ಭಾರತದ ಉತ್ತರ ಹಾಗೂ ದಕ್ಷಿಣ ದಿಕ್ಕುಗಳ ಮಧ್ಯದಲ್ಲಿ ಹಾಗೂ ಪಶ್ಚಿಮ ದಿಕ್ಕಿನೆಡೆ ನೆಲೆಗೊಂಡಿರುವ ಮಹಾರಾಷ್ಟ್ರ ರಾಜ್ಯವು ದೊಡ್ಡ ರಾಜ್ಯಗಳ ಪೈಕಿ ಒಂದಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ರಾಜ್ಯವಾಗಿದೆ. ಅನೇಕ ಪುಣ್ಯ ಕ್ಷೇತ್ರಗಳಿಗೆ, ಪ್ರಮುಖ ಹಿಂದೂ ದೇವಸ್ಥಾನಗಳಿಗೆ ತವರಾಗಿರುವ ಈ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಅಪಾರ.
ಮೇಕ್ ಮೈ ಟ್ರಿಪ್ ನಿಂದ ಎಲ್ಲ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ
ಕೊಂಕಣ ಕರಾವಳಿ ತೀರ ಪ್ರದೇಶ, ಪಶ್ಚಿಮ ಘಟ್ಟಗಳ ಅನನ್ಯ ಪ್ರಕೃತಿ ಸೌಂದರ್ಯ, ಹಿತಕರವಾದ ವಾತಾವರಣವಿರುವ ಗಿರಿಧಾಮಗಳು ಹೀಗೆ ಹಲವು ಅದ್ಭುತ ಪ್ರವಾಸಿ ಆಕರ್ಷಣೆಗಳನ್ನು ಹೊತ್ತು ನಿಂತಿರುವ ಈ ರಾಜ್ಯದಲ್ಲಿ ಪೌರಾಣಿಕ ಹಿನ್ನಿಲೆಯುಳ್ಳ, ಶಕ್ತಿ ಪ್ರಭಾವವಿರುವ ಅನೇಕ ಮಹತ್ವದ ದೇವಾಲಯಗಳನ್ನೂ ಸಹ ಕಾಣಬಹುದು. ವರ್ಷಪೂರ್ತಿ ರಾಜ್ಯದ ತುಂಬೆಲ್ಲ ತುಂಬಿರುವ ವಿವಿಧ ಕ್ಷೇತ್ರಗಳ ವಿವಿಧ ದೇವಾಲಯಗಳಿಗೆ ಭಕ್ತರು ಪ್ರವಸಿಗರು ಭೇಟಿ ನೀಡುತ್ತಲೇ ಇರುತ್ತಾರೆ.
ವಿಶೇಷ ಲೇಖನ : ಜೇಜುರಿಯ ಖಂಡೋಬ
ಪ್ರಸ್ತುತ ಲೇಖನವು ರಾಜ್ಯದಲ್ಲಿರುವ ಕೆಲವು ಗುರುತರವಾದ, ಭಕ್ತರ ನಂಬಿಕೆಯಂತೆ ಜಾಗೃತ ಎನ್ನಬಹುದಾದ ದೇವಸ್ಥಾನಗಳ ಕುರಿತು ತಿಳಿಸುತ್ತದೆ. ಧಾರ್ಮಿಕ ಪ್ರವಾಸವೂ ಸಹ ಒತ್ತಡದ ಮನಸ್ಸಿಗೆ ಸಾಕಷ್ಟು ಪ್ರಸನ್ನತೆ ಉಂಟು ಮಾಡುವುದರಿಂದ, ಸಮಯಾವಕಾಶ ದೊರೆತಾಗ ಇಲ್ಲಿರುವ ಯಾವುದಾದರೂ ನಿಮಗಿಷ್ಟವೆನಿಸಿದ ದೇವಸ್ಥಾನಕ್ಕೆ ಭೇಟಿ ನೀಡಿ ಹಾಗೂ ನಿರಾಳತೆಯನ್ನು ಪಡೆಯಿರಿ.
ವಿಶೇಷ ಲೇಖನಗಳು : ಪುಣೆ ನಗರದ ಧಾರ್ಮಿಕ ಸ್ಥಳಗಳು ಸೋಲಾಪುರ ಹಾಗೂ ಪ್ರಭಾವಿ ಕ್ಷೇತ್ರಗಳು
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನ : ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ಗುಡ್ಡಾಪುರ ಎಂಬ ಗ್ರಾಮದಲ್ಲಿ ಶಿವ ಶರಣೆಯಾದ ದಾನಮ್ಮ ದೇವಿಗೆ ಮುಡಿಪಾದ ಈ ದೇವಸ್ಥಾನವನ್ನು ಕಾಣಬಹುದು. ಕರ್ನಾಟಕದ ಲಕ್ಷಾಂತರ ಲಿಂಗಾಯಿತ ಹಾಗೂ ವಿಶ್ವಕರ್ಮ ಸಮುದಾಯದವರು ಈ ದೇವಿಯ ಅನುಯಾಯಿಯಾಗಿದ್ದಾರೆ. ಯಾವಾಗಲೂ ಕಷ್ಟದಲ್ಲಿದ್ದವರಿಗೆ ದಾನ ಮಾಡುತ್ತ ತೊಂದರೆಗಳೆಲ್ಲವನ್ನು ನಿವಾರಿಸುತ್ತಿದ್ದುದರಿಂದ ಇವಳಿಗೆ ದಾನ - ಅಮ್ಮ (ದಾನಮ್ಮ) ದೇವಿ ಎಂದು ಕರೆಯಲಾಯಿತು. ದಾನಮ್ಮ ದೇವಿಯು ಪಾರ್ವತಿಯ ವತಾರವೆಂದು ನಂಬಲಾಗಿದ್ದು ತೊಂದರೆ, ಕಷ್ಟಗಳಿದ್ದವರು ಭಕ್ತಿಯಿಂದ ಇವಳನ್ನು ಬೇಡಿದರೆ ಕ್ಷಣಾರ್ಧದಲ್ಲಿ ಎಲ್ಲವೂ ಮಾಯವಾಗುವುವು ಎಂದು ನಂಬಲಾಗುತ್ತದೆ.
