ಇದನ್ನು ಚಿನ್ನ ತಿರುಪತಿ ಎಂತಲೂ ಸಹ ಕರೆಯುತ್ತಾರೆ. ತಿರುಪತಿ-ತಿರುಮಲದಲ್ಲಿ ನೆಲೆಸಿರುವ ವೆಂಕಟೇಶ್ವರನಷ್ಟೆ ಪ್ರಭಾವಿ ದೇವಾಲಯ ಇದಾಗಿದೆ ಎಂದು ನಂಬಲಾಗುತ್ತದೆ. ಇನ್ನೂ ಯಾರಿಗಾದರೂ ತಿರುಪತಿಗೆ ಹೋಗಿ ತಾವು ಬಯಸಿದ್ದ ಕಾಣಿಕೆ ದ್ರವ್ಯಾದಿಗಳನ್ನು ಸಮರ್ಪಿಸಲು ಆಗಲಿಲ್ಲವೆಂದರೆ ಚಿಂತೆ ಪಡಬೇಕಾಗಿಲ್ಲ.
ಅಂಥವರು ಈ ದೇವಾಲಯದಲ್ಲಿ ತಮ್ಮ ದಾನ ಧರ್ಮಗಳನ್ನು ಮಾಡಬಹುದು. ಇದರಿಂದ ಅವರು ತಿರುಪತಿಯಲ್ಲಿ ಹಾಕಿದಾಗ ಬರುತ್ತಿದ್ದ ಪುಣ್ಯ ಪ್ರಾಪ್ತಿಯು ಇಲ್ಲಿ ಹಾಕಿದಾಗಲೂ ಅಷ್ಟೆ ಬರುತ್ತದೆಂದೂ, ಅದು ಜಗದೊಡೆಯ ವೆಂಕಟೇಶ್ವರನಿಗೆ ತಲುಪುತ್ತದೆಂದು ನಂಬಲಾಗಿದೆ.
ಚಿತ್ರಕೃಪೆ: Adityamadhav83
ದ್ವಾರಕ ಒಬ್ಬ ಶ್ರೇಷ್ಠ ತಪಸ್ವಿಯ ಹೆಸರು. ಹುತ್ತವೊಂದರಲ್ಲಿ ನೂರಾರು ವರ್ಷಗಳ ಕಾಲ ತಪಸ್ಸು ಮಾಡಿ, ಪ್ರಸ್ತುತ ವೆಂಕಟೇಶ್ವರನ ಸ್ವಯಂಭು ವಿಗ್ರಹವಿರುವ ಸ್ಥಳವನ್ನು ತಮ್ಮ ಜ್ಞಾನ ಚಕ್ಷುಗಳಿಂದ ಕಂಡುಹಿಡಿದರು. ಅದರಂತೆ ಆ ಸ್ಥಳವನ್ನು ಶೋಧಿಸಿ ಅಲ್ಲಿರುವ ವೆಂಕಟೇಶ್ವರನನ್ನು ಹೊರತಂದು ಪ್ರತಿಷ್ಠಾಪಿಸಿ ಪೂಜಿಸತೊಡಗಿದರು ಎಂಬ ಪ್ರತೀತಿಯಿದೆ.
ಇನ್ನೊಂದು ವಿಶೇಷವೆಂದರೆ ಈ ದೇವಾಲಯವು ಕೃತಯುಗದಿಂದಲೂ ಇದೆ ಎಂಬ ಸ್ಥಳ ಪುರಾಣವಿದೆ. ಕೆಲವು ಪುರಾಣಗಳಲ್ಲಿ ಹೇಳಲಾಗಿರುವಂತೆ ಶ್ರೀರಾಮಚಂದ್ರನ ಅಜ್ಜನಾಗಿದ್ದ ಅಜ ರಾಜನೊಂದಿಗೆ ಈ ದೇವಾಲಯದ ಹಿನ್ನೆಲೆ ನಂಟನ್ನು ಹೊಂದಿದೆ. ಆ ಪ್ರಕಾರವಾಗಿ ಆ ಕಥೆಯು ಹೀಗೆ ಸಾಗುತ್ತದೆ.
ಚಿತ್ರಕೃಪೆ: Adityamadhav83
ಅಜ ರಾಜನು ಇಂದುಮತಿಯ ಸ್ವಯಂವರಕ್ಕೆಂದು ಹೊರಟಿದ್ದ. ರಸ್ತೆ ಮಧ್ಯದಲ್ಲಿ ಅವನಿಗೆ ಈ ವೆಂಕಟೇಶ್ವರನ ದೇವಾಲಯವು ಎದುರಾಯಿತು. ಇನ್ನೂ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು ಹೋಗುವುದೆಂದರೆ ಸ್ವಯಂವರಕ್ಕೆ ತಡವಾಗುವುದೆಂದು ಬಗೆದು ಹಾಗೆಯೆ ಆ ದೇವಾಲಯಕ್ಕೆ ಭೇಟಿ ನೀಡದೆ ಮುಂದೆ ಹೊರಟುಬಿಟ್ಟ.
ನಂತರ ಇಂದುಮತಿಯ ಸ್ವಯಂವರದಲ್ಲಿ ಅಜ ರಾಜ ಭಾಗಿಯಾದ. ಇಂದುಮತಿಯು ಅಜ ರಾಜನನ್ನೆ ವರಿಸಿದಳು. ಈಗ ಆ ಸ್ವಯಂವರದಲ್ಲಿ ಪಾಲ್ಗೊಂಡಿದ್ದ ಇತರೆ ರಾಜರುಗಳು ಇದನ್ನು ಸಹಿಸದಾಗಿ ಎಲ್ಲರೂ ಒಮ್ಮೆಲೆ ಅಜ ರಾಜನ ಮೇಲೆ ಆಕ್ರಮಣ ಮಾಡಲು ಸಜ್ಜಾದರು. ಈ ಸಮಯದಲ್ಲಿ ಅಜರಾಜನಿಗೆ ತನ್ನ ತಪ್ಪಿನ ಅರಿವುಂಟಾಯಿತು.
ಚಿತ್ರಕೃಪೆ: Venkat2336
ತಡ ಮಾಡದೆ ವೆಂಕಟೇಶ್ವರನನ್ನು ಕುರಿತು ಮನಸ್ಸಿನಲ್ಲೆ ಕ್ಷಮಾಪಣೆ ಕೇಳಿದನು. ಆಗ ಪವಾಡವೆಂಬಂತೆ ಎಲ್ಲ ರಾಜರು ತಾವು ಮಾಡುತ್ತಿರುವುದು ಹೇಡಿಯ ಕೃತ್ಯ ಎಂದು ಭಾಸವಾಗಿ ತಮ್ಮ ನಿರ್ಧಾರವನ್ನು ಅಲ್ಲೆ ಬಿಟ್ಟು ಬಿಟ್ಟರು. ಈ ರೀತಿಯಾಗಿ ಈ ವೆಂಕಟೇಶ್ವರನು ರಾಮನ ಅಜ್ಜನಿಂದಲೂ ಪೂಜಿಸಿಕೊಂಡು ಬಂದಿದ್ದಾನೆ ಎಂಬ ಕಥೆಯಿದೆ.
ತಿರುಮಲ ಬೆಟ್ಟಗಳ ಅದ್ಭುತ ದಂತಕಥೆ!
ದ್ವಾರಕ ತಿರುಮಲವು ಒಂದು ಶ್ರೀಕ್ಷೇತ್ರವಾಗಿದ್ದು ಆಂಧ್ರಪ್ರದೇಶ ರಾಜ್ಯದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನೆಲೆಸಿದೆ. ಹೈದರಾಬಾದ್, ಏಲೂರು, ತಾಡೇಪಲ್ಲಿಗುಡೆಮ್, ಜಂಗಾರೆಡ್ಡಿಗುಡೆಮ್ ಮುಂತಾದ ಪಟ್ಟಣಗಳಿಂದ ಆಂಧ್ರ ರಾಜ್ಯದ ಸರ್ಕಾರದ ಬಸ್ಸುಗಳು ದ್ವಾರಕ ತಿರುಮಲಕ್ಕೆ ತೆರಳಲು ಲಭ್ಯವಿದೆ.