ಟಿಬೆಟ್ನಿಂದ ವಲಸೆ ಬಂದಿರುವ ಜನಗಳಿಗೆ ಭಾರತ ಆಶ್ರಯ ನೀಡಿದೆ. ಶಾಂತಿ ಪ್ರಿಯರಾದ ಟಿಬೆಟ್ ಜನರು ತಮ್ಮ ಧರ್ಮದ ಮಾರ್ಗದರ್ಶನದಲ್ಲಿಯೇ ಜೀವಿಸುತ್ತಾರೆ. ಅಲ್ಲದೆ ತಮ್ಮ ಇರುವಿಕೆಯ ಪ್ರದೇಶವನ್ನು ಸ್ವಚ್ಛ ಹಾಗೂ ಶಾಂತಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಈ ಪರಿಯಿಂದಲೇ ಅವರ ಧರ್ಮಶಾಲೆಯು ಪ್ರವಾಸಿಗರಿಗೊಂದು ಆಕರ್ಷಕ ಕೇಂದ್ರವಾಗಿರುವುದು. ಇಂತಹ ಒಂದು ಟಿಬೆಟಿಯನ್ ಕಾಲೋನಿ ಬೈಲುಕುಪ್ಪೆಯಲ್ಲಿದೆ.
ಮೈಸೂರಿನಿಂದ 90 ಕಿ.ಮೀ. ಹಾಗೂ ಬೆಂಗಳೂರಿನಿಂದ 230 ಕಿ.ಮೀ. ದೂರದಲ್ಲಿದೆ. ಲಗ್ಸಮ್ ಸ್ಯಾಂಡಪ್ಲಿಂಗ್ ಎನ್ನುವ ವಸಾಹತು 1961ರಲ್ಲಿ ಹಾಗೂ ಡಿಕ್ಯಲಾರ್ಸೋ ವಸಾಹತು 1969ರಲ್ಲಿ ನಿರ್ಮಾಣವಾಯಿತು. ಇವೆರಡು ಹತ್ತಿರದಲ್ಲೇ ಇರುವುದನ್ನು ಕಾಣಬಹುದು. ಬೌದ್ಧ ಮತದ ಹಲವಾರು ಸನ್ಯಾಸಿಗಳ ಮಂದಿರಗಳಿಗೂ ನೆಲೆನೀಡಿದೆ.
ಹೋಗುವುದು ಹೇಗೆ?
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗಿ ಕೋಲಂಬಿಯಾ ಏಷ್ಯಾ ಆಸ್ಪತ್ರೆಯ ಸಿಗ್ನಲ್ ಹತ್ತಿರ ಬಲಭಾಗಕ್ಕೆ ತಿರುಗಬೇಕು. ಹಾಗೆ ಹುಣಸೂರು ಬೈಪಾಸ್ಅಲ್ಲಿ ಹೋದರೆ ಒಂದು ದೊಡ್ಡ ಕಮಾನು ಸಿಗುತ್ತದೆ. ಅದರೊಳಗೆ ಹಾಗೇ ಮುಂದೆ ಸಾಗಿದರೆ ಸಿಗುವುದೇ ಬೈಲುಕುಪ್ಪೆ ಟಿಬೆಟ್ ಕಾಲೊನಿ.
ಹೊಸತನದ ಅನುಭವ ನೀಡುವ ಈ ಕಾಲೋನಿಗೆ ಕಾಲಿಡುತ್ತಿದ್ದಂತೆಯೇ ಟಿಬೆಟ್ನ ಪರಿಸರ ಕಣ್ಮುಂದೆ ಬರುತ್ತದೆ. ಒಂದೇ ಸಮನೆ ಯಾವುದೋ ಬೇರೆ ಊರಿಗೆ ಬಂದು ಬಿಟ್ಟಿದ್ದೇವೇನೋ ಎನ್ನುವಷ್ಟು ಭ್ರಮೆಗೆ ಒಳಗಾಗುವುದರಲ್ಲಿ ಸಂದೇಹವಿಲ್ಲ. ಕಾಲೋನಿಯ ಒಳ ಪ್ರವೇಶ ಆಗುತ್ತಿದ್ದಂತೆ ಅಲ್ಲಿರುವ ಮನೆಗಳ ವಿಭಿನ್ನ ಕಟ್ಟಡ ಶೈಲಿ, ಜನರ ಉಡುಗೆ ತೊಡುಗೆ, ಟಿಬೆಟ್ ಬಹರಗಳನ್ನು ಒಳಗೊಂಡ ಫಲಕ, ಯಾವುದೋ ಬೆಟ್ಟದ ತುದಿಯಲ್ಲಿ ನಿಂತಾಗ ಸಿಗುವಷ್ಟು ನಿರಾಳ ಮೌನ ಇವೆಲ್ಲವೂ ಒಮ್ಮೆ ನೆಮ್ಮದಿಯ ಅನುಭವ ನೀಡುತ್ತದೆ.
ಮಠಗಳು
ನಮ್ಡ್ರೋಲಿಂಗ್ ಎನ್ನುವುದು ಇಲ್ಲಿಯ ಪ್ರಮುಖ ಮಠ. ಪ್ರತಿಯೊಂದು ಮಠಗಳ ಬಾಗಿಲಿಗೆ ಸಿಂಗರಿಸಲಾದ ವಿವಿಧ ಬಣ್ಣದ ಬಾವುಟಗಳು ಯಾತ್ರಿಕರನ್ನು ಸ್ವಾಗತಿಸುತ್ತವೆ. ಇಲ್ಲಿಂದ ಹಾಗೆ ಒಳಹೊಕ್ಕಿ ನೋಡಿದರೆ ಇಲ್ಲಿರುವ ಭೌವ್ಯತೆ ನಮ್ಮನ್ನು ಒಮ್ಮೆ ಮಂತ್ರ ಮುದ್ಧರನ್ನಾಗಿಸುತ್ತದೆ. ಧ್ಯಾನದಲ್ಲಿ ಲೀನನಾದ ಬುದ್ಧನ ಚಿನ್ನದ ಮೂರ್ತಿ, ಪ್ರಾರ್ಥನೆ ಎಲ್ಲವೂ ಹೊಸ ಪಾಠ ಕಲಿಸುತ್ತವೆ.
ಸುವರ್ಣ ಲೇಪಿತ ಬುದ್ಧನ, ಪದ್ಮಶಾಂಭವ ಹಾಗೂ ಅಮಿತಾಯುಶ್ ಮೂರ್ತಿಗಳಿರುವುದು ಕಾಣಬಹುದು. ಅಲ್ಲಲ್ಲಿ ಗೋಡೆಯ ಮೇಲೆ ಕೆತ್ತಲಾದ ಚಿತ್ರಗಳು, ದೀಪದ ಸಾಲು ಹೀಗೆ ಈ ಮಠದ ಎಲ್ಲಾ ಸೌಂದರ್ಯವನ್ನು ನೋಡಲು ಅರ್ಧ ದಿನವೇ ಬೇಕು.
ಇಲ್ಲಿಯೇ ಪಡೆಯಬಹುದು
ಇಲ್ಲಿ ಒಂದು ರಾತ್ರಿ ಉಳಿಯಬೇಕೆಂದುಕೊಂಡರೆ ಕಡಿಮೆ ಬೆಲೆಯಲ್ಲಿಯೇ ವಸತಿ ವ್ಯವಸ್ಥೆ, ಸಸ್ಯಹಾರಿ ಊಟಕ್ಕಾಗಿ ಅನೇಕ ಚಿಕ್ಕ ಕೆಫೆಗಳು ಇವೆ.
ಹತ್ತಿರದ ಆಕರ್ಷಣೆ
ಇದರ ಹತ್ತಿರದಲ್ಲೇ ಒಂದು ಸರೋವರ, ರಂಗಸ್ವಾಮಿ ಬೆಟ್ಟ, ಬೌದ್ಧರ ಸನ್ಯಾಸಿ ಮಂದಿರಗಳು ಸಿಗುತ್ತವೆ.