ದೇಹದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಿಂದು ಪುರಾಣ, ಪುಣ್ಯಗ್ರಂಥಗಳಲ್ಲಿ ಉಲ್ಲೇಖಿಸಲಾದ ಆಯುರ್ವೇದ ಶಾಸ್ತ್ರವು ಸಾಕಷ್ಟು ಮಹತ್ವ ಪಡೆದಿದ್ದು ಇಂದು ಅನೇಕ ಜನರು ಈ ಶಾಸ್ತ್ರಕ್ಕೆ ಮಾನ್ಯತೆ ನೀಡಿದ್ದಾರೆ. ಆಯುರ್ವೇದ ಎಂಬು ಪ್ರಾಕೃತಿಕವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಪ್ರಕೃತಿ ಸಹಜವಾಗಿ ದೇಹದ ಬಾಧೆಗಳಿಗೆ ನೀಡುವ ಚಿಕಿತ್ಸಾಶಾಸ್ತ್ರವಾಗಿದೆ.
ಚಿತ್ರಕೃಪೆ: Jigesh
ಇಂತಹ ಧಾರ್ಮಿಕ ಮಹತ್ವವುಳ್ಳ ಶಾಸ್ತ್ರದ ಅಧಿ ದೇವನನ್ನಾಗಿ ಆರಾಧಿಸಲಾಗುತ್ತದೆ ಧನ್ವಂತರಿಯನ್ನು. ಧನ್ವಂತರಿ ದೇವ ವಿಷ್ಣುವಿನ ಒಂದು ಅವತಾರವೆ ಆಗಿದ್ದು ಆರೋಗ್ಯಕ್ಕೆ ಸಂಬಂಧಿಸಿದ ದೇವನಾಗಿದ್ದಾನೆ. ಧನ್ವಂತರಿಯನ್ನು ಪುರಾಣಗಳಲ್ಲಿ ದೇವತೆಗಳ ವೈದ್ಯ, ಆಯುರ್ವೇದದ ದೇವ ಎಂದೆಲ್ಲ ಕೊಂಡಾಡಲಾಗಿದೆ. ಇಂದಿಗೂ ಅದೆಷ್ಟೊ ಹಿಂದುಗಳು ಒಳ್ಳೆಯ ಆರೋಗ್ಯಕ್ಕೆಂದು ಧನ್ವಂತರಿಯನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ.
ಸಾಮಾನ್ಯವಾಗಿ ಆಯುರ್ವೇದ ಶಾಸ್ತ್ರಜ್ಞರು ಪೂಜಿಸುವ ಧನ್ವಂತರಿ ದೇವನಿಗೆ ಮುಡಿಪಾದ ದೇಗುಲಗಳು, ಸನ್ನಿಧಿಗಳು ಕೆಲವೆ ಕೆಲವು ಪ್ರಮುಖವಾದ ದೇವಾಲಯಗಳಲ್ಲಿ ಕಂಡುಬರುತ್ತದಾದರೂ ಧನ್ವಂತರಿಗೆಂದೆ ಮುಡಿಪಾದ ದೇವಾಲಯಗಳಿರುವುದು ಅಥವಾ ಭಾರತದಲ್ಲಿ ಕಂಡುಬರುವುದು ವಿರಳಾತೀವಿರಳ.
ಚಿತ್ರಕೃಪೆ: Dvellakat
ಅಂತಹ ಒಂದು ಅಪರೂಪದ ಧನ್ವಂತರಿಗೆ ಮುಖ್ಯವಾಗಿ ಮುಡಿಪಾದ ಒಂದು ದೇವಾಲಯದ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ನಂಬಿಕೆಯಂತೆ ಯಾರೆ ಆಗಲಿ ಶರೀರದ ಯಾವುದೆ ಸಮಸ್ಯೆ ಅಥವಾ ರೋಗಗಳಿಂದ ಬಳಲುತ್ತಿದ್ದರೆ ಈ ದೇವಾಲಯಕ್ಕೆ ಭೇಟಿ ನೀಡಿ ಧನ್ವಂತರಿ ಸ್ವಾಮಿಯನ್ನು ಅತಿ ನಂಬಿಕೆ ಹಾಗೂ ಭಕ್ತಿಯಿಂದ ಬೇಡಿದರೆ ಅವರ ಸಕಲ ತೊಂದರೆಗಳು ದೂರವಾಗುತ್ತವೆ ಎಂಬ ಅಚಲವಾದ ನಂಬಿಕೆ ಭಕ್ತರಲ್ಲಿದೆ.
ಧನ್ವಂತರಿ ಸ್ವಾಮಿಗೆ ಮುಡಿಪಾದ ಈ ದೇವಾಲಯವು ಕೇರಳ ರಾಜ್ಯದ ಅಲಪುಳ (ಅಲ್ಲೆಪ್ಪಿ) ಜಿಲ್ಲೆಯ ಮಾವೆಲಿಕ್ಕರಾ ಪಟ್ಟಣದಿಂದ ಕೇವಲ ಎರಡು ಕಿ.ಮೀ ದೂರದಲ್ಲಿರುವ ಪ್ರಯಿಕರ ಎಂಬ ಸ್ಥಳದಲ್ಲಿದೆ. ಮಾವೆಲಿಕ್ಕರಾ-ತಿರುವಲ್ಲಾ ಮಾರ್ಗದ ಮಧ್ಯೆ ಪ್ರಯಿಕರಾ ನೆಲೆಸಿದ್ದು ಧನ್ವಂತರಿ ದೇವಾಲಯದಿಂದಾಗಿ ಪ್ರದೇಶದಲ್ಲೆ ಜನಪ್ರೀಯತೆಗಳಿಸಿದೆ.
ದೇವಾಲಯ ಕೊಳ, ಚಿತ್ರಕೃಪೆ: Dvellakat
ಧನ್ವಂತರಿಯನ್ನು ವಿಷ್ಣುವಿನ ಅವತಾರವೆಂದೆ ನಂಬಲಾಗಿರುವುದರಿಂದ, ಸಾಮಾನ್ಯವಾಗಿ ವಿಷ್ಣು ಅಥವಾ ವೆಂಕಟೇಶ್ವರನ ದೇವಾಲಯದಲ್ಲಿ ನಡೆಯುವ ಪೂಜ ವಿಧಿ ವಿಧಾನಗಳೆ ಈ ದೇವಾಲಯದಲ್ಲೂ ಸಹ ಜರುಗುತ್ತದೆ. ಇಲ್ಲಿ ಆಚರಿಸಲಾಗುವ ಹಲವು ವಿಶೇಷತೆಗಳಲ್ಲಿ ಚಂದನದಿಂದ ಧನ್ವಂತರಿಯನ್ನು ಅಲಂಕರಿಸಲಾಗುವುದು ವಿಶೇಷವಾಗಿರುತ್ತದೆ.
ಕನಕಗಿರಿಯಲ್ಲಿ ನೆಲೆಸಿರುವ ಕನಕಾಚಲಪತಿ
ಈ ದೇವಾಲಯದಲ್ಲಿ ಮುಖ್ಯವಾದ ದೇವ ಧನ್ವಂತರಿಯಾದರೆ, ಇತರೆ ದೇವ, ದೇವತೆಯರ ಸನ್ನಿಧಾನಗಳನ್ನೂ ಸಹ ಕಾಣಬಹುದು. ಧನ್ವಂತರಿಯು ನಾಲ್ಕು ಕೈಗಳುಳ್ಳ, ಮುಖದಲ್ಲಿ ದಿವ್ಯ ತೇಜಸ್ಸಿನಿಂದ ಕೂಡಿರುವ ದೇವನಾಗಿ ನಿಂತಿದ್ದಾನೆ. ಒಂದು ಕೈಯಲ್ಲಿ ಅಮೃತವಿದ್ದರೆ, ಇನ್ನುಳಿದ ಮೂರು ಕೈಗಳಲ್ಲಿ ಶಂಖ, ಚಕ್ರ ಹಾಗೂ ಜಿಗಣೆಯಿರುವುದು ವಿಶೇಷ.