ಮಹಾರಾಷ್ಟ್ರ ರಾಜ್ಯದ ಪುಣೆಯ ಬಳಿ ಇರುವ ಖೇಡ್ ನಲ್ಲಿರುವ ಭೀಮಾಶಂಕರವು ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ಸ್ಥಳ. ಪಶ್ಚಿಮ ಘಟ್ಟಗಳ ನಯನ ಮನೋಹರ ಪ್ರಾಕೃತಿಕ ತಾಣದಲ್ಲಿ ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿ ನೆಲೆಸಿರುವ ಭೀಮಾಶಂಕರವು ಪವಿತ್ರ 12 ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿದೆ.
ಆದರೆ ಭೀಮಾಶಂಕರವು ಕೇವಲ ಧಾರ್ಮಿಕ ತಾಣವಾಗಿ ಮಾತ್ರವಲ್ಲದೆ, ಉತ್ಸಾಹಿ ಚಾರಣಿಗರ ನೆಚ್ಚಿನ ಕೇಂದ್ರವಾಗಿಯೂ ಗಮನ ಸೆಳೆಯುತ್ತದೆ, ಕಾರಣ ಭೀಮಾಶಂಕರ ಟ್ರೆಕ್ಕಿಂಗ್ ತುಂಬ ವಿಶೇಷ ಹಾಗೂ ರೋಮಾಂಚನಕಾರಿ ಅನುಭೂತಿ ನೀಡುವ ಅದ್ಭುತ ಸಾಹಸಮಯ ಪ್ರವಾಸಿ ಚಟುವಟಿಕೆಯಾಗಿದೆ.
ಮಹಾರಾಷ್ಟ್ರದ ಕೆಲವು ಸವಾಲೊಡ್ಡುವ ಟ್ರೆಕ್ಕುಗಳು!
ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಭೀಮಾಶಂಕರ ಚಾರಣ ಅಥವಾ ಟ್ರೆಕ್ಕಿಂಗ್ ಕುರಿತು ತಿಳಿಯಿರಿ. ಒಮ್ಮೆಯಾದರೂ ಬಿಡುವು ಮಾಡಿಕೊಂಡು ಮಾಡಲೇಬೇಕಾದ ಚಾರಣ ಚಟುವಟಿಕೆ ಇದಾಗಿದೆ ಎಂದರೂ ತಪ್ಪಾಗಲಾರದು.
ಅದ್ಭುತ
ಭೀಮಾಶಂಕರ ನೆಲೆಸಿರುವ ಬೆಟ್ಟವನ್ನು ಏರುವುದು ಖಂಡಿತವಾಗಿಯೂ ಒಂದು ರೋಮಾಂಚನಕರ ಅನುಭವವಾಗಿದೆ. ವಿಶೇಷವಾಗಿ ಮಳೆಗಾಲದ ನಂತರದ ಸಮಯದಲ್ಲಿ ಈ ಚಾರಣ ಎಲ್ಲಿಲ್ಲದ ಹುರುಪು, ಉತ್ಸಾಹಗಳನ್ನು ಚಾರಣಿಗರಿಗೆ ನೀಡುತ್ತದೆ.
ಚಿತ್ರಕೃಪೆ: Udaykumar PR
ಖಂಡಸ್
ಖಂಡಸ್ ಹಾಗೂ ಭೀಮಾಶಂಕರದ ಮಧ್ಯೆ ಸಾಮಾನ್ಯವಾಗಿ ಈ ಚಾರಣವನ್ನು ಕೈಗೊಳ್ಳಲಾಗುತ್ತದೆ. ಖಂಡಸ್ ಹಾಗೂ ಭೀಮಾಶಂಕರದ ಮಧ್ಯೆ ಎರಡು ಚಾರಣ ಮಾರ್ಗಗಳಿವೆ. ಅವುಗಳೆಂದರೆ ಒಂದು ಸೀಡಿ ಘಾಟ್ ಹಾಗೂ ಇನ್ನೊಂದು ಮಾರ್ಗವು ಗಣೇಶ್ ಘಾಟ್.
ಚಿತ್ರಕೃಪೆ: solarisgirl
ಏಣಿ
ಸೀಡಿ ಎಂದರೆ ಹಿಂದಿಯಲ್ಲಿ ಏಣಿ ಎಂದಾಗುತ್ತದೆ. ಅಂದರೆ ಈ ಮಾರ್ಗದಲ್ಲಿ ಕೆಲವು ಅತಿ ಕಠಿಣವಾದ ಮೊನಚುಗಳಲ್ಲಿ ಒಟ್ಟು ಮೂರು ವಿವಿಧ ಸ್ಥಳಗಳಲ್ಲಿ ಏರಲು ಅನುಕೂಲವಾಗುವಂತೆ ಕಬ್ಬಿಣದ ಏಣಿಗಳನ್ನು ನೆಡಲಾಗಿದ್ದು ಆ ಕಾರಣದಿಂದಾಗಿ ಇದಕ್ಕೆ ಸೀಡಿ ಘಾಟ್ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: solarisgirl
ದೇಗುಲ
ಇನ್ನೊಂದು ಮಾರ್ಗವಾದ ಗಣೇಶ್ ಘಾಟ್ ಮಾರ್ಗದ ಮಧ್ಯದಲ್ಲಿ ಪುರಾತನವಾದ ಗಣೇಶನ ಚಿಕ್ಕ ದೇಗುಲವೊಂದು ದೊರೆಯುತ್ತದೆ. ಆ ಕಾರಣವಾಗಿ ಈ ಮಾರ್ಗವನ್ನು ಗಣೇಶ್ ಘಾಟ್ ಎಂದು ಹೆಸರಿಸಲಾಗಿದೆ. ಎರಡೂ ಮಾರ್ಗಗಳು ಅದ್ಬುತವಾಗಿದ್ದು ತಮ್ಮದೆ ಆದ ವಿಶೇಷತೆಯನ್ನು ಹೊಂದಿವೆ.
ಚಿತ್ರಕೃಪೆ: Udaykumar PR
ಎಂಟು ಕಿ.ಮೀ
ಖಂಡಸ್ ನಿಂದ ಭೀಮಾಶಂಕರಕ್ಕೆ ಗಣೇಶ್ ಘಾಟ್ ಮೂಲಕ ಹೋಗುವ ಚಾರಣ ಮಾರ್ಗವು ಒಟ್ಟು ಎಂಟು ಕಿ.ಮೀ ಗಳಷ್ಟು ಉದ್ದವಿದೆ. ಇದೊಂದು ಅಷ್ಟೊಂದು ಕಷ್ಟಕರವಲ್ಲದ ಚಾರಣ ಮಾರ್ಗವಾಗಿದ್ದು ಸುಮಾರು ನಾಲ್ಕು ಘಂಟೆಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.
ಚಿತ್ರಕೃಪೆ: solarisgirl
ಪ್ರಶಸ್ತ ಸಮಯ
ಮಳೆಗಾಲದ ನಂತರದ ಸಮಯದಲ್ಲಿ ಇಲ್ಲಿ ಚಾರಣ ಮಾಡುವುದೆ ಒಂದು ಚೆಂದದ ಅನುಭವ. ಸಂಪೂರ್ಣ ಪ್ರಕೃತಿಯೆ ಜೀವಕಳೆ ಪಡೆದಿರುವ ಹಾಗೆ ಭಾಸವಾಗುತ್ತದೆ. ಎಲ್ಲೆಲ್ಲಿಯೂ ತಾಜಾತನ. ಮೈಗಂಟಿಕೊಳ್ಳುವ ತಂಪಾದ ಚುಮು ಚುಮು ಗಾಳಿ, ಗಿಡಗಳಿಗೆ ಮುತ್ತಿಡುವ ನೀರಿನ ಹನಿಗಳು ಮನಸ್ಸಿನಲ್ಲಿ ಪ್ರಸನ್ನತಾ ಭಾವ ಮೂಡುವಂತೆ ಮಾಡುತ್ತವೆ.
ಚಿತ್ರಕೃಪೆ: solarisgirl
ಜೋಪಾನ
ಈ ಮಾರ್ಗವು ಕಲ್ಲಿನಿಂದಾವೃತವಾದ ಪತ್ತರ್ ಕಿಲ್ಲಾ ಮೂಲಕ ಹಾದು ಹೋಗುವುದರಿಂದ ಸ್ವಲ್ಪ ಜೋಪಾನವಾಗಿರಬೇಕು. ಏಕೆಂದರೆ ಇಲ್ಲಿ ಮಾರ್ಗವು ಸಾಕಷ್ಟು ಕಲ್ಲು ಬಂಡೆಗಳಿಂದ ಕೂಡಿರುವುದರಿಂದ ಜಾರಿಕೆ ಹೆಚ್ಚಾಗಿರುತ್ತದೆ (ಮಳೆಗಾಲದ ಸಮಯದಲ್ಲಿ). ಕೆಲವು ಕಡೆ ಪಾಚಿಗಟ್ಟಿರುವುದನ್ನು ಕಾಣಬಹುದು.
ಚಿತ್ರಕೃಪೆ: solarisgirl
ಎಲ್ಲೆಡೆ ಹಸಿರು
ಮಿಕ್ಕಂತೆ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವು ಕಣ್ಣಿಗೆ ಕಟ್ಟುವಂತಿರುತ್ತದೆ. ದಟ್ಟವಾದ ಹಸಿರಿನ ವನರಾಶಿ, ಮೋಡಗಳ ಕಣ್ಣುಮುಚ್ಚಾಲೆ ಆಟ, ದೈತ್ಯ ಬೆಟ್ಟಗಳು ಮರೆ ಮಾಚಿರುವಂತೆ ಮಾಡಿರುವ ಮಂಜಿನ ಮೋಡಗಳು ನೋಡಲು ಅಮೋಘವಾಗಿರುತ್ತದೆ.
ಚಿತ್ರಕೃಪೆ: Yogendra Joshi
ಜಲಪಾತಗಳು
ಇನ್ನೂ ಅಲ್ಲಲ್ಲಿ ವಿಶೇಷವಾಗಿ ಮಳೆಗಾಲದಲ್ಲೆ ಹುಟ್ಟುವ ಕೆಲ ನೀರಿನ ಕೆರೆ ಹಳ್ಳಗಳು, ಝರಿಗಳು ಹಾಗೂ ತಾತ್ಕಾಲಿಕ ಜಲಪಾತಗಳು ಮನಸ್ಸಿಗೆ ಸಂತಸ ಕರುಣಿಸುವಲ್ಲಿ ಸಾಕಷ್ಟು ಪ್ರಯತ್ನ ಪಡುತ್ತವೆ. ಹೀಗೆ ಚಾರಣವು ಒಂದು ವಿಶೇಷ ನೆನಪಿನ ಮಾಲೆಯಾಗಿ ಮನದಲ್ಲಿ ಹರಡಲು ಪ್ರಾರಂಭಿಸುತ್ತದೆ.
ಚಿತ್ರಕೃಪೆ: Yogendra Joshi
ನಾಗಫಣಿ
ಈ ಮಾರ್ಗವು ಇನ್ನೊಂದು ವಿಶಿಷ್ಟವಾದ ಶಿಖರದ ಮೂಲಕ ಸಾಗುತ್ತದೆ. ಆ ಶಿಖರವು ಅಷ್ಟೊಂದು ಮೊನಚಾಗೇನೂ ಇಲ್ಲಿ ಆದರೆ ಸರ್ಪದ ಹೆಡೆಯಂತೆ ಗೋಚರಿಸುತ್ತದೆ. ಆ ಕಾರಣವಾಗಿ ಅದನ್ನು ನಾಗಫಣಿ ಶಿಖರ ಎಂದು ಕರೆಯುತ್ತಾರೆ. ಇದರ ಮೂಲಕವೆ ಈ ಚಾರಣ ಮುಂದುವರೆಯುತ್ತದೆ.
ಚಿತ್ರಕೃಪೆ: Pratik Kadam
ಎಲ್ಲರ ಆಯ್ಕೆ
ಗಣೇಶ್ ಘಾಟ್ ಮಾರ್ಗವು ಸೀಡಿ ಘಾಟಿಗಿಂತ ಅತ್ಯಂತ ನಯನಮನೋಹರವಾದ ದೃಶಗಳನ್ನು ನೀಡುವುದರಿಂದ ಬಹುತೇಕರ ನೆಚ್ಚಿನ ಆಯ್ಕೆ ಇದೆ ಆಗಿದೆ. ಒಟ್ಟು ಮೂರು ಕಡೆಗಳಲ್ಲಿ ಏರುವ ಸಂದರ್ಭಗಳಿದ್ದು ಮಿಕ್ಕಂತೆ ನಡೆಯುವ ಮಾರ್ಗವಾಗಿದೆ. ಸರಿಯಾಗಿ ಯೋಜನಾಬದ್ಧವಾಗಿ ನಡೆದರೆ ಸುಮಾರು ನಾಲ್ಕರಿಂದ ಐದು ಘಂಟೆಗಳಲ್ಲಿ ಭೀಮಾಶಂಕರ ದೇವಾಲಯವನ್ನು ತಲುಪಬಹುದು.
ಚಿತ್ರಕೃಪೆ: Pratik Kadam
ಕರ್ಜಾತ್
ಖಂಡಸ್ ಗೆ ತಲುಪಲು ನೇರಳ್ ಹತ್ತಿರದ ರೈಲು ನಿಲ್ದಾಣವಾಗಿದೆ. ಅಲ್ಲದೆ ಕರ್ಜಾತ್ ಪಟ್ಟಣವೂ ಸಹ ಖಂಡಸ್ ನಿಂದ ಸುಮಾರು 30 ಕಿ.ಮೀ ಗಳಷ್ಟು ದೂರವಿದ್ದರೆ, ನೇರಳ್ ಖಂಡಸ್ ನಿಂದ 25 ಕಿ.ಮೀ ಗಳಷ್ಟು ದೂರದಲ್ಲಿದೆ. ಹಾಗಾಗಿ ಮೊದಲಿಗೆ ಖಂಡಸ್ ತಲುಪಿ ಅಲ್ಲಿಂದ ಚಾರಣ ಕೈಗೊಳ್ಳಬಹುದು.
ಚಿತ್ರಕೃಪೆ: Udaykumar PR
ಜ್ಯೋತಿರ್ಲಿಂಗ
ಇನ್ನೂ ಭೀಮಾಶಂಕರ ದೇವಾಲಯವು ಸಾಕಷ್ಟು ಪ್ರಾಮುಖ್ಯತೆಗಳಿಸಿರುವ ಶಿವನ ಜ್ಯೋತಿರ್ಲಿಂಗವಿರುವ ದೇವಾಲಯವಾಗಿದೆ. ದೇವರುಗಳ ಕೋರಿಕೆಗೆ ಓಗೊಟ್ಟು ಭಗವಾನ್ ಶಿವನು ಭೀಮನ ರೂಪದಲ್ಲಿ ಸಹ್ಯಾದ್ರಿ ಬೆಟ್ಟಗಳ ಮೇಲೆ ನೆಲೆಸಲಾರಂಭಿಸಿದ್ದನು. ಕೆಲವು ಕಾಲದ ಬಳಿಕ ದುಷ್ಟ ರಕ್ಕಸ, ತ್ರಿಪುರಾಸುರನೊಂದಿಗೆ ನಡೆದ ಭೀಕರ ಯುದ್ದದಲ್ಲಿ ರಕ್ಕಸನು ಶಿವನಿಂದ ಕೊಲ್ಲಲ್ಪಟನು.
ಚಿತ್ರಕೃಪೆ: Udaykumar PR
ಮತ್ತೆ ಉಗಮ!
ಈ ಯುದ್ದದಲ್ಲಿ ಘರ್ಷಣೆಯಿಂದುಂಟಾದ ಶಾಖದಿಂದಾಗಿ ಭೀಮಾ ನದಿಯು ಬತ್ತಿಹೋಯಿತೆಂದೂ ಯುದ್ದದಲ್ಲಿ ಶಿವನ ದೇಹದಿಂದ ಸುರಿದ ಬೆವರಿನಿಂದ ನದಿ ಪುನರ್ ನಿರ್ಮಿತವಾಯಿತೆಂದೂ ಹೇಳಲಾಗುತ್ತದೆ.
ಚಿತ್ರಕೃಪೆ: Udaykumar PR