ಸುತ್ತಲು ಕತ್ತಲು... ತಂಪಾದ ತಂಗಾಳಿ... ಇಂಪಾದ ಹಕ್ಕಿಯ ಕಲರವ... ಪುಟ್ಟದಾದ ಗುಡಿಸಲು... ಅದರ ಮುಂದೊಂದು ಚಿಕ್ಕದಾದ ಕಟ್ಟಿಗೆಯ ಉರಿ... ಉರಿಯ ಸುತ್ತ ಸ್ನೇಹಿತರ ಹಿಂಡು... ಅಬ್ಬಾ! ಎಂತಹ ಸುಂದರ ಅನುಭವ... ಇವೆಲ್ಲವನ್ನು ಅನುಭವಿಸಬೇಕು ಎಂದರೆ ಬೆಟ್ಟದ ಮೇಲೆ ಶಿಬಿರಗಳನ್ನು ಕೈಗೊಳ್ಳಬೇಕು. ಹಸಿರು ಸಿರಿಯ ತಪ್ಪಲಲ್ಲಿ ಇರುವ ನಮ್ಮ ನಾಡು, ಅನೇಕ ಅದ್ಭುತ ತಾಣಗಳನ್ನು ಒಳಗೊಂಡಿದೆ. ಅವುಗಳ ಮಧ್ಯೆ ಸ್ವಲ್ಪ ಸಮಯ ಕಳೆದರೆ ಸಾಕು ಅದೆಷ್ಟೋ ಸುಂದರ ಅನುಭವಗಳು ನಮ್ಮದಾಗುತ್ತವೆ.
ವಾರಾಂತ್ಯದ ರಜೆಯಲ್ಲಿ ಸುಂದರ ಗಿರಿಧಾಮಗಳ ಮಧ್ಯೆ ಶಿಬಿರವನ್ನು ಹೂಡಿ, ಸ್ನೇಹಿತರೊಂದಿಗೆ ಒಂದಿಷ್ಟು ಹಾಳು ಹರಟೆಯನ್ನು ಹೊಡೆಯಲು ಅನುಕೂಲ ಕಲ್ಪಿಸಿಕೊಡುವ ತಾಣಗಳ ಪರಿಚಯ ಇಲ್ಲಿದೆ ನೋಡಿ...
ಕೂರ್ಗ್ ಶಿಬಿರ
ಬೆಂಗಳೂರಿನಿಂದ 243.3 ಕಿ.ಮೀ ದೂರದಲ್ಲಿರುವ ಈ ತಾಣ ಕಾಫಿ ಬೆಳೆಗೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಗಿರಿಧಾಮಗಳು, ಜಲಧಾರೆಗಳು, ಕಾಫಿ ತೋಟಗಳು ಹಾಗೂ ಕಣಿವೆಗಳಿವೆ. ಹಾಗೆಯೇ ವಸತಿಗಾಗಿ ಹಲವಾರು ಹೋಮ್ ಸ್ಟೇ ಹಾಗೂ ರೆಸಾರ್ಟ್ಗಳೂ ಇವೆ. ರೆಸಾರ್ಟ್ ಅಥವಾ ಹೋಮ್ ಸ್ಟೇಅವರ ಅನುಮತಿ ಹಾಗೂ ಸಹಾಯ ಪಡೆದು ಶಿಬಿರಗಳನ್ನು ಹೂಡಬಹುದು.
PC: flickr.com
ಚಿಕ್ಕಮಗಳೂರು ಶಿಬಿರ
ದಕ್ಷಿಣ ಭಾರತದಲ್ಲಿರುವ ಅತ್ಯಂತ ಎತ್ತರದ ಗಿರಿಧಾಮವೆಂದರೆ ಮುಳ್ಳಯ್ಯನ ಗಿರಿ. ಚಾರಣ ಮಾಡಲು ಯೋಗ್ಯವಾದ ಸ್ಥಳ. ಸುಂದರವಾದ ಪ್ರಕೃತಿ, ಪ್ರಶಾಂತವಾದ ವಾತಾವರಣ ಎಲ್ಲವೂ ಮನಸ್ಸಿ ಮುದ ನೀಡುತ್ತವೆ. ಇಲ್ಲಿ ಒಂದು ರಾತ್ರಿಯ ಶಿಬಿರವನ್ನು ಕೈಗೊಂಡರೆ ಸುಂದರ ಅನುಭವ ನಿಮ್ಮದಾಗುವುದು. ಇದು ಬೆಂಗಳೂರಿನಿಂದ 242.8 ಕಿ.ಮೀ ದೂರದಲ್ಲಿದೆ.
PC: flickr.com
ಭೀಮೇಶ್ವರಿ ಶಿಬಿರ
ಮಂಡ್ಯಾ ಜಿಲ್ಲೆಯ ಆವೃತ್ತಿಯಲ್ಲಿ ಬರುವ ಈ ತಾಣ ಸಾಹಸ ಕ್ರೀಡೆ ಹಾಗೂ ಶಿಬಿರಗಳಿಗೆ ಸೂಕ್ತ ಸ್ಥಳ. ಸದಾಕಾಲ ಕಾವೇರಿ ನದಿಯ ನೀರಿನ ಸೆಲೆಯಲ್ಲಿರುವ ಈ ತಾಣ ಅನೇಕ ಗಿರಿಧಾಮಗಳಿಂದ ಕೂಡಿದೆ. ಬೆಂಗಳೂರಿನಿಂದ 105 ಕಿ.ಮೀ. ದೂರದಲ್ಲಿದೆ.
PC: flickr.com
ಚಿತ್ರದುರ್ಗ ಶಿಬಿರ
ಬೆಂಗಳೂರಿನಿಂದ 203 ಕಿ.ಮೀ. ದೂರದಲ್ಲಿರುವ ಚಿತ್ರದುರ್ಗ ಐತಿಹಾಸಿಕ ತಾಣಗಳಿಗೆ ಹೆಸರಾಗಿದೆ. ಸುಂದರ ಕಲಾಕೃತಿಯ ಕೋಟೆಗಳು, ದೇವಸ್ಥಾನ, ಗುಹೆಗಳು ಹಾಗೂ ಬೆಟ್ಟಗಳನ್ನು ಇಲ್ಲಿ ಕಾಣಬಹುದು. ವಿಶಾಲ ಪ್ರದೇಶಗಳನ್ನು ಒಳಗೊಂಡಿರುವ ಇಲ್ಲಿ ಯಾವ ಭಯವಿಲ್ಲದೆ ಶಿಬಿರಗಳನ್ನು ಹೂಡಿ ವಾರದ ರಜೆಯ ಆನಂದವನ್ನು ಅನುಭವಿಸಬಹುದು. ಊಟ-ತಿಂಡಿಯನ್ನು ಕೊಂಡೊಯ್ದರೆ ಯಾವ ಚಿಂತೆಯೂ ಕಾಡದು.
PC: flickr.com
ಶಿವಮೊಗ್ಗ ಶಿಬಿರ
ಬೆಂಗಳೂರಿನಿಂದ 300 ಕಿ.ಮೀ. ದೂರದಲ್ಲಿರುವ ಶಿವಮೊಗ್ಗ, ಶರಾವತಿ ನದಿಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ದಟ್ಟವಾದ ಹಸಿರು ಕಾಡುಗಳು, ಸುಂದರವಾದ ಜಲಪಾತ ಹಾಗೂ ಅನೇಕ ಗಿರಿಧಾಮಗಳನ್ನು ಹೊಂದಿರುವ ಈ ತಾಣದಲ್ಲಿ ಶಿಬಿರವನ್ನು ಹೂಡಿದರೆ ಅಮೋಘ ಅನುಭವ ನಿಮ್ಮದಾಗುವುದು. ವಸತಿ ವ್ಯವಸ್ಥೆ ಹಾಗೂ ಊಟ-ತಿಂಡಿಗಳಿಗೆ ಯಾವುದೇ ತೊಂದರೆ ಆಗದು.
PC: flickr.com
ದಾಂಡೇಲಿ ಶಿಬಿರ
ದಟ್ಟ ಅರಣ್ಯ ಪ್ರದೇಶ ಹಾಗೂ ವನ್ಯ ಜೀವಿಗಳ ಧಾಮಕ್ಕೆ ಹೆಸರಾದರ ದಾಂಡೇಲಿ ಬೆಂಗಳೂರಿನಿಂದ 461.9 ಕಿ.ಮೀ. ದೂರದಲ್ಲಿದೆ. ಕಾಳಿ ನದಿ ತೀರವನ್ನು ಒಳಗೊಂಡಿರುವ ಈ ತಾಣದಲ್ಲಿ ಶಿಬಿರವನ್ನು ಹೂಡಬಹುದು. ನಮಗೆ ಬೇಕಾದ ಆಹಾರವನ್ನು ನಾವೇ ತಯಾರಿಸಿಕೊಳ್ಳಬಹುದು. ಹೆಚ್ಚು ಮಾಹಿತಿ ಬೇಕಿದ್ದರೆ ಇಲ್ಲಿಯ ಮಾರ್ಗದರ್ಶಕರ ಮೊರೆ ಹೋದರೆ ಸಾಕು. ಇಲ್ಲಿ ರಾತ್ರಿ ಚಾರಣ ಮಾಡಲು ಅವಕಾಶವಿದೆ.
PC: flickr.com
ಹೆಬ್ರಿ ಶಿಬಿರ
ಉಡುಪಿ ಜಿಲ್ಲೆಯಲ್ಲಿ ಬರುವ ಚಿಕ್ಕ ಊರು ಹೆಬ್ರಿ. ಇದು ಬೆಂಗಳೂರಿನಿಂದ 374.5 ಕಿ.ಮೀ ದೂರದಲ್ಲಿದೆ. ಇಲ್ಲಿಯ ವರಹಾ ನದಿ ತೀರದಲ್ಲಿ ರಾಫ್ಟಿಂಗ್ ಮಾಡಬಹುದು. ಹೆಬ್ರಿಯ ಗಿರಿಧಾಮಗಳಲ್ಲಿ ಚಾರಣ ಹಾಗೂ ಶಿಬಿರಗಳನ್ನು ಕೈಗೊಳ್ಳಬಹುದು. ಪ್ರಶಾಂತವಾದ ವಾತಾವರಣದಲ್ಲಿ ಶಿಬಿರವನ್ನು ಹೂಡಿ, ಸುಂದರ ಅನುಭವವನ್ನು ಪಡೆಯಬಹುದು.
PC: flickr.com