ಎಲ್ಲಾದರೂ ಇರುವ ಯಾವುದೆ ಶಿವನ ದೇವಾಲಯಕ್ಕೆ ಹೋದಾಗ ಸಾಮಾನ್ಯವಾಗಿ ಶಿವನ ಮುಖ್ಯ ವಿಗ್ರಹ ಅಥವಾ ಶಿವಲಿಂಗದ ಎದುರಿನಲ್ಲೆ ನಂದಿಯ ವಿಗ್ರಹವನ್ನು ಕಾಣಬಹುದು. ಈ ರೀತಿ ನಂದಿ ವಿಗ್ರಹ ಶಿವನ ಎದುರಿನಲ್ಲೆ ಏಕಿರುತ್ತದೆ ಎಂದು ಗೊತ್ತೆ? ಅದಕ್ಕೂ ಸಹ ಹಲವು ರೋಚಕ ಕಾರಣಗಳಿವೆ.
ಒಂದು ತಿಳುವಳಿಕೆಯ ಪ್ರಕಾರ, ನಂದಿ ಧರ್ಮ ಮಾರ್ಗದಲ್ಲಿ ಸಾಗುವ, ನಿಯತ್ತಿನಿಂದುರುವುದರ ಪ್ರತೀಕ. ಆ ಕಾರಣವಾಗಿ ಶಿವನ ದರ್ಶನ ಪಡೆಯುವ ಮುಂಚೆ ನಾವೂ ಸಹ ಧರ್ಮ ಮಾರ್ಗದಲ್ಲಿ ಸಾಗುತ್ತಿರುವುದರ ಸೂಚಕವಾಗಿ ಮೊದಲು ನಂದಿಯ ದರ್ಶನ ಪಡೆದ ನಂತರ ಶಿವನ ದರ್ಶನ ಪಡೆಯಲು ಅರ್ಹರಾಗುತ್ತೇವೆ ಎಂದು ಹೇಳಲಾಗುತ್ತದೆ.
ನಂದಿಯು ಶಿವನ ವಾಹನ, ಅವನ ಗಣರಲ್ಲಿ ಪ್ರಧಾನ ಗಣ. ಅಷ್ಟೆ ಅಲ್ಲ, ಹದಿನೆಂಟು ಸಿದ್ಧರ ಗುರು. ಈ ಹದಿನೆಂಟು ಸಿದ್ಧರಲ್ಲಿ ಪತಂಜಲಿ ಹಾಗೂ ತಿರುಮೂಲರ್ ಸಹ ಸೇರಿದ್ದಾರೆ. ನಂದಿ ಧರ್ಮ, ಆನಂದ, ನೈತಿಕತೆ, ಸದಾ ನಗು ಮೋಗದಲ್ಲಿರುವುದರ ಪ್ರತೀಕ. ಹಾಗಾಗಿ ನಂದಿಯ ದರ್ಶನದಿಂದ, ಅವನ ಆಶೀರ್ವಾದದಿಂದ ಸಕಲರಿಗೂ ಮನದಲ್ಲಿರುವ ಚಿಂತೆಗಳು ನಶಿಸಿ ಹುರುಪು, ಸಂತಸಗಳು ಉಂಟಾಗುತ್ತವೆ ಎಂಬ ನಂಬಿಕೆಯಿದೆ.
ಪೌರಾಣಿಕವಾಗಿ, ಶಿಲದ ಎಂಬ ಮುನಿಯು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ತನಗೆ ಎಂದಿಗೂ ನಶಿಸದ ಪುತ್ರನಿರಬೇಕೆಂಬ ಬಯಕೆಯನ್ನು ಶಿವನ ಮೂಲಕ ಗಳಿಸಿಕೊಳ್ಳುತ್ತಾನೆ. ಹಾಗೆ ಶಿವನ ವರಪ್ರಸಾದದಿಂದಲೆ ಹುಟ್ಟಿದ ನಂದಿ ಶಿವನಿಗೆ ಬಲು ಪ್ರಿಯ. ಅದರಂತೆ ನಂದಿಗೂ ಸಹ ಶಿವನ ಮೇಲೆ ಎಲ್ಲಿಲ್ಲದ ಪ್ರೀತಿ, ಗೌರವ ಹಾಗೂ ಆದರ.
ದೇಹದಿಂದ ಪ್ರತ್ಯೇಕವಿದ್ದರೂ ಮನಸ್ಸು ಸದಾ ಶಿವನಲ್ಲಿ ಕೇಂದ್ರಿಕೃತವಾಗಿರುತ್ತದೆ ಎನ್ನುವುದರ ಸೂಚಕವಾಗಿ ಶಿವನ ಮುಂದೆ ಸಾಮಾನ್ಯವಾಗಿ ನಂದಿ ವಿಗ್ರಹವಿರುತ್ತದೆ. ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿ ನೋಡಬಹುದಾದ ಕೆಲವು ಅದ್ಭುತ ನಂದಿ ಪ್ರತಿಮೆಗಳು ಎಲ್ಲೆಲ್ಲಿವೆ ಎಂಬುದರ ಕುರಿತು ತಿಳಿಯೋಣ.
ಚಾಮುಂಡೇಶ್ವರಿ ಬೆಟ್ಟ
ಮೈಸೂರು ನಗರದ ಬಳಿಯಿರುವ ಪ್ರಸಿದ್ಧ ಧಾರ್ಮಿಕ ತಾಣವಾದ ಚಾಮುಂಡೇಶ್ವರಿ ಬೆಟ್ಟವು ಮೈಸೂರು ನಗರವನ್ನು ರಕ್ಷಿಸುತ್ತಿರುವ ಚಾಮುಂಡಿ ಅಮ್ಮನವರ ಸನ್ನಿಧಿಯನ್ನು ಹೊತ್ತ ಅದ್ಭುತ ತಾಣ. ತಾಯಿಯ ದೇವಾಲಯದ ಬಳಿಯಲ್ಲೆ ಶಿವನ ವಾಹನವಾದ ನಂದಿ ವಿಗ್ರಹವು ಪ್ರವಾಸಿಗರ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ.
ಚಿತ್ರಕೃಪೆ: Ramesh NG
ತಂಜಾವೂರು
ತಮಿಳುನಾಡಿನ ತಂಜಾವೂರು ಜಿಲ್ಲೆಯ ತಂಜಾವೂರು ಪಟ್ಟಣವು ಭಾರತದಲ್ಲಿ ಕಂಡುಬರುವ ಅದ್ಭುತ ವಾಸ್ತುಶಿಲ್ಪದ ದೊಡ್ಡ ದೇವಾಲಯಗಳ ಪೈಕಿ ಬೃಹದೇಶ್ವರ ದೇವಾಲಯಕ್ಕೆ ಬಲು ಪ್ರಸಿದ್ಧಿ ಪಡೆದಿದೆ. ಸಾಕಷ್ಟು ವಿದೇಶಿ ಪ್ರವಾಸಿಗರನ್ನೂ ಸಹ ಆಕರ್ಷಿಸುವ ಶಿವನ ದೇವಾಲಯ ಸಂಕೀರ್ಣದಲ್ಲಿ ಶಿವನ ಮುಖ್ಯ ಸನ್ನಿಧಿಯ ಎದುರಿಗೆ ನಿಂತಿರುವ ನಂದಿಯ ಪ್ರತಿಮೆಯು ಬಹಳಷ್ಟು ಆಕರ್ಷಕವಾಗಿದೆ.
ಚಿತ್ರಕೃಪೆ: Hari Shankar05
ಅದ್ಭುತವಾಗಿ ಕಾಣುತ್ತದೆ
ಇದಕ್ಕೆಂದೆ ದೊಡ್ಡದಾದ ಕಟ್ಟೆಯೊಂದರ ಮೇಲೆ ಮಂಟಪವನ್ನು ನಿರ್ಮಿಸಲಾಗಿದ್ದು ಅದರೊಳಗೆ ನಂದಿಯು ವಿರಾಜಮಾನವಾಗಿದ್ದುದನ್ನು ಗಮನಿಸಬಹುದು. ದೇವಾಲಯವನ್ನು ಲೈಟುಗಳಿಂದ ಶೃಂಗರಿಸಿದಾಗ ಈ ನಂದಿ ಮಂಟಪವೂ ಸಹ ಗಮನಸೆಳೆಯುತ್ತದೆ.
ಚಿತ್ರಕೃಪೆ: KARTY JazZ
ಬೆಂಗಳೂರು
ಬೆಂಗಳೂರಿನ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳ ಪೈಕಿ ಬಸವನಗುಡಿ (ಬುಲ್ ಟೆಂಪಲ್) ಸಹ ಒಂದು. ಬಸವನ ಈ ಬೃಹತ್ ಪ್ರತಿಮೆಯಿಂದಾಗಿಯೆ ಈ ಪ್ರದೇಶ ಹೆಸರುವಾಸಿಯಾಗಿದ್ದು ಬಸವನಗುಡಿ ಬಡಾವಣೆಯಾಗಿಯೆ ಪ್ರಖ್ಯಾತವಾಗಿದೆ. ಇದು ನಂದಿಗೆಂದೆ ಮುಡಿಪಾದ ಅಪರೂಪದ ದೇವಾಲಯಗಳ ಪೈಕಿ ಒಂದಾಗಿದೆ. ಈ ಬಸವನ ಗೌರವಾರ್ಥವಾಗಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಕಡಲೆಕಾಯಿ ಪರಿಶೆ ಎಂಬ ಉತ್ಸವವೂ ನಡೆಯುತ್ತದೆ.
ಚಿತ್ರಕೃಪೆ: G41rn8
ಚಿಕ್ಕಬಳ್ಳಾಪುರ
ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟ ಬೆಂಗಳೂರು ಬಳಿಯಿರುವ ಅತಿ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು ಇಲ್ಲಿರುವ ಭೋಗ ನಂದೀಶ್ವರನ ದೇವಾಲಯದ ಬಳಿ ನಂದಿಗೆ ಮುಡಿಪಾದ ಸನ್ನಿಧಿಯಿರುವುದನ್ನೂ ಸಹ ಕಾಣಬಹುದು.
ಚಿತ್ರಕೃಪೆ: Akshatha Inamdar
ಹಾಸನ
ಹಾಸನ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾದ ಬೇಲೂರಿನ ಚೆನ್ನಕೇಶವನ ದೇವಾಲಯ ಸಂಕೀರ್ಣದಲ್ಲಿರುವ ಸುಂದರ ಬಸವನ ಪ್ರತಿಮೆ.
ಚಿತ್ರಕೃಪೆ: Princy123
ಮಧ್ಯ ಪ್ರದೇಶ
ಮಧ್ಯ ಪ್ರದೇಶ ರಾಜ್ಯದ ಖಜುರಾಹೊ ಅತ್ಯಾಕರ್ಷಕ ಪ್ರವಾಸಿ ತಾಣವಾಗಿದ್ದು ಹಲವಾರು ಪ್ರಾಚೀನ ದೇವಾಲಯಗಳ ಸಮೂಹವಾಗಿದೆ. ಮುಖ್ಯವಾಗಿ ಈ ಸಂಕೀರ್ಣದಲ್ಲಿ ಕಾಮ ಕಲೆಗೆ ಒತ್ತು ನೀಡಿರುವ ಶಿಲ್ಪಕಲೆಗಳನ್ನು ಕಾಣಬಹುದಾಗಿದ್ದು ನಂದಿಗೆ ಪ್ರತ್ಯೇಕವಾದ ದೇವಾಲಯವೂ ಸಹ ಇಲ್ಲಿದೆ.
ಚಿತ್ರಕೃಪೆ: Smita Patil
ಅದ್ಭುತ ಕೆತ್ತನೆ
ಆಕರ್ಷಕವಾಗಿ ಕೆತ್ತಲಾದ ದೇವಾಲಯದಲ್ಲಿ ನ್ಂದಿ ವಿಗ್ರಹವಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Arun.arunb
ಬಳ್ಳಾರಿ
ಬಳ್ಳಾರಿ ಜಿಲ್ಲೆಯ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಹಂಪಿಯು ಹಲವು ಅದ್ಭುತ ಶಿಲ್ಪಕಲೆಗಳ ಕೆತ್ತನೆಗೆ ಪ್ರಸಿದ್ಧವಾದ ತಾಣ. ಇಲ್ಲಿರುವ ರಚನೆಗಳ ಪೈಕಿ ನಂದಿ ವಿಗ್ರಹವೂ ಸಹ ಗಮನ ಸೆಳೆವ ಪ್ರತಿಮೆಯಾಗಿದೆ.
ಚಿತ್ರಕೃಪೆ: Drmmgir
ಹಳೆಬೀಡು
ಹಾಸನದ ಬೇಲೂರು-ಹಳೆಬೀಡುಗಳ ಪೈಕಿ ಹಳೆಬೀಡುವಿನಲ್ಲಿರುವ ಹೊಯ್ಸಳೇಶ್ವರ ದೇವಾಲಯದಲ್ಲಿ ನಂದಿಯ ಈ ಆಕರ್ಷಕ ಹೊಳಪಿನ ಕಪ್ಪು ಶಿಲೆಯಲ್ಲಿ ಆಕರ್ಷಕವಾಗಿ ಕೆತ್ತಲಾದ ನಂದಿ ವಿಗ್ರಹವನ್ನು ಕಾಣಬಹುದಾಗಿದೆ.
ಚಿತ್ರಕೃಪೆ: S.subramaniyan111181
ಲೇಪಾಕ್ಷಿ
ಆಂಧ್ರದ ನಂತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿ ಒಂದಿ ಐತಿಹಾಸಿಕ ಮಹತ್ವವಿರುವ ಕ್ಷೇತ್ರ. ಪ್ರವಾಸೋದ್ಯಮಕ್ಕೆ ಇಂಬು ನೀಡುವ ದೃಷ್ಟಿಯಿಂದ ಸರ್ಕಾರವು ಪ್ರತಿ ವರ್ಷ ಲೇಪಾಕ್ಷಿ ಉತ್ಸವನ್ನೂ ಸಹ ಆಯೋಜಿಸುತ್ತದೆ. ಇಲ್ಲಿರುವ ನಂದಿ ಪ್ರತಿಮೆಯು ಸಹ ಸಾಕಷ್ಟು ದೊಡ್ಡದಾಗಿದ್ದು ಭಾರತದಲ್ಲಿ ಕಂಡುಬರುವ ಅತಿ ದೊಡ್ಡ ಗಾತ್ರದ ನಂದಿ ಪ್ರತಿಮೆಗಳ ಪೈಕಿ ಒಂದಾಗಿ ಪರಿಗಣಿಸಲ್ಪಡುತ್ತದೆ.
ಚಿತ್ರಕೃಪೆ: Bikashrd
ಹೇಗೆ ನಿಂತಿದೆ?
ಲೇಪಾಕ್ಷಿ ಪೌರಾಣಿಕ ದೇಗುಲ ರಚನೆಗಳಿಗೆ ಪ್ರಸಿದ್ಧವಾಗಿದ್ದು ಶಿವ, ವಿಷ್ಣು ಹಾಗೂ ವೀರಭದ್ರನ ದೇವಾಲಯಗಳನ್ನು ಮುಖ್ಯವಾಗಿ ಕಾಣಬಹುದು. ಇಲ್ಲಿರುವ ಕುರ್ಮ ಶೈಲ ಎಂಬ ಪುಟ್ಟ ಗುಡ್ಡದ ಮೇಲೆ ಶಿವನ ದೇವಾಲಯಕ್ಕೆ ಸರಿಯಾಗಿ ಎದುರಾಗಿರುವಂತೆ ಈ ಭವ್ಯ ನಂದಿಯ ವಿಗ್ರಹವನ್ನು ಒಂದೆ ಶಿಲೆಯಲ್ಲಿ ಅದ್ಭುತವಾಗಿ ಕೆತ್ತಲಾಗಿದೆ.
ಚಿತ್ರಕೃಪೆ: In2ute
ನಂದ್ಯಾಲ
ಆಂಧ್ರದ ಕರ್ನೂಲ್ ಜಿಲ್ಲೆಯ ನಲ್ಲಮಲ್ಲ ಬೆಟ್ಟಗಳ ವ್ಯಾಪ್ತಿಯಲ್ಲಿರುವ ನಂದ್ಯಾಲ ಎಂಬಲ್ಲಿ ಪ್ರಾಚೀನ ಮಹಾನಂದೀಶ್ವರ ಸ್ವಾಮಿಯ ದೇವಾಲಯವಿದೆ. ಶಿವನಿಗೆ ಮುಡಿಪಾದ ಈ ದೇವಾಲಯವು ಸಾಕಷ್ಟು ಹೆಸರುವಾಸಿಯಾಗಿದ್ದು ಇಲ್ಲಿ ನಂದಿಯ ಒಂದು ಬೃಹತ್ ಪ್ರತಿಮೆಯನ್ನೂ ಸಹ ಕಾಣಬಹುದು.
