ಶರಾವತಿಯ ಹಿನ್ನೀರು ವ್ಯಾಪಿಸಿರುವ ಪ್ರದೇಶ. ಹಾಗಾಗಿ ಅದ್ಭುತ ಹಿನ್ನೀರಿನ ಸುಂದರ ಪ್ರದೇಶವಿದು. ಅಷ್ಟೆ ಅಲ್ಲ, ಪಶ್ಚಿಮದಲ್ಲಿ ಸೂರ್ಯನು ತನ್ನ ದಿನಚರಿಯನ್ನು ಮುಗಿಸಿ ಹಿಂತಿರುಗುವಾಗ ಆಕಾಶದಲ್ಲೆಲ್ಲ ಹೊನ್ನಿನಂತಹ ಪ್ರಕಾಶವನ್ನು ಎಲ್ಲೆಡೆ ಪಸರಿಸಿರುತ್ತಾನೆ.
ಆ ಹೊನ್ನಿನಂತಹ ಪ್ರಕಾಶವು ಇಲ್ಲಿನ ನೀರಿನಲ್ಲಿ ಬಿದ್ದು ಹೊಳೆಯುವಾಗ ಹೊನ್ನಿನ ಕೆರೆ ಇದಾಗಿರಬಹುದೆಂದು ಭಾಸವಾಗದೆ ಇರಲಾರದು. ಆ ಕಾರಣದಿಂದಾಗಿ ಈ ಪ್ರದೇಶವು ಹೊನ್ನೇಮರಡು ಎಂಬ ಹೆಸರು ಪಡೆದಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಇನ್ನೊಂದು ಮೂಲದ ಪ್ರಕಾರ ಹೊನ್ನೆ ಮರಗಳು ಇಲ್ಲಿ ಹೇರಳವಾಗಿದ್ದ ಕಾರಣ ಇದಕ್ಕೆ ಹೊನ್ನೇಮರಡು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Srinath.holla
ವಾಸ್ತವಾಂಶ ಏನೆ ಇರಲಿ, ಆದರೆ ಹೆಸರಿಗೆ ತಕ್ಕಂತೆ ಇದೊಂದು ಹೊನ್ನಿನಂತಹ ಸ್ಥಳ. ಕೇವಲ ಹೊನ್ನಿನಂತಹ ಕೆರೆಯಿಂದ ಮಾತ್ರವಲ್ಲ, ಬದಲಾಗಿ ಸುತ್ತಮುತ್ತಲು ಹೊನ್ನಿನಂತಹ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವುದರಿಂದಲೂ ಇದು ಎಲ್ಲರ ನೆಚ್ಚಿನ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಹೊನ್ನೆಮರಡು ಸಾಗರ-ಜೋಗ ಮಾರ್ಗದಲ್ಲಿ ಸಾಗರದಿಂದ ಸುಮಾರು 35 ಕಿ.ಮೀ ಗಳಷ್ಟು ದೂರದಲ್ಲಿ ಸಿಗುತ್ತದೆ. ತಾಳಗುಪ್ಪದಿಂದ 12 ಕಿ.ಮೀ ಗಳಷ್ಟು ದೂರದಲ್ಲಿರುವ ಹೊನ್ನೇಮರಡು ಬೆಂಗಳೂರಿನಿಂದ 392 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Sarthak Banerjee
ಕೆಲವು ಪ್ರವಾಸಿ ಸಂಸ್ಥೆಗಳು ಹೊನ್ನೆಮರಡುವಿನಲ್ಲಿ ವಿಶೇಷವಾದ ಪ್ರವಾಸಿ ಕ್ಯಾಂಪುಗಳನ್ನು ಏರ್ಪಡಿಸುತ್ತಿರುತ್ತಾರೆ. ಮುಂಚಿತವಾಗಿ ಗುಂಪುಗಳಲ್ಲಿ ನಿಮ್ಮ ನಿಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಈ ಶಿಬಿರಗಳಲ್ಲಿ ಪಾಲ್ಗೊಂಡು ಅದ್ಭುತವಾದ ಅನುಭವ ಪಡೆಯಬಹುದು. ದೋಣಿ ವಿಹಾರ ಸೇರಿದಂತೆ, ಕ್ಯಾಂಪ್ ಫೈರ್ ಹಾಗೂ ಇತರೆ ಸಾಹಸಮಯ ಚಟುವಟಿಕೆಗಳನ್ನು ಇಲ್ಲಿ ಆಸ್ವಾದಿಸಬಹುದು.
ಲಿಂಗನಮಕ್ಕಿ ಜಲಾಶಯಕ್ಕೆ ಎದುರುಮುಖ ಮಾಡಿ ನಿಂತಿರುವ ಹೊನ್ನೇಮರಡು ತನ್ನಲ್ಲೆ ಅನೇಕ ಆಕರ್ಷಣೆಗಳನ್ನು ಹುದುಗಿಸಿಟ್ಟುಕೊಂಡಿದೆ. ಇಲ್ಲಿನ ವಿಶಾಲವಾದ ಜಲ ಪ್ರದೇಶದಲ್ಲಿ ಚಿಕ್ಕದಾದ ನಡುಗಡ್ಡೆಯೊಂದಿದ್ದು ಪ್ರವಾಸಿಗರ ಗಮನವನ್ನು ಬಲು ಪ್ರಮುಖವಾಗಿ ಸೆಳೆಯುತ್ತದೆ.
ಚಿತ್ರಕೃಪೆ: Srinath.holla
ಅಲ್ಲದೆ ಈ ಪ್ರದೇಶದ ಸುತ್ತಮುತ್ತಲಿನಲ್ಲೆ ಪ್ರಾಕೃತಿಕ ಸಂಪತ್ತು ಹೇರಳವಾಗಿದ್ದು ದಟ್ಟವಾದ ಗಿಡ-ಮರಗಳಿಂದ ಸಂಪದ್ಭರಿತವಾಗಿದೆ. ಚಾರಣದಂತಹ ಚಟುವಟಿಕೆಗಳು ಅತಿ ಹೆಚ್ಚಿನ ಉತ್ಸಾಹ ಹಾಗೂ ಹುರುಪುಗಳನ್ನು ನೀಡುವುದರಿಂದ ದೂರದ ಬೆಂಗಳೂರಿನಂತಹ ನಗರಗಳಿಂದ ಆಗಾಗ ಇಲ್ಲಿ ಪ್ರವಾಸಿಗರು ಬರುತ್ತಿರುತ್ತಾರೆ.
ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿರುವ ದೇವಾಲಯಗಳು
ಇನ್ನೂ ಹೊನ್ನೆಮರಡುವಿನಿಂದ ಕೇವಲ 20 ರಿಂದ 30 ಕಿ.ಮೀ ಗಳಷ್ಟು ಅಂತರದಲ್ಲಿ ಜಗತ್ಪ್ರಸಿದ್ಧ ಜೋಗ ಜಲಪಾತವಿದ್ದು ಬೇಕಾದರೆ ಅಲ್ಲಿಗೂ ಭೇಟಿ ನೀಡಬಹುದು. ದಬ್ಬೆ ಜಲಪಾತವೂ ಸಹ ಸಾಕಷ್ಟು ನಯನಮನೋಹರವಾಗಿದ್ದು ಹೊನ್ನೆಮರಡುವಿನಿಂದ ಅತಿ ಕಡಿಮೆ ದೂರದಲ್ಲಿ ನೆಲೆಸಿದ್ದು ತೆರಳಲು ಸೂಕ್ತವಾದ ಸ್ಥಳವಾಗಿದೆ.