ಒಮ್ಮೊಮ್ಮೆ ಮಾತಿನಲ್ಲಿ "ಚಿದಂಬರ ರಹಸ್ಯ" ಎಂದು ಹೇಳುವುದನ್ನು ನೀವು ಗಮನಿಸಿರಬಹುದು. ಏಕೆ ಈ ರೀತಿ ಹೇಳುತ್ತಾರೆಂದು ನಿಮಗೇನಾದರೂ ಗೊತ್ತೆ? ಹೌದು ಕೆಲ ವಿಷಯಗಳು ಎಷ್ಟು ರಹಸ್ಯಮಯವಾಗಿರುತ್ತವೆ ಎಂದರೆ ಬಹುಶಃ ಇಂದಿನ ವಿಜ್ಞಾನಕ್ಕೂ ಅದನ್ನು ಭೇದಿಸಲು ಸಾಧ್ಯವಿಲ್ಲ.
ಅದರಂತೆ ತಮಿಳುನಾಡಿನ ಚಿದಂಬರಂನಲ್ಲಿರುವ ತಿಲ್ಲೈ ನಟರಾಜನ ದೇವಲಯವೂ ಸಹ ಕೆಲವು ಅತ್ಯಂತ ಅಚ್ಚರಿಯಾಗುವಂತಹ ಅಂಶಗಳನ್ನು ಹೊಂದಿದ್ದು ಆ ರಹಸ್ಯಗಳ ಕುರಿತು ಇಂದಿಗೂ ನಿಖರವಾಗಿ ತಿಳಿಯಲಾಗಿಲ್ಲವಂತೆ. ಹಾಗಾಗಿ ಕೆಲವು ವಿಚಾರಗಳ ಅಡ ಬುಡ ಏನೂ ಗೊತ್ತಿಲ್ಲದಾದಾಗ ಚಿದಂಬರ ರಹಸ್ಯ ಎಂದು ಹೇಳುವ ಮಾತಿದೆ.
ಅದು ಹಾಗಿರಲಿ, ಇಂದಿಗೂ ಸಹ ಭಾರತದಲ್ಲಿ ಕೆಲವು ರಹಸ್ಯಮಯ ಸ್ಥಳಗಳಿದ್ದು ಪ್ರವಾಸಿ ದೃಷ್ಟಿಯಿಂದ ಕುತೂಹಲ ಕೆರಳಿಸುತ್ತವೆ. ಅದರಲ್ಲೂ ವಿಶೇಷವಾಗಿ ಪ್ರಸ್ತುತ ಲೇಖನದಲ್ಲಿ ಹೇಳಲಾಗಿರುವ ಸ್ಥಳಗಳು/ದೇವಾಲಯಗಳು ಶಿವನಿಗೆ ಸಂಬಂಧಿಸಿದ್ದು ಹಲವು ನಿಗೂಢತೆಗಳಿಂದ ಕೂಡಿವೆ. ಅವು ಯಾವುವು ಎಂದು ತಿಳಿಯಬೇಕೆ? ಮುಂದೆ ಓದಿ.
ಅಮರನಾಥ
ಅಮರನಾಥ ಯಾತ್ರೆಯು ಭಾರತದಲ್ಲಿ ಹಿಂದುಗಳು ಮಾಡುವ ಅತಿ ಪ್ರಸಿದ್ಧ ಹಾಗೂ ಶ್ರೇಷ್ಠ ಪುಣ್ಯ ಯಾತ್ರೆಗಳಲ್ಲಿ ಒಂದಾಗಿದೆ. ಅಮರನಾಥ ಯಾತ್ರೆಯ ಕುರಿತು ನಿಮ್ಮಲ್ಲಿ ಬಹುತೇಕರಿಗೆ ತಿಳಿದಿರಲೇಬೇಕು. ಆದರೆ ಇಲ್ಲಿರುವ ವಿಸ್ಮಯವಾದರೂ ಏನು? ಎಂಬ ಗೊಂದಲವೆ. ಹೌದು ವರ್ಷದ ನಿರ್ದಿಷ್ಟ ಸಮಯದಲ್ಲಿ ಮಂಜುಗಡ್ಡೆಯ ರುಪದಲ್ಲಿ ಇಲ್ಲಿ ಶಿವಲಿಂಗ ಒಡಮೂಡುತ್ತದೆ. ಬೃಹತ್ತಾದ ಗುಹೆಯಲ್ಲಿ ಈ ಶಿವಲಿಂಗದ ಎತ್ತರವು ಚಂದ್ರನ ಸ್ಥಿಗತಿಗಳು ಬದಲಾದಂತೆ ಬದಲಾಗುತ್ತದಂತೆ! ಅಲ್ಲದೆ ಈ ಗುಹಾಲಯದಲ್ಲೆ ಶಿವನು ಪಾರ್ವತಿ ದೇವಿಗೆ ಅಮರತ್ವದ ಮಂತ್ರವನ್ನು ಹೇಳಿದ್ದನಂತೆ ಹಾಗೂ ಆ ಸಮಯದಲ್ಲಿ ಎರಡು ಪಾರಿವಾಳದ ಮೊಟ್ಟೆಗಳು ಆ ಮಂತ್ರ ಕೇಳಿ ಅಮರವಾದವಂತೆ. ಇಂದಿಗೂ ಮಧ್ಯರಾತ್ರಿಯ ಸಮಯದಲ್ಲಿ ಆ ಪಾರಿವಾಳಗಳು ಇಲ್ಲಿ ಬಂದು ಸಮಯ ಕಳೆದು ಹೋಗುತ್ತವೆ ಎಂದು ನಂಬಲಾಗಿದೆ.
ಚಿತ್ರಕೃಪೆ: Gktambe
ಗವಿಪುರಂ
ಬೆಂಗಳೂರಿನ ಗವಿಪುರಂ ಬಡಾವಣೆಯಲ್ಲಿರುವ ಗವಿ ಗಂಗಾಧರೇಶ್ವರನ ದೇವಾಲಯವು ತನ್ನದೆ ಆದ ವಿಸ್ಮಯವನ್ನು ಹೊಂದಿದೆ. ಬಂಡೆಯೊಂದನ್ನು ಕೆತ್ತಿ ಗುಹೆಯೊಳಗೆ ನಿರ್ಮಿಸಲಾದ ಶಿವಾಲಯ ಇದಾಗಿದ್ದು ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಇಲ್ಲಿ ಕಂಡುಬರುವ ಚಮತ್ಕಾರಿ ಅಂಶವೆಂದರೆ ಮಕರ ಸಂಕ್ರಾಂತಿಯಂದು ನಡೆಯುವ ಅಸಾಮಾನ್ಯ ಪ್ರಸಂಗ. ಸಂಜೆಯಾಗುತ್ತಿದ್ದಂತೆ ಶಿವಲಿಂಗದ ಮುಂದಿರುವ ನಂದಿಯ ಕೊಂಬುಗಳ ಮಧ್ಯದಿಂದ ಸೂರ್ಯ ರಶ್ಮಿಯು ನೇರವಾಗಿ ಶಿವಲಿಂಗದ ಮೇಲೆ ಬಿದ್ದು ಗರ್ಭಗುಡಿಯು ತೋಜೋಮಯವಾಗಿ ಬೆಳಗುತ್ತದೆ. ಭಕ್ತರು ಇದನ್ನು ಒಂದು ಶಿವನ ಪವಾಡವೆಂತಲೂ, ದೇವರ ಉಪಸ್ಥಿತಿಯಿರುವುದೆಂತಲೂ ಸೂಚಿಸುವುದಕ್ಕೆ ನಡೆಯುತ್ತದೆ ಎಂದು ನಂಬುತ್ತಾರೆ. ಆದರೆ ತಾಂತ್ರಿಕ ಅಂದಿನ ಶಿಲ್ಪಿಗಳ, ಕುಶಲ ಕರ್ಮಿಗಳ ನೈಪುಣ್ಯತೆ ಮೆಚ್ಚಲೇಬೇಕು.
ಲೇಪಾಕ್ಷಿ
ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಹಿಂದುಪುರದಿಂದ ಹದಿನೈದು ಕಿ.ಮೀ ದೂರದಲ್ಲಿರುವ ಲೇಪಾಕ್ಷಿಯು ಐತಿಹಾಸಿಕವಾಗಿ, ಧಾರ್ಮಿಕವಾಗಿ ಮಹತ್ವ ಪಡೆದ ಸ್ಥಳ. ಶಿವ, ನಂದಿ ಹಾಗೂ ವೀರಭದ್ರನ ದೇವಾಲಯಗಳಿಗೆ ಹೆಸರುವಾಸಿಯಾದ ಲೇಪಾಕ್ಷಿಯಲ್ಲಿ ಹ್ಲವು ವೈಭವೋಪೇತ ದೇವಾಲಯಗಳ ರಚನೆಗಳು, ಶಿವಲಿಂಗಗಳು ಹಾಗೂ ಕಂಬಗಳನ್ನು ಕಾಣಬಹುದಾಗಿದೆ. ಇಲ್ಲಿ ಕಂಡುಬರುವ ಜೋತಾಡುವ ಕಂಬ ಅಥವಾ ಹ್ಯಾಂಗಿಂಗ್ ಪಿಲ್ಲರ್ ಪ್ರಮುಖವಾಗಿ ಗಮನಸೆಳೆಯುತ್ತದೆ. ಯಾವ ಆಧಾರವೂ ಇಲ್ಲದೆ ಇಂದಿಗೂ ನೆಲಕ್ಕೆ ತಾಗದೆ ನಿಂತಿರುವುದು ಬಲು ವಿಸ್ಮಯಕರವೆನಿಸುತ್ತದೆ. ಬೆಂಗಳೂರಿನಿಂದ ಲೇಪಾಕ್ಷಿ 120 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Mahesh Telkar
ದಾರಾಸುರಂ
ಚೋಳರ ಇಂದಿಗೂ ಜೀವಂತವಿರುವ (ಸುಸ್ಥಿತಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿರುವ) ಮಹಾನ್ ದೇವಾಲಯಗಳಲ್ಲಿ ಐರಾವತೇಶ್ವರ ದೇವಾಲಯವೂ ಸಹ ಒಂದು. ತಮ್ಜಾವೂರಿನ ಕುಂಭಕೋಣಂ ಬಳಿಯಿರುವ ದಾರಾಸುರಂ ಎಂಬ ಪಟ್ಟಣದಲ್ಲಿ ಈ ದೇವಾಲಯವಿದೆ. ಇಲ್ಲಿರುವ ಸಂಗೀತದ ಸ್ವರಗಳನ್ನು ಹೊರಡಿಸುವ ಮೆಟ್ಟಿಲುಗಳು ಇಂದಿಗೂ ಅಚ್ಚರಿಯ ವಿಷಯವಾಗಿದೆ. ಇದರ ಹಿಂದಿನ ರಹಸ್ಯವನ್ನು ಇಂದಿಗೂ ನಿಖರವಾಗಿ ತಿಳಿಯಲಾಗಿಲ್ಲ. ಎಲ್ಲ ಏಳು ಸಂಗೀತದ ಸ್ವರಗಳನ್ನು ಒಂದೊಂದು ಮೆಟ್ಟಿಲದ ಮೇಲೆ ಬಡಿದಾಗ ಕೇಳಬಹುದು.
ಚಿತ್ರಕೃಪೆ: Thamizhpparithi Maari
ಮಲ್ಲೇಶ್ವರಂ
1997 ರಲ್ಲಿ ಮಲ್ಲೇಶ್ವರಂನ ಕಾಡು ಮಲ್ಲೇಶ್ವರನ ದೇವಾಲಯದ ಎದುರು ರಸ್ತೆ ನಿರ್ಮಾಣಕ್ಕೆಂದು ಭೂಮಿ ಅಗೆಯುವಾಗ ನಂದಿಯ ವಿಗ್ರಹವೊಂದು ದೊರಕಿತು. ತಕ್ಷಣ ಭಾರತೀಯ ಪುರಾತತ್ವ ಇಲಾಖೆಯವರು ಬಂದು ಇಲ್ಲಿ ಸಮಗ್ರ ಉತ್ಖನನ ಮಾಡಿ ದೇವಾಲಯವೊಂದನ್ನೆ ಹೊರತೆಗೆದರು. ಅದೆ ದಕ್ಷಿಣ ಮುಖ ನಂದಿ ತೀರ್ಥ. ಇಲ್ಲಿರುವ ನಂದಿಯ ಬಾಯಿಯಿಂದ ನೀರು ಸದಾ ಜಿನುಗುತ್ತಿರುತ್ತದೆ. ಅಲ್ಲದೆ ಹಾಗೆ ಬಾಯಿಂದ ಹೊರಬರುವ ನೀರು ನೇರವಾಗಿ ಶಿವಲಿಂಗದ ಮೇಲೆ ಬಿದ್ದು ನಂತರ ಅದರ ಕೆಳಗಿರುವ ಕಲ್ಯಾಣಿಯಲ್ಲಿ ಶೇಖರಗೊಳ್ಳುತ್ತದೆ. ಈ ನೀರು ಶಕ್ತಿಅಶಾಲಿಯಾಗಿದ್ದು ಸಕಲ ಚರ್ಮ ರೋಗಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ, ಅಲ್ಲದೆ ನಂದಿ ಮುಖದಿಂದ ಬರುವ ನೀರಿನ ಮೂಲವನ್ನು ಇಂದಿಗೂ ಕಂಡುಹಿಡಿಯಲಾಗಿಲ್ಲವಂತೆ.
ಚಿತ್ರಕೃಪೆ: Masterzatak
ಮಾಯಾ ಹೊಂಡ
ಸಾಕಷ್ಟು ವಿಶೇಷವಾಗಿದೆ ಈ ಹೊಂಡ. ಇದರ ಶಕ್ತಿಯಂತೂ ಹೇಳ ತೀರದಷ್ಟು. ಅನೇಕ ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜೆಯ ಸೂರ್ಯನ ಕಿರಣಗಳು ಈ ಹೊಂಡದ ಮೇಲೆ ಬಿದ್ದಾಗ, ಹೊಂಡವು ಬಂಗಾರದಂತೆ ಹೊಳಪು ಪಡೆಯುತ್ತದೆ. ಈ ಹೊಂಡದಲ್ಲಿನ ನೀರು ಸಾಕಷ್ಟು ವಿಶೇಷ ಹಾಗೂ ಪವಾಡಮಯ ಎನ್ನಲಾಗಿದೆ. ಇದನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು ಇದರಲ್ಲಿ ಸಾಮಾನ್ಯವಾಗಿ ದೊರಕುವ ಕುಡಿಯುವ ನೀರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಕೆಲವು ವಿಶೇಷವಾದ ಖನಿಜಾಂಶಗಳು ಇರುವುದು ಪತ್ತೆಯಾಗಿದೆಯಂತೆ. ಇನ್ನೂ ಈ ನೀರು ಸದಾಕಾಲ ಉಕ್ಕಿ ಹರಿಯುತ್ತಲೆ ಇರುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಎಲೆಗಳನ್ನು ಹಾಕಿದಾಗ ಅವು ತೇಲುತ್ತವೆ. ಆದರೆ ಶಿವನಿಗೆ ಪ್ರೀಯವಾದ ಬಿಲ್ವ ಪತ್ರೆಯನ್ನು ಹಾಕಿದಾಗ ನಿಮ್ಮ ಭಕ್ತಿ ಶಕ್ತಿಗನುಗುಣವಾಗಿ ಅದು ಮುಳುಗುತ್ತದೆ.
ಮತ್ತೇನು ವಿಶೇಷ?
ಈ ಹೊಂಡಕ್ಕೆ ಬೇರೆ ಯಾವ ಬಾಹ್ಯ ನೀರಿನ ಮೂಲಗಳಿಲ್ಲ. ಆದರೂ ಇದರಲ್ಲಿನ ನೀರು ಕಡು ಬೇಸಿಗೆಯ ಸಮಯದಲ್ಲೂ ಸದಾ ಉಕ್ಕಿ ಹರಿಯುತ್ತಿರುತ್ತದೆ. ಇದಕ್ಕೆ ಕಾರಣ ಈ ಹೊಂಡದ ತಳದಲ್ಲಿರುವ ನೀರಿನ ಅಗಾಧ ಚಿಲುಮೆ. ಇದು ಸದಾ ನೀರನ್ನು ರಭಸದಿಂದ ಹೊರದಬ್ಬುತ್ತಿರುತ್ತದೆ. ಹಾಗಾಗಿ ನೀರಿನ ಗುಳ್ಳಿಗಳು ಈ ಹೊಂಡದಲ್ಲಿ ಜಿನುಗುತ್ತಿರುತ್ತವೆ. ನೀರಿನಲ್ಲಿ ಸದಾ ಹೀಗೆ ಜಿನುಗುವ ಗುಳ್ಳಿಗಳಿಂದಾಗಿಯೆ ಇದಕ್ಕೆ ಗುಳಿ ಗುಳಿ ಶಂಕರ ಎಂಬ ಹೆಸರು ಬಂದಿದೆ. ಇನ್ನೂ ಈ ಹೊಂಡದಲ್ಲಿರುವ ಪಾಚಿ ಹಾಗೂ ಇತರೆ ಸಸ್ಯಗಳು ಹರಡದೆ ಖಂಬಗಳಂತೆ ನೇರವಾಗಿ ಎದ್ದು ನಿಂತಿರುವುದನ್ನು ಗಮನಿಸಬಹುದು. ಈ ಹೊಂಡ ಮಾಡುವ ಎಲ್ಲ ಚಮತ್ಕಾರಗಳಿಗೆ, ವಿಸ್ಮಯಗಳಿಗೆ ಮುಖ್ಯ ಕಾರಣ, ಈ ಹೊಂಡದಲ್ಲಿರುವ ಸ್ಪಷ್ಟವಾಗಿ ಕಂಡು ಬರುವ ಶಿವಲಿಂಗ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಬ್ಬಿಗ ಎಂಬ ಗ್ರಾಮದ ವ್ಯಾಪ್ತಿಯಲ್ಲಿ ಈ ಗುಳಿ ಗುಳಿ ಶಂಕರ ಮಾಯಾ ಹೊಂಡವಿದೆ.
ಚಿದಂಬರಂ
ಪ್ರಮುಖವಾಗಿ ಇಲ್ಲಿರುವ ತಿಲ್ಲೈ ನಟರಾಜನ ದೇವಸ್ಥಾನವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಈ ಶಿವನ ದೇವಾಲಯವು ಶೈವರ ಪಾಲಿಗೆ ಅತ್ಯಂತ ಪ್ರಮುಖ ದೇವಾಲಯವಾಗಿದ್ದು ಪಂಚಭೂತಗಳ ಪೈಕಿ ಆಕಾಶವನ್ನು ಪ್ರತಿನಿಧಿಸುತ್ತದೆ. ಈ ದೇವಾಲಯದಲ್ಲಿ ಶಿವನನ್ನು "ನಟರಾಜ"ನ ರೂಪದಲ್ಲಿ ನರ್ತಿಸುತ್ತಿರುವ ಭಂಗಿಯಲ್ಲಿ ಪೂಜಿಸಲಾಗುತ್ತದೆ ಹಾಗೂ ಈ ರೀತಿಯ ಏಕೈಕ ದೇವಾಲಯವಾಗಿ ಇದು ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ ಈ ದೇವಾಲಯದ ಕುರಿತು ಹಲವಾರು ರಹಸ್ಯಮಯ ನಂಬಿಕೆಗಳು ತಳುಕು ಹಾಕಿಕೊಂಡಿವೆ. ಇವೆ ಆ ರಹಸ್ಯಮಯ ನಂಬಿಕೆಗಳು
ಚಿತ್ರಕೃಪೆ: Varun Shiv Kapur
ಉಜ್ಜಯಿನಿ
ಅಬ್ಬಾ ಈ ದೇವಾಲಯವಂತೂ ಒಂದು ರೀತಿಯ ವಿಚಿತ್ರ ಭಾವನೆಯನ್ನು ಮೂಡಿಸುತ್ತದೆ. ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಶಿವನಿಗೆ ಮುಡಿಪಾದ ಕಾಲ ಭೈರವನ ದೇವಾಲಯವಿದು. ಅಷ್ಟ ಭೈರವರಲ್ಲಿ ಪ್ರಮುಖನಾದ ಕಾಲಭೈರವ ಶಿವನ ಅತ್ಯಂತ ಉಗ್ರರೂಪವೂ ಹೌದು. ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಾಲಯದ ನಂತರ ಸಾಮಾನ್ಯವಾಗಿ ಭಕ್ತರು ಕಾಲಭೈರವನ ದರ್ಶನ ಪಡೆಯುತ್ತಾರೆ. ಕಾಲಭೈರವನಿಗೆ ಮುಖ್ಯವಾಗಿ ಇಲ್ಲಿ ಮದ್ಯವನ್ನು ಅರ್ಪಿಸಬೇಕು!! ಹೌದು ಮದ್ಯವನ್ನ! ಅರಚಕನು ಒಂದು ತಟ್ಟೆಯಲ್ಲಿ ಭಕ್ತರು ನೀಡಿದ ಮದ್ಯವನ್ನು ಹಾಕಿ ಕಾಲಭೈರವನ ಮುಂದೆ ಹಿಡಿದಾಗ ಅರ್ಧ ಮದ್ಯವು ಹೀರಲ್ಪಡುವುದನ್ನು ನೋದಬಹುದಂತೆ! ಉಳಿದ ಸ್ವಲ್ಪ ಪ್ರಮಾಣವನ್ನು ಭಕ್ತರಿಗೆ ಪ್ರಸಾದವಾಗಿ ಅದನ್ನು ನೀಡಲಾಗುತ್ತದೆ.
ಚಿತ್ರಕೃಪೆ: K.vishnupranay
ಮದ್ಯ!
ಹಾಗಾಗಿ ಈ ದೇವಾಲಯಕ್ಕೆ ತೆರಳುವಾಗ ಪೂಜಾ ಸಾಮಗ್ರಿಗಳನ್ನು ಮಾರುವ ಅಂಗಡಿಗಳಲ್ಲಿ ಮದ್ಯದ ಬಾಟಲುಗಳನ್ನೂ ಸಹ ಮಾರಲಾಗುತ್ತದೆ. ಎಲ್ಲ ರೀತಿಯ ಮದ್ಯದ ಬ್ರ್ಯಾಂಡುಗಳು, ವ್ಹಿಸ್ಕಿ, ರಮ್, ವೈನ್ ನಂತಹ ಮದ್ಯಗಳು ಕಾಲಭೈರವನ ಅರ್ಪಣೆಗೆಂದು ಇಲ್ಲಿ ದೊರೆಯುತ್ತವೆ. ಡ್ರೈ ಡೇ ಇದ್ದರೂ ಸಹ ಇಲ್ಲಿ ಧಾರ್ಮಿಕ ಆಚರಣೆಯಾಗಿರುವ ಕಾರಣ ಮದ್ಯ ದೊರೆಯುತ್ತದೆ. ಅಲ್ಲದೆ ಕಾಲಬಹಿರವೇಶ್ವರ ಉಜ್ಜಯಿನಿ ನಗರದ ಅಧಿದೇವನಾಗಿರುವುದರಿಂದ ಸಾಕಷ್ಟು ಜನ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Utcursch