ಚಿತ್ರಕೃಪೆ: Sai Sreekanth
ಎರ್ನಾಕುಲಂ
ಕೇರಳರಾಜ್ಯದ ಎರ್ನಾಕುಲಂ ಜಿಲ್ಲೆಯಲ್ಲಿರುವ ಪೆರುಂಬವೂರು ಶಿವನ ದೇವಾಲಯಕ್ಕಾಗಿ ಹೆಸರುವಾಸಿ. ಈ ಶಿವನ ದೇವಾಲಯದ ಎದುರಲ್ಲಿಯೆ ಭವ್ಯ ನಂದಿ ವಿಗ್ರಹವಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Dvellakat
ಅರಿಯಲೂರು
ತಮಿಳುನಾಡು ರಾಜ್ಯದ ಅರಿಯಲೂರು ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಪಟ್ಟಣವಾದ ಗಂಗೈಕೊಂಡ ಚೋಳಪುರಂನ ಬ್ರಿಹದೇಶ್ವರ ಶಿವನ ದೇವಾಲಯದೆದುರು ಕುಳಿತಿರುವ ನಂದಿ ಪ್ರತಿಮೆ.
ಚಿತ್ರಕೃಪೆ: Mumbailensman
ಕೊಯಮತ್ತೂರು
ತಮಿಳುನಾಡಿನ ಕೊಯಮತ್ತೂರು ನಗರದಿಂದ ಮೂವತ್ತು ಕಿ.ಮೀ ಗಳಷ್ಟು ದೂರದಲ್ಲಿರುವ ಧ್ಯಾನಮಂದಿರ ಅವರಣದಲ್ಲಿರುವ ಅದ್ಭುತ ನಂದಿ ವಿಗ್ರಹ. ಇದು ತನ್ನ ವಿಶಿಷ್ಟವಾದ ನಿರ್ಮಾಣದಿಂದ ಗಮನಸೆಳೆಯುತ್ತದೆ.
ಚಿತ್ರಕೃಪೆ: Balajijagadesh
ಪಟ್ಟದಕಲ್ಲು
ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾದ ಪಟದಕಲ್ಲುವಿನಲ್ಲಿರುವ ವಿರೂಪಾಕ್ಷನ ದೇವಸ್ಥಾನದ ಸನ್ನಿಧಿಯಲ್ಲಿರುವ ಆಕರ್ಷಕ ನಂದಿ ವಿಗ್ರಹ.
ಚಿತ್ರಕೃಪೆ: Ram Nagesh Thota
ಮದುರೈ
ತಮಿಳುನಾಡಿನ ಮದುರೈ ಪಟ್ಟಣ ತನ್ನಲ್ಲಿರುವ ಮೀನಾಕ್ಷ ಅಮ್ಮನವರ ದೇವಾಲಯಕ್ಕೆ ಬಹಳ ಪ್ರಸಿದ್ಧವಾಗಿದೆ. ಅಮ್ಮನವರ ದೇವಾಲಯದ ಎದುರಿನಲ್ಲಿರುವ ಬಣ್ಣದ ನಂದಿ ವಿಗ್ರಹ.
ಚಿತ್ರಕೃಪೆ: Rkseevagan
ಬೆಂಗಳೂರು-ಚೆನ್ನೈ
ಬೆಂಗಳೂರು-ಚೆನ್ನೈ ರಸ್ತೆ ಮಾರ್ಗ ಬಳಸಿ ಚೆನ್ನೈನಿಂದ ಕಾಂಚೀಪುರಂಗೆ ಹೋಗುವ ಮಾರ್ಗದಲ್ಲಿ ಎಲ್ ಆಂಡ್ ಟಿ ಫ್ಯಾಕ್ಟರಿಯ ಬಳಿಯಿರುವ ಮುಖ್ಯ ಆರ್ಚ್ ದಾಟಿದ ಬಳಿಕ ಎಡ ಬದಿಯಲ್ಲಿ ಕಂಡುಬರುವ ಅದ್ಭಿ=ಉತ ಸ್ಮಾರಕ ಇದಾಗಿದ್ದು ಇಲ್ಲಿ ಎತ್ತರದ ಶಿವನ ಮೂರ್ತಿ ಹಾಗೂ ಅದಕ್ಕೆ ಎದುರು ಬದಿಯಲ್ಲಿ ಬೃಹತ್ತಾದ ನಂದಿ ಪ್ರತಿಮೆಯನ್ನು ಕಾಣಬಹುದು.
ಚಿತ್ರಕೃಪೆ: Destination8infinity