ನೀವು ಜಾಗೃತವಿರುವ, ದೈವಿ ಪ್ರಭಾವವಿರುವ, ಶೀಘ್ರ ಒಳಿತು ಉಂಟಾಗುವ, ದೇವರ ಕೃಪೆ ದೊರಕುವ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿರಬಹುದು ಅಥವಾ ಮುಂದೆ ನೀಡಲೂ ಬಹುದು. ಅದರಿಂದ ಒಂದು ಮಾನಸಿಕವಾದ ಸಮಾಧಾನ ನಿಮಗುಂಟಾಗಬಹುದು. ಇರಲಿ, ಆದ್ರೆ ಎಂದಾದರೂ ನಮ್ಮ ಕರುನಾಡಿನ ಅದಮ್ಯ ವೈಭವ ಸಾರುವ ವಾಸ್ತುಕಲಾ ರಚನೆಗಳಿಗೆ ಭೇಟಿ ನೀಡಿದ್ದೀರಾ?
ಭೇಟಿ ನೀಡಿದ್ದರೂ ಸಹ ಮೊದಲಿನಿಂದಲೂ ಪ್ರಸಿದ್ಧವಾದ ಬೇಲೂರು, ಹಳೇಬೀಡು, ಸೋಮನಾಥಪುರ, ಹಂಪಿ, ಬಾದಾಮಿ ಅಥವಾ ಐಹೊಳೆ, ಪಟ್ಟದಕಲ್ಲುಗಳಂತಹ ತಾಣಗಳಿಗೆ ಭೇಟಿ ನೀಡಿರಬಹುದಲ್ಲವೆ? ಆದರೆ ನಿಮಗೆ ಗೊತ್ತೆ, ಇವುಗಳನ್ನು ಹೊರತುಪಡಿಸಿಯೂ ಕರ್ನಾಟಕದ ಕೆಲ ಸ್ಥಳಗಳಲ್ಲಿ ಅತ್ಯದ್ಭುತವಾದ ಶಿಲ್ಪಕಲೆಯ ಹಲವಾರು ದೇವಾಲಯಗಳಿವೆ. ಆದರೆ ಅವು ಆರಕ್ಕೇರದೆ ಮೂರಕ್ಕಿಳಿಯದೆ ಎಲೆಮರೆಯ ಕಾಯಿಯಂತಿವೆ.
ಚಿತ್ರಕೃಪೆ: Rhalasur113
ಅಂತಹ ಒಂದು ಸುಂದರವಾದ ದೇವಾಲಯದ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಇದು ಪಶ್ಚಿಮ ಚಾಲುಕ್ಯ ವಾಸ್ತುಶೈಲಿಯ ಅಮೋಘ ರತ್ನ ಎಂದೆ ಹೇಳಬಹುದು. ಹನ್ನೆರಡನೇಯ ಶತಮಾನದಲ್ಲೆ ಕಣ್ಕುಕ್ಕಿಸುವಂತಹ ಅಗಾಧ ಕಲಾತ್ಮಕತೆಯು ಇಲ್ಲಿನ ಒಂದೊಂದು ಗೋಡೆಗಳ ಮೇಲೂ ಅನಾವರಣಗೊಳ್ಳುತ್ತದೆ. ಒಮ್ಮೆಯಾದರೂ ನೀವು ನೋಡಲೇಬೇಕಾದ ಅದ್ಭುತ ದೇವಾಲಯವಿದು.
ಆ ದೇವಾಲಯವೆ ಶಿವನಿಗೆ ಮುಡಿಪಾದ ಹಾವೇರಿ ಪಟ್ಟಣದ ಸಿದ್ಧೇಶ್ವರ ದೇವಾಲಯ. ಚಾಲುಕ್ಯ ಶೈಲಿಯ ನಿರ್ಮಾಣಗಳಲ್ಲಿ ಒಂದು ವಿಶಿಷ್ಟ ಗುಣಲಕ್ಷಣವನ್ನು ಗಮನಿಸಬಹುದು. ಅದೆನೆಂದರೆ ಸಾಮಾನ್ಯವಾಗಿ ಎಲ್ಲ ದೇವಾಲಯಗಳು ಉದಯಿಸುತ್ತಿರುವ ಸೂರ್ಯ ಅಂದರೆ ಪೂರ್ವಕ್ಕೆ ಮುಖ ಮಾಡಿದ್ದರೆ ಚಾಲುಕ್ಯರ ನಿರ್ಮಾಣದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ಪದ್ಧತಿ ಚಾಲ್ತಿಯಲ್ಲಿತ್ತು.
ಚಿತ್ರಕೃಪೆ: Dineshkannambadi
ಹೌದು, ಈ ಸಿದ್ಧೇಶ್ವರನ ದೇವಾಲಯವು ಪೂರ್ವದ ಬದಲು ಪಶ್ಚಿಮಕ್ಕೆ ಮುಖ ಮಾಡಿ ನಿಂತಿರುವುದನ್ನು ಗಮನಿಸಬಹುದು. ಕೆಲವು ಇತಿಹಾಸಕಾರರ ಪ್ರಕಾರ, ಈ ದೇವಾಲಯವು ಮೂಲತಃ ಯಾವ ದೇವರಿಗೆ ಮುಡಿಪಾಗಿದೆ ಎಂಬುದರ ಕುರಿತು ಸಂದೇಶ ವ್ಯಕ್ತಪಡಿಸುತ್ತಾರೆ. ಕೆಲ ಇತಿಹಾಸಕಾರ ಪ್ರಕಾರ ಇದು ಮೊದಲಿಗೆ ವಿಷ್ಣು ದೇವಾಲಯವಾಗಿರಬೇಕಂತಲೂ ನಂತರ ಶೈವ ಪ್ರಭಾವಕ್ಕೊಳಗಾಗಿ ಶಿವ ದೇವಾಲಯವಾಗಿರಬೇಕೆನ್ನುತ್ತಾರೆ.
ಇದಕ್ಕೆ ಪೂರಕವೆಂಬಂತೆ ಇಲ್ಲಿ ವಿಷ್ಣು ಹಾಗೂ ಆತನ ಮಡದಿಯಾದ ಲಕ್ಷ್ಮಿಯ ಕೆತ್ತನೆಗಳಿವೆ. ಅಲ್ಲದೆ ಸೂರ್ಯ ದೇವರ ಶಿಲ್ಪವನ್ನೂ ಸಹ ಇಲ್ಲಿ ಕೆತ್ತಲಾಗಿರುವುದನ್ನು ಕಾಣಬಹುದು. ಇವುಗಳಲ್ಲದೆ ಉಮಾ ಮಹೇಶ್ವರನ ಕೆತ್ತನೆಗಳು ಸಹ ಇಲ್ಲಿ ಕಂಡುಬರುತ್ತವೆ. ಹಾವೇರಿ ನಗರದ ಪೂರ್ವದ ದಿಕ್ಕಿಗೆ ಈ ದೇವಾಲಯವು ಸ್ಥಿತವಿದೆ.
ಚಿತ್ರಕೃಪೆ: Rhalasur113
ಇಲ್ಲಿ ಉಮಾಮಹೇಶ್ವರನ ರೂಪದ ಶಿವನು ನಾಲ್ಕು ಕೈಗಳುಳ್ಳವನಾಗಿದ್ದಾನೆ. ಮೂರು ಕೈಗಳು ಕ್ರಮವಾಗಿ, ಅಕ್ಷಮಾಲೆ, ಡಮರು ಹಾಗೂ ತ್ರಿಶೂಲಗಳನ್ನು ಹಿಡಿದಿದ್ದರೆ ನಾಲ್ಕನೆಯೆ ಕೈ ಪಾರ್ವತಿಯ ತಲೆ ಮೇಲಿದ್ದು ಪಾರ್ವತಿಯು ಶಿವನ ಮಡಲಿನಲ್ಲಿ ಕುಳಿತಿರುವುದನ್ನು ಕಾಣಬಹುದು.
ಹುಬ್ಬಳ್ಳಿಯಿಂದ ಒಂದು ಸುಂದರ ಪ್ರವಾಸ
ಹಾವೇರಿ ನಗರವು ರಾಷ್ಟ್ರೀಯ ಹೆದ್ದಾರಿ ನಾಲ್ಕರೊಂದಿಗೆ ಸಮ್ಪರ್ಕ ಹೊಂದಿದ್ದು ಸುಲಭವಾಗಿ ತಲುಪಲು ಅನುಕೂಲಕರವಾಗಿದೆ. ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ನಗರಗಳಿಂದ ಹಾವೇರಿಗೆ ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಹಾವೇರಿಯು ರೈಲು ನಿಲ್ದಾಣ ಹೊಂದಿದ್ದು ಬೆಂಗಳೂರಿನಿಂದ ರೈಲಿನ ಮೂಲಕವಾಗಿಯೂ ಹಾವೇರಿಯನ್ನು ತಲುಪಬಹುದಾಗಿದೆ.