ಯಾರೆ ಆಗಲಿ ಮದುವೆಯಾದ ಮೇಲೆ ಮಕ್ಕಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದೆ ಹೊಂದಿರುತ್ತಾರೆ. ಆದರೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಆದರೂ ಆ ಕಷ್ಟ ನಿವಾರಣೆಯ ಉದ್ದೇಶಾರ್ಥವಾಗಿ ಹಲವಾರು ಮಹಾ ಮಹಿಮೆಯುಳ್ಳ ದೇವಾಲಯಗಳಿವೆ.
ಇಂತಹ ದೇವಾಲಯಗಳಲ್ಲಿ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದರೆ ಇಲ್ಲವೆ ಏನಾದರೂ ಕಾಣಿಕೆಯ ರೂಪದಲ್ಲಿ ನೀಡಿದರೆ ಇಲ್ಲವೆ ಮಕ್ಕಳಾಗುವ ಹರಕೆ ಹೊತ್ತುಕೊಂಡರೆ ಶೀಘ್ರದಲ್ಲೆ ದೇವರ ಕೃಪೆ ಉಂಟಾಗಿ ದಮ್ಪತಿಗಳು ಸಂತಾನ ಭಾಗ್ಯ ಪಡೆಯುತ್ತಾರೆಂಬ ಅಚಲವಾದ ನಂಬಿಕೆಗಳಿವೆ.
ಅಂತಹ ಒಂದು ನಂಬಿಕೆ ಚಾಲ್ತಿಯಲ್ಲಿರುವ ದೇವಾಲಯದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಇದೊಂದು ಕೃಷ್ಣನ ದೇವಾಲಯವಾಗಿದ್ದು ಇಲ್ಲಿ ಕೃಷ್ಣನು ಅಂಬೆಗಾಲಿಡುತ್ತಿರುವ ನವನೀತ ಕೃಷ್ಣನಾಗಿ ಪ್ರಸಿದ್ಧನಾಗಿದ್ದಾನೆ. ಇದನ್ನು ಜನಪ್ರೀಯವಾಗಿ ಮಳ್ಳೂರು ಕೃಷ್ಣ ದೇವಾಲಯ ಎಂದೆ ಕರೆಯಲಾಗುತ್ತದೆ. ಬೆಂಗಳೂರಿಗೆ ಬಲು ಹತ್ತಿರದಲ್ಲಿದೆ.
ಸಂತಾನ ಕರುಣಿಸುತ್ತಾನೆ
ಚಿಕ್ಕದಾಗಲಿ, ದೊಡ್ಡದಾಗಲಿ ತೊಟ್ಟಿಲನ್ನು ಕಾಣಿಕೆಯಾಗಿ ಅರ್ಪಿಸುವೆ ಎಂದು ದಂಪತಿಗಳು ಅಚಲವಾದ ಶೃದ್ಧೆ ಹಾಗೂ ಭಕ್ತಿಯಿಂದ ಈ ಕೃಷ್ಣನನ್ನು ಪ್ರಾರ್ಥಿಸಿದರೆ ಬಲು ಶೀಘ್ರದಲ್ಲೆ ಅವರಿಗೆ ಸಂತಾನ ಭಾಗ್ಯ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಅದರಂತೆ ಅದೆಷ್ಟೊ ಜನರು ಈ ಒಳಿತನ್ನು ಕಂಡಿದ್ದಾರೆಂದೂ ಸಹ ಹೇಳಲಾಗುತ್ತದೆ.
ಚಿತ್ರಕೃಪೆ: Paneendragautham
ಚೋಳರ ಕಾಲ
ಚೋಳರ ಕಾಲದಲ್ಲಿ ನಿರ್ಮಾಣವಾದ ಸುಂದರ ದೇವಾಲಯ ಇದಾಗಿದ್ದು, ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಅಷ್ಟೆ ಅಲ್ಲ, ದೇವಾಲಯದಲ್ಲಿ ಹಲ್ಅವಾರು ಪವಾಡಗಳು ಹಿಂದೆ ನಡೆದಿದ್ದವು ಎನ್ನಲಾಗಿದೆ. ಆ ಕಾರಣದಿಂದಾಗಿ ಸಾಕಷ್ಟು ಗಮನಸೆಳೆಯುತ್ತದೆ ಈ ದೇವಾಲಯ.
ಚಿತ್ರಕೃಪೆ: Brunda Nagaraj
ಅಂಬೆಗಾಲು ಕೃಷ್ಣ
ಇಲ್ಲಿರುವ ಕೃಷ್ಣನು ಅಪ್ರಮೇಯಸ್ವಾಮಿ ಆಗಿದ್ದರೂ ಸಹ ಜನಪ್ರೀಯವಾಗಿ ಈ ಕೃಷ್ಣನನ್ನು ನವನೀತ ಕೃಷ್ಣ ಎಂದೆ ಕರೆಯುತ್ತಾರೆ. ಅದೂ ಸಹ ಅಂಬೆಗಾಲಿಡುತ್ತಿರುವ ಭಂಗಿಯಲ್ಲಿರುವುದರಿಂದ ಈ ಕೃಷ್ಣನ ವಿಗ್ರಹವು ಸಾಕಷ್ಟು ಆಕರ್ಷಣೀಯವಾಗಿ ಕಂಡುಬರುತ್ತದೆ.
ಚಿತ್ರಕೃಪೆ: Brunda Nagaraj
ಪುತ್ರದೋಷ
ಪುತ್ರ ದೋಷ ಅಥವಾ ಶಯನದೋಷ ಇರುವ ದಂಪತಿಗಳು ಈ ಕೃಷ್ಣನಲ್ಲಿ ಪ್ರಾರ್ಥಿಸಿದರೆ ದೋಷ ನಿವಾರಣೆಯಾಗುತ್ತದೆಂದು ನಂಬಲಾಗಿದೆ. ಇಲ್ಲಿ ಶಯನದೋಷವೆಂದರೆ ಸತಿ-ಪತಿಗಳ ಮಧ್ಯೆ ಕಲಹವಿದ್ದು ಇಬ್ಬರೂ ಒಬ್ಬರಿಗೊಬ್ಬರೂ ದೈಹಿಕವಾಗಿ ಸೇರುತ್ತಿಲ್ಲವೆಂಬುದನ್ನು ಸೂಚಿಸುತ್ತದೆ. ಇದೆ ದೋಷವು ಪುತ್ರಹೀನತೆಗೂ ಕಾರಣವಾಗಿರುವುದರಿಂದ ಈ ದೋಷವನ್ನು ಹೋಗಲಾಡಿಸುವುದು ಪ್ರಮುಖವಾಗುತ್ತದೆ.
ಚಿತ್ರಕೃಪೆ: Brunda Nagaraj
ಸನ್ನಿಧಿಗಳಿವೆ
ಇದೊಂದು ವೈಷ್ಣವ ಸಂಪ್ರದಾಯದ ದೇವಾಲಯವಾಗಿದ್ದು ಕೃಷ್ಣನನ್ನು ಹೊರತುಪಡಿಸಿ ಇತರೆ ವಿಶಿಷ್ಟ ಸನ್ನಿಧಿಗಳಿರುವುದನ್ನು ಕಾಣಬಹುದು. ಅರವಿಂದವಲ್ಲಿ ಮಾತೆ, ರಾಮಾನುಜ, ಆಂಜನೇಯ, ನಾಗರಾಜ, ಅಳ್ವಾರ್, ವೇದಾಂತ ದೇಶಿಕರು, ಮನವಲ ಮಾಮುನಿ ಹೀಗೆ ಹಲವು ಸನ್ನಿಧಿಗಳು ಈ ದೇವಾಲಯದಲ್ಲಿವೆ.
ಚಿತ್ರಕೃಪೆ: Brunda Nagaraj
ರಾಮ ಭೇಟಿ ನೀಡಿದ್ದ
ಅಪ್ರಮೇಯಸ್ವಾಮಿಯು (ಅಂಬೆಗಾಲಿನ ಕೃಷ್ಣನಲ್ಲ) ನಿಂತ ಭಂಗಿಯಲ್ಲಿದ್ದು ಪದ್ಮ, ಗಧೆ, ಶಂಖ ಹಾಗೂ ಚಕ್ರಧಾರಿಯಾಗಿದ್ದಾನೆ. ಸ್ಥಳ ಪುರಾಣದಂತೆ ಹಿಂದೆ ಶ್ರೀರಾಮನು ಲಂಕೆಗೆ ತೆರಳುವ ಸಂದರ್ಭದಲ್ಲಿ ಇಲ್ಲಿ ಅಪ್ರಮೇಯಸ್ವಾಮಿಯನ್ನು ಆರಾಧಿಸಿದ್ದನಂತೆ. ಹಾಗಾಗಿ ಅಪ್ರಮೇಯಸ್ವಾಮಿಯನ್ನು ಪ್ರೀತಿಯಿಂದ ರಾಮಾಪ್ರೇಯಸ್ವಾಮಿ ಎಂದೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Brunda Nagaraj
ದಕ್ಷಿಣ ಅಯೋಧ್ಯ
ರಾಮನು ಇಲ್ಲಿ ತಂಗಿದ್ದಾಗ ಇಲ್ಲಿನ ಪ್ರಕೃತಿಯ ಮೈಸಿರಿಗೆ ಮಾರು ಹೋಗಿದ್ದನಂತೆ ಹಾಗೂ ತನ್ನ ಆಯೋಧ್ಯ ನಗರದಂತೆಯೆ ಇದನ್ನು ಪ್ರೀತಿಸುತ್ತಿದ್ದನಂತೆ. ಆ ಕಾರಣವಾಗಿ ಇದನ್ನು ದಕ್ಷಿಣ ಅಯೋಧ್ಯ ಎಂತಲೂ ಕರೆಯುವುದುಂಟು.
ಚಿತ್ರಕೃಪೆ: Brunda Nagaraj
ಚತುರ್ವೇದ ಮಂಗಳಪುರ
ಈ ಕ್ಷೇತ್ರವು ಸಾಕಷ್ಟು ಪ್ರಾಚೀನವಾಗಿದ್ದು ಅದ್ಭುತವಾದ ಹಿನ್ನೆಲೆಗಳಿಂದ ಕೂಡಿರುವುದರಿಂದ ಹಲವಾರು ಹೆಸರುಗಳಿಂದ ಜನಪ್ರೀಯವಾಗಿದೆ. ಒಂದೊಮ್ಮೆ ಇಲ್ಲಿ ನಾಲ್ಕೂ ವೇದಗಳನ್ನು ಓದಿ ಪಾಂಡಿತ್ಯ ಪಡೆದವರು ಮಾತ್ರ ಇಲ್ಲಿ ನೆಲೆಸಿದ್ದರಿಂದ ಇದಕ್ಕೆ ಚತುರ್ವೇದ ಮಂಗಳಪುರ ಎಂಬ ಹೆಸರು ಇತ್ತಂತೆ!
ಚಿತ್ರಕೃಪೆ: Brunda Nagaraj
ಜ್ಞಾನಿಗಳು
ಪುರಾತನ ಧಾರ್ಮಿಕ ಶಾಸನಗಳಲ್ಲಿ ಪ್ರಾವಿಣ್ಯತೆ ಪಡೆದವರು ಹಾಗೂ ಹೆಚ್ಚು ಹೆಚ್ಚು ಧರ್ಮಗ್ರಂಥಗಳ ಕುರಿತು ಓದಬಯಸುವವರು ಈ ಕ್ಷೇತ್ರಕ್ಕೆ ಬರುತ್ತಿದ್ದ ಕಾರಣ ಇದನ್ನು ಜ್ಞಾನ ಮಂಟಪ ಕ್ಷೇತ್ರ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತಿತ್ತೆಂಬ ಪ್ರತೀತಿಯಿದೆ.
ಚಿತ್ರಕೃಪೆ: Brunda Nagaraj
ಯಾರು ಯಾರು?
ಪುರಾಣಗಳಲ್ಲಿ ಉಲ್ಲೇಖಿಸಲಾಗಿರುವಂತೆ ಶ್ರೀಮನ್ನಾರಾಯಣನೆ ಆಗಿರುವ ಅಪ್ರಮೇಯಸ್ವಾಮಿಯನ್ನು ಕೃತಯುಗದಲ್ಲಿ ವಿಜಯಪಾಲ, ತ್ರೇತಾಯುಗದಲ್ಲಿ ಕಣ್ವ ಮಹರ್ಷಿಗಳು, ದ್ವಾಪರಯುಗದಲ್ಲಿ ಲಂಬಶ್ರಾವ ಮಹರ್ಷಿ ಹಾಗೂ ಕಲಿಯುಗದಲ್ಲಿ ವಿಜ್ಞಾನೇಶ್ವರರು ಆರಾಧಿಸುತ್ತಾರೆ.
ಚಿತ್ರಕೃಪೆ: Brunda Nagaraj
ಕಣ್ವ ಹಾಗೂ ಕಪಿಲರು!
ನಂಬಿಕೆಯಂತೆ ಇಂದಿಗೂ ಕಪಿಲ ಹಾಗೂ ಕಣ್ವ ಮಹರ್ಷಿಗಳು ಈ ದೇವಾಲಯದಲ್ಲೆ ವಾಸಿಸುತ್ತಿದ್ದಾರೆಂಬ ಪ್ರತೀತಿಯಿದೆ. ಕೆಲವರು ಹೇಳುವ ಪ್ರಕಾರ ರಾತ್ರಿ ದೇವಾಲಯದ ಅರ್ಚಕನು ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ಬಾಗಿಲು ಹಾಕಿದ ನಂತರ ಘಂಟೆಗಳ ನಾದವು, ಗರ್ಭಗೃಹ ಬಾಗಿಲು ತೆರೆಯುವ ಸದ್ದು ಕೇಳಿಬರುತ್ತದೆನ್ನಲಾಗುತ್ತದೆ.
ಚಿತ್ರಕೃಪೆ: Brunda Nagaraj
ದೇಗುಲವಿದು
ಈ ರೀತಿಯಾಗಿ ಮಳ್ಳೂರು ವಾಸಿಗರಿಗೆ ಈ ದೇವಾಲಯವು ಸಾಕಷ್ಟು ಪ್ರಭಾವ ಬೀರಿದ್ದು ಅವರೆಲ್ಲರೂ ನಾರಾಯಣನ ದಿವ್ಯ ಉಪಸ್ಥಿತಿಯಿಂದ ಆನಂದಭರಿತರಾಗಿದ್ದಾರೆ. ಅಷ್ಟಕ್ಕೂ ಈ ದೇವಾಲಯಕ್ಕೊಂದು ರೋಚಕವಾದ ಕಥೆಯಿದೆ.
ಚಿತ್ರಕೃಪೆ: Brunda Nagaraj
ಸಾರಂಗದಾರಾ
ಬಲು ಹಿಂದೆ ಸಾರಂಗದಾರಾ ಎಂಬ ರಾಜನೊಬ್ಬನಿದ್ದನು. ಅವನು ನಾರಾಯಣನ ಪರಮ ಭಕ್ತನಾಗಿದ್ದನು ಹಾಗೂ ದೈವದಲ್ಲಿ ನಂಬಿಕೆಯಿರಿಸಿದ್ದ ಒಳ್ಳೆಯ ಗುಣವುಳ್ಳ ರಾಜನಾಗಿದ್ದನು. ಆದರೆ ಅವನೆಂದರೆ ಕೆಲ ಶತ್ರುಗಳಿಗೆ ಆಗುತ್ತಿರಲಿಲ್ಲ.
ಚಿತ್ರಕೃಪೆ: Brunda Nagaraj
ನದಿಗೆ ಎಸೆದರು
ಒಂದೊಮ್ಮೆ ಆ ರಾಜನ ಶತ್ರುಗಳು ಮೋಸದಿಂದ ರಾಜನನ್ನು ಹಿಡಿದು ಅವನ ಕೈಕಾಲುಗಳನ್ನು ಕತ್ತರಿಸಿ ಅವನನ್ನು ನಿರ್ಮಲಾ (ಇಂದಿನ ಕಣ್ವ ನದಿ) ನದಿಯಲ್ಲಿ ಎಸೆದುಬಿಟ್ಟರು. ಅತೀವವವಾದ ರಕ್ತಸ್ರಾವ ಹಾಗೂ ನೋವಿನಿಂದ ಚಡಪಡಿಸುವಾಗ ಆ ರಾಜನಿಗೆ ನಾರಾಯಣನ ನೆನಪಾಗಿ ಸಂತೋಷದಿಂದ ನೋವನ್ನು ಮರೆತು ಸಾಯುತ್ತಿರುವೆ ಎಂಬುದರ ಕುರಿತು ಕಿಂಚಿತ್ತೂ ಚಿಂತಿಸದೆ ಭಾಗವತವನ್ನು ಹೇಳಲು ಪ್ರಾರಂಭಿಸಿದನು.
ಚಿತ್ರಕೃಪೆ: Brunda Nagaraj
ಮತ್ತೆ ಬೆಳೆಯಿತು
ಇದರಿಂದ ನಾರಾಯಣನು ಪ್ರಸನ್ನನಾದನು. ಪರಿಣಾಮವಾಗಿ ಆ ರಾಜನು ಸುರಕ್ಷಿತವಾಗಿ ಪ್ರಸ್ತುತ ದೇವಾಲಯವಿರುವ ತಾಣಕ್ಕೆ ತೇಲಲ್ಪಟ್ಟನು ಹಾಗೂ ದೇವಾಲಯದೊಳಗಿನಿಂದ ದಿವ್ಯ ಜ್ಯೋತಿಯ ದರ್ಶನ ಪಡೆದನು. ತಕ್ಷಣ ಅವನ ಎಲ್ಲ ನೋವು ಮಾಯವಾಯಿತಲ್ಲದೆ ಕತ್ತರಿಸಿದ ಕೈಕಾಲುಗಳು ಮತ್ತೆ ಬೆಳೆದು ಬಂದವು.
ಚಿತ್ರಕೃಪೆ: Brunda Nagaraj
ಮುಳೈತದು
ತಮಿಳಿನಲ್ಲಿ ಮುಳೈತದು ಎಂದರೆ ಮತ್ತೆ ಬೆಳೆಯುವ ಅರ್ಥ ಬರುವುದರಿಂದ ಈ ಕ್ಷೇತ್ರಕ್ಕೆ ಮುಳೈತೂರು ಎಂಬ ಹೆಸರು ಬಂದಿತು. ಕಾಲ ಕಳೆದಂತೆ ಕ್ರಮೇಣವಾಗಿ ಬೇರೆ ಬೇರೆ ಸಾಮ್ರಾಜ್ಯಗಳು ಆಳಿದ್ದರಿಂದ ಜನರ ಬಾಯಿಯಿಂದ ಬಾಯಿಗೆ ಹೆಸರು ಹರಿದಾಡುತ್ತ ಕೊನೆಗೆ ಮಳ್ಳೂರು ಎಂದಾಯಿತು.
ಚಿತ್ರಕೃಪೆ: Brunda Nagaraj
ಮೂರು ಕಿ.ಮೀ
ನೆನಪಿರಲಿ, ಮಳ್ಳೂರನ್ನು ದೊಡ್ಡ ಮಳ್ಳೂರು ಎಂತಲೂ ಕರೆಯಲಾಗುತ್ತದೆ ಹಾಗೂ ಈ ಸ್ಥಳವು ಚೆನ್ನಪಟ್ಟಣದಿಂದ ಕೇವಲ ಮೂರು ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನಿಂದ ಇದು ಒಟ್ಟಾರೆಯಾಗಿ 60 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ತೆರಳಲು ಸುಲಭವಾಗಿದೆ.
ಚಿತ್ರಕೃಪೆ: Brunda Nagaraj
ಎಡ ತಿರುವು
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಬರುವಾಗ ಚೆನ್ನಪಟ್ಟಣ ದೊರೆತು ಅದನ್ನು ದಾಟಿದ ನಂತರ ಎಡಗಡೆಯಲ್ಲಿ ದೊಡ್ಡದಾದ ಸ್ವಾಗತ ಕಮಾನು ಒಂದು ಈ ಕ್ಷೇತ್ರಕ್ಕೆ ತೆರಳಲು ಕಾಣಸಿಗುತ್ತದೆ. ಅದರ ಮೂಲಕ ಮೂರು ಕಿ.ಮೀ ಒಳಗೆ ಸಾಗಿ ದೊಡ್ಡ ಮಳ್ಳೂರು ಅನ್ನು ತಲುಪಬಹುದಾಗಿದೆ.
ಚಿತ್ರಕೃಪೆ: Brunda Nagaraj
ತೆರೆದಿರುತ್ತದೆ
ದೇವಾಲಯವು ಭಕ್ತರಿಗೆಂದು ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30 ರವರೆಗೂ ಹಾಗೂ ಸಂಜೆ 5.30 ಗಂಟೆಯಿಂದ ರಾತ್ರಿ 8.30 ರವರೆಗೂ ತೆರೆದಿರುತ್ತದೆ. ಕೃಷ್ಣ ಜಯಂತಿ, ವೈಕುಂಠ ಎಕಾದಶಿ ಮುಂತಾದ ಉತ್ಸವಗಳನ್ನು ಬಲು ಅದ್ದೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ.
ಚಿತ್ರಕೃಪೆ: Brunda Nagaraj