ಇಂದಿನ ಜಗತ್ತಿನಲ್ಲಿರುವ ಎಲ್ಲ ಸ್ಥಳಗಳಲ್ಲಿ ಮನುಷ್ಯನ ವಾಸವಿದೆ ಎಂದು ಹೇಳಲು ಸಾಧ್ಯವೆ ಇಲ್ಲ. ಅದೆಷ್ಟೊ ರಹಸ್ಯಮಯ ಸ್ಥಳಗಳು ಇನ್ನೂ ಆ ಭೂತಾಯಿಯ ಒಡಲಿನಲ್ಲಿ ಹುದುಗಿವೆ. ಹಲವು ಪ್ರವರ್ಧಮಾನಕ್ಕೆ ಬಂದಿರಬಹುದಾದರೂ ಇನ್ನೆಷ್ಟೊ ಹಾಗೆ ಉಳಿದುಕೊಂಡಿರಬಹುದು.
ಹೀಗೆ ಅನ್ವೇಷಿಸಲಾದ ಕೆಲವು ಸ್ಥಳಗಳು ಇಂದಿಗೂ ಒಂದು ರೀತಿಯ ರಹಸ್ಯಮಯ ತಾಣಗಳಾಗಿಯೆ ಉಳಿದು ಬಿಟ್ಟಿವೆ. ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ನಿರ್ದಿಷ್ಟ ಸಮಯದಲ್ಲಿ ಇಂತಹ ಸ್ಥಳಗಳಿಗೆ ಭೇಟಿ ನೀಡುತ್ತಾರೆ, ಅದೂ ಸಹ ಚಾರಣದ ಮೂಲಕವೆ ಅನ್ನುವುದು ವಿಶೇಷ. ಅಂತಹ ಕೌತುಕಮಯ ಸ್ಥಳಗಳು ಭಾರತದಲ್ಲೂ ಸಹ ಹಲವು ಕಡೆಗಳಲ್ಲಿರುವುದನ್ನು ಕಾಣಬಹುದು.
ಹರಿಶ್ಚಂದ್ರಘಾಢ ಬಗ್ಗೆ ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಸ್ತುತ ಲೇಖನದಲ್ಲಿ ಅಂಥದ್ದೆ ಒಂದು ಸ್ಥಳದ ಕುರಿತು ವಿವರಿಸಲಾಗಿದೆ. ಸಾಕಷ್ಟು ವಿಚಿತ್ರ ಭಾವನೆ ಮೂಡಿಸುವ, ಒಂದು ರೀತಿಯ ನಿಗೂಢ ಹಾಗೂ ಇನ್ನೂ ಏನೆನೊ ರಹಸ್ಯಗಳನ್ನು ಇಟ್ಟುಕೊಂಡಿರಬಹುದೆಂಬಂತ ಭಾವನೆ ಕೆರಳಿಸುವ ತಾಣ ಇದಾಗಿದ್ದು ಉತ್ಸಾಹಿ ಚಾರಣಿಗ ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತದೆ.
ತಿಳಿದಿಲ್ಲ
ಈ ಸ್ಥಳವು ದಕ್ಷಿಣ ಭಾರತದಲ್ಲಿರುವ ಕೆಲವು ಚಾರಣಿಗರನ್ನು ಹೊರತುಪಡಿಸಿದರೆ ಬಹುತೇಕರಿಗೆ ಈ ಸ್ಥಳದ ಕುರಿತು ಅಷ್ಟೊಂದಾಗಿ ತಿಳಿದಿಲ್ಲ. ಆದರೆ ಒಂದೊಮ್ಮೆ ಈ ಸ್ಥಳದ ಕುರಿತು ಗೊತ್ತಾದರೆ ಸಾಕು ಇದನ್ನೊಮ್ಮೆ ನೋಡದ ಹೊರತು ನಿಮಗೆ ಸಮಾಧಾನವಾಗುವುದು ಕಷ್ಟ. ಏಕೆಂದರೆ ಈ ಸ್ಥಳದ ಪರಿಸರವೆ ಹಾಗಿದೆ.
ಮಾತ್ರ
ಚಾರಣದ ಮೂಲಕ ಮಾತ್ರವೆ ಈ ಸ್ಥಳವನ್ನು ತಲುಪಬಹುದಾಗಿದ್ದು ಆ ಚಾರಣ ಮಾರ್ಗವು ಅತ್ಯದ್ಭುತ ರೋಮಾಂಚಕ ಕ್ಷಣಗಳನ್ನು ನೀಡುವಂತಹ ಸಾಮರ್ಥ್ಯ ಹೊಂದಿದೆ. ಅಲ್ಲದೆ ಇಲ್ಲಿರುವ ವಿಶಾಲ ಕಾಯದ ಬೆಟ್ಟ ಪರ್ವತಗಳು, ಕಣಿವೆ-ಪ್ರಪಾತಗಳು, ದಟ್ಟ ಕಾಡುಗಳು ನಿಮ್ಮನ್ನು ಒಂದು ಮಾಯಾ ಲೋಕಕ್ಕೆ ಕರೆದೊಯ್ಯುವಂತಿವೆ.
ಮಾಡಲೇಬೇಕು
ನಿಜ ಹೇಳಬೇಕೆಂದರೆ ಇದರ ಕುರಿತು ತಿಳಿಯುವ ಪ್ರತಿಯೊಬ್ಬ ಚಾರಣಿಗನ ಕನಸಿನ ಚಾರಣ ಇದೆಂದು ಹೇಳಿದರೂ ತಪ್ಪಿಲ್ಲ. ಅಲ್ಲದೆ ಈ ಸ್ಥಳವು ಪೌರಾಣಿಕತೆಯಿಂದ ಹಿಡಿದು ರಾಜರುಗಳ ಕಾಲದಲ್ಲಿ ನಿರ್ಮಿಸಲಾಗುವ ಕೋಟೆಯಿಂದಾಗಿಯೂ ಪ್ರಸಿದ್ಧವಾಗಿದೆ. ಅಲ್ಲಿರುವ ಅದೆಷ್ಟೊ ರಚನೆಗಳು ಹಾಗೂ ಅವುಗಳಿಗೆ ಸಂಬಂಧಿಸಿದಂತೆ ಕಥೆಗಳು ಪುರಾಣಾದಿಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ.
ಮಹಾರಾಷ್ಟ್ರ
ಇನ್ನೂ ವಿಶೇಷವೆಂದರೆ ಬೆಟ್ಟ ಕೋಟೆ ಹೊಂದಿರುವ ಈ ತಾಣವು ಇರುವುದೂ ಸಹ ಬೆಟ್ಟ ಕೋಟೆಗಳಿಗೆ ರಾಜಧಾನಿಯಂತಿರುವ ಮಹಾರಾಷ್ಟ್ರ ರಾಜ್ಯದಲ್ಲಿ. ಚಾರಣಿಗರ ಸ್ವರ್ಗವೆನಿಸಿರುವ ಮಹಾರಾಷ್ಟ್ರ ರಾಜ್ಯದ ಕೊಂಕಣ ಭಾಗದಲ್ಲಿ ಬರುವ ಈ ಸ್ಥಳ ಅಲೌಕಿಕ ಅನುಭೂತಿ ನೀಡುವ ಆಕರ್ಷಕ ಸ್ಥಳವಾಗಿದೆ.
ಪುರಾಣಗಳಲ್ಲಿ ಉಲ್ಲೇಖ
ಈ ಸ್ಥಳದ ಹೆಸರೆ ಹರಿಶ್ಚಂದ್ರಗಡ್. ಸ್ಕಂದ ಪುರಾಣ ಹಾಗೂ ಮತ್ಸ್ಯ ಪುರಾಣಗಳಲ್ಲಿ ಈ ಅದ್ಭುತ ಸ್ಥಳದ ಕುರಿತು ಉಲ್ಲೇಖಿಸಿರುವುದನ್ನು ಗಮನಿಸಬಹುದು. ಐದು ಅಥವಾ ಆರನೇಯ ಶತಮಾನದ ಕಾಲಚೂರರ ಸಾಮ್ರಾಜ್ಯವು ಇಲ್ಲಿತ್ತೆಂದು ತಿಳಿದು ಬರುತ್ತದೆ.
ಕಾಲಚೂರಿಗಳು
ನಂತರ ಹಲವಾರು ಸಾಮ್ರಾಜ್ಯಗಳು ಈ ಪ್ರದೇಶದಲ್ಲಿದ್ದವು ಹಾಗೂ ಇಲ್ಲಿರುವ ಕೋಟೆ ಭಾರತದ ಮಧ್ಯಕಾಲದ ಯುಗದಲ್ಲಿ ನಿರ್ಮಾಣಗೊಂಡ ರಚನೆಯಾಗಿದೆ ಎಂದು ತಿಳಿದುಬರುತ್ತದೆ. ಪುರಾತನ ಕಲ್ಯಾಣಿಗಳು, ಭಯ ಮಿಶ್ರಿತ ಭಾವನೆ ಮೂಡಿಸುವಂತಹ ವಾತಾವರಣ, ಪ್ರಾಚೀನ ದೇಗುಲಗಳು, ಹೆದರುವಂತೆ ಮಾಡುವ ಗಾಳಿಯ ಸದ್ದು ಈ ಸ್ಥಳವನ್ನು ಅನ್ವೇಷಿಸಲು ಕುತೂಹಲ ಕೆರಳಿಸುತ್ತದೆ.
ಕಾಣುತ್ತವೆ
ತಾರಾಮತಿ, ರೋಹಿದಾಸ ಹಾಗೂ ಕೊಂಕಣ ಕಡಾ ಎಂಬ ಶಿಖರಗಳ ಸಾಮಿಪ್ಯತೆ, ಇಲ್ಲಿ ಕೆತ್ತಲಾಗಿರುವ ಗುಹೆಗಳು ಹಾಗೂ ಅದರಲ್ಲಿ ಪ್ರತಿಷ್ಠಾಪಿತವಾಗಿರುವ ವಿಷ್ಣು, ಗಣಪತಿ ಹಾಗೂ ಶಿವ ದೇವರುಗಳ ವಿಗ್ರಹಗಳು, ಶಿವಲಿಂಗಗಳು ಕಾಲಚಕ್ರದಲ್ಲಿ ಹುದುಗಿ ಹೋದ ಅನೇಕ ಕಥೆಗಳನ್ನು ಸಾರಿ ಸಾರಿ ಹೇಳುತ್ತಿರುವಂತಿವೆ.
ಮುನಿಗಳು
ಚಾಂಗ್ ದೇವ್ ಎಂಬ ಮುನಿಗಳು ಹದಿನಾಲ್ಕನೇಯ ಶತಮಾನದಲ್ಲಿ ಈ ಸ್ಥಳದಲ್ಲಿ ವಾಸಿಸುತ್ತಿದ್ದರೆಂದು ಹೇಳಲಾಗುತ್ತದೆ. ಅಲ್ಲದೆ ಇಲ್ಲಿರುವ ನಾಗೇಶ್ವರ, ಕೇದಾರೇಶ್ವರ ಹಾಗೂ ಹರಿಶ್ಚಂದ್ರೇಶ್ವರ ದೇವಾಲಯದಲ್ಲಿರುವ ಅನುಪಮವಾದ ಕೆತ್ತನೆಗಳು ವಿಶಿಷ್ಟವಾಗಿ ಕಂಡುಬರುತ್ತವೆ.
ರೋಚಕ ಸ್ಥಳಗಳು
ಹರಿಶ್ಚಂದ್ರಗಡ್ ಮೂಲತಃ ಕೋಟೆ ತಾಣವಾಗಿದ್ದು ಚಾರಣಿಗರು ಸಾಮಾನ್ಯವಾಗಿ ಇಲ್ಲಿಗೆ ಚಾರಣ ಮಾಡುತ್ತ ಬರುತ್ತಾರೆ. ಒಂದೊಮ್ಮೆ ಈ ಕೋಟೆಯನ್ನು ತಲುಪಿದರೆ ಸಾಕು ಅಲ್ಲಿಂದ ವಿವಿಧ ಆಕರ್ಷಕ ಪೌರಾಣಿಕ ಹಿನ್ನೆಲೆಯ ಸ್ಥಳಗಳು ಒಂದೊಂದಾಗಿಯೆ ನಿಮ್ಮನ್ನು ಬರಮಾಡಿಕೊಳ್ಳಲು ಪ್ರಾರಂಭಿಸುತ್ತವೆ.
ಸಪ್ತತೀರ್ಥ
ಇದರ ಪೂರ್ವಕ್ಕೆ ಅದ್ಭುತವಾಗಿ ನಿರ್ಮಿಸಲಾದ ಕಲ್ಯಾಣಿಯೊಂದಿದೆ. ಅದನ್ನು ಸಪ್ತತೀರ್ಥ ಎಂದು ಕರೆಯುತ್ತಾರೆ. ದಶಕದ ಹಿಂದೆ ಇಲ್ಲಿನ ನೀರು ಸೇವಿಸಲು ಯೋಗ್ಯವಾಗಿತ್ತು. ಆದರೆ ಈ ಮಧ್ಯದಲ್ಲಿ ಇಲ್ಲಿಗೆ ಭೇಟಿ ನೀಡಿರುವ ಹಲವಾರು ಬೇಜವಾಬ್ದಾರಿ ಪ್ರವಾಸಿಗರ ಕೃತ್ಯಗಳಿಂದಾಗಿ ಈಗ ನೀರು ಸಾಕಷ್ಟು ಮಲೀನಗೊಂಡಿದೆ. ಸೇವಿಸುವುದು ಹಾಗಿರಲಿ ಈಜಲೂ ಸಹ ಯೋಗ್ಯವಾಗಿಲ್ಲದಂತಾಗಿದೆ.
ಬೇಸಿಗೆಯಲ್ಲೂ ಸಹ!
ಈ ಕಲ್ಯಾಣಿಯು ನಿಜ್ಜಕ್ಕೂ ಒಂದು ವಿಸ್ಮಯವೆ ಸರಿ. ಏಕೆಂದರೆ ಇಲ್ಲಿನ ನೀರು ಎಷ್ಟೊಂದು ತಂಪಾಗಿದೆ ಎಂದರೆ ಇದರ ಮುಂದೆ ಬೇಸಿಗೆಯಲ್ಲೂ ಸಹ ನಿಂತರೆ ಮಂಜುಗಡ್ಡೆಯ ಮುಂದೆ ನಿಂತ ಹಾಗೆ ಅನುಭವವಾಗುತ್ತದಂತೆ! ಹಾಗಾಗಿ ಈ ಕಲ್ಯಾಣಿಯಲ್ಲಿ ಇನ್ನು ಮುಂದಾದರೂ ಪ್ರವಾಸಿಗರು ಯಾವುದೆ ರೀತಿಯ ಕಸ ಕಲ್ಮಶಗಳನ್ನು ಹಾಕದೆ ಸಂರಕ್ಷಿಸಿದರೆ ಬಲು ಉತ್ತಮ.
ಕೇದಾರೇಶ್ವರ ಗುಹೆ
ಶಿವನಿಗೆ ಮುಡಿಪಾದ ಹರಿಶ್ಚಂದ್ರೇಶ್ವರ ದೇವಾಲಯ ಇಲ್ಲಿ ಭೇಟಿ ನೀಡಬಹುದಾದ ಮತ್ತೊಂದು ಸ್ಥಳವಾಗಿದ್ದು ಇಲ್ಲಿ ಕೇದಾರೇಶ್ವರ ಗುಹೆಯನ್ನು ಕಾಣಬಹುದು. ಇಲ್ಲಿರುವ ಶಿವಲಿಂಗವೊಂದು ನಿಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತದೆ. ನಾಲ್ಕು ಕಂಬಗಳ ಮಧ್ಯದಲ್ಲಿ ಬುಡದಿಂದ ಐದು ಅಡಿಗಳಷ್ಟು ಎತ್ತರ ಹೊಂದಿರುವ ಈ ಶಿವಲಿಂಗವು ಸದಾ ನೀರಿನಿಂದ ಆವೃತವಾಗಿರುತ್ತದೆ.
ನಾಲ್ಕು ಯುಗಗಳು
ಇದಕ್ಕೆ ಸಂಬಂಧಿಸಿದಂತೆ ನಂಬಿಕೆಯೊಂದು ಚಾಲ್ತಿಯಲ್ಲಿದೆ. ಅದೆನೆಂದರೆ ಪ್ರಸ್ತುತ ಶಿವಲಿಂಗದ ಸುತ್ತಲಿರುವ ನಾಲ್ಕು ಕಂಬಗಳು ನಾಲ್ಕು ಯುಗಗಳನ್ನು ಪ್ರತಿನಿಧಿಸುತ್ತವೆಂದೂ ಅದರಲ್ಲೀಗಾಗಲೆ ಮೂರು ಕಂಬಗಳು ನಶಿಸಿರುವುದನ್ನು ಕಾಣಬಹುದು. ಇನ್ನುಳಿದಂತೆ ಒಂದು ಕಂಬವು ಮಾತ್ರ ಸುಸ್ಥಿತಿಯಲ್ಲಿದ್ದು ಅದು ಯಾವಾಗ ಕುಸಿಯುತ್ತದೊ ಅಂದು ಕಲಿಯುಗದ ಅಂತ್ಯವೆಂದು ಹೇಳಲಾಗುತ್ತದೆ.
ಚಿತ್ರಕೃಪೆ: rohit gowaikar
ಅದ್ಭುತ ಶೃಂಗ
ಪಶ್ಚಿಮಕ್ಕೆ ಮುಖ ಮಾಡಿರುವ ಕೊಂಕಣ ಕಡಾ ಶಿಖರ ಶೃಂಗವು ಅತ್ಯದ್ಭುತ ನೋಟವನ್ನು ಒದಗಿಸುವ ತಾಣವಾಗಿದ್ದು ಮೈಮನವೆಲ್ಲ ರೋಮಾಂಚನಗೊಳ್ಳುವಂತೆ ಮಾಡುತ್ತದೆ. ಇಲ್ಲಿ ಒಂದು ನೈಸರ್ಗಿಕ ಚಮತ್ಕಾರವನ್ನು ನೋಡಬಹುದು. ಅದೆಂದರೆ ಮೇಘ ಸ್ಫೋಟ. ಮೋಡಗಳು ಈ ಶಿಖರ ಶೃಂಗದ ಮಧ್ಯದ ಆಳವಾದ ಭಾಗದಲ್ಲಿ ಹಾದು ಹೋಗುವಾಗ ತಳಕ್ಕೆ ಆಕರ್ಷಿಸಲ್ಪಟ್ಟು ತಕ್ಷಣವೆ ಮೇಲಕ್ಕೆಸೆಯಲ್ಪಡುತ್ತವೆ. ಇದರಿಂದ ಒಂದು ಗೋಡೆಯು ಆಕಾಶದಲ್ಲಿ ಹುಟ್ಟಿದೆಯೇನೊ ಅನ್ನುವಂತಿರುತ್ತದೆ. ನಾಣ್ಯವನ್ನು ಎಸೆದರೆ ಅದು ಕೆಳಕ್ಕೆ ಬೀಳದೆ ಮೇಲ್ಮುಖವಾಗಿ ಚಲಿಸುವುದನ್ನು ನೋಡಬಹುದು.
ಅಹ್ಮದ್ನಗರ್ ಸುತ್ತಮುತ್ತಲಿನ ಆಕರ್ಷಣೆಗಳು
ತಲುಪುವ ಬಗೆ
ಹರಿಶ್ಚಂದ್ರಗಡ್, ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿದ್ದು ಪುಣೆ ಹಾಗೂ ಥಾಣೆಗಳ ಗಡಿಗಳಿಗೆ ಹತ್ತಿರದಲ್ಲಿದೆ. ಥಾಣೆಯಿಂದ ಹೋಗಲು ಬಯಸಿದ್ದರೆ ಮೊದಲು ಕಲ್ಯಾಣದಿಂದ ನಾಗರಕ್ಕೆ ಹೋಗುವ ಬಸ್ಸನ್ನು ಹಿಡಿದು ಖುಬಿ ಪಟಾ ಎಂಬಲ್ಲಿಳಿದು ಅಲ್ಲಿಂದ ಖಿರೇಶ್ವರ ಎಂಬ ಗ್ರಾಮಕ್ಕೆ ಬಸ್ಸು ಅಥವಾ ಬಡಿಗೆ ಕಾರಿನ ಮೂಲಕ ತೆರಳಬೇಕು. ಇಲ್ಲಿಂದ ಏಳು ಕಿ.ಮೀ ದೂರದಲ್ಲಿ ಬೆಟ್ಟಕೋಟೆಯ ಬುಡತಲುಪಬಹುದು.
ಪುಣೆಯಿಂದಾದದರೆ ಪ್ರತಿ ದಿನ ಪುಣೆಯ ಶಿವಾಜಿನಗರ ಎಸ್ ಟಿ ನಿಲ್ದಾಣದಿಂದ ಖಿರೇಶ್ವರ ಗ್ರಾಮಕ್ಕೆ ಬಸ್ಸುಗಳು ಲಭ್ಯವಿರುತ್ತವೆ. ತಂಗಲು ಯವುದೆ ವಸತಿಗೃಹಗಳಿಲ್ಲ. ಚಾರಣದ ಸಂದರ್ಭದಲ್ಲಿ ಕೆಲವು ಸ್ಥಳಗಳಿದ್ದು ಅಲ್ಲಿ ತಂಗಬಹುದು. ಈ ಕುರಿತು ಮೊದಲೆ ವಿಚಾರಿಸಿ ಹೊರಡುವುದು ಉತ್ತಮ. ಸ್ಥಳೀಯ ಹಳ್ಳಿಗರು ಮಿತವ್ಯಯ ದರಕ್ಕೆ ಆಹಾರವನ್ನು ಚಾರಣದ ಸಂದರ್ಭದಲ್ಲಿ ಒದಗಿಸುತ್ತಾರೆ. ಆದರೆ ಮಳೆಗಾಲದಲ್ಲಿ ಇದು ಸಾಧ್ಯವಾಗುವುದಿಲ್ಲ. ಮಳೆಗಾಲದ ನಂತರದ ಸಮಯವು ಇಲ್ಲಿಗೆ ಭೆಟಿ ನೀಡಲು ಪ್ರಶಸ್ತ.
ಚಿತ್ರಕೃಪೆ: Ssriram mt