ಇದೊಂದು ಸಾಕಷ್ಟು ಪಾವಿತ್ರ್ಯತೆ ಪಡೆದಿರುವ ಗಿರಿ ಪರ್ವತ. ಇದರ ಬುಡದಲ್ಲಿ ವಾಸಿಸುವವರಿಗೆ ಜೀವನದಲ್ಲಿ ಸಾಕಷ್ಟು ಅನುಕೂಲತೆಗಳು ಉಂಟಾಗಿ ಕ್ರಮೇಣ ಅವರು ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ಅದ್ಭುತ ಕಥೆಯೊಂದಿದೆ. ಅದರ ಪ್ರಕಾರವಾಗಿ...
ಚಿತ್ರಕೃಪೆ: Biswarup Ganguly
ಹಿಂದೆ ಸೃಷ್ಟಿ ರಚನೆಯಾದ ಸಂದರ್ಭದಲ್ಲಿ ಬ್ರಹ್ಮನು ಪ್ರತಿಯೊಬ್ಬ ದೇವತೆಯರಿಗೂ ಒಂದೊಂದು ಜವಾಬ್ದಾರಿಯ ಕೆಲಸವಹಿಸಿದ್ದ. ಪ್ರಾಕೃತಿಕ ಸಂದರ್ಭ ಹಾಗೂ ಸ್ಥಿತಿ-ಗತಿಗಳಿಗನುಗುಣವಾಗಿ ಅವರು ತಮ್ಮ ತಮ್ಮ ಕೆಲಸಗಳನ್ನು ಮಾಡಬೇಕಾಗಿತ್ತು. ಅದರಂತೆ ವಾಯು ದೇವ ಬೇಕಾದ ಗಾಳಿಯನ್ನೂ, ವರುಣ ದೇವ ಬೇಕಾದ ಮಳೆಯನ್ನು ಪ್ರಧಾನಿಸುವ ಜವಾಬ್ದಾರಿಗಳಿದ್ದವು.
ಈ ಎಲ್ಲ ದೇವತೆಗಳಿಗೆ ನಾಯಕನಾಗಿಯೂ, ಸಕಲ ಕೆಲಸ-ಕಾರ್ಯಗಳು ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳುವ ನಾಯಕನಾಗಿಯೂ ಇಂದ್ರದೇವನಿದ್ದ. ಹೀಗಿರುವ ಸಂದರ್ಭದಲ್ಲಿ ರೈತಜನರು ತಾವು ಕಷ್ಟಪಟ್ಟು ದುಡಿದು ಬೆಳೆದ ಬೆಳೆಯನ್ನು ಮೊದಲಿಗೆ ಇಂದ್ರಾದಿ ದೇವತೆಗಳಿಗೆ ಅರ್ಪಿಸಿ ನಂತರ ತಾವು ಪಡೆಯ ಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸ್ಥಿತಿ ಕೃಷ್ಣನ ಜನ್ಮ ಸ್ಥಳದಲ್ಲಿಯೂ ಚಾಲ್ತಿಯಲ್ಲಿತ್ತು.
ಪ್ರಸ್ತುತ ಗೋವರ್ಧನಗಿರಿ ಚಿತ್ರಕೃಪೆ: Atarax42
ಒಂದೊಮ್ಮೆ ಕೃಷ್ಣನ ತಂದೆ ನಂದನು ಇಂದ್ರಾದಿ ದೇವತೆಗಳಿಗೆ ನೈವೇದ್ಯಗಳನ್ನು ಅರ್ಪಿಸುವಂತಹ ವಾರ್ಷಿಕ ಉತ್ಸವದ ತಯಾರಿಯಲ್ಲಿ ತೊಡಗಿದ್ದುದನ್ನು ಗಮನಿಸಿದ ಹಾಗೂ ಅದರ ಕುರಿತು ತಂದೆಯನ್ನು ಕೇಳಿದ. ಅದಕ್ಕೆ ತಂದೆಯು ದೇವತೆಗಳ ಸಹಾಯದಿಂದಾಗಿ ಪ್ರಕೃತಿಯಲ್ಲಿ ಯಾವ ಅವಗಢಗಳು ಸಂಭವಿಸದೆ ಇರುವುದರಿಂದ ಈ ರೀತಿಯ ಅರ್ಪಣಾ ಉತ್ಸವವನ್ನು ಮಾಡುಬೇಕಾದುದರ ಬಗ್ಗೆ ವಿವರಿಸಿದ.
ಇದನ್ನು ಒಪ್ಪಿಕೊಳ್ಳದ ಕೃಷ್ಣನು ಸಕಲ ಗ್ರಾಮಸ್ಥರನ್ನುದ್ದೇಶಿಸಿ, ಮನುಷ್ಯ ಕೇವಲ ಧರ್ಮ ಮಾರ್ಗದಲ್ಲಿ ನಡೆದು ತನ್ನ ದುಡಿಮೆಯನ್ನು ಮಾಡಬೇಕು. ಅದರಿಂದ ಬರುವ ಫಲಕ್ಕೆ ಆತ ಮಾತ್ರನೆ ವಾರಸುದಾರ. ಯಾವ ದೇವಾಧಿದೇವತೆಗಳಿಗೂ ಕಾಣಿಕೆ ನೀಡುವ ಅಗತ್ಯವಿಲ್ಲ ಎಂಬುದರ ಕುರಿತು ಎಲ್ಲರಿಗೂ ಸ್ಪಷ್ಟವಾಗಿ ತಿಳಿಯುವಂತೆ ಉಪದೇಶಿಸಿದ. ಎಲ್ಲರೂ ಅದಕ್ಕೆ ಒಪ್ಪಿ ಅಂದು ನೈವೇದ್ಯ ದಿನವನ್ನು ಆಚರಿಸಲಿಲ್ಲ.
ಚಿತ್ರಕೃಪೆ: GourangaUK
ಈ ವಿಷಯ ತಿಳಿದ ಅಹಂಕಾರಿ ಇಂದ್ರನು ಕೃಷ್ಣನಾರೆಂದು ಅರಿಯದೆ ತನ್ನ ಶಕ್ತಿಯನ್ನು ಉಪಯೋಗಿಸಿ ಕೃಷ್ಣನಿರುವ ಗ್ರಾಮದಲ್ಲಿ ಅತಿ ಜೋರಾದ ಗಾಳಿ ಹಾಗೂ ಮಳೆಯನ್ನುಂಟು ಮಾಡಿದ. ಹೀಗೆ ಅಬ್ಬರಿಸಿದ ಬಿರುಗಾಳಿ ಹಾಗೂ ಭಯಂಕರ ಮಳೆ ಗ್ರಾಮದ ಜನರ ಸುರೆಲ್ಲವನ್ನು ಕಿತ್ತುಕೊಂಡು ಅವರ ಪ್ರಾಣಕ್ಕೆ ಹಾನಿಯಾಗಬಲ್ಲ ರೂಪ ತಳೆಯಿತು.
ಸಂದರ್ಭವನ್ನು ಗ್ರಹಿಸಿದ ಕೃಷ್ಣನು ಗ್ರಾಮದಲ್ಲಿದ್ದ ಗಿರಿ ಪರ್ವತವನ್ನು ತನ್ನ ಒಂದೆ ಕೈಯ ಒಂದೆ ಬೆರಳಿನಲ್ಲಿ ಕಿತ್ತಿ ಮೇಲಕೆತ್ತಿ ಸರ್ವ ಜನರಿಗೂ ಅದರ ಬುಡದಲ್ಲಿ ನಿಲ್ಲುವಂತೆ ಮಾಡಿ ಅವರನ್ನು ಕಾಪಾಡಿದ. ಈ ಒಂದು ಪವಾಡವನ್ನು ಸ್ವರ್ಗದಿಂದಲೆ ಗಮನಿಸಿದ ಇಂದ್ರ ಆವಾಕ್ಕಾಗಿ ಹೋದ. ನಂತರ ಅವನಿಗೆ ಕೃಷ್ಣ ನಿಜ ಸ್ವರೂಪ ತಿಳಿದು ನಾಚಿಕೆಯಿಂದ ತಲೆ ತಗ್ಗಿಸಿ ಕೃಷ್ಣನಲ್ಲಿ ಕ್ಷಮಾಪಣೆ ಕೇಳಿದ.
ಗೋವರ್ಧನ ದೇವಾಲಯ, ಚಿತ್ರಕೃಪೆ: Vishwas008
ಈ ಒಂದು ಪ್ರಸಂಗವು ಮೂಲತಃ ಕರ್ಮ ಸಿದ್ಧಾಂತವನ್ನು ವಿವರಿಸುತ್ತದೆ. ಇದರ ಕುರಿತು ಕೃಷ್ಣನು ಭಗವದ್ಗೀತೆಯಲ್ಲಿ ತಿಳಿಸಿರುವುದನ್ನು ಕಾಣಬಹುದು. ಹೀಗೆ ಆ ಪರ್ವತವನ್ನು ಎತ್ತಿದ ಸ್ಥಳವೆ ಇಂದು ಗೋವರ್ಧನಗಿರಿ ಎಂದು ಕರೆಸಿಕೊಳ್ಳುತ್ತದೆ. ಪ್ರಸ್ತುತ ಮಥುರಾದ ವೃಂದಾವನ ಪಟ್ಟಣದ ಬಳಿ ಈ ಗಿರಿಯಿದೆ. ಇದರ ಪರಿಕ್ರಮಣವು ಪ್ರಸಿದ್ಧವಾಗಿದ್ದು ಇಲ್ಲಿರುವ ಗೋವರ್ಧನ ದೇವಾಲಯದಿಂದ ಅದು ಪ್ರಾರಂಭಗೊಳ್ಳುತ್ತದೆ.
ಮಥುರಾ ಎಂಬ ಕೃಷ್ಣನ ಮಧುರ ನಿವಾಸ
ಮಥುರಾದಿಂದ ವೃಂದಾವನಕ್ಕೆ ತೆರಳುವ ಪ್ರವಾಸಿಗರು/ಭಕ್ತಾದಿಗಳು ವೃಂದಾವನದಿಂದ 25 ಕಿ.ಮೀ ದೂರದಲ್ಲಿ ಸ್ಥಿತವಿರುವ ಎಂಟು ಕಿ.ಮೀ ಗಳಷ್ಟು ಉದ್ದದ ಈ ಗೋವರ್ಧನಗಿರಿಗೆ ಭೇಟಿ ನೀಡದೆ ಮರಳಲಾರರು. ಹಿಂದೆ ಈ ಬೆಟ್ಟದ ಮೇಲಿರುವ ಹುಲ್ಲು ಹಾಸಿನಲ್ಲಿ ಗೋಪಾಲಕರು ದನಗಳನ್ನು ಮೇಯಿಸುತ್ತಿದ್ದಿದುದರಿಂದ ಇದಕ್ಕೆ ಗೋವರ್ಧನಗಿರಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿರುವ ಕೆಲವು ಅದ್ಭುತ ಬೆಟ್ಟಗುಡ್ಡಗಳು!