ಹಸಿರು ಸಿರಿಯ ಮಧ್ಯೆ ಇದ್ದರೆ ಅದೇನೋ ಒಂದು ರೀತಿಯ ಸಮಾಧಾನ. ಕೆಲಸದ ಒತ್ತಡ ಅಥವಾ ಸಂಸಾರದ ಸಮಸ್ಯೆ ಅದೇನೇ ಇರಲಿ ಎಲ್ಲವೂ ಆ ಕ್ಷಣಕ್ಕೆ ದೂರವಾಗುತ್ತವೆ. ನಗರೀಕರಣ, ಕಾರ್ಖಾನೆಗಳ ಹುಟ್ಟಿನಿಂದ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ. ಮಾನವರು ತನ್ನನ್ನು ಎಷ್ಟೇ ನಾಶಪಡಿಸಿದರೂ, ಅವರಿಗಾಗಿ ಇಂದಿಗೂ ಕೆಲವು ಸುಂದರ ನಿಸರ್ಗಧಾಮಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ ಭೂ ತಾಯಿ.
ನಿಜ, ಕರ್ನಾಟಕದಲ್ಲಿ ಹಾಗೂ ಕರ್ನಾಟಕದ ಹೊರವಲಯಗಳಲ್ಲಿ ಹಲವಾರು ಸುಂದರ ನಿಸರ್ಗ ತಾಣಗಳಿವೆ. ವಾರದ ರಜೆಯಲ್ಲಿ ಅಥವಾ ಬಿಡುವಿನ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮನಸ್ಸು ಹೊಸ ಚೈತನ್ಯವನ್ನು ಪಡೆಯುತ್ತದೆ. ಹಾಗಾದರೆ ಬನ್ನಿ ಬೆಂಗಳೂರಿಗೆ ಹತ್ತಿರ ಇರುವ ಹಸಿರು ಸಿರಿಯ ತಾಣಗಳ ಪರಿಚಯ ಮಾಡಿಕೊಳ್ಳೂಣ...
ರಂಗನ ತಿಟ್ಟು
ಮಂಡ್ಯ ಜಿಲ್ಲೆಯಲ್ಲಿ ಬರುವ ಈ ತಾಣ ಪಕ್ಷಿ ಪ್ರಿಯರಿಗೊಂದು ಸ್ವರ್ಗ. ಕಾವೇರಿ ನದಿಯ ತಟದಲ್ಲಿರುವ ಒಂದು ಚಿಕ್ಕ ಪಕ್ಷಿ ಧಾಮ. ಇಲ್ಲಿ 6 ನಡುಗಡ್ಡೆಯಂತಹ ಪ್ರದೇಶವಿದೆ. ಇಲ್ಲಿರುವ ವಿವಿಧ ಬಗೆಯ ಪಕ್ಷಿಗಳ ಹಾರಾಟವನ್ನು ನೋಡುತ್ತಿದ್ದರೆ ಮನಸ್ಸಿನ ದಣಿವೆಲ್ಲಾ ದೂರವಾಗುವುದು. ದೇಶ-ವಿದೇಶದೆಲ್ಲೆಡೆಯಿಂದಲೂ ವಲಸೆ ಬರುವ ಪಕ್ಷಿ ಸಂಕುಲಗಳು ಇಲ್ಲಿವೆ. ಬೆಂಗಳೂರಿನಿಂದ 135 ಕಿ.ಮೀ. ದೂರ ಹಾಗೂ ಮೈಸೂರಿನಿಂದ 16 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಎಲ್ಲಾ ಕಾಲದಲ್ಲೂ ಭೇಟಿ ನೀಡಬಹುದು.
