Search
  • Follow NativePlanet
Share
» »ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!

ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!

ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನಲ್ಲಿರುವ ಹೊಸಹೊಳಲು ಗ್ರಾಮವು ತನ್ನಲ್ಲಿರುವ ಅತ್ಯದ್ಭುತ ಲಕ್ಷ್ಮಿನಾರಾಯಣ ದೇವಾಲಯದಿಂದಾಗಿ ಗಮನಸೆಳೆಯುತ್ತದೆ

By Vijay

ಕನ್ನಡದಲ್ಲಿ ಒಂದು ನಾಣ್ಣುಡಿಯು ಪ್ರಚಲಿತದಲ್ಲಿದೆ. ಅದೆನೆಂದರೆ "ಬೇಲೂರು ಗುಡಿ ಒಳಗೆ ನೋಡು, ಹಳೇಬೀಡು ಗುಡಿ ಹೊರಗೆ ನೋಡು". ಇದರರ್ಥ ಬೇಲೂರಿನಲ್ಲಿರುವ ಅತ್ಯಾಕರ್ಷಕ ಕೆತ್ತನೆಯ ದೇವಾಲಯ ರಚನೆಗಳ ಒಳ ಕೋಣೆಗಳಲ್ಲಿ ಅನುಪಮವಾದ ಕೆತ್ತನೆಗಳಿವೆ. ಅದರಂತೆ ಹಳೇಬೀಡುವಿನಲ್ಲಿ ಕಂಡುಬರುವ ರಚನೆಗಳ ಹೊರಗೋಡೆಗಳ ಮೇಲೆ ಸುಂದರ ವಾಸ್ತುಶಿಲ್ಪವಿದೆ.

ಈ ಮೇಲಿನ ವಾಕ್ಯಕ್ಕೆ ಇನ್ನೊಂದು ವಾಕ್ಯವು ಜೋಡಣೆಯಾಗಿದ್ದು ಅದರಿಂದ ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ದೇವಾಲಯದ ಮಹತ್ವ ತಿಳಿಯುತ್ತದೆ. ಅದರ ಪ್ರಕಾರವಾಗಿ ಹೊಸಹೊಳಲುವಿನ ಒಳಗೂ ಹೊರಗೂ ನೋಡು. ಹೌದು, ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನಲ್ಲಿರುವ ಹೊಸಹೊಳಲು ಗ್ರಾಮವು ತನ್ನಲ್ಲಿರುವ ಅತ್ಯದ್ಭುತ ಲಕ್ಷ್ಮಿನಾರಾಯಣ ದೇವಾಲಯದಿಂದಾಗಿ ಗಮನಸೆಳೆಯುತ್ತದೆ.

ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!

ಚಿತ್ರಕೃಪೆ: Bikashrd

ಈ ಲಕ್ಷ್ಮಿನಾರಾಯಣನ ದೇವಾಲಯ ಅಂಥಿಂಥದ್ದಲ್ಲ! ಇದರ ರಚನೆಯ ಶೈಲಿಯನ್ನೊಮ್ಮೆ ನೀವೆ ಗಮನಿಸಿ. ನಿಮಗಾಶ್ಚರ್ಯ ಉಂಟಾಗದೆ ಇರಲು ಯಾವ ಕಾರಣವೂ ದೊರೆಯುವುದಿಲ್ಲ. ಅಷ್ಟೊಂದು ವೈಭವಯುತ ಕೆತ್ತನೆಯ ಕೆಲಸವನ್ನು ಇಲ್ಲಿ ಕಾಣಬಹುದಾಗಿದೆ. ಹೊಯ್ಸಳರ ಒಂದು "ಮಾಸ್ಟರ್ ಪೀಸ್" ಇದಾಗಿದೆ ಎಂದರೂ ತಪ್ಪಾಗಲಾರದು.

ಚಿತ್ರಪಟ ಕ್ಲಿಕ್ಕಿಸುವ ಪ್ರವಾಸಿಗರಿಗಂತೂ ಇಲ್ಲಿ ಎಷ್ಟು ಹೊತ್ತು ಕಳೆದರೂ ಸಮಾಧಾನ ಸಿಗುವುದು ತುಸು ಕಷ್ಟವೆ ಎಂದು ಹೇಳಬಹುದು. ಏಕೆಂದರೆ ಈ ಲಕ್ಷ್ಮಿನಾರಾಯಣನ ದೇವಾಲಯದೊಳಗಿರಲಿ ಅಥವಾ ಹೊರಗಿರಲಿ ಪ್ರತಿಯೊಂದು ಭಂಗಿಯಲ್ಲಿ ಅದ್ಭುತ ಸನ್ನಿವೇಶಗಳು ಇಲ್ಲಿ ನೋಡಲು ಕಾಣಸಿಗುತ್ತವೆ. ಯಾವ್ಯಾವ ಕೋನದಲ್ಲಿ ಪಟ ಕ್ಲಿಕ್ಕಿಸುವುದೊ ಎಂಬ ಗೊಂದಲ ಛಾಯಾಗ್ರಾಹಕರಿಗುಂಟಾದರೂ ಆಶ್ಚರ್ಯವಿಲ್ಲ!

ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!

ಚಿತ್ರಕೃಪೆ: Bikashrd

ದೇವಾಲಯದೊಳಗಿನ ಖಂಬಗಳ ಮೇಲಿನ ವೈಭವೋಪೇತ ಕೆತ್ತನೆಗಳು, ಕುಸುರಿ ಕೆಲಸ ಹಾಗೂ ಅವುಗಳನ್ನು ಪೂರ್ಣಗೊಳಿಸಿರುವ ಬಗೆಯನ್ನು ಕಂಡಾಗ ಒಮ್ಮೊಮ್ಮೆ ಆ ಪ್ರಾಚೀನ ಕಾಲದಲ್ಲೂ ಯಂತ್ರಗಳೇನಾದರೂ ಈ ದೇವಾಲಯದ ಶಿಲ್ಪಿಗಳಿಗೆ ವರದಾನವಾಗಿ ದೊರಕಿತ್ತೆ? ಎಂಬ ಸಂದೇಹ ಮೂಡಿದರೂ ಮೂಡಬಹುದು. ಅಷ್ಟು ಕರಾರುವಕ್ಕಾಗಿವೆ ಇಲ್ಲಿನ ಕೆಲಸಗಳು.

ಇನ್ನೂ ಹೊರ ಭಾಗದಲ್ಲೂ ಸಹ ಅಷ್ಟೆ, ಸುತ್ತಮುತ್ತಲಿನ ಪರಿಸರ ಹಾಗೂ ವಾತಾವರಣಕ್ಕೆ ತಕ್ಕಂತೆ ಹೊರ ಗೋಡೆಗಳ ರಚನೆಗಳು ಪ್ರವಾಸಿಗರನ್ನು/ಭೇಟಿ ನೀಡಿದವರನ್ನು ಒಂದೆ ಕ್ಷಣದಲ್ಲಿ ಆಕರ್ಷಿಸಿ ಬಿಡುತ್ತವೆ. ಲಕ್ಷ್ಮಿಸಮೇತನಾಗಿ ನೆಲೆಸಿರುವ ಲಕ್ಷ್ಮಿನಾರಾಯಣ ದೇವಾಲಯವು ಪ್ರಧಾನವಾಗಿದ್ದರೆ, ಅದನ್ನು ಹೊರತುಪಡಿಸಿ ಇತರೆ ದೇಗುಲಗಳೂ ಸಹ ಇಲ್ಲಿ ಕಂಡುಬರುತ್ತವೆ.

ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!

ಚಿತ್ರಕೃಪೆ: Bikashrd

ಈ ದೇವಾಲಯದಾವರಣದಲ್ಲಿ ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣರ ಗುಡಿಗಳೂ ಸಹ ಇರುವುದನ್ನು ಗಮನಿಸಬಹುದಾಗಿದೆ. ಈ ದೇವಾಲಯವನ್ನು ಹೊಯ್ಸಳ ದೊರೆ ವೀರ ಬಲ್ಲಾಳನು ಹದಿಮೂರನೇಯ ಶತಮಾನದಲ್ಲಿ ತ್ರಿಕೂಟಾಚಲ ಮಾದರಿಯಲ್ಲಿ ನಿರ್ಮಿಸಿದನೆಂಬ ವಿಷಯ ಇತಿಹಾಸದಿಂದ ತಿಳಿದುಬರುತ್ತದೆ.

ಕೈಬಿಸಿ ಕರೆಯುವ ಕಿಕ್ಕೇರಿಯ ಬ್ರಹ್ಮೇಶ್ವರ!

ಕೃಷ್ಣರಾಜಪೇಟೆ ತಾಲೂಕಿನಲ್ಲಿರುವ ಹೊಸಹೊಳಲು ಗ್ರಾಮವು ಮಂಡ್ಯ ನಗರ ಕೇಂದ್ರದಿಂದ ಸುಮಾರು 65 ಕಿ.ಮೀ ಗಳಷ್ಟು ದೂರದಲ್ಲಿದ್ದರೆ, ಮತ್ತೊಂದು ಪ್ರಖ್ಯಾತ ಸ್ಥಳವಾದ ಮೇಲುಕೋಟೆಯಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿದೆ. ನಿಮಗೆ ಸಮಯಾವಕಾಶ ದೊರೆತರೆ ಖಂಡಿತವಾಗಿಯೂ ಈ ದೇವಾಲಯಕ್ಕೊಮ್ಮೆ ಭೇಟಿ ನೀಡಿ. ಬೆಂಗಳೂರಿನಿಂದ ಹೊಸಹೊಳಲು 162 ಕಿ.ಮೀ ಗಳಷ್ಟು ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X