ಚಿತ್ರಕೃಪೆ: Shailesh.patil
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಪಂಢರಪುರ ವಿಠೋಬ : ಸೋಲಾಪುರ ಜಿಲ್ಲೆಯ ಭೀಮಾ (ಇಲ್ಲಿ ಚಂದ್ರಭಾಗ ಎಂದೂ ಕರೆಯಲ್ಪಡುತ್ತದೆ) ನದಿ ತಟದಿ ನೆಲೆಸಿರುವ ಶ್ರೀಕ್ಷೇತ್ರ ಪಂಢರಪುರವು ವಿಠೋಬನ ದೇವಸ್ಥಾನಕ್ಕಾಗಿ ರಾಜ್ಯದಲ್ಲೆ ಪ್ರಸಿದ್ಧಿ ಪಡೆದ ದೇವಾಲಯವಾಗಿದೆ. ಅಲ್ಲದೆ 2015 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರದರ್ಶನಗೊಂಡ ಮಹಾರಾಷ್ಟ್ರದ ಪಂಢರಪುರ ಕುರಿತಾದ ಸ್ತಬ್ಧ ಚಿತ್ರವು ಮೊದಲನೆಯ ಬಹುಮಾನವನ್ನೂ ಸಹ ಪಡೆದಿದೆ. ಸೋಲಾಪುರ ಪಟ್ಟಣದಿಂದ 65 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ಮಹಾರಾಷ್ಟ್ರ ರಾಜ್ಯದ ಕುಲದೈವ ಎಂದು ಕರೆಯಲ್ಪಡುವ ವಿಠೋಬ - ರುಕ್ಮಿಣಿಯರ ನೆಲೆಸಿರುವ ಪವಿತ್ರ ನೆಲೆಯಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಕಾಲ್ನಡಿಗೆಯ ಮುಖಾಂತರ ಈ ಕ್ಷೇತ್ರಕ್ಕೆ ವಿಠೋಬನ ದರ್ಶಿಸಲು ಬರುತ್ತಾರೆ. ಸಾಮಾನ್ಯವಾಗಿ ಆಶಾಢ ಮಾಸದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ತೀರ್ಥಯಾತ್ರೆ ಕೈಗೊಳ್ಳಲಾಗುತ್ತದೆ.
ಚಿತ್ರಕೃಪೆ: SuSanA Secretariat
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಶ್ರೀಕ್ಷೇತ್ರ ತುಳಜಾಪುರ : ತುಳಜಾಪುರ ಎಂಬುದು ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಯಮುನಾಚಲ್ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಶಾಂತವಾದ ನಗರವಾಗಿದೆ. ಇದು ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿದ್ದು, ಸೋಲಾಪುರ್ ಔರಂಗಬಾದ್ ಹೆದ್ದಾರಿಯ ನಡುವೆ ಕಾಣ ಸಿಗುತ್ತದೆ. ತುಳಜಾಪುರವು ಒಂದು ಅದ್ಭುತವಾದ ಯಾತ್ರಾ ಸ್ಥಳವಾಗಿದ್ದು, ವರ್ಷಂಪ್ರತಿ ಹೆಚ್ಚು ಹೆಚ್ಚು ಭಕ್ತ ಜನರ ಆಕರ್ಷಣೆಯನ್ನು ಗಳಿಸಿ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ತುಳಜಾಪುರದ ತುಳಜಾ ಭವಾನಿ ದೇವಾಲಯವು ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ದೇವಿಯ ದರ್ಶನ ಪಡೆಯಲು ಆಗಮಿಸುವ ಭಕ್ತರಿಂದಾಗಿಯೆ ತುಳಜಾಪುರವು ಯಾತ್ರಾರ್ಥಿಗಳಿಂದ ತುಂಬಿ ತುಳುಕುವುದು. ಇಲ್ಲಿ ತುಳಜಾ ಭವಾನಿ ದೇವಿಯ ದೇವಾಲಯವನ್ನು ಸ್ಥಾಪಿಸಿದ ತರುವಾಯ ಈ ಊರು ತನ್ನ ಹಳೆಯ ಹೆಸರಾದ ಚಿಂಚುಪುರ್ ಎಂಬುದನ್ನು ಕಳೆದುಕೊಂಡು ತುಳಜಾಪುರ್ ಎಂಬ ಹೊಸ ಹೆಸರನ್ನು ಪಡೆಯಿತು. ಇಂದಿಗೂ ಉತ್ತರ ಕರ್ನಾಟಕ ಭಾಗದ ಹಲವು ಕುಟುಂಬಗಳ ಕುಲದೇವಿಯಾಗಿ ತುಳಜಾ ಭವಾನಿಯನ್ನು ಆರಾಧಿಸಲಾಗುತ್ತದೆ. ದಂತಕಥೆಯಂತೆ ಮಹಾರಾಷ್ಟ್ರದ ಶೂರ ರಾಜ ಶಿವಾಜಿ ಮಹಾರಾಜನಿಗೆ ಈ ದೇವಿಯೆ ಖಡ್ಗವನ್ನು ನೀಡಿದ್ದಳಂತೆ.
ಚಿತ್ರಕೃಪೆ: Arjun Singh Kulkarni
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಸಾಯಿ ಕ್ಷೇತ್ರ ಶಿರಡಿ : "ಸಬಕಾ ಮಾಲಿಕ್ ಏಕ್" ಎನ್ನುತ್ತ, ಸರ್ವಧರ್ಮವನ್ನು ಪ್ರೀತಿಸುತ್ತ, ಮನುಷ್ಯರನ್ನು ಸನ್ಮಾರ್ಗ ಪಥದಲ್ಲಿ ಮುನ್ನಡೆಸುತ್ತ ಕೊನೆಗೆ ಸಮಾಧಿಯನ್ನು ಪಡೆದು ಅಲ್ಲಿಂದಲೂ ಕೂಡ ಕ್ರಿಯಾಶೀಲರಾಗಿ ಭಕ್ತರ ಸಕಲ ಕಷ್ಟಗಳನ್ನು ಅಲಿಸುತ್ತ ಪರಿಹರಿಸುತ್ತಿರುವ ಶ್ರೀ ಸದ್ಗುರು ಸಾಯಿನಾಥರು ನೆಲೆಸಿರುವ ಶ್ರೀಕ್ಷೇತ್ರವೆ ಶಿರಡಿ ಪಟ್ಟಣ. ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಶಿರಡಿಯು ದೇಶದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತದೆ. ಅಲ್ಲದೆ ಭಾರತದಲ್ಲಿರುವ ಶ್ರೀಮಂತ ದೇವಸ್ಥಾನಗಳ ಪೈಕಿಯೂ ಶಿರಡಿಯ ಸಾಯಿ ದೇವಸ್ಥಾನವು ಒಂದಾಗಿದೆ. ಶಿರಡಿ ಕುರಿತು ಹೆಚ್ಚಿನ ವಿವರ
ಚಿತ್ರಕೃಪೆ: Amolthefriend
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನ : ಕೊಲ್ಲಾಪುರಕ್ಕೆ ಬಂದ ತಕ್ಷಣ ಎಲ್ಲರೂ ಮೊದಲು ಭೇಟಿ ನೀಡಲು ಬಯಸುವುದು ಶ್ರೀ ಅಮ್ಮನವರು ದರುಶನ ಕೊಡುವ ಸ್ಥಳ. ಹೌದು ಅದೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ನಗರದ ರೈಲು ಹಾಗೂ ಕೇಂದ್ರ ಬಸ್ಸು ನಿಲ್ದಾಣದಿಂದ ಕ್ರಮವಾಗಿ 4 ಮತ್ತು 3 ಕಿ.ಮೀ ಗಳಷ್ಟು ದೂರದಲ್ಲಿದೆ ಈ ದೇವಸ್ಥಾನ. ಟ್ಯಾಕ್ಸಿ ಹಾಗೂ ರಿಕ್ಷಾಗಳು ಇಲ್ಲಿಂದ ದೇವಸ್ಥಾನಕ್ಕೆ ತೆರಳಲು ಸುಲಭವಾಗಿ ದೊರೆಯುತ್ತವೆ. ಕೊಲ್ಲಾಪುರ ಒಂದು ಪ್ರವಾಸಿ ಪುಣ್ಯ ಕ್ಷೇತ್ರವೂ ಅಲ್ಲದೆ ಮಹಾರಾಷ್ಟ್ರ ರಾಜ್ಯದ ಪ್ರಮುಖ ಪಟ್ಟಣವೂ ಹೌದು. ಕರ್ನಾಟಕದ ವಾಯವ್ಯ ಭಾಗದಲ್ಲಿರುವ ಬೆಳಗಾವಿ ಮಹಾನಗರದಿಂದ 110 ಕಿ.ಮೀ ಅಂತರದಲ್ಲಿರುವ ಕೊಲ್ಲಾಪುರ, ಸದ್ಯ ಪ್ರಚಲಿತದಲ್ಲಿರುವ ಶಕ್ತಿ ಪೀಠಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: Ankur P
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಶನಿ ಶಿಂಗ್ನಾಪುರ : ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ನೆವಸಾ ತಾಲೂಕಿನಲ್ಲಿರುವ ಶಿಂಗ್ನಾಪುರ ಗ್ರಾಮವು ತನ್ನಲ್ಲಿರುವ ಶನಿ ದೇವರ ಅತಿ ಮುಖ್ಯ ದೇವಾಲಯದಿಂದಾಗಿ ಖ್ಯಾತಿ ಪಡೆದಿದ್ದು ಶನಿ ಶಿಂಗ್ನಾಪುರ ಎಂಬ ಹೆಸರಿನಿಂದಲೇ ಕರೆಯಲ್ಪಡುತ್ತದೆ. ಇಲ್ಲಿ ಶನಿ ದೇವರನ್ನು ಮೂಲವಾಗಿ ಒಂದು ಕಪ್ಪು ಕಲ್ಲಿನ ರೂಪದಲ್ಲಿ ಪೂಜಿಸಲಾಗುತ್ತದೆ. ಮಾಡುವ ತಪ್ಪುಗಳಿಗೆ ಶಿಕ್ಷೆ ನೀಡುವ ಪ್ರಬಲ ದೇವ ಶನಿ ದೇವರಾಗಿರುವುದರಿಂದ ಇಲ್ಲಿಗೆ ಬರುವ ಭಕ್ತರು ಸಾಕಷ್ಟು ಶಿಷ್ಟಾಚಾರಗಳನ್ನು ಪಾಲಿಸುತ್ತಾರೆ. ಮತ್ತೊಂದು ಆಸಕ್ತಿಕರ ವಿಷಯವೆಂದರೆ ಇಲ್ಲಿ ಶನಿ ದೇವರ ನೆಲೆಯಿರುವುದರಿಂದ ಯಾವುದೆ ರೀತಿಯ ಕಳ್ಳತನ ಹಾಗೂ ಇತರೆ ಅಪರಾಧ ಚಟುವಟಿಕೆಗಳು ನಡೆಯುವುದಿಲ್ಲವೆನ್ನಲಾಗುತ್ತದೆ. ಅಂತೆಯೆ ಇಲ್ಲಿ ಹಲವಾರು ಮನೆಗಳಿಗೆ ಪ್ರವೇಶ ಬಾಗಿಲುಗಳಿಲ್ಲದಿರುವುದನ್ನು ಕಾಣಬಹುದು. ಇದು ಅಹ್ಮದ್ ನಗರ ಪಟ್ಟಣದಿಂದ 35 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Singhmanroop
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಜೇಜುರಿಯ ಖಂಡೋಬ : ಖಂಡೋಬ ದೇವರನ್ನು ಸಾಮಾನ್ಯವಾಗಿ ಮಹಾರಾಷ್ಟ್ರ, ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಆಂಧ್ರಗಳಲ್ಲಿ ಆರಾಧಿಸಲಾಗುತ್ತದೆ. ಆಂಧ್ರದಲ್ಲಿ ಮಲ್ಲಣ್ಣನಾಗಿಯೂ, ಕರ್ನಾಟಕದಲ್ಲಿ ಮೈಲಾರನಾಗಿಯೂ ಖಂಡೋಬನನ್ನು ಪೂಜಿಸಲಾಗುತ್ತದೆ. ಮಹಾರಾಷ್ಟ್ರದ ಜೆಜುರಿಯಲ್ಲಿರುವ ಖಂಡೋಬನ ದೇವಾಲಯವು "ಜೆಜುರಿ ಚಿ ಖಂಡೋಬ" ನೆಂದೆ ಪ್ರಸಿದ್ಧಿ ಪಡೆದಿದೆ. ಜೆಜುರಿಯು ಪುಣೆ ಜಿಲ್ಲೆಯ ಒಂದು ಪಟ್ಟಣವಾಗಿದ್ದು ಪುಣೆ ಮಹಾ ನಗರದಿಂದ ಸುಮರು 38 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಇಲ್ಲಿಗೆ ತೆರಳಲು ಪುಣೆಯಿಂದ ಸಾಕಷ್ಟು ಬಸ್ಸುಗಳು ಹಾಗೂ ರೈಲಿನ ಸೌಕರ್ಯವಿದೆ. ಮತ್ತೊಂದು ಪ್ರಭಾವಿ ಕ್ಷೇತ್ರವಾದ ಸೋಲಾಪುರದಿಂದ ಕೇವಲ 60 ಕಿ.ಮೀ ದೂರವಿದೆ. ಹೆಚ್ಚಿನ ವಿವರ
ಚಿತ್ರಕೃಪೆ: Anant Rohankar
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಕೈಲಾಸ ದೇವಸ್ಥಾನ : ಮಹಾರಾಷ್ಟ್ರದ ಎಲ್ಲೋರಾ ಭಾರತೀಯ ಪುರಾತತ್ವ ಇಲಾಖೆಯಿಂದ ಮಾನ್ಯತೆ ಪಡೆದ ತಾಣ. ಇಲ್ಲಿ ಉತ್ಖನನ ನಡೆಸಿದಾಗ ಸುಮಾರು ಎರಡು ಕಿ.ಮೀ ಗೂ ಅಧಿಕ ಉದ್ದವಾಗಿ ಸಾಲು ಸಾಲಾಗಿ ಬೌದ್ಧ ಗುಹೆಗಳು, ಹಿಂದೂ ದೇವಸ್ಥಾನಗಳು ಶೋಧಗೊಂಡವು. ಇದರಲ್ಲಿ 16 ನೆಯ ಗುಹೆಯಾಗಿ ಕೈಲಾಸ ದೇವಸ್ಥಾನವಿದ್ದು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಶೈಲಿಗೆ ಉತ್ಕೃಷ್ಟ ಉದಾಹರಣೆಯಾಗಿದೆ. ರಾಷ್ಟ್ರಕೂಟ ದೊರೆಯಾದ ಒಂದನೆಯ ಕೃಷ್ಣನಿಂದ ಒಂದೆ ಬಂಡೆಯಲ್ಲಿ ನಿರ್ಮಾಣ ಮಾಡಲಾದ ಈ ಸುಂದರ, ಅತ್ಯದ್ಭುತ ದೇವಾಲಯದ ನಿರ್ಮಾಣ ಕಾಲ ಸುಮಾರು ಕ್ರಿ.ಶ 757-783 ರ ಮಧ್ಯದ್ದು ಎಂದು ಅಂದಾಜಿಸಲಾಗಿದೆ.
ಚಿತ್ರಕೃಪೆ: Kunal Mukherjee
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಕಾಳಾರಾಮ ದೇವಸ್ಥಾನ : ಮಹಾರಾಷ್ಟ್ರದ ನಾಶಿಕ್ ಪಟ್ಟಣದ ಪಂಚವಟಿ ಎಂಬ ಪ್ರದೇಶದಲ್ಲಿರುವ ಕಾಲಾರಾಮ ದೇವಸ್ಥಾನವು ನಗರದ ಅತ್ಯಂತ ಮಹತ್ವ ಪಡೆದಿರುವ ಹಿಂದೂ ದೇವಸ್ಥಾನವಾಗಿದೆ. ದೇವಸ್ಥಾನವು ಶ್ರೀರಾಮ ದೇವರಿಗೆ ಮುಡಿಪಾಗಿದ್ದು, ರಾಮನ ವಿಗ್ರಹವು ಕಪ್ಪ ಬಣ್ಣದ್ದಾಗಿದೆ. ಮರಾಠಿಯಲ್ಲಿ ಕಾಳಾ ಎಂದರೆ ಕಪ್ಪು ಎಂದರ್ಥ. ಸ್ಥಳ ಪುರಾಣದಂತೆ, ರಂಗರಾವ್ ಒಧೇಕರ್ ಎಂಬುವವರಿಗೆ ಒಂದೊಮ್ಮೆ ಕನಸಿನಲ್ಲಿ ಗೋದಾವರಿ ನದಿಯಲ್ಲಿದ್ದ ಈ ವಿಗ್ರಹದ ಕುರಿತು ತಿಳಿಯುತ್ತದೆ. ನಂತರ ಆ ವಿಗ್ರಹವನ್ನು ಅವರು ಹೊರತೆಗೆದು ಅದಕ್ಕಾಗಿ ಈ ದೇವಾಲಯ ನಿರ್ಮಿಸುತ್ತಾರೆ. ಈ ದೇವಸ್ಥಾನಕ್ಕೆ ಭೇಟಿ ನೀಡುವವರು ಸಾಮಾನ್ಯವಾಗಿ ಇದರ ಬಳಿಯಿರುವ ಕಪಾಲೇಶ್ವರ ಮಹಾದೇವ ದೇವಸ್ಥಾನಕ್ಕೂ ಸಹ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Ekabhishek
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ತ್ರಿಯಂಬಕೇಶ್ವರ ದೇವಸ್ಥಾನ : ನಾಶಿಕ್ ಜಿಲ್ಲೆಯ ತ್ರಿಂಬಕ ಪಟ್ಟಣದಲ್ಲಿರುವ ಶಿವನಿಗೆ ಮುಡಿಪಾದ ಈ ದೇವಸ್ಥಾನವು ಜಿಲ್ಲೆಯ ಮತ್ತೊಂದು ಅಪಾರ ಖಾತಿ ಪಡೆದ ದೇವಸ್ಥಾನವಾಗಿದೆ. ದೇಶದ ಪ್ರಮುಖ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಈ ದೇವಸ್ಥಾನವು ನಾಶಿಕ್ ಪಟ್ಟಣದಿಂದ ಕೇವಲ 28 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Niraj Suryawanshi
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಮುಂಬಾ ದೇವಿ ದೇವಸ್ಥಾನ : ಮುಂಬೈ ನಗರಕ್ಕೆ ಹೆಸರನ್ನು ಕೊಟ್ಟಿರುವ ಮುಂಬೈ ನಗರ ದೇವಿಯಾದ ಮುಂಬಾ ದೇವಿ ದೇವಸ್ಥಾನವು ಮುಂಬೈ ನಗರ ವ್ಯಾಪ್ತಿ ಪ್ರದೇಶದಲ್ಲಿರುವ ಪ್ರಸಿದ್ಧ ದೇವಸ್ಥಾನ. ಮೂಲ ಮುಂಬಾ ಮರಾಠಿ ಪದವು ಮಹಾ ಅಂಬಾ (ಅಂಬಾ ಎಂದರೆ ತಾಯಿ ಅಥವಾ ಮಾತೆ) ಎಂಬ ಶಬ್ದದಿಂದ ವ್ಯುಕ್ತಿ ಹೊಂದ ಪದವಾಗಿದೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Magiceye
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಸಿದ್ಧಿ ವಿನಾಯಕ ದೇವಸ್ಥಾನ : ಮುಂಬೈ ನಗರದ ಅತಿ ಪ್ರಮುಖ ಹಾಗೂ ಶ್ರೀಮಂತ ದೇವಸ್ಥಾನ ಸಿದ್ಧಿ ವಿನಾಯಕನ ದೇವಸ್ಥಾನ. ಭಗವಾನ್ ಗಣೇಶನ ನೆಲೆಯಾದ ಈ ಪ್ರಸಿದ್ಧ ಹಿಂದೂ ದೇವಾಲಯಕ್ಕೆ 1900 ಇಸವಿಗಿಂತ ಮೊದಲಿನಿಂದಲೂ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಕೇವಲ ಇಟ್ಟಿಗೆಯಿಂದ ಕೆಲವೆ ಅಡಿ ವಿಸ್ತಾರದಲ್ಲಿ ನಿರ್ಮಿಸಲಾಗಿದ್ದ ಈ ದೇವಾಲಯ, ಇಂದು ಮುಂಬೈನ ಅತಿ ಶ್ರೀಮಂತ ದೇವಾಲಯವೆನಿಸಿದ್ದು, ಹಲವರ ಹೃದಯದಲ್ಲಿ/ಮನಸ್ಸಿನಲ್ಲಿ ನೆಲೆಯಾಗಿದೆ. ವಿಶೇಷ ಸೂಚನೆಯೆಂದರೆ, ನೀವು ಸರಿಯಾದ ಸಮಯಕ್ಕೆ, ಸರಿಯಾದ ದಿನ ಇಲ್ಲಿಗೆ ಭೇಟಿ ನೀಡದಿದ್ದರೆ ಇಲ್ಲಿನ ಸಾಲುಗಟ್ಟಿದ ಜನಸಂದಣಿಯಲ್ಲಿ ದಿನವಿಡಿ ನಿಲ್ಲಬೇಕಾದೀತು! ಅಷ್ಟು ಭಾರಿ ಮೊತ್ತದ ಜನ ಸಾಗರ ಈ ದೇವಾಲಯದ ಮುಂದೆ ಪ್ರತಿ ದಿನ ಇರುತ್ತದೆ. ಇಲ್ಲಿನ ವಾಸ್ತು ಶೈಲಿ ಹಾಗೂ ಯಾತ್ರಾರ್ಥಿಗಳ ನಿರ್ವಹಣೆ ಅಚ್ಚುಕಟ್ಟಾಗಿದೆ. ಇದು ಪಶ್ಚಿಮ ದಾದರ್ ಪ್ರದೇಶದಲ್ಲಿದೆ.
ಚಿತ್ರಕೃಪೆ: Will Will
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಮೋರೇಶ್ವರ ದೇವಾಲಯ: ಪುಣೆ ಜಿಲ್ಲೆಯ ಮೋರ್ಗಾಂವ್ ನಗರದಲ್ಲಿದೆ ಗಣಪತಿಗೆ ಸಮರ್ಪಿತವಾದ ಮೋರೇಶ್ವರ ದೇವಾಲಯ. ಪುಣೆ ನಗರದಿಂದ 80 ಕಿ.ಮೀ ದೂರದಲ್ಲಿರುವ ಮಯೂರೇಶ್ವರ ಎಂತಲೂ ಕರೆಯಲ್ಪಡುವ ಈ ದೇವಾಲಾಯವು ಅಷ್ಟ ವಿನಾಯಕ ದೇವಾಲಯಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: Palaviprabhu
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಸಿದ್ಧಿವಿನಾಯಕ ದೇವಾಲಯ: ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಸಿದ್ಧತೇಕ್ ನಲ್ಲಿ ಅಷ್ಟವಿನಾಯಕ ದೇವಾಲಯಗಳ ಪೈಕಿ ಒಂದಾದ ಈ ಸಿದ್ಧಿ ವಿನಾಯಕನ ಮಂದಿರವಿದೆ. ಭೀಮಾ ನದಿಯ ಉತ್ತರ ದಿಕ್ಕಿನ ದಂಡೆಯಲ್ಲಿ ನೆಲೆಸಿರುವ ಈ ದೇವಾಲಯವು ಕರ್ಜಾತ್ ತಾಲೂಕಿನಲ್ಲಿದೆ.
ಚಿತ್ರಕೃಪೆ: Borayin Maitreya Larios
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಬಲ್ಲಾಳೇಶ್ವರ ದೇವಾಲಯ: ಮಹಾರಾಷ್ಟ್ರದ ಕರ್ಜಾತ್ ನಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಪಾಲಿ ಎಂಬ ಹಳ್ಳಿಯಲ್ಲಿ ಗಣಪತಿಗೆ ಸಮರ್ಪಿತವಾದ ಹಾಗು ಅಷ್ಟವಿನಾಯಕರಲ್ಲೊಬ್ಬನಾದ ಬಲ್ಲಾಳೇಶ್ವರ ದೇವಾಲಯವಿದೆ.
ಚಿತ್ರಕೃಪೆ: Borayin Maitreya Larios
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ವರದವಿನಾಯಕ ದೇವಾಲಯ: ಅಷ್ಟವಿನಾಯಕರಲ್ಲಿ ಒಬ್ಬನಾದ ವರದವಿನಾಯಕನ ದೇವಸ್ಥಾನವು ಕರ್ಜಾತ್ ಬಳಿಯಿರುವ ಮಹಾಡ್ ಎಂಬ ಹಳ್ಳಿಯಲ್ಲಿ ಸ್ಥಿತವಿದೆ. ಭಕ್ತಿಯಿಂದ ಬೇಡಿದವರಿಗೆ ವರವನ್ನು ಕರುಣಿಸುವ ಈ ವಿನಾಯಕನ ದೇವಸ್ಥಾನವು ಮಾಘಿ ಉತ್ಸವದ ಸಮಯದಲ್ಲಿ ಭಕ್ತಾದಿಗಳಿಂದ ತುಂಬಿರುತ್ತದೆ.
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಚಿಂತಾಮಣಿ ದೇವಾಲಯ: ಪುಣೆಯಿಂದ 25 ಕಿ.ಮೀ ದೂರದಲ್ಲಿರುವ ತಿಯೂರ್ ಎಂಬಲ್ಲಿ ಈ ಗಣೇಶನ ದೇವಸ್ಥಾನವಿದೆ. ಇಷ್ಟಾರ್ಥಗಳನ್ನು ಪೂರೈಸುವ ಚಿಂತಾಮಣಿ ಎಂಬ ರತ್ನವನ್ನು ಗಣ ಎಂಬ ಕ್ರೂರ ರಾಜನಿಂದ ಯಾವ ರೀತಿ ಗಣೆಶನು ಹಿಂಪಡೆದ ಹಾಗು ತನ್ನ ಭಕ್ತನಾದ ಋಷಿ ಕಪಿಲನಿಗೆ ಪ್ರದಾನಿಸಿದ ಕುರಿತು ವಿಷಯವನ್ನು ಈ ದೇವಾಲಯ ಹೊಂದಿದೆ.
ಚಿತ್ರಕೃಪೆ: Borayin Maitreya Larios
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಗಿರಿಜಾತ್ಮಜ ದೇವಾಲಯ: ಪುಣೆ ನಗರದಿಂದ 94 ಕಿ.ಮೀ ದೂರವಿರುವ ನಾರಾಯಣಗಾಂವ್ ನಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಲೇನ್ಯಾದ್ರಿ ಎಂಬಲ್ಲಿ ಕಂಡುಬರುವ 18 ಬೌದ್ಧ ಗುಹೆಗಳಲ್ಲಿ ಎಂಟನೆಯ ಗುಹೆಯಲ್ಲಿ ಈ ಗಣಪತಿಯ ದೇವಸ್ಥಾನವನ್ನು ಕಾಣಬಹುದು.
ಚಿತ್ರಕೃಪೆ: Palaviprabhu
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ವಿಘ್ನಹರ ಗಣಪತಿ: ಅಷ್ಟವಿನಾಯಕರಲ್ಲಿ ಒಬ್ಬನಾದ ವಿಘ್ನ ವಿನಾಶಕನ ಈ ದೇವಸ್ಥಾನವಿರುವುದು ಒಜರ್ ಎಂಬ ಪ್ರದೇಶದಲ್ಲಿ. ಇದು ಪುಣೆಯಿಂದ 85 ಕಿ.ಮೀ ದೂರವಿದ್ದು ಪುಣೆ-ನಾಶಿಕ್ ರಸ್ತೆಯಲ್ಲಿರುವ ನಾರಾಯಣಗಾಂವ್ ನ ಉತ್ತರಕ್ಕೆ ಕೇವಲ 9 ಕಿ.ಮೀ ದೂರದಲ್ಲಿದೆ.
ಚಿತ್ರಕೃಪೆ: Borayin Maitreya Larios
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಮಹಾಗಣಪತಿ ದೇವಸ್ಥಾನ: ಅಷ್ಟ ವಿನಾಯಕನ ದೇವಸ್ಥಾನಗಳ ಪೈಕಿ ಒಂದಾದ ಈ ಮಹಾಗಣಪತಿ ದೇವಸ್ಥಾನವು ಮಹಾರಾಷ್ಟ್ರದ ರಂಜನಗಾಂವ್ ಎಂಬಲ್ಲಿ ಸ್ಥಿತವಿದೆ. ಇದು ಪುಣೆಯಿಂದ 50 ಕಿ.ಮೀ ದೂರವಿದ್ದು, ಪುಣೆಯಿಂದ ಕೋರೇಗಾಂವ್ ಗೆ ಹೋಗುವ ಹಾದಿಯಲ್ಲಿ ಶಿಕ್ರಾಪುರ್ ಮೂಲಕ ಇದನ್ನು ತಲುಪಬಹುದು.
ಚಿತ್ರಕೃಪೆ: Palaviprabhu
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಸಪ್ತಶೃಂಗಿ : ನಾಶಿಕ್ ಪಟ್ಟಣದಿಂದ 60 ಕಿ.ಮೀ ದೂರವಿರುವ ಕಲ್ವಾನ್ ಎಂಬ ಪ್ರದೇಶದಲ್ಲಿರುವ ಸಪ್ತಶೃಂಗಿ ದೇವಾಲಯವು ಒಂದು ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಏಳು ಬೆಟ್ಟಗಳ ವಾಸಿಣಿ ಸಪ್ತಶೃಂಗಿ ದೇವಿಗೆ ಮುಡಿಪಾಗಿರುವ ಈ ದೇವಸ್ಥಾನ ಶ್ರೀಕ್ಷೇತ್ರವು ಮಹಾರಾಷ್ಟ್ರದ ಜನಪ್ರೀಯವಾಗಿ ಕರೆಯಲಾಗುವ "ಮೂರವರೆ ಶಕ್ತಿಪೀಠಗಳು" ಪೈಕಿ ಒಂದಾಗಿದೆ.
ಚಿತ್ರಕೃಪೆ: AmitUdeshi
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ವಜ್ರೇಶ್ವರಿ ದೇವಸ್ಥಾನ : ಮುಂಬೈ ನಗರದಿಂದ 75 ಕಿ.ಮೀ ದೂರದಲ್ಲಿರುವ ವಜ್ರೇಶ್ವರಿ ಎಂಬ ಪಟ್ಟಣದಲ್ಲಿ ಈ ಪ್ರಸಿದ್ಧ ದೇವಸ್ಥಾನವಿದೆ. ಮೊದಲಿಗೆ ವದ್ವಾಲಿ ಎಂದು ಕರೆಯಲ್ಪಡುತ್ತಿದ್ದ ಈ ಪಟ್ಟಣಕ್ಕೆ ವಜ್ರೇಶ್ವರಿ ದೇವಿಯ ದೇವಸ್ಥಾನದಿಂದಾಗಿ ವಜ್ರೇಶ್ವರಿ ಎಂಬ ಹೆಸರನ್ನೆ ಪಡೆದಿದೆ. ಇದಕ್ಕೆ ರೋಚಕವಾದ ಕಥೆಯೂ ಸಹ ಇದೆ. ಸ್ಥಳ ಪುರಾಣದ ಪ್ರಕಾರ, ಈ ಪ್ರದೇಶದಲ್ಲಿ ಹಿಂದೆ ಕಲಿಕಲ ಎಂಬ ಅಸುರನು ವಾಸಿಸುತ್ತಿದ್ದ. ಆತ ಕ್ರೂರ ಸ್ವಭಾವದವನಾಗಿದ್ದು ಇಲ್ಲಿ ವಾಸಿಸುತ್ತಿದ್ದ ಸಾಧು ಸಂತರು ಹಾಗೂ ಮನುಷ್ಯರಿಗೆ ಪೀಡಿಸುತ್ತಿದ್ದ.
ಇದರಿಂದ ಬೇಸತ್ತ ಋಷಿ ಮುನಿಗಳು ದೊಡ್ಡ ಪ್ರಮಾಣದಲ್ಲಿ ದೇವಿಯ ಕುರಿತು ಯಜ್ಞ ಮಾಡಿದರು ಹಾಗೂ ಆಹುತಿಯ ಸಂದರ್ಭದಲ್ಲಿ ಇಂದ್ರನಿಗೆ ತುಪ್ಪವನ್ನು ಅರ್ಪಿಸಲು ಮರೆತು ಹೋದರು. ಇದರಿಂದ ಕುಪಿತನಾದ ಇಂದ್ರದೇವನು ತನ್ನ ಅತ್ಯಂತ ಶಕ್ತಿಯುತ ಆಯುಧವಾದ ವಜ್ರಾಯುಧವನ್ನು ಇವರತ್ತ ಎಸೆದ. ಇದರಿಂದ ಭಯಪೀಡಿತರಾದ ಋಷಿಗಳು ದೇವಿಯನ್ನು ಭಕ್ತಿಯಿಂದ ಸ್ತುತಿಸಿದರು. ಪ್ರಸನ್ನಳಾದ ದೇವಿಯು ತನ್ನ ವೈಭವೋಪೇತ ಅವತಾರದಲ್ಲಿ ಪ್ರತ್ಯಕ್ಷಳಾಗಿ ಆ ವಜ್ರಾಯುಧವನ್ನು ನುಂಗಿದಳಲ್ಲದೆ ಆ ಅಸುರ ಕಲಿಕಲನನ್ನೂ ಸಮ್ಹರಿಸಿದಳು. ನಂತರ ಶ್ರೀರಾಮನು ದೇವಿಯನ್ನು ಕುರಿತು ಪ್ರಾರ್ಥಿಸಿ ಇಲ್ಲಿ ನೆಲೆಸಲು ವಿನಂತಿಸಿಕೊಂಡನು.
ಚಿತ್ರಕೃಪೆ: Redtigerxyz
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಚತುರಶೃಂಗಿ ದೇವಸ್ಥಾನ : ಪುಣೆ ನಗರದ ಸೇನಾಪತಿ ಬಾಪಟ್ ರಸ್ಯಲ್ಲಿರುವ ಚಿಕ್ಕ ಬೆಟ್ಟವೊಂದರ ಮೇಲೆ ಈ ಪ್ರಖ್ಯಾತ ದೇವಾಲಯವಿದೆ. ಪುಣೆ ನಗರದ ದೇವಿ ಎಮ್ದೆ ಹೇಳಲಾಗುವ ಚತುರಶೃಂಗಿ ಅಥವಾ ಅಂಬಾರೇಶ್ವರಿ ದೇವಿಯ ದೇವಾಲಯವನ್ನು ಶ್ರೀಮಂತ ವ್ಯಾಪಾರಿ ದುರ್ಲಭಸೇಟ್ ಪಿತಾಂಬರದಾಸ ಮಹಾಜನ್ ಎಂಬಾತನು ನಿರ್ಮಿಸಿದ್ದಾನೆ. ನವರಾತ್ರಿಯ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Umesh Kale
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಶ್ರೀಮಂತ ದಗಡುಸೇಟ್ ಹಲವಾಯಿ ಗಣಪತಿ ದೇವಸ್ಥಾನ : ಪುಣೆ ನಗರದಲ್ಲಿರುವ ಗಣಪನ ಮತ್ತೊಂದು ಜನಪ್ರೀಯ ದೇವಸ್ಥಾನವಿದು. ಗಣೇಶೋತ್ಸವ ಸಂದರ್ಭದಲ್ಲಂತೂ ಈ ದೇವಸ್ಥನಕ್ಕೆ ಜನರು ಮುಗಿ ಬಿದ್ದಿರುತ್ತಾರೆ. ಅಷ್ಟೆ ಏಕೆ, ಚಿತ್ರ ತಾರೆಗಳು, ರಾಜಕೀಯ ನಾಯಕರೂ ಸಹ ಈ ದೇವಸ್ಥಾನಕ್ಕೆ ಭೇಟಿ ನೀಡೆ ನೀಡುತ್ತಾರೆ. ವಿಶೇಷವೆಂದರೆ ಮೂಲ ಗಣಪನ ವಿಗ್ರಹವನ್ನು 10 ಮಿಲಿಯನ್ ರೂಪಾಯಿಗಳಿಗೆ ವಿಮೆ ಮಾಡಿಸಲಾಗಿದೆ.
ಚಿತ್ರಕೃಪೆ: PratibhaS Pawar
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಭೀಮಾಶಂಕರ ದೇವಸ್ಥಾನ : ಮಹಾರಾಷ್ಟ್ರದ ಜನಪ್ರೀಯ ಚಾರಣ ತಾಣವಾದ ಕರ್ಜಾತ್ ನ ಸಮೀಪದಲ್ಲಿರುವ ಪ್ರಸಿದ್ದ ಧಾರ್ಮಿಕ ಕೇಂದ್ರವೇ ಈ ಭೀಮಾಶಂಕರ. ಹನ್ನೆರಡು ಜೋತಿರ್ಲಿಂಗಗಳಲ್ಲಿ ಭೀಮಾಶಂಕರವೂ ಒಂದಾಗಿರುವುದು ಇಲ್ಲಿನ ವಿಶೇಷತೆ. ಪುಣೆಯ ಹತ್ತಿರದ ಖೇಡಾದಿಂದ ವಾಯವ್ಯಕ್ಕೆ 50 ಕಿ.ಮೀ. ದೂರದಲ್ಲಿರುವ ಶಿರಾಧೊನ್ ಎಂಬ ಗ್ರಾಮದಲ್ಲಿ, 3,250 ಅಡಿ ಎತ್ತರದ ಮೇಲೆ ಇರುವ ಶಿವಲಿಂಗದ ದರ್ಶನ ಮಾಡಬೇಕಾದರೆ ಬೃಹತ್ ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ದಾಟಿ ಹೋಗಬೇಕು. ಆಗ್ನೇಯ ದಿಕ್ಕಿನಲ್ಲಿ ಹರಿದು ನಂತರ ಕೃಷ್ಣಾ ನದಿಯೊಂದಿಗೆ ವಿಲೀನವಾಗುವ ಭೀಮಾ ನದಿಯ ಉಗಮಸ್ಥಾನವೂ ಭೀಮಾಶಂಕರದಲ್ಲೇ ಇದೆ.
ಚಿತ್ರಕೃಪೆ: ସୁରଥ କୁମାର ପାଢ଼ୀ
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಸಿದ್ಧೇಶ್ವರ ದೇವಸ್ಥಾನ: ಸೋಲಾಪುರ ನಗರದಲ್ಲಿರುವ ಅತಿ ಪ್ರಮುಖ ದೇವಾಲಯ ಇದಾಗಿದೆ. ವಾರ್ಷಿಕವಾಗಿ 35 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹದಿನಾರನೇಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯದಲ್ಲಿ ಶಿವನನ್ನು ಸಿದ್ಧೇಶ್ವರನಾಗಿ ಪೂಜಿಸಲಾಗುತ್ತದೆ.
ಚಿತ್ರಕೃಪೆ: Uddhavghodake
ಮಹಾರಾಷ್ಟ್ರ ಪ್ರಮುಖ ದೇವಸ್ಥಾನಗಳು:
ಅಕ್ಕಲಕೋಟೆ: 19 ನೇಯ ಶತಮಾನದ ಸಂತರಾದ ಶ್ರೀ ಸಮರ್ಥ ಮಹಾರಾಜರು ನೆಲೆಸಿದ್ದ ಈ ತಾಣವು ಇಂದು ಅತಿ ಜನಪ್ರಿಯ ಆಧ್ಯಾತ್ಮಿಕ ಕೇಂದ್ರವಾಗಿದೆ. ಸಮರ್ಥ ಮಹಾರಾಜರು ದತ್ತಾತ್ರೇಯ ಸ್ವಾಮಿಗಳ ಮರು ಅವತಾರ ಎಂದು ನಂಬಲಾಗಿದೆ. ಈ ತಾಣವು ಸೋಲಾಪುರ ಪಟ್ಟಣದ ಆಗ್ನೇಯ ದಿಕ್ಕಿಗೆ 40 ಕಿ.ಮೀ ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.
ಚಿತ್ರಕೃಪೆ: Vishwasrao