PC: wikipedia.org
ನಂದಿ ಬೆಟ್ಟ
ಚಿಕ್ಕ ಬಳ್ಳಾಪುರ ಆವೃತ್ತಿಯಲ್ಲಿ ಬರುವ ಈ ತಾಣ ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿದೆ. ಪುರಾತನ ಕಾಲದಲ್ಲಿ ಈ ಬೆಟ್ಟದ ಮೇಲೆ ನಂದಿಯ ದೇಗುಲವಿತ್ತು. ಹಾಗಾಗಿಯೇ ಈ ಬೆಟ್ಟಕ್ಕೆ ನಂದಿ ಬೆಟ್ಟ ಎನ್ನುವ ಹೆಸರು ಬಂತು ಎನ್ನುತ್ತಾರೆ. 4851 ಅಡಿ ಎತ್ತರದಲ್ಲಿರುವ ಈ ಬೆಟ್ಟ ಚಾರಣ ಪ್ರಿಯರಿಗೊಂದು ಸ್ವರ್ಗ. ಟಿಪ್ಪು ಸುಲ್ತಾನರ ಕಾಲದ ಒಂದು ಕೋಟೆ ಇರುವುದನ್ನು ಇಲ್ಲಿ ನೋಡಬಹುದು. ಅಂತೆಯೇ ನರಸಿಂಹ ದೇವಾಲಯಗಳು ಇವೆ.
PC: wikimedia.org
ಹೊಗೆನಕಲ್ ಜಲಪಾತ
ಈ ಜಲಪಾತ ಕಾವೇರಿ ನದಿಗೆ ಸೇರಿದ್ದು. ಬೆಂಗಳೂರಿನಿಂದ 180 ಕಿ.ಮೀ. ದೂರದಲ್ಲಿರುವ ಈ ಜಲಪಾತಕ್ಕೆ 'ನಯಾಗರ ಜಲಪಾತ' ಎಂದು ಕರೆಯುತ್ತಾರೆ. ಇಲ್ಲಿಯ ಜಲಧಾರೆಗಳು ಬಂಡೆಗಳಿಗೆ ಬಂದು ಅಪ್ಪಳಿಸುವಾಗ ಹೊಗೆಯಂತೆ ಹೊರ ಹೊಮ್ಮುತ್ತದೆ. ಆದ್ದರಿಂದಲೇ ಇದನ್ನು ಹೊಗೆನಕಲ್ ಜಲಪಾತ ಎಂದು ಕರೆಯುತ್ತಾರೆ. ಇದು ತಮಿಳುನಾಡು ಹಾಗೂ ಕರ್ನಾಟಕದ ಗಡಿಭಾಗದಲ್ಲಿದೆ. ಇಲ್ಲಿಗೆ ಎರಡು ಮಾರ್ಗದಲ್ಲಿ ಬರಬಹುದು.
1. ಬೆಂಗಳೂರು-ಧರ್ಮಪುರಿ-ಪೆನ್ನಾಗರಂ ಮಾರ್ಗ
2. ಕೊಳ್ಳೇಗಾಲ-ಮಹದೇಶ್ವರ ಬೆಟ್ಟ-ಗೋಪಿನಾಥಂ ಮಾರ್ಗ, ಮಹದೇಶ್ವರ ಬೆಟ್ಟದಿಂದ ಹೊಗೆನಕಲ್ಗೆ 47 ಕಿ.ಮೀ. ದೂರ
PC: wikipedia.org
ಮೇಕೆದಾಟು
ಮೇಕೆದಾಟು ವಿಹಾರ ಸ್ಥಳ. ಬೆಂಗಳೂರಿನಿಂದ 90 ಕಿ.ಮೀ. ದೂರದಲ್ಲಿದೆ. ಮೇಕೆದಾಟು ಎಂದರೆ ಕನ್ನಡದಲ್ಲಿ ಮೇಕೆ ಹಾರುವ ಸ್ಥಳ ಎಂದಾಗುತ್ತದೆ. ಕಾವೇರಿ ಮತ್ತು ಅರ್ಕಾವತಿ ನದಿಯ ಸಂಗಮದ ಹತ್ತಿರವೇ ಇದು ಇರುವುದರಿಂದ ಇದನ್ನು ಸಂಗಮ ಎಂತಲೂ ಕರೆಯುತ್ತಾರೆ. ಇಲ್ಲಿ ತೆಪ್ಪದಲ್ಲಿ ವಿಹರಿಸಿ ಖುಷಿ ಪಡಬಹುದು.
