ಅಬ್ಬಾ! ಮೂರು ದಿನ ರಜಾ ಇದೆ... ಈ ಹಾಲಿಡೇಲಿ ಬೆಂಗಳೂರು ಸಿಟಿಯಿಂದ ದೂರ ಹೋಗಬೇಕು... ಆದ್ರೆ ಯಾವ ಕಡೆ ಹೊಗ್ಬೇಕು ಅನ್ನೋ ಗೊಂದಲದಲ್ಲಿದ್ರೆ ಇಲ್ಲಿದೆ ನೋಡಿ ಚೋಟಾ ಪ್ಲಾನ್... ಬೆಂಗಳೂರಿಂದ ಸ್ವಲ್ಪದೂರ... ನೋಡೋಕೆ ಅಂತನೇ ಒಂದಿಷ್ಟು ವಿಶೇಷ ಸ್ಥಳಗಳು... ಇವೆಲ್ಲಾ ಇರೋದು ಮೈಸೂರಲ್ಲಿ... ಇಲ್ಲಿಗೆ ಬರೋ ನಿರ್ಧಾರ ಮಾಡಿದ್ರೆ ಸಾಕು.
ಪಯಣದ ಆರಂಭದಿಂದಲೇ ಹಲವಾರು ಸ್ಥಳಗಳನ್ನಾ ನೋಡ್ತಾ ಮೈಸೂರು ತಲುಪ ಬಹುದು. ಸ್ವಲ್ಪ ಹೆಚ್ಚು ಖರ್ಚಾದ್ರು ಪರ್ವಾಗಿಲ್ಲಾ ಅನ್ನೋದಾದ್ರೆ ಮೈಸೂರಲ್ಲಿ ಅನೇಕ ಹೋಂಸ್ಟೇಗಳು ಇವೆ. ಮನೆ ವಾತಾವರಣದ ಅನುಭವ ಪಡೆದು ವಿಶೇಷ ವಿಚಾರಗಳ ಜೊತೆ ವಿನೂತನ ವಿನ್ಯಾಸದ ಅರಮನೆ, ಮನಸ್ಸಿಗೆ ಮುದ ನೀಡುವ ಕೆ.ಆರ್.ಎಸ್, ರೈಲ್ವೇ ಮ್ಯೂಸಿಯಂಗಳನ್ನಾ ನೋಡಬಹುದು... ಇನ್ನು ಸ್ವಲ್ಪ ದೇವರ ದರ್ಶನವನ್ನೂ ಮಾಡ್ಬೇಕು ಅಂತಾದ್ರೆ ಚಾಮುಂಡಿ ಬೆಟ್ಟಕ್ಕೂ ಹೋಗಬಹುದು...
ಮೈಸೂರು, ಚಿತ್ರಕೃಪೆ: Rahul Zota
ಮೈಸೂರಿಗೆ ಹೋಗುವಾಗ
ಬೆಂಗಳೂರಿನಿಂದ ಜರ್ನಿ ಆರಂಭ ಆಗುತ್ತಿದ್ದಂತೆ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಉದ್ಯಾನವನ (ಪಾರ್ಕ್) ಎನಿಸಿಕೊಂಡ ವಂಡರ್ ಲಾ, ವಿವಿಧ ಬಗೆಯಲ್ಲಿ ಕುತೂಹಲ ಕೆರಳಿಸುವ ಹಾಗೂ ಮನರಂಜನೆ ನೀಡಬಲ್ಲ ಇನೋವೇಟಿವ್ ಫಿಲ್ಮ ಸಿಟಿ, ಕರ್ನಾಟಕದ ಹೆಗ್ಗಳಿಕೆಗೆ ಪಾತ್ರವಾದ ಕಲೆ, ಸಾಹಿತ್ಯ, ಪುರಾತನ ವಸ್ತುಗಳನ್ನು ಪ್ರದರ್ಶಿಸುವ ಜಾನಪದಲೋಕ ಸಿಗುತ್ತದೆ.
ಹೀಗೆ ಸಾಗುವಾಗ ರಾಜ್ಯದ ಇನ್ನೊಂದು ಹಿರಿಮೆಗೆ ಪಾತ್ರವಾದ ಚನ್ನಪಟ್ಟಣ ಸಿಟಿ ಸಿಗುತ್ತದೆ. ಇಲ್ಲಿ ಶ್ರೀಗಂಧ, ಬೀಟೆ, ದಂತ ಹೀಗೆ ಅನೇಕ ಬಗೆಯ ಮರಗಳಿಂದ ತಯಾರಾದ ಗೊಂಬೆಗಳು, ಮನೆಯ ಅಲಂಕಾರಿ ಕರಕುಶಲ ವಸ್ತುಗಳು ದೊರೆಯುತ್ತವೆ. ಇದು ಟಿಪ್ಪುವಿನ ಕಾಲದಿಂದಲೂ ಪಸಿದ್ಧಿಯನ್ನು ಪಡೆದುಕೊಂಡು ಬಂದಿದೆ. ಜೊತೆಗೆ ಜಗತ್ತಿನಲ್ಲೇ ಒಂದು ವಿಶೇಷತೆಗೆ ಪಾತ್ರವಾಗಿದೆ.
ರಂಗನತಿಟ್ಟು, ಚಿತ್ರಕೃಪೆ: Sri Raman A
ಇವೆಲ್ಲವನ್ನು ನೋಡುತ್ತ ಮುಂದೆ ಹೋದರೆ ಸ್ವಲ್ಪ ದೂರದಲ್ಲಿ ಭಾರತದ ಅತಿದೊಡ್ಡ ನದಿಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಕಾವೇರಿ ನದಿ, ಏಷ್ಯಾದ ಮೊದಲ ವಿದ್ಯುತ್ ಉತ್ಪಾದನ ಘಟಕ ಶಿವನ ಸಮುದ್ರ, ಮರಳಿನಿಂದ ಹುದುಗಿರುವ ತಲಕಾಡನ್ನು ನೋಡಬಹುದು.
ರಂಗನ ತಿಟ್ಟು
ಮೈಸೂರಿಗೆ ಸಾಗುವಾಗ ಅನೇಕ ವಿಶೇಷ ಸ್ಥಳಗಳನ್ನು ನೋಡಿ ದೈಹಿಕವಾಗಿ ದಣಿದಿದ್ದರೆ ಹೋಂ ಸ್ಟೇನಲ್ಲಿ ಸ್ವಲ್ಪ ರಿಲ್ಯಾಕ್ಸ್ ಮಾಡಿ. ಆದ್ರೆ ಮುಂಜಾವಿನಲ್ಲಿ ಕಾವೇರಿ ನದಿಯ ದಡದಲ್ಲಿ ಇರುವ ರಂಗನ ತಿಟ್ಟಿಗೆ ಭೇಟಿನೀಡಿ. ಬೆಳಗಿನ ಆ ತಂಪು ಗಾಳಿಯ ಜೊತೆ ತನ್ನ ಕೂಗನ್ನು ದನಿಗೂಡಿಸುವ ಹಕ್ಕಿಗಳ ಚಿತ್ತಾರವನ್ನು ನೋಡುವುದು, ಕೇಳುವುದೇ ಒಂದು ಸೊಗಸು.
ಚಾಮುಂಡಿ ಬೆಟ್ಟ
ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳ ಹರಿವು ಹೆಚ್ಚು. ಇಲ್ಲಿಯ ವಿಶೇಷತೆ ಹಾಗೂ ಸಾಂಪ್ರದಾಯಿಕ ವಿಚಾರಗಳನ್ನು ತಿಳಿದುಕೊಳ್ಳುತ್ತಾ ದೇವರ ದರ್ಶನ ಪಡೆಯಲು ಸ್ವಲ್ಪ ಸಮಯ ಹಿಡಿಯಬಹುದು. ಅದಕ್ಕಾಗಿಯೇ ಸ್ವಲ್ಪ ಸಮಯವನ್ನು ಮೀಸಲಿಟ್ಟುಕೊಳ್ಳುವುದು ಒಳಿತು.
ಮೈಸೂರು ಅರಮನೆ, ಚಿತ್ರಕೃಪೆ: Suvaisnav
ಅರಮನೆ
ಒಡೆಯರ ಕಾಲದಲ್ಲಿ ನಿರ್ಮಾಣವಾದ ಈ ಅರಮನೆ ಕರ್ನಾಟಕದಲ್ಲಿ ತನ್ನದೇ ಆದ ಘನತೆಯನ್ನು ಪಡೆದುಕೊಂಡಿದೆ. ರಾಜರಕಾಲದ ಇತಿಹಾಸವನ್ನು ಸಾರುವ ಈ ಅರಮನೆ ರಾಜರ ಆಡಳಿತ, ಕರ್ನಾಟಕದ ಸಾಹಿತ್ಯ, ಸಂಗೀತ ಹಾಗೂ ಧಾರ್ಮಿಕ ವಿಚಾರಗಳನ್ನು ಬಿಚ್ಚಿಡುತ್ತದೆ. ಈ ಅರಮನೆಯನ್ನು ನೋಡಲು ಬೆಳಗ್ಗೆ 6 ರಿಂದ 9ರವರೆಗೆ ಮತ್ತು ಮಧ್ಯಾಹ್ನ 3.30 ರಿಂದ 6.30ರ ವರೆಗೆ ಅವಕಾಶವಿದೆ.
ಕೆ.ಆರ್.ಎಸ್: ಕಾವೇರಿ ನದಿಗೆ ಈ ಡ್ಯಾಮ್ ಕಟ್ಟಲಾಗಿದೆ. ಎಮ್. ವಿಶ್ವೇಶ್ವರಯ್ಯಾ ಅವರ ಮುಂದಾಲೋಚನೆಯಿಂದಾಗಿ ನಿರ್ಮಾಣಗೊಂಡಿರುವ ಈ ಡ್ಯಾಮ್ನಿಂದ ಮಂಡ್ಯಾ ಹಾಗೂ ಮೈಸೂರು ಜನತೆಗೆ ನೀರಿನ ಕೊರತೆಯಿಲ್ಲ. ಇದರ ಸುತ್ತ ನಿರ್ಮಾಣಗೊಂಡ ಹಸಿರು ಉದ್ಯಾನವನ ಹಾಗೂ ನೀರಿನ ಕಾರಂಜಿಗಳು ಸುಂದರ ಮನೋಹರ.
ರೈಲ್ವೇ ಮ್ಯೂಸಿಯಂ, ಚಿತ್ರಕೃಪೆ: Nagesh Kamath
ರೈಲ್ವೇ ಮ್ಯೂಸಿಯಂ
ಇಲ್ಲಿ ಪುರಾತನ ಕಾಲದ ರೈಲ್ವೇ ಹಾಗೂ ಕೆಲವು ವಾಹನಗಳ ಸಂಗ್ರಹ ಇರುವುದರಿಂದ ಹಿಂದಿನ ಜನರ ವಾಹನಗಳನ್ನು ನೋಡುಲು ಒಂದು ಅವಕಾಶ.
ಇದನ್ನೆಲ್ಲಾ ಮಿಸ್ ಮಾಡ್ಕೋಬೇಡಿ ಮೈಸೂರಿನ ವಿಶೇಷ ತಿನಿಸುಗಳಾದ ಮೈಸೂರ್ ಪಾಕ್, ಮದ್ದೂರು ವಡೆ, ಮೈಸೂರು ಸಿಲ್ಕ್ ಸ್ಯಾರಿ ಹಾಗೂ ಪಂಜೆಗಳು ಇಲ್ಲಿಯ ವಿಶೇಷತೆಯನ್ನು ಪಡೆದುಕೊಂಡಿದೆ.
ಚಿಕ್ಕ ಟಿಪ್ಸ್
ಬೆಳಿಗ್ಗೆ ಬೇಗ ಹೊರಟಿದ್ರೆ ಸಿಟಿಯಲ್ಲಿ ಸಿಗೋ ಟ್ರಾಫಿಕ್ಇಂದ ಬಚಾವ್ ಆಗಬಹುದು. ಇನ್ನೊಂದೇನಂದ್ರೆ ಮೈಸೂರಿನ ಹಳ್ಳಿಯ ರಸ್ತೆಗಳಲ್ಲಿ ಸಂಚಾರ ಬೆಳೆಸಿದ್ರೆ ಹಳ್ಳಿಯ ವಿಶೇಷ ಸೊಗಡನ್ನು ನೋಡುತ್ತಾ ಖುಷಿಯಲ್ಲಿ ಸಾಗಬಹುದು.