ಲೀಲ ಭಗವತಿ ದೇವಿಯಾಗಿ ಪ್ರಸಿದ್ಧಳಾದಳು.
ಚಿತ್ರಕೃಪೆ: Ranjithsiji
ರಚನೆಗಳನ್ನು ನಿರ್ಮಿಸಲಾಗಿದೆ
ಹೌದು, ಇದೊಂದು ಬಂಡೆ ದೇವಾಲಯ. ಒಂದು ಬಂಡೆಯು ದೇವಿಯ ಗೋಪುರವಾಗಿಯೂ ಇನ್ನೊಂದು ಬಂಡೆಯು ಆಕೆ ನೆಲೆಸಿರುವ ಕಲ್ಲು ಹಾಸಿಗೆಯಾಗಿಯೂ ಕಾರ್ಯ ನಿರ್ವಹಿಸುತ್ತದೆ. ಕ್ರಮೇಣ ಇದಕ್ಕೆ ಹೊಂದಿಕೊಂಡಂತೆ ಕೆಲವು ರಚನೆಗಳನ್ನು ನಿರ್ಮಿಸಲಾಗಿದೆ.
ಚಿತ್ರಕೃಪೆ: Ranjithsiji
ಮೂರನೇಯ ಶತಮಾನ
ಇನ್ನೂ ಐತಿಹಾಸಿಕವಾಗಿ ಇಲ್ಲಿ ದೊರೆತಿರುವ ಕೆತ್ತನೆಗಳು ಹಾಗೂ ಇತಿಹಾಸಕಾರರ ಪ್ರಕಾರ ಹೇಳಬೇಕೆಂದರೆ ಇದು ಮೂರನೇಯ ಶತಮಾನಕ್ಕೆ ಸಂಬಂಧಿಸಿದ ಗುಹಾ ಬಂಡೆಯಾಗಿದೆ. ಜೈನ ಸನ್ಯಾಸಿಗಳು ಈ ಬಂಡೆಯ ರಚನೆಗಳನ್ನು ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ.
ಚಿತ್ರಕೃಪೆ: Ranjithsiji
ಜೈನ ತೀರ್ಥಂಕರರು
ಇದಕ್ಕೆ ಪೂರಕವೆಂಬಂತೆ ಇಲ್ಲಿನ ಬಂಡೆಗಳ ಮೇಲೆ ಕೆತ್ತಲಾಗಿರುವ ಜೈನ ಪವಿತ್ರ 24 ತೀರ್ಥಂಕರರ ರಚನೆಗಳನ್ನು ಕಾಣಬಹುದು. ಅಲ್ಲದೆ ಜೈನರು ಇಲ್ಲಿ ಮುಖ್ಯ ದೇವಿಯಾಗಿ ಪದ್ಮಾವತಿಯನ್ನು ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ.
ಚಿತ್ರಕೃಪೆ: Ranjithsiji
ಹಿಂದು ದೇವಾಲಯ
ಕಾಲಕ್ರಮೇಣ ಇಲ್ಲಿ ಜೈನ ಪ್ರಭಾವ ಕಡಿಮೆಯಾಗಿ ಇದು ಹಿಂದು ದೇವಾಲಯವಾಗಿ ಪರಿವರ್ತಿತವಾಯಿತೆನ್ನಲಾಗಿದೆ. ಪದ್ಮಾವತಿ ದೇವಿಯನ್ನೆ ಜನರು ಭಗವತಿ ದೇವಿಯನ್ನಾಗಿ ಆರಾಧಿಸತೊಡಗಿದರು ಎನ್ನುತ್ತಾರೆ ಇತಿಹಾಸಕಾರರು.
ಚಿತ್ರಕೃಪೆ: Ranjithsiji
ಇಬ್ಬರಿಗೂ ಪವಿತ್ರ
ಹಾಗಾಗಿ ಕೇರಳದ ಅತಿ ಪ್ರಾಚೀನ ಜೈನ ದೇವಾಲಯಗಳ ಪೈಕಿ ಕಲ್ಲೀಲ ದೇವಾಲಯವನ್ನೂ ಸಹ ಒಂದಾಗಿ ಗುರುತಿಸಲಾಗುತ್ತದೆ. ಸತ್ಯ ಏನೆ ಇರಲಿ ಇಂದಿಗೂ ಈ ಕ್ಷೇತ್ರಕ್ಕೆ ಜೈನರು ಹಾಗೂ ಹಿಂದುಗಳಿಬ್ಬರೂ ಸಹ ಭೇಟಿ ನೀಡುತ್ತಾರೆ ಹಾಗೂ ದೇವಿಯನ್ನು ಪ್ರಾರ್ಥಿಸುತ್ತಾರೆ.
ಚಿತ್ರಕೃಪೆ: Ranjithsiji
ಎರ್ನಾಕುಲಂ
ಈ ದೇವಾಲಯವು ಎರ್ನಾಕುಲಂ ಜಿಲ್ಲೆಯ ಪೆರುಂಬವೂರು ಎಂಬಲ್ಲಿದ್ದು ಕಾಲಡಿ ಕ್ಷೇತ್ರದಿಂದ 22 ಕಿ.ಮೀ ಹಾಗೂ ಎರ್ನಾಕುಲಂ ನಗರದಿಂದ 53 ಕಿ.ಮೀ ಗಳಷ್ಟು ದೂರವಿದೆ. ತೆರಳಲು ಬಸ್ಸುಗಳು ಹಾಗೂ ಬಾಡಿಗೆ ಕಾರುಗಳು ದೊರೆಯುತ್ತವೆ. ಈ ದೇವಾಲಯವು 22 ಎಕರೆಗಳಷ್ಟು ವಿಸ್ತಾರವಾದ ದಟ್ಟಾರಣ್ಯದ ಮಧ್ಯದಲ್ಲಿ ಸ್ಥಿತವಿರುವುದು ವಿಶೇಷ. ಹಾಗಾಗಿ ಸುತ್ತಲೂ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಅನುಭವಿಸಬಹುದು.
ಚಿತ್ರಕೃಪೆ: Challiyan