PC: wikipedia.org
ಮಡಿಕೇರಿ
ರಮಣೀಯ ಸ್ಥಳಗಳಲ್ಲಿ ಮಡಿಕೇರಿಯೂ ಒಂದು. ಮೈಸೂರು ಹಾಗೂ ಮಂಗಳೂರು ನಡುವೆ ಬರುವ ಈ ತಾಣ ಬೆಂಗಳೂರಿನಿಂದ 252 ಕಿ.ಮೀ. ದೂರದಲ್ಲಿದೆ. ಸದಾಕಾಲ ತಂಪು ಹಾಗೂ ಹಸಿರು ಸಿರಿಯಿಂದ ಕೂಡಿರುತ್ತದೆ. ಇಲ್ಲಿ ನೋಡಲು ಅನೇಕ ಜಲಧಾರೆ, ದೇಗುಲಗಳು, ಐತಿಹಾಸಿಕ ತಾಣಗಳೂ ಇವೆ. ಇಲ್ಲಿಗೆ ಬರಲು ಅಕ್ಟೋಬರ್ ನಿಂದ ಏಪ್ರಿಲ್ ಸೂಕ್ತಕಾಲ.
PC: wikimedia.org
ನಾಗರ ಹೊಳೆ
ವನ್ಯ ಜೀವಿ ಧಾಮಗಳನ್ನು ನೋಡಲು ಯೋಗ್ಯವಾದ ಸ್ಥಳವೆಂದರೆ ನಾಗರ ಹೊಳೆ. ಹಲವಾರು ಪ್ರಾಣಿ ಹಾಗೂ ಪಕ್ಷಿ ಸಂಕುಲಗಳನ್ನು ನೋಡಬಹುದು. ಹಿನ್ನೀರಿನಲ್ಲಿ ಬೋಟ್ಗಳ ಮೂಲಕ ನಾಗರ ಹೊಳೆಯನ್ನು ಒಂದು ಸುತ್ತು ತಿರುಗಬಹುದು ಬೆಂಗಳೂರಿನಿಂದ 261 ಕಿ.ಮೀ. ದೂರದಲ್ಲಿರುವ ಈ ತಾಣ ಎಂದಿಗೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಮಳೆಗಾಲವೊಂದನ್ನು ಬಿಟ್ಟು ಉಳಿದ ಎಲ್ಲಾ ಕಾಲದಲ್ಲೂ ಇಲ್ಲಿಗೆ ಬರಬಹುದು.
PC: wikipedia.org
ಮೈಸೂರು
ಕರ್ನಾಟಕದ ಎರಡನೇ ಅತಿದೊಡ್ಡ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು ತನ್ನ ಮಡಿಲಲ್ಲಿ ಅನೇಕ ಹಸಿರು ಸಿರಿಗಳ ತಾಣವನ್ನು ಇಟ್ಟುಕೊಂಡಿದೆ. ಕಾರಂಜಿ ಕೆರೆ, ಕುಕ್ಕರಳ್ಳಿ ಕೆರೆ, ಬಂಡೀಪುರ, ತಲಕಾಡು, ಬೃಂದಾವನ ಹೀಗೆ ಅನೇಕ ಸುಂದರ ತಾಣಗಳಿವೆ. ಬೆಂಗಳೂರಿನಿಂದ 149 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ವರ್ಷದ ಎಲ್ಲಾ ಕಾಲದಲ್ಲೂ ಭೇಟಿ ನೀಡಬಹುದು.
ಜೋಗ
ಸಾಗರ ತಾಲೂಕಿನಲ್ಲಿ ಬರುವ ಈ ಜಲ ಸಿರಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಈ ತಾಲೂಕಿನಲ್ಲಿಯೇ ಇರುವ ಇನ್ನೊಂದು ಜಲಪಾತವೆಂದರೆ ಸಿಗಂಧೂರು ಜಲಪಾತ. ಮಳೆಗಾಲದಲ್ಲಿ ಮೈದುಂಬಿ ಧುಮುಕುವ ಈ ತಾಣ ಬೆಂಗಳೂರಿನಿಂದ 412 ಕಿ.ಮೀ. ದೂರದಲ್ಲಿದೆ.
PC: wikipedia.org