ಕಾಸ್ಮೋಪಾಲಿಟನ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ಭಾರತದ ಆಧುನಿಕ ನಗರಗಳಲ್ಲೊಂದು. ನಗರದ ವಾಣಿಜ್ಯ ಹಾಗೂ ಪ್ರತಿಷ್ಠಿತ ಸ್ಥಳಗಳಲ್ಲಿ ಒಂದು ಸುತ್ತು ಹೊಡೆದರೆ ಸಾಕು ವಿದೇಶಗಳನ್ನು ನೆನಪಿಸುವಂತಹ ಐಟಿ-ಬಿಟಿ ಕಚೇರಿ ಕಟ್ಟಡಗಳು, ಶಾಪಿಂಗ್ ಮಾಲುಗಳು ಹಾಗೂ ಇತರೆ ಆಧುನಿಕ ವಿನ್ಯಾಸದ ಹೋಟೆಲುಗಳು ಕಂಡುಬರುತ್ತವೆ.
ಜೊತೆ ಜೊತೆಯಲ್ಲೆ ಹಸಿರಿನಿಂದ ಕಂಗೊಳಿಸುವ ಉದ್ಯಾನಗಳು ಅದರಲ್ಲೂ ವಿಶೇಷವಾಗಿ ಲಾಲ್ ಬಾಗ್ ಹಾಗೂ ಕಬ್ಬನ್ ಗಳಂತಹ ಉದ್ಯಾನಗಳು, ರಸ್ತೆ ಬದಿಯ ವಿಶಾಲ ಗಿಡ-ಮರಗಳು ಬೆಂಗಳೂರನ್ನು ಪ್ರೀತಿಯಿಂದ ಉದ್ಯಾನ ನಗರಿ ಎನ್ನುವಂತೆ ಮಾಡಿವೆ. ಹೀಗೆ ಬೆಂಗಳೂರು ಸಾಕಷ್ಟು ಮುಂದುವರಿಯುತ್ತಿದ್ದರೂ ಸಾಂಸ್ಕೃತಿಕವಾಗಿ ಅಷ್ಟೆ ಶ್ರೀಮಂತಿಕೆಯನ್ನು ಉಳಿಸಿಕೊಂಡಿರುವ ನಗರ.
ಇಂದಿಗೂ ಬೆಂಗಳೂರಿನಲ್ಲಿ ಸಂಸ್ಕೃತಿ-ಸಮ್ಪ್ರದಾಯಗಳು ಗಟ್ಟಿಯಾಗಿ ತಳವೂರಿವೆ ಎಂದರೂ ತಪ್ಪಲ್ಲ. ಅದಕ್ಕೆ ಪೂರಕವೆಂಬಂತೆ ನಗರದ ಯಾವುದಾದರೂ ಗುಡಿ-ಗುಂಡಾರಗಳಲ್ಲಿ ದಿನೆ ದಿನೆ ನಡೆಯುವ ಹೋಮ-ಹವನಗಳು, ಪೂಜೆಗಳು ನಿತ್ಯಸತ್ಯ.
ಕರ್ನಾಟಕದಲ್ಲಿರುವ ಶಿವನ ಪ್ರಾಚೀನ ದೇವಾಲಯಗಳು!
ಅಲ್ಲದೆ ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೇವಾಲಯಗಳನ್ನೂ ಸಹ ನೋಡಬಹುದಾಗಿದೆ. ಅವುಗಳಲ್ಲಿ ಕೆಲವು ವಿಶಿಷ್ಟವಾದ ದೇವಾಲಯಗಳಿದ್ದು ಪ್ರತಿನಿತ್ಯ ಭಕ್ತರ ದಂಡೆ ಅಲ್ಲಿ ನೆರೆಯುತ್ತಿರುತ್ತದೆ. ಬೆಂಗಳೂರಿನಲ್ಲಿರುವ ಅಂತಹ ಒಂದು ವಿಶಿಷ್ಟ ದೇವಾಲಯಗಳ ಪೈಕಿ ಒಂದಾಗಿದೆ ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರ.
ಅಪಾರ ಮಹಿಮೆ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಈ ಚಿಕ್ಕ ದೇವಾಲಯವು ಅಷ್ಟೊಂದು ದೊಡ್ಡದಾದ ರಚನೆಯಲ್ಲವಾದರೂ ಇದರ ಮಹಿಮೆ ಅಪಾರ. ಇದರ ಹಿನ್ನೆಲೆಯೂ ಅಷ್ಟೆ ರೋಚಕ. ಅಲ್ಲದೆ ಈ ಶಿವನ ಕ್ಷೇತ್ರ ಸಾಕಷ್ಟು ಜಾಗೃತ ಎಂಬ ನಂಬಿಕೆಯೂ ಇದೆ.
ಚಿತ್ರಕೃಪೆ: Masterzatak
ಮಲ್ಲೇಶ್ವರ ನಂದಿಗುಡಿ
ಈ ಚಿಕ್ಕ ದೇವಾಲಯದ ಪ್ರಧಾನ ದೇವ ಲಿಂಗ ಸ್ವರೂಪಿ ಶಿವನಾಗಿದ್ದು, ಇದನ್ನು ನಂದಿ ತೀರ್ಥ, ನಂದೀಶ್ವರ ತೀರ್ಥ, ಮಲ್ಲೇಶ್ವರಂ ನಂದಿ ಗುಡಿ ಎಂಬೆಲ್ಲ ಹೆಸರುಗಳಿಂದ ಕರೆಯುತ್ತಾರೆ. ಧಾರ್ಮಿಕ ಭಾವನೆಯನ್ನು ಇಮ್ಮಡಿಗೊಳಿಸುವಂತಹ ಅದ್ಭುತ ಸ್ಥಳ ಇದಾಗಿದೆ.
ಚಿತ್ರಕೃಪೆ: Masterzatak
ಸದಾ ಜಿನುಗುವ ನೀರು
ಇದರ ವಿಶೇಷತೆ ಎಂದರೆ ಇಲ್ಲಿರುವ ಬಸವ ಅಥವಾ ನಂದಿ ವಿಗ್ರಹ. ಹೌದು ಇಲ್ಲಿ ನಂದಿಯ ವಿಗ್ರಹವು ದಕ್ಷಿಣಕ್ಕೆ ಮುಖ ಮಾಡಿ ನಿಂತಿದ್ದು ಅದರ ಬಾಯಿಯಿಂದ ನೀರು ಸದಾ ಕಾಲಾ ಜಿನುಗುತ್ತಿರುತ್ತದೆ. ಕೆಲವರ ನಂಬಿಕೆಯ ಪ್ರಕಾರ ಈ ನೀರಿನ ಮೂಲ ಯಾವುದೆಂದು ಇಂದಿಗೂ ಕಂಡುಹಿಡಿಯಲಾಗಿಲ್ಲವಂತೆ!
ಚಿತ್ರಕೃಪೆ: Masterzatak
ಮೆಟ್ಟಿಲು ಬಾವಿ
ಹೀಗೆ ನಂದಿಯ ಬಾಯಿಂದ ಬರುವ ನೀರು ನೇರವಾಗಿ ಅದರ ಕೆಳಗಿರುವ ಶಿವಲಿಂಗದ ಮೇಲೆ ಬಿದ್ದು ಆ ನಂತರ ಆ ನೀರು ಶಿವಲಿಂಗದ ಎದುರಿಗಿರುವ ಚೌಕಾಕಾರದ ಮೆಟ್ಟಿಲು ಬಾವಿಯಲ್ಲಿ ಸಂಗ್ರಹಿಸಲ್ಪಡುತ್ತದೆ. ಇಲ್ಲಿಗೆ ಬರುವ ಭಕ್ತರ ನಂಬಿಕೆಯಂತೆ ಆ ನೀರು ಔಷಧೀಯ ಗುಣವುಳ್ಳದ್ದಾಗಿದ್ದು ಅದರಿಂದ ಹಲವಾರು ಚರ್ಮ ಕಾಯಿಲೆಗಳು ನಾಶವಾಗುತ್ತವೆ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Masterzatak
ನಾಲ್ಕು ನೂರು ವರ್ಷಗಳು!
ಭಕ್ತರ ನಂಬಿಕೆಯಂತೆ ಈ ನಂದಿ ತೀರ್ಥ ಕ್ಷೇತ್ರವು ಸುಮಾರು ಏಳು ಸಾವಿರ ವರ್ಷಗಳಷ್ಟು ಪುರಾತನವಾದುದು ಎಂದು ಹೇಳಲಾಗುತ್ತದೆ. ಆದರೆ ಭಾರತೀಯ ಪುರಾತತ್ವ ಇಲಾಖೆಯು ಉತ್ಖನನ ನಡೆಸಿ ಇದರ ಪ್ರಾಚೀನತೆ ಸುಮಾರು ನಾಲ್ಕು ನೂರು ವರ್ಷಗಳಿರಬಹುದೆಂದು ಅಂದಾಜಿಸಿದೆ.
ಚಿತ್ರಕೃಪೆ: Masterzatak
ಮಲ್ಲೇಶ್ವರಂನಲ್ಲಿ
ದಕ್ಷಿಣಮುಖ ನಂದಿ ತೀರ್ಥವು ಪ್ರಸ್ತುತ ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯ ಸಂಪಿಗೆ ರಸ್ತೆಯಲ್ಲಿ ಹದಿನೈದನೇಯ ಕ್ರಾಸಿನಲ್ಲಿರುವ ಕಾಡು ಮಲ್ಲೇಶ್ವರನ ದೇವಾಲಯದ ಹಿಂಭಾಗದಲ್ಲಿದ್ದು ಗಂಗಮ್ಮ ದೇವಿ ದೇವಾಲಯದ ಎದುರಿನಲ್ಲಿದೆ.
ಚಿತ್ರಕೃಪೆ: Masterzatak
ತಿಳಿಯುವ ವಿಷಯ
ಇದರ ಇತಿಹಾಸವನ್ನು ಸ್ವಲ್ಪ ಜಾಲಾಡಿಸಿ ನೋಡಿದಾಗ ಈ ದೇವಲಯ ರಚನೆಯು ಬಹುಶಃ ಕಾಡು ಮಲ್ಲೇಶ್ವರ ದೇವಾಲಯ ಸಂಕೀರ್ಣದ ಭಾಗವೆ ಆಗಿರಬಹುದೆಂದು ಊಹಿಸಲಾಗಿದೆ. ಅಲ್ಲದೆ ಇದಕ್ಕೆ ಗೋಪುರವೂ ಸಹ ಇಲ್ಲದಿದ್ದುದರಿಂದ ಈ ರೀತಿಯ ಅನುಮಾನ ಕೆಲವರು ವ್ಯಕ್ತಪಡಿಸುತ್ತಾರೆ.
ಚಿತ್ರಕೃಪೆ: Masterzatak
ಸ್ಥಳೀಯರ ಒತ್ತಡ
ಆದಾಗ್ಯೂ ನೂರಾರು ವರ್ಷಗಳ ಹಿಂದೆ ಈ ದೇವಾಲಯವು ಮಣ್ಣಿನಲ್ಲಿ ಹೂತು ಹೋಗಿತ್ತು. ಕೆಲ ಬಾರಿ ಇದನ್ನು ಖಾಲಿ ಜಾಗವೆಂದು ಪರಿಗಣಿಸಿ ಮಾರುವ ಪ್ರಯತ್ನವೂ ನಡೆದಿತ್ತು. ಆದರೆ ಸ್ಥಳೀಯ ನಿವಾಸಿಗಳ ಅತಿಯಾದ ಒತ್ತಡದಿಂದ ಇದು ಜಾರಿಯಾಗಲಿಲ್ಲ.
ಚಿತ್ರಕೃಪೆ: Masterzatak
ಉತ್ಖನನ ಆರಂಭ
ಸ್ಥಳೀಯರು ಇಲ್ಲಿ ದೇವಾಲಯವಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು. ಅವರಿಗೆ ಈ ದೇವಾಲಯದ ಕುರಿತು ಅವರ ಹಿರಿಯರಿಂದ ತಿಳಿದಿತ್ತು. ಹೀಗೆ ಹಿರಿಯರಿಂದ ಕಿರಿಯರಿಗೆ ಈ ದೇವಾಲಯದ ನೆನಪುಗಳು ಸಾಗುತ್ತಲೆ ಇದ್ದವು. ಇದರ ಪರಿಣಾಮವಾಗಿ ಒಂದು ದಿನ ಇಲ್ಲಿ ಭಾರತೀಯ ಪುರಾತತ್ವ ಇಲಾಖೆ ಉತ್ಖನನವನ್ನು ಪ್ರಾರಂಭಿಸಿಯೆ ಬಿಟ್ಟಿತು.
ಚಿತ್ರಕೃಪೆ: Masterzatak
ಹೊರಬಂದಿತು
ಹೀಗೆ ಉತ್ಖನನ ನಡೆದಂತೆ ಮಣ್ಣಿನಲ್ಲಿ ಹೂತು ಹೋಗಿದ್ದ ದಕ್ಷಿಣಮುಖ ನಂದಿ ತೀರ್ಥವು ಹೊರ ಬರಲಾರಂಭಿಸಿತು. ಈ ರೀತಿಯಾಗಿ ಈ ಕಲ್ಯಾಣಿ ಕ್ಷೇತ್ರವು ಮತ್ತೆ ಪ್ರವರ್ಧಮಾನಕ್ಕೆ ಬಂದಿತು. ಇಂದಿಗೂ ಈ ಕ್ಷೇತ್ರ ಸಾಕಷ್ಟು ಜನರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Masterzatak
ಔಷ್ಧೀಯುಕ್ತ ನೀರು
ದೇವಾಲಯದ ಒಳಗೆ ಪ್ರವೇಶಿಸುತ್ತಿದ್ದಂತೆಯೆ ಮೆಟ್ಟಿಲುಗಳಿದ್ದು ಅದನ್ನಿಳಿಯುತ್ತಿದ್ದಂತೆಯೆ ಚೌಕಾಕಾರದ ಮೆಟ್ಟಿಲು ಬಾವಿ ಎದುರಿಗೆ ಕಾಣುತ್ತದೆ. ಬಲಭಾಗದಲ್ಲಿ ನಂದಿ ಮುಖದಿಂದ ಜಿನುಗುವ ನೀರನ್ನು ಶೇಖರಿಸಲು ಪೈಪನ್ನು ಅಳವಡಿಸಿದ್ದು ಅದರ ಬಾಯಿಂದ ನೀರು ಕಲ್ಯಾಣಿಯೊಳಗೆ ಸದಾ ಬೀಳುತ್ತಿರುತ್ತದೆ. ನಂದಿ ತೀರ್ಥದ ಎದುರಿಗಿರುವ ಗಂಗಮ್ಮ ದೇವಿ ದೇವಾಲಯ.
ಚಿತ್ರಕೃಪೆ: Masterzatak
ಆಮೆಗಳಿವೆ
ಎಡಗಡೆಯಿಂದ ಸಾಗುತ್ತ ಶಿವಲಿಂಗದ ದರ್ಶನ ಪಡೆದು ಬಲಭಾಗದ ಮೆಟ್ಟಿಲುಗಳ ಮೇಲೆ ತುಸು ಕಾಲ ಕುಳಿತುಕೊಳ್ಳಬಹುದು. ಕಲ್ಯಾಣಿಯಲ್ಲಿ ಸಾಕಷ್ಟು ಮೀನುಗಳು ಹಾಗೂ ಆಮೆಗಳು ವಿಹರಿಸುವುದನ್ನು ನೋಡುವಾಗ ಮಕ್ಕಳಿಂದ ಹಿಡಿದು ಹಿರಿಯರೂ ಸಹ ಸಂತಸಪಡುತ್ತಾರೆ. ಸಂಪಿಗೆ ರಸ್ತೆ, ಮಲ್ಲೇಶ್ವರಂ
ಚಿತ್ರಕೃಪೆ: Sissssou