ಭಾರತದ ಎರಡನೇ ಅತಿದೊಡ್ಡ ರಾಜ್ಯ ಮಹಾರಾಷ್ಟ್ರ. ಭಾರತದ ಪಶ್ಚಿಮ ರಾಜ್ಯಗಳಲ್ಲಿ ಒಂದಾದ ಇದು ಅರಬ್ಬಿ ಸಮುದ್ರದ ದಡದಲ್ಲಿ ನಿಂತಿದೆ. ಮರಾಠಿ ಮಾತೃಭಾಷೆಯನ್ನು ಹೊಂದಿರುವ ಈ ತಾಣ ಔದ್ಯೋಗಿಕವಾಗಿ ಹಾಗೂ ತಾಂತ್ರಿಕವಾಗಿ ಮಹತ್ತರ ಸ್ಥಾನವನ್ನು ಪಡೆದುಕೊಂಡಿದೆ. ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರುವ ಈ ಪ್ರದೇಶದಲ್ಲಿ ಭವ್ಯವಾದ ಪ್ರವಾಸ ತಾಣಗಳು ಇವೆ.
ದೇವಿಯ ಭಕ್ತರಾದ ಇಲ್ಲಿಯ ಜನತೆ ದೈವಾರಾಧನೆಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಪುರಾತನ ಕಾಲದ ಪರಂಪೆರನ್ನು ಸಾರುವ ಹಲವಾರು ಪುಣ್ಯ ಕ್ಷೇತ್ರಗಳು ಇಲ್ಲಿವೆ. ಒಮ್ಮೆ ಇಲ್ಲಿಗೆ ಬಂದರೆ ದೇವಿಗಳ ದೇವಾಲಯಗಳನ್ನು ನೋಡಬಹುದು. ಬೆಂಗಳೂರಿನಿಂದ 901.8 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ದೀರ್ಘಾವಧಿಯ ಪ್ರವಾಸ ಕೈಗೊಳ್ಳಬಹುದು. ಅದ್ಭುತ ಇತಿಹಾಸವನ್ನು ಹೊಂದಿರುವ ದೇವಿ ದೇವಾಲಯದ ಬಗ್ಗೆ ತಿಳಿಯೋಣ ಬನ್ನಿ...
ಕೊಲ್ಹಾಪುರ ಮಹಾಲಕ್ಷ್ಮಿ
7ನೇ ಶತಮಾನದ ಇತಿಹಾಸ ಹೊಂದಿರುವ ಈ ದೇವಾಲಯ ಚಾಲುಕ್ಯರ ಕಾಲದ್ದು ಎನ್ನಲಾಗುತ್ತದೆ. ಮಹಾಲಕ್ಷ್ಮಿಯನ್ನು ಆರಾಧಿಸುವ ಈ ದೇಗುಲ ಕೊಲ್ಹಾಪುರದ ಹೃದಯ ಭಾಗದಲ್ಲಿದೆ. 108 ಶಕ್ತಿ ಪೀಠಗಳಲ್ಲಿ ಇದೂ ಒಂದು. ಈ ದೇವತೆಯನ್ನು ಅಂಬಾ ಬಾಯಿ ಎಂದು ಸಹ ಕರೆಯುತ್ತಾರೆ. ನವರಾತ್ರಿಯ ವೇಳೆ ಇಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಕ್ತರ ಕಷ್ಟಗಳನ್ನು ನಿವಾರಿಸಿ ಐಶ್ವರ್ಯವನ್ನು ದೇವಿ ವೃದ್ಧಿಸುತ್ತಾಳೆ ಎನ್ನುವ ನಂಬಿಕೆಯಿದೆ.
PC: wikipedia.org
ಚತುರ್ಶೃಂಗಿ ದೇವಾಲಯ
ಹೆಸರೇ ಹೇಳುವ ಹಾಗೆ ನಾಲ್ಕು ಶೃಂಗಗಳ ಮಧ್ಯೆ ಇರುವ ದೇಗುಲ ಇದು. ಪುಣೆಯ ವ್ಯಾಪ್ತಿಯಲ್ಲಿರುವ ಈ ದೇಗುಲವನ್ನು ಶಿವಾಜಿ ನಿರ್ಮಿಸಿದ್ದನು ಎನ್ನಲಾಗುತ್ತದೆ. ಅನೇಕ ಮೆಟ್ಟಿಲುಗಳ ಸಾಲನ್ನು ಹೊಂದಿರುವ ದೇಗುಲ ಹೆಚ್ಚು ಮಹತ್ತರ ಸ್ಥಾನವನ್ನು ಮಡೆದುಕೊಂಡಿದೆ. ಇಲ್ಲಿ ದೇವಿಯ ಆರಾಧನೆಯ ಜೊತೆಗೆ ಗಣೇಶ ಹಾಗೂ ದುರ್ಗೆಯರ ಪೂಜೆಯನ್ನು ಮಾಡಲಾಗುತ್ತದೆ.
PC: wikipedia.org
ಮುಂಬಾದೇವಿ ದೇವಸ್ಥಾನ
ಮುಂಬೈ ನಗರ ವ್ಯಾಪ್ತಿಯಲ್ಲಿ ಬರುವ ಈ ದೇಗುಲದಲ್ಲಿ ಅಂಬಾ ದೇವಿಯನ್ನು ಆರಾಧಿಸಲಾಗುತ್ತದೆ. ಅಂಬಾ ಎಂದರೆ ಮರಾಠಿ ಭಾಷೆಯಲ್ಲಿ ತಾಯಿ ಎನ್ನಲಾಗುತ್ತದೆ. ಪುರಾತನ ಕಾಲದ ಇತಿಹಾಸ ಹೊಂದಿರುವ ಈ ದೇಗುಲಕ್ಕೆ ಭಕ್ತರ ಹರಿವು ಹೆಚ್ಚಾಗಿಯೇ ಇವೆ. 600 ವರ್ಷದ ಇತಿಹಾಸ ಹೊಂದಿರುವ ದೇಗುಲ ಮುಂಬೈನ ಪ್ರಮುಖ ಆಕರ್ಷಣೆಯಲ್ಲಿ ಒಂದು.
PC: wikipedia.org
ಸಪ್ತಶೃಂಗಿ ದೇವಾಲಯ
ಸುತ್ತಲು ಗಿರಿಧಾಮಗಳಿಂದ ಕೂಡಿರುವ ಈ ದೇಗುಲ ಪ್ರವಾಸಿಗರಿಗೊಂದು ಭವ್ಯ ತಾಣ. ಇದು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ನಾಸಿಕ್ನಿಂದ 70 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರ ಅನೇಕ ಪುರಾಣ ಇತಿಹಾಸಗಳಿಂದ ಕೂಡಿದೆ.
PC: wikipedia.org
ಏಕವೀರ ದೇವಿ ದೇವಾಲಯ
ಅದ್ಭುತವಾದ ಬಂಡೆಯೊಂದರಲ್ಲಿ ಕೊರೆದ ಈ ದೇಗುಲ ಪ್ರವಾಸಿಗರಿಗೊಂದು ಅದ್ಭುತ ತೀರ್ಥಕ್ಷೇತ್ರ. ಗುಹಾಲಯವನ್ನು ಹೋಲುವ ಈ ದೇಗುಲಕ್ಕೆ 500 ಮೆಟ್ಟಿಲುಗಳನ್ನು ಹತ್ತಿ ಸಾಗಬೇಕು. ರೇಣುಕಾ ದೇವಿಯನ್ನು ಆರಾಧಿಸುವ ಈ ಕ್ಷೇತ್ರ ಒಮ್ಮೆ ಬೌದ್ಧ ಮತದ ಕೇಂದ್ರವಾಗಿತ್ತು ಎನ್ನಲಾಗುತ್ತದೆ.
PC: wikipedia.org
ತುಳಜಾ ಭವಾನಿ ದೇಗುಲ
51 ಶಕ್ತಿ ಪೀಠಗಳಲ್ಲಿ ಒಂದಾದ ಈ ದೇಗುಲ ಯಮುನಾಚಲ ಬೆಟ್ಟಗಳ ಮಧ್ಯೆ ನೆಲೆಗೊಂಡಿದೆ. ಇದು ಮಹಾರಾಷ್ಟ್ರದ ಹಲವಾರು ರಾಜರು ಮನೆದೇವರು ಎಂದು ಪೂಜಿಸುತ್ತಿದ್ದರು. ತಾಯಿಯ ಆಶೀರ್ವಾದ ಪಡೆಯಲು ಶಿವಾಜಿಯು ಈ ದೇಗುಲಕ್ಕೆ ಆಗಮಿಸುತ್ತಿದ್ದ ಎಂದು ಹೇಳಲಾಗುತ್ತದೆ. ಈ ಭವಾನಿ ದೇವಿಯು ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಾಳೆ ಎನ್ನುವ ನಂಬಿಕೆಯಿದೆ.
PC: wikipedia.org
ವಜ್ರೇಶ್ವರಿ ದೇಗುಲ
ಮುಂಬೈನಿಂದ 80 ಕಿ.ಮೀ. ವ್ಯಾಪ್ತಿಯಲ್ಲಿದೆ. ಮಂದಾಕಿನಿ ಬೆಟ್ಟದ ಬುಡದಲ್ಲಿದೆ ದೇಗುಲ ನೆಲೆನಿಂತಿದೆ. ವಜ್ರೇಶ್ವರಿ ದೇವಿಯು ಪಾರ್ವತಿಯ ಅವತಾರ ಎಂದು ಹೇಳಲಾಗುತ್ತದೆ. ಕೋಟೆಯ ಆಕೃತಿಯನ್ನು ಹೊಂದಿರುವ ಈ ದೇಗುಲ ಹೆಚ್ಚು ಭಕ್ತರಿಂದ ಆಕರ್ಷಿತಗೊಂಡಿದೆ.
PC: wikipedia.org