ಇಂದು ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿರುವ, ಭಾರತದ ಸಿಲಿಕಾನ್ ಕಣಿವೆ, ಮಾಡರ್ನ್ ಸಿಟಿ, ಹೈಟೆಕ್ ಸಿಟಿ, ಮಾಹಿತಿ ತಂತ್ರಜ್ಞಾನ ನಗರ ಎಂಬೆಲ್ಲ ಬಿರುದು, ಪ್ರಶಂಸೆಗಳನ್ನು ಪಡೆದುಕೊಂಡಿರುವ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ತನ್ನದೆ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವುದು ವಿಶೇಷ.
ಹೊಸಬರಿಗೆ, ಇಂದಿನ ಮಕ್ಕಳಿಗೆ ಬೆಂಗಳೂರು ಒಂದು ಆಧುನಿಕ ನಗರ ಎಂದಷ್ಟೆ ಗೊತ್ತಿರಬಹುದೇ ಹೊರತು ಇಲ್ಲಿಯೂ ಸಹ ಶತ ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಕರಗ ಉತ್ಸವ ಹಾಗೂ ಇತರೆ ಸಾಂಸ್ಕೃತಿಕ ಉತ್ಸವಗಳ ಕುರಿತು ಬಹುತೇಕರಿಗೆ ತಿಳಿದಿರಿಲಿಕ್ಕಿಲ್ಲ.
ನಿಮಗಿಷ್ಟವಾಗಬಹುದಾದ : ತೀರ್ಥಹಳ್ಳಿಯ ಎಳ್ಳಮವಾಸ್ಯೆ ಬಲು ವಿಶಿಷ್ಟ
ಹೌದು, ಕರಗ ಉತ್ಸವ ಅದರಲ್ಲೂ ವಿಶೇಷವಾಗಿ ಬೆಂಗಳೂರು ಕರಗ ತನ್ನದೆ ಆದ ವಿಶಿಷ್ಟ ಇತಿಹಾಸವನ್ನು ಹೊಂದಿದೆ. ಹಿಂದೂ ಕ್ಯಾಲೆಂಡರಿನ ಹೊಸ ವರ್ಷದ ಪ್ರಥಮ ಹುಣ್ಣಿಮೆಯ ದಿನದಂದು ಆಚರಿಸಲಾಗುವ ಈ ಉತ್ಸವ ಐದು ಶತಮಾನಗಳಷ್ಟು ಹಳೆಯ ಇತಿಹಾಸವನ್ನೆ ಹೊಂದಿದೆ.
ಏಪ್ರಿಲ್ 14 ರಂದು ಈ ವರ್ಷದ ಅಂದರೆ 2016 ರ ಕರಗ ಉತ್ಸವ ಪ್ರಾರಂಭಗೊಳ್ಳಲಿದ್ದು ಸುಮಾರು 11 ದಿನಗಳ ಕಾಲ ಇದನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ಯಾವ ಬೇಧ-ಭಾವಗಳಿಲ್ಲದೆ ಬೆಂಗಳೂರಿನಲ್ಲಿ ಕನ್ನಡಿಗರ ಜೊತೆ ನೆಲೆಸಿರುವ ಎಲ್ಲ ಬಹು ಭಾಷಿಕರೂ ಸಹ ಈ ಉತ್ಸವವನ್ನು ಕಣ್ತುಂಬಿಕೊಳ್ಳಬಹುದು.
ಪ್ರಸ್ತುತ ಲೇಖನದ ಮೂಲಕ ಬೆಂಗಳೂರು ಕರಗ ಉತ್ಸವದ ಕುರಿತು ಪ್ರಚಲಿತದಲ್ಲಿರುವ ಅನೇಕ ಮಾಹಿತಿಗಳನ್ನು ತಿಳಿಯಿರಿ ಹಾಗೂ ಈ ಒಂದು ರೋಮಾಂಚಕ ಉತ್ಸವದ ಸುಂದರ ಅನುಭವ ಸವಿಯಲು ಮನ ಬಯಸಿದ್ದಲ್ಲಿ ಬಿಡುವು ಮಾಡಿಕೊಂಡು ಬೆಂಗಳೂರಿಗೆ ಭೇಟಿ ನೀಡಿ ಧರ್ಮರಾಯನ ದೇವಸ್ಥಾನಕ್ಕೆ ತೆರಳಿ.
ಬೆಂಗಳೂರು ಕರಗ :
ಕರಗ ಮೂಲತಃ ಶಕ್ತಿ ದೇವಿಯ ಉತ್ಸವವಾಗಿದೆ. ತಿಗಳ ಸಮುದಾಯದವರಿಂದ ಇದು ಮುಖ್ಯವಾಗಿ ಆಚರಿಸಲ್ಪಡುತ್ತದೆ. ಇನ್ನೂ ವಿಶೇಷವೆಂದರೆ ಮಹಾಭಾರತದ ಪಾತ್ರಧಾರರಾದ ಪಾಂಡವರ ಪತ್ನಿಯಾದ ದ್ರೌಪದಿಯು ತಿಗಳ ಸಮುದಾಯದವರಿಂದ ಕುಲದೇವಿ/ಆದಿಶಕ್ತಿಯಾಗಿ ಪೂಜಿಸಲ್ಪಡುತ್ತಾಳೆ. ಶತ ಶತಮಾನಗಳಿಂದ ಈ ಸಮುದಾಯದವರಿಂದ ಈ ಉತ್ಸವವು ಆಚರಿಸಲ್ಪಡುತ್ತಿದೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ಇನ್ನೂ ತಿಗಳರ ಮೂಲಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲವಾದರೂ ಒಂದು ಮೂಲದ ಪ್ರಕಾರ, ಇವರು ವಹ್ನಿಕುಲ ಕ್ಷತ್ರಿಯ ಪಂಗಡಕ್ಕೆ ಸೇರಿದವರು ಹಾಗೂ ಕರ್ನಾಟಕ ಮತ್ತು ತಮಿಳುನಾಡಿನ ಕೆಲ ಭಾಗಗಳಲ್ಲಿ ವಾಸವಿದ್ದಾರೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಿಗಳ ಸಮುದಾಯದವರಿದ್ದಾರೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ಇವರ ಮೂಲ ಕಸುಬು ಹೂದೋಟ ಕೃಷಿ, ತರಕಾರಿ ಬೆಳೆಯುವುದಾಗಿದೆ. ಇವರ ಆರಾಧ್ಯ ದೇವಿ ದ್ರೌಪದಿ. ಇನ್ನೊಂದು ಮೂಲದ ಪ್ರಕಾರ, ಹಿಂದೆ ಹೈದರ್ ಅಲಿ ಬೆಂಗಳೂರಿನಲ್ಲಿ ಲಾಲ್ ಬಾಗ್ ಹೂದೋಟ ನಿರ್ಮಿಸಿದಾಗ ಅದರ ಸಮಂಜಸವಾದ ನಿರ್ವಹಣೆಗೆಂದು ತಿಗಳರನ್ನು ಬೆಂಗಳೂರಿನಲ್ಲೆ ನೆಲೆಸುವಂತೆ ಪ್ರೋತ್ಸಾಹಿಸಿದ್ದನಂತೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ತಿಗಳರು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕನ್ನಡ ಮಾತನಾಡಬಲ್ಲವರಾಗಿದ್ದು ಅವರದ್ದೆ ಆದ ತಿಗಳಾರಿ ಭಾಷೆಯೂ ಚಾಲ್ತಿಯಲ್ಲಿದೆ. ಇದು ಕನ್ನಡ ಮತ್ತು ತಮಿಳು ಮಿಶ್ರಿತದಿಂದ ರೂಪಿತವಾದ ಭಾಷೆಯಾಗಿದೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ಇನ್ನೂ ಉತ್ಸವದ ಕುರಿತು ಹೇಳಬೇಕೆಂದರೆ "ಕ ರ ಗ" ಎಂಬುದು "ಕೈ"ಯಲ್ಲಿ ಹಿಡಿಯದೆ "ರುಂ"ಡದಲ್ಲಿ ಧರಿಸಿ "ಗ"ತಿಸುವುದು/ಚಲಿಸುವುದು ಎಂಬುದರ ಸಂಕ್ಷೀಪ್ತ ರೂಪವಾಗಿದೆ. ಈ ಸಮುದಾಯದವರ ದಂತಕಥೆಯ ಪ್ರಕಾರ, ಹಿಂದೆ ಪಾಂಡವರು ತಮ್ಮ ರಾಜ್ಯಭಾರ ಮುಗಿಸಿ ಸ್ವರ್ಗದ ಪಥದಲ್ಲಿ ಸಾಗುತ್ತಿರುವಾಗ ದ್ರೌಪದಿಯು ಎಚ್ಚರ ತಪ್ಪಿ ಬಿದ್ದಳು.
ಚಿತ್ರಕೃಪೆ: Shri rvce
ಬೆಂಗಳೂರು ಕರಗ :
ಪಾಂಡವರು ಇವಳು ತೀರಿರಬಹುದೆಂದು ಬಗೆದು ಮುನ್ನಡೆದರು. ಪ್ರಜ್ಞೆ ತಪ್ಪಿ ಬಿದ್ದಿದ್ದ ದ್ರೌಪದಿ ಎಚ್ಚರಗೊಂಡಾಗ ಭಯಂಕರನಾದ ತಿಮಿರಾಸುರನೆಂಬ ರಕ್ಕಸನು ಅವಳ ಮುಂದಿದ್ದ. ಇನ್ನೇನು ರಕ್ಕಸ ಅವಳ ಬಳಿ ಬರುತ್ತಿದ್ದಂತೆ ದ್ರೌಪದಿಯು ಶಕ್ತಿಯ ಅವತಾರ ತಾಳಿ ದೊಡ್ಡ ಸೈನ್ಯ ನಿರ್ಮಿಸಿ ಆ ಅಸುರನೊಂದಿಗೆ ಕಾದಾಡಿ ಸಂಹರಿಸಿದಳು.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ದ್ರೌಪದಿ ನಿರ್ಮಿಸಿದ ಆ ಸೈನಿಕರನ್ನು ವೀರಕುಮಾರರು ಎಂದು ಕರೆಯಲಾಗುತ್ತದೆ ಹಾಗೂ ತಿಗಳರು ತಾವು ಆ ವೀರಕುಮಾರರ ವಂಶಸ್ಥರೆಂದೆ ನಂಬುತ್ತಾರೆ. ಇದಾದ ನಂತರ ಆ ವೀರಕುಮಾರರು ಆದಿಶಕ್ತಿಯ ರೂಪದಲ್ಲಿರುವ ದ್ರೌಪದಿ ದೇವಿಯನ್ನು ಕುರಿತು ತಮ್ಮನ್ನು ತೊರೆಯದೆ ತಮ್ಮ ಜೊತೆಯೆ ನೆಲೆಸಬೇಕೆಂದು ಪ್ರಾರ್ಥಿಸುತ್ತಾರೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ಆದರೆ ಶಕ್ತಿ ದೇವಿಗೆ ಹೋಗುವ ಅನಿವಾರ್ಯತೆ ಇರುವುದರಿಂದ ವೀರರನ್ನು ಕುರಿತು ಪ್ರತಿ ಹೊಸ (ಹಿಂದೂ ಕ್ಯಾಲೆಂಡರಿನ ಪ್ರಕಾರ) ವರ್ಷದ ಪ್ರಥಮ ಪೌರ್ಣಮಿಯಂದು ತಾನು ಇಲ್ಲಿ ಬಂದು ತಮ್ಮ ಜೊತೆ ನೆಲೆಸುತ್ತೇನೆ ಎಂದು ಭಾಷೆ ನೀಡುತ್ತಾಳೆ. ಹೀಗಾಗಿ ಈ ಸಂದರ್ಭವನ್ನು ದ್ರೌಪದಿಯನ್ನು ಮುಖ್ಯವಾಗಿ ಆರಾಧಿಸುವ ಕರಗ ಉತ್ಸವವನ್ನಾಗಿ ತಿಗಳ ಸಮುದಾಯದವರಿಂದ ಬಲು ಸಡಗರದಿಂದ ಆಚರಿಸಲ್ಪಡುತ್ತದೆ.
ಚಿತ್ರಕೃಪೆ: Muhammad Mahdi Karim
ಬೆಂಗಳೂರು ಕರಗ :
ಇನ್ನೊಂದು ದೃಷ್ಟಾಂತದ ಪ್ರಕಾರ, ಅಜ್ಞಾತವಾಸದಲ್ಲಿದ್ದ ಪಂಚ ಪಾಂಡವರು ದ್ರೌಪದಿಯನ್ನು ಗೆದ್ದಾಗ, ದ್ರೌಪದಿ ತಲೆಯ ಮೇಲೆ ಹೂವುಗಳಿಂದ ತುಂಬಿದ ಕಳಸ ಧರಿಸಿದ್ದಳು. ಈ ಒಂದು ಹಿನ್ನಿಲೆಯಿಂದ ಕರಗ ಉತ್ಸವವು ರೂಢಿಯಲ್ಲಿ ಬಂದಿತೆನ್ನಲಾಗಿದೆ. ಕರಗ ಒಂದು ಬುಟ್ಟಿಯು ಕೋನದಾಕಾರದಲ್ಲಿ ಹೂವುಗಳಿಂದ ಸಿಂಗರಿಸಲ್ಪಟ್ಟ ರಚನೆ ಅಥವಾ ಕಳಶವಾಗಿದೆ.
ಚಿತ್ರಕೃಪೆ: Shri rvce
ಬೆಂಗಳೂರು ಕರಗ :
ಈ ಕರಗ ಉತ್ಸವವು ಬೆಂಗಳೂರು ಹೊರತಾಗಿ ಕೋಲಾರ, ಹೊಸಕೋಟೆ, ಆನೇಕಲ್, ಕನಕಪುರ ಹಾಗೂ ಜಕ್ಕಸಂದ್ರಗಳಲ್ಲೂ ಆಚರಿಸಲ್ಪಡುತ್ತದೆ. ಕರಗವನ್ನು ಕರಗ ಪೂಜಾರಿ ತನ್ನ ತಲೆಯ ಮೇಲೆ ಹೊತ್ತುಕೊಂಡು ತಿರುಗುವುದು ನಡೆದುಕೊಂಡು ಬಂದಿರುವ ರೂಢಿ. ತಿಗಳ ಸಮುದಾಯದ ಮುಖ್ಯ ಅರ್ಚಕನಿಂದ ಕರಗ ಹೊರುವನನ್ನು ನಿಗದಿಪಡಿಸಲಾಗುತ್ತದೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ಮುಖ್ಯ ಅರ್ಚಕರು ದೈಹಿಕ ಸಾಮರ್ಥ್ಯಕ್ಕನುಗುಣವಾಗಿಯೂ ಕರಗ ಪೂಜಾರಿಯನ್ನು ನೇಮಿಸುತ್ತಾರೆ. ನಂತರ ಈ ಪೂಜಾರಿಯು ಆರು ತಿಂಗಳುಗಳ ಕಾಲ ದೇವಾಲಯದಲ್ಲೆ ಇದ್ದು, ತನ್ನ ಮಡದಿಯ ತಾಳಿಯನ್ನು ಕಟ್ಟಿಕೊಂಡು ನಂತರ ಕರಗ ಹೊರುವಾಗ ಸೀರೆಯನ್ನುಟ್ಟು ಎಲ್ಲೆಡೆ ಗತಿಸಬೇಕು. ಈ ಆರು ತಿಂಗಳುಗಳ ಕಾಲ ಆತನ ಪತ್ನಿಯು ಆತನನ್ನು ನೋಡುವ ಹಾಗಿಲ್ಲ.
ಚಿತ್ರಕೃಪೆ: Bengaluru Karaga
ಬೆಂಗಳೂರು ಕರಗ :
ಇದು ವಿಜಯದಶಮಿಯಿಂದ ಪ್ರಾರಂಭವಾಗಿ ಕರಗ ಮುಗಿಯುವವರೆಗೆ ನಡೆಯುತ್ತದೆ. ನಂತರ ಕರಗ ಉತ್ಸವದ ಸಮಾಪ್ತಿಯ ಬಳಿಕ ಮತ್ತೆ ಸಾಂಕೇತಿಕ ಮದುವೆ ಮಾಡಿ ಕರಗ ಪೂಜಾರಿಯ ಮಡದಿಯು ತನ್ನ ತಾಳಿ ಮರಳಿ ಪಡೆಯುತ್ತಾಳೆ. ಕೆಲವರು ಈ ವಿಚಿತ್ರ ಆಚರಣೆಯು ಸ್ತ್ರೀತನಕ್ಕೆ ನೀಡಿರುವ ಗೌರವ ಎಂದು ಹೇಳಿದರೆ, ಇನ್ನೂ ಕೆಲವರ ಅಭಿಪ್ರಾಯದ ಪ್ರಕಾರ ಇದು ದ್ರೌಪದಿಯ ಶಾಪವಾಗಿದೆ.
ಚಿತ್ರಕೃಪೆ: Shri
ಬೆಂಗಳೂರು ಕರಗ :
ಏಕೆಂದರೆ ದ್ರೌಪದಿಯ ಸೀರೆ ಹರಣದಲ್ಲಿ ಧರ್ಮರಾಯಾದಿಯಾಗಿ ಪಾಂಡವರು ಮೌನದಿಂದಿದ್ದ ಕಾರಣ ಈ ರೀತಿ ಹೆಣ್ಣು ವೇಷದಲ್ಲಿ ಕರಗ ಹೊರುವುದರ ಮೂಲಕ ಧರ್ಮರಾಯನನ್ನು ಅವಮಾನಕ್ಕೊಳಪಡಿಸುವುದರ ಸಂಕೇತವೆನ್ನಲಾಗಿದೆ. ಅದೇನೆ ಇರಲಿ, ಈ ಸಂದರ್ಭದಲ್ಲಿ ವೀರ ಕುಮಾರರು ಅಲಗುಸೇವೈ ನೆರವೇರಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಎಲ್ಲ ರೀತಿಯಿಂದಲೂ ಶುಚಿರ್ಭೂತರಾಗಿರುತ್ತಾರೆ.
ಬೆಂಗಳೂರು ಕರಗ :
ಹುಣ್ಣಿಮೆಗೆ ಇನ್ನೂ ಒಂಭತ್ತು ದಿನಗಳಿರುವಾಗ ಕರಗದ ಪ್ರಾಥಮಿಕ ಧಾರ್ಮಿಕ ಆಚರಣೆಗಳು ಪ್ರಾರಂಭಗೊಳ್ಳುತ್ತವೆ. ಮೊದಲು ಧರ್ಮರಾಯನ ಮಂದಿರದ ಮುಂದೆ ದ್ವಜಾರೋಹಣ ನೆರವೇರಿಸಿ, ದೀಪಾರತಿ ಉತ್ಸವ, ಹಸಿ ಕರಗ, ಪೊಂಗಲು ಸೇವೆ, ಹೂವಿನ ಕರಗ, ವಸಂತೋತ್ಸವ, ಗಾವುಸೇವೆ ಮುಂತಾದವುಗಳು ಸಾಂಗೋಪವಾಗಿ ಸಂಪನ್ನಗೊಳ್ಳುತ್ತವೆ. ಈ ಎಲ್ಲ ವಿಧಿ ವಿಧಾನಗಳಲ್ಲಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ.
ಚಿತ್ರಕೃಪೆ: Shri
ಬೆಂಗಳೂರು ಕರಗ :
ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಅತ್ಯಂತ ವಿಧಿವತ್ತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದು ನಂತರ ನಡುರಾತ್ರಿಯ ವೇಳೆಗೆ ಕಳಸದ ಆಕೃತಿಯ ಮಲ್ಲಿಗೆ ಹೂವಿನ ಕರಗವನ್ನು ಮುಖ ಮುಚ್ಚುವಂತೆ ತಲೆಯ ಮೇಲೆ ಹೊತ್ತ ಕರಗ ಪೂಜಾರಿ ನರ್ತಿಸುತ್ತಾ ಗುಡಿಯಿಂದ ಹೊರಬರುತ್ತಾನೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ಖಡ್ಗವನ್ನು ಹಿಡಿದ ವೀರಕುಮಾರರು ಗೋವಿಂದ... ಗೋವಿಂದ... ಗೋವಿಂದ ಎನ್ನುತ್ತಾ, ಡಿ. ಡಿ. ಡಿ. ಡಿ ಕ್. ಡಿ... ಎಂದು ಕೂಗಿ ಅಲಗು ಸೇವೆಯನ್ನು ಮಾಡುತ್ತ ಕರಗದ ಪೂಜಾರಿಯನ್ನು ಅನುಸರಿಸುತ್ತಾರೆ. ಆಧಿಶಕ್ತಿ ದುಷ್ಟಶಕ್ತಿಯನ್ನು ಸಂಹರಿಸಿದ ಸಂಕೇತವಾಗಿ ಕರಗ ಆಚರಣೆ ನಡೆಯುತ್ತದೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ಈ ಕರಗ ಮೆರವಣಿಗೆಯು ರಾತ್ರಿಯಲ್ಲಿ ಆರಂಭಗೊಳ್ಳುವುದು ವಿಶೇಷವಾಗಿದ್ದು ಸುತ್ತಮುತ್ತಲಿನ ವಾತಾವರಣದಲ್ಲಿ ಒಂದು ರೀತಿಯ ರೋಮಾಂಚನದ ಸಂಚಲನವನ್ನುಂಟು ಮಾಡುತ್ತದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾಕಷ್ಟು ಜನರು ಈ ಅದ್ಭುತ ಘಳಿಗೆಗೆ ಸಾಕ್ಷಿಯಾಗಲು ಹಾಗೂ ಅದರ ಅನುಭವವನ್ನು ಪಡೆಯಲು ಕಿಕ್ಕಿರಿದು ತುಂಬಿರುತ್ತಾರೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ಇನ್ನೊಂದು ಆಸಕ್ತಿಕರ ವಿಷಯವೆಂದರೆ ಭಾವೈಕ್ಯದ ಸಂಕೇತವೆಂಬಂತೆ ಕರಗವು ಮೊದಲು ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪದಾರತಿ ಸ್ವೀಕರಿಸಿ ನಂತರ ನಗರ ಪ್ರದಕ್ಷಿಣೆಗೆಂದು ಹೊರಡುತ್ತದೆ.
ಚಿತ್ರಕೃಪೆ: Thigala4u
ಬೆಂಗಳೂರು ಕರಗ :
ಈ ಸಂದರ್ಭದಲ್ಲಿ ಮಸ್ತಾನ್ ದರ್ಗಾವು ಕರಗಕ್ಕೆಂದೆ ಪ್ರತ್ಯೇಕವಾಗಿ ಸಿಂಗರಿಸಿಕೊಂಡು ಸ್ವಾಗತಿಸಲು ಸಿದ್ಧವಾಗಿರುತ್ತದೆ.
ಚಿತ್ರಕೃಪೆ: Nvvchar
ಬೆಂಗಳೂರು ಕರಗ :
ಕರಗವು ಶಕ್ತಿ ಗಣಪತಿ, ಅಣ್ಣಮ್ಮ ದೇವಿ, ಮುತ್ಯಾಲಮ್ಮದೇವಿ ಹೀಗೆ ಹಲವು ದೇಗುಲಗಳಿಗೆ ತಿಗಳರಪೇಟೆ, ಬಳೇಪೇಟೆ, ಚಿಕ್ಕಪೇಟೆ ಮಾರ್ಗವಾಗಿ ರಾತ್ರಿಯೆಲ್ಲ ಸಂಚರಿಸುತ್ತ ಸೂರ್ಯೋದಯದವೆಳೆಗೆ ಧರ್ಮರಾಯನ ಗುಡಿಯ ಬಳಿ ಬರುತ್ತದೆ.
ಚಿತ್ರಕೃಪೆ: pee vee
ಬೆಂಗಳೂರು ಕರಗ :
ಈ ರೀತಿಯಾಗಿ ಕರಗ ಉತ್ಸವವು ವಿಧ್ಯುಕ್ತವಾಗಿ ಸಂಪನ್ನಗೊಳ್ಳುತ್ತದೆ. ಈ ಸಲದ ಕರಗ ಉತ್ಸವ ನೋಡುವ ಮನಸ್ಸಿದ್ದಲ್ಲಿ ನೀವೂ ಸಹ ತೆರಳಿ ಮೆರವಣಿಗೆ ನೋಡಿ ಆನಂದಿಸಿ. ಧರ್ಮರಾಯನ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರು.
ಚಿತ್ರಕೃಪೆ: Co9man