ಪಶ್ಚಿಮಘಟ್ಟಳ ಸಾಲಿನಲ್ಲಿ ನಿಲ್ಲುವ ಕೊಡಗು ಪ್ರವಾಸತಾಣಗಳಿಗೆ ಪ್ರಸಿದ್ಧಿ ಪಡೆದಿದೆ. ಹಸಿರು ಸಿರಿಯಿಂದ ಕೂಡಿರುವ ಈ ಊರಿನಲ್ಲಿ ಐತಿಹಾಸಿಕ ತಾಣಗಳು ಹಲವಾರಿವೆ. ಅವುಗಳಲ್ಲಿ ನಾಲ್ಕುನಾಡು ಅರಮನೆಯು ಒಂದು. ಕೊಡಗಿನ ಅತ್ಯಂತ ಎತ್ತರದ ಗಿರಧಾಮ ತಡಿಯಾಂಡಮೋಳ್ ಬೆಟ್ಟದ ಬುಡದಲ್ಲಿರುವ ಯವಕಪಾಡಿ ಹಳ್ಳಿಯಲ್ಲಿದೆ.
ಈ ಅರಮನೆಯನ್ನು 1792 ರಿಂದ 1794 ರ ನಡುವೆ ಕಟ್ಟಲಾಯಿತು. ಕೊಡಗನ್ನು ಆಳುತ್ತಿದ್ದ ಮೊದಲನೇ ಲಿಂಗರಾಜನು 1780ರಲ್ಲಿ ಮರಣ ಹೊಂದಿದನು. ಆ ಸಂದರ್ಭದಲ್ಲಿ ಮೈಸೂರಿನ ಹೈದರಾಲಿಯು ಕೊಡಗನ್ನು ಸ್ವಾಧೀನ ಪಡಿಸಿಕೊಂಡನು. ಇದರಿಂದ ಬೇಸರ ಗೊಂಡ ಕೊಡವರು ಹೈದರಾಲಿಯನ್ನು ಸೋಲಿಸಿ ಓಡಿಸಿದರು. ಬಳಿಕ ಹೈದರಾಲಿಯ ಮಗ ಟಿಪ್ಪು, ಲಿಂಗರಾಜ ಅರಸನ ಮಗ ವಿರಾಜನನ್ನು ತನ್ನ ವಶಕ್ಕೆ ಪಡೆದುಕೊಂಡು, ಕೊಡಗನ್ನು ಪುನಃ ತನ್ನ ವಶಕ್ಕೆ ಪಡೆದುಕೊಂಡನು. ವಿರಾಜನ ಅಂತಿಮಕಾಲದಲ್ಲಿ ಆಶ್ರಯ ಪಡೆದ ಅರಮನೆ ಇದಾಗಿತ್ತು ಎಂದು ಇತಿಹಾಸ ಹೇಳುತ್ತದೆ.
PC: wikimedia.org
ಶತ್ರುಗಳಿಂದ ತಲೆಮರೆಸಿಕೊಳ್ಳಲು ಹಾಗೂ ಕೆಲವು ಪ್ರಮುಖ ಕಾರಣಗಳಿಗೆ ರಕ್ಷಣೆ ಪಡೆಯುವ ಉದ್ದೇಶದಲ್ಲಿ ನಿರ್ಮಾಣಗೊಂಡ ಈ ಅರಮನೆ ಎರಡು ಅಂತಸ್ತಿನ ಹೆಂಚು ಹೊದಿಕೆಯ ಮನೆಯಾಗಿದೆ. ಗೋಡೆಗಳ ಮೇಲೆ ಹಾಗೂ ಮಾಡಿನಲ್ಲಿ ವಿವಿಧ ಬಣ್ಣಗಳ ಚಿತ್ರವಿರುವುದನ್ನು ಕಾಣಬಹುದು. ಅರಮನೆಯ ಕಂಬಗಳ ಮೇಲೆ ಅರ್ಧ ಗುಮ್ಮಟದಂತಹ ಕೆತ್ತನೆಗಳಿವೆ. ಉತ್ತಮ ವಾಸ್ತು ಶಿಲ್ಪವನ್ನು ಹೊಂದಿರುವ ಈ ಅರಮನೆ ಪ್ರವಾಸಿಗರಿಗೊಂದು ಆಕರ್ಷಕ ಕೇಂದ್ರವಾಗಿದೆ.
PC: wikimedia.org
ಇಲ್ಲಿಯ ಇನ್ನೊಂದು ವಿಶೇಷ ಆಕರ್ಷಣೆಯೆಂದರೆ ಅರಮನೆಯ ಕಂಬಗಳ ಮೇಲೆ ಹಾವುಗಳ ಚಿತ್ರವಿರುವುದು. ಇವು ಜ್ಯಾಮಿತಿಯ ಮಾದರಿಯಲ್ಲಿ ತಿರುಚಿಕೊಂಟಂತೆ ಇವೆ. ನೋಡಲು ಒಂದು ಸಾಮಾನ್ಯ ಚಿತ್ರದಂತಿದ್ದರೂ ಹಿಂದೂ, ಬೌದ್ಧರು ಹಾಗೂ ಜೈನ ಧರ್ಮದ ಪ್ರಕಾರ ದುಷ್ಟ ಶಕ್ತಿಗಳ ವಿರುದ್ಧ ರಕ್ಷಣೆ ಹೊಂದಲು ಈ ಚಿತ್ರವನ್ನು ಬರೆಯಲಾಗುತ್ತದೆ ಎನ್ನುವ ನಂಬಿಕೆಯಿದೆ.
PC: wikimedia.org
ಅರಮನೆಯಲ್ಲಿ ಒಂದು ಮುಖ್ಯ ಸಭಾಂಗಣ, ರಾಜ ರಾಣಿಯರಿಗಾಗಿ ಮೊದಲನೆ ಮಹಡಿಯಲ್ಲಿ ಕೋಣೆಗಳು ಇವೆ. ಇವೆಲ್ಲವೂ ಬಿತ್ತಿ ಚಿತ್ರಗಳಿಂದ ಕೂಡಿವೆ. ನೆಲಮಹಡಿಯು ಅರಮನೆಯ ಸಿಬ್ಬಂದಿಗಳಿಗೆ ಮೀಸಲಿಡಲಾಗಿತ್ತು. ಇಲ್ಲಿ ಒಂದು ಅಡುಗೆ ಮನೆ ಹಾಗೂ ನಾಲ್ಕು ಕತ್ತಲ ಕೋಣೆಗಳಿವೆ. ಇಲ್ಲಿಂದಲೇ ಮೇಲೆ ಹೋಗಲು ಮೆಟ್ಟಿಲುಗಳಿವೆ.
ಇಲ್ಲಿರುವ ಎರಡು ಕೋಣೆಗಳು ಗುಪ್ತಚರರಿಗೆ ಆಶ್ರಯ ನೀಡಲು ಬಳಸುತ್ತಿದ್ದರು. ಇದು ಕುಟುಂಬಕ್ಕೆ ಸೀಮಿತವಾಗಿರಲಿಲ್ಲ. ಈ ಅರಮನೆಯ ಸುತ್ತ ದಟ್ಟವಾದ ಕಾಡುಗಳಿದ್ದುದ್ದರಿಂದ ಬೇಟೆಯಾಡಲು ಅನುಕೂಲವಾಗುತ್ತಿತ್ತು. ಈ ಹಿನ್ನೆಲೆಯಲ್ಲೇ ಅರಮನೆಯನ್ನು ಬೇಟೆಯ ವಸತಿಗೃಹವಾಗಿಯೂ ಉಪಯೋಗಿಸುತ್ತಿದ್ದರು.
PC: wikimedia.org
ಇತಿಹಾಸ
ಟಿಪ್ಪುವಿನ ದಾಳಿಯಿಂದ ಪಾರಾಗಲು ರಾಜನು ತನ್ನ ಕುಟುಂಬ ಸಮೇತ ವಿರಾಜಪೇಟೆಗೆ ಪಾರಾದನು. ಟಿಪ್ಪುವನ್ನು ಉರುಳಿಸಿ ಅವನ ರಾಜ್ಯವನ್ನು ಮರಳಿ ಪಡೆಯಲು ಬ್ರಿಟಿಷರ ಮೊರೆ ಹೋದನು. ನಂತರ ಗೆದ್ದ ಸಂಭ್ರಮಕ್ಕಾಗಿಯೇ ಈ ಅರಮನೆಯನ್ನು ನಿರ್ಮಿಸಿದನು. ಆದರೆ ದೀರ್ಘಕಾಲದ ಸೇನಾ ಶಿಬಿರದ ಸಮಯದಲ್ಲಿ ಇಡೀ ಕುಟುಂಬವೂ ನಾಶವಾಯಿತು. ನಂತರ ರಾಜನು ಪುನಃ 1796ರಲ್ಲಿ ಮಹಾದೇವಮ್ಮ ಎನ್ನುವವರನ್ನು ವಿವಾಹವಾದನು. ಅವಳು 1807ರಲ್ಲಿ ಮರಣಹೊಂದಿದಳು. ಅಲ್ಲಿಯವರೆಗೂ ಇಲ್ಲಿಯೇ ವಾಸವಾಗಿದ್ದರು ಎನ್ನಲಾಗುತ್ತದೆ.
PC: wikimedia.org
ಅರಮನೆಯ ಎದುರು ಒಂದು ಮಂಟಪ ಇರುವುದನ್ನು ನೋಡಬಹುದು. ಇದನ್ನು ರಾಜರ ವಿವಾಹ ನಡೆಯುತ್ತಿದ್ದ ಸ್ಥಳವಾಗಿತ್ತು. ಇಲ್ಲಿ ವಿವಿಧ ದೇವರುಗಳ ಚಿತ್ರಗಳು ಹಾಗೂ ಕೆತ್ತನೆಗಳನ್ನು ಕೆತ್ತಲಾಗಿದೆ. ಸುತ್ತಲು ಹಚ್ಚ ಹಸುರಿನ ಸಿರಿ ಹಾಗೂ ಗಿರಿಧಾಮ ಇರುವುದರಿಂದ ಚಾರಣ ಮಾಡಲು ಹಾಗೂ ಸುಂದರ ದೃಶ್ಯಗಳ ಸೆರೆ ಹಿಡಿಯಲು ಇದೊಂದು ಸೂಕ್ತ ತಾಣ.