Search
  • Follow NativePlanet
Share
» »ಅಂಬಲಪುಳ ದೇವಾಲಯದ ಕುತೂಹಲಕಾರಿ ಸತ್ಯಗಳು!

ಅಂಬಲಪುಳ ದೇವಾಲಯದ ಕುತೂಹಲಕಾರಿ ಸತ್ಯಗಳು!

ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಅಲ್ಲೆಪ್ಪಿಯಿಂದ ಕೆವಲ 14 ಕಿ.ಮೀ ದೂರದಲ್ಲಿರುವ ಅಂಬಲಪುಳವು ತನ್ನಲ್ಲಿರುವ ಪಾರ್ಥಸಾರಥಿ ಅಥವಾ ಕೃಷ್ಣನ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ

By Vijay

ಕೆಲ ದೇವಾಲಯಗಳು ಹಾಗೆಯೆ. ಸಾಮಾನ್ಯವಾಗಿ ಎಲ್ಲರಿಗೂ ಪ್ರಸಿದ್ಧಿ ಪಡೆದ ದೇವಾಲಯಗಳಾಗಿ ಕಂಡುಬರುತ್ತವೆಯಾದರೂ, ಆ ಪ್ರಸಿದ್ಧಿಯ ಹಿನ್ನೆಲೆ ಕುರಿತು ಬಹು ಜನರಿಗೆ ತಿಳಿದಿರುವುದೆ ಇಲ್ಲಾ. ಸಾಮಾನ್ಯವಾಗಿ ಎಲ್ಲರೂ ಭೇಟಿ ನೀಡುತ್ತಾರೆಂದು ಅವರೂ ಸಹ ಭೇಟಿ ನೀಡುತ್ತಾರೆ.

ಈ ವಿಚಾರ ಎಲ್ಲರಿಗೂ ಅನ್ವಯವಾಗುವುದಿಲ್ಲ. ಕೆಲವರಿಗೆ ದೇವಾಲಯಗಳ ಹಿನ್ನೆಲೆ, ದಂತಕಥೆಗಳೂ ಸಹ ಗೊತ್ತಿರುತ್ತವೆ. ಇನ್ನೂ ಎಷ್ಟೊ ಜನರಿಗೆ ದೇವಾಲಯದ ಪ್ರಸಿದ್ಧತೆ ಕುರಿತು ತಿಳಿದಿದ್ದರೂ ಅದರ ಕಾರಣಗಳು ಅಷ್ಟೊಂದಾಗಿ ಗೊತ್ತಿರುವುದಿಲ್ಲ. ನಿಮಗೂ ಪ್ರಸ್ತುತ ದೇವಾಲಯದ ಕುರಿತು ಕುತೂಹಲಕರ ವಿಷಯಗಳನ್ನು ತಿಳಿಯಬೇಕೆಂದಿದ್ದರೆ ಈ ಲೇಖನವನ್ನೊಮ್ಮೆ ಓದಿ.

ಇದು ಕೇರಳದಲ್ಲಿರುವ ಅತಿ ಪ್ರಸಿದ್ಧ ದೇವಾಲಯಗಳ ಪೈಕಿ ಒಂದು. ಕೃಷ್ಣನಿಗೆ ಮುಡಿಪಾದ ಅತಿ ಸುಂದರ ಹಾಗೂ ಅಗಾಧ ಹಿನ್ನೆಲೆ ಹೊಂದಿರುವ ದೇವಾಲಯ. ಅಷ್ಟೆ ಏಕೆ, ಗುರುವಾಯೂರಿನ ಕೃಷ್ಣನ ದೇವಾಲಯದೊಂದಿಗೂ ಸಹ ನಂಟನ್ನು ಹೊಂದಿರುವ ದೇವಾಲಯ.

ಹಾಗಾದರೆ, ಈ ದೇವಾಲಯ ಯಾವುದು? ಇದರ ಹಿನ್ನೆಲೆ ಏನು? ಇದರ ವಿಶೇಷತೆ ಏನು ಹಾಗೂ ಎಲ್ಲಿದೆ ಎಂಬೆಲ್ಲ ವಿಚಾರಗಳನ್ನು ತಿಳಿಯಬೇಕೆ? ಹಾಗಿದ್ದಲ್ಲಿ ಈ ಲೇಖನ ಓದಿ, ನೀವೂ ಸಹ ದೇವಾಲಯಕ್ಕೊಮ್ಮೆ ಭೇಟಿ ನೀಡಿ. ಏಕೆಂದರೆ ಈ ದೇವಾಲಯವಿರುವುದು ಅತ್ಯಂತ ಪ್ರಸಿದ್ಧ ಹಾಗೂ ಹೆಸರುವಾಸಿಯಾದ ಪ್ರವಾಸಿ ಸ್ಥಳವೊಂದರಲ್ಲಿ!

ಪಾರ್ಥಸಾರಥಿ

ಪಾರ್ಥಸಾರಥಿ

ಅಂಬಲಪುಳ ಎಂಬಲ್ಲಿರುವ ಈ ಕೃಷ್ಣ ದೇವಾಲಯವು ಬಲು ವಿಶೇಷವಾಗಿದ್ದು ಇಲ್ಲಿನ ಕೃಷ್ಣನ ವಿಗ್ರಹವು ಪಾರ್ಥಸಾರಥಿಯೊಂದಿಗೆ ನಂಟನ್ನು ಹೊಂದಿದೆ. ಅಂದರೆ, ಇಲ್ಲಿನ ಕೃಷ್ಣ ಒಂದು ಕೈಯಲ್ಲಿ ಚಾವಟಿ ಹಾಗೂ ಇನ್ನೊಂದು ಕೈಯಲ್ಲಿ ಶಂಖವನ್ನು ಹಿಡಿದಿದ್ದು ಮಹಾಭಾರತದ ಪಾರ್ಥಸಾರಥಿಯ ರೂಪದಲ್ಲಿರುವಂತೆ ದರ್ಶನ ಕೊಡುತ್ತಾನೆ.

ಚಿತ್ರಕೃಪೆ: commons.wikimedia

ಯಾರಿಂದ

ಯಾರಿಂದ

15-17 ನೇಯ ಶತಮಾನದ ಮಧ್ಯದ ಸಂದರ್ಭವೊಂದರಲ್ಲಿ ಚಂಬಕಶೇರಿ ಪ್ರಾಂತ್ಯದ ಆಡಳಿತಗಾರನಾದ ಶ್ರೀ ಪುರದಂ ತಿರುನಾಳ್ ದೇವನಾರಾಯಣನ್ ತಂಪುರನ್ ಎಂಬಾತನು ಈ ದೇವಾಲಯದ ನಿರ್ಮಾಣ ಮಾಡಿದ್ದಾಗಿ ತಿಳಿದುಬರುತ್ತದೆ.

ಚಿತ್ರಕೃಪೆ: Balagopal.k

ವಿಲ್ವಮಂಗಲಂ ಗುರು

ವಿಲ್ವಮಂಗಲಂ ಗುರು

ಒಂದೊಮ್ಮೆ ಈ ದೇವಾಲಯವಿರುವ ಸ್ಥಳದ ಪಕ್ಕದಲ್ಲಿ ಹಿನ್ನೀರಿನಲ್ಲಿ ತಂಪುರನ್ ರಾಜನು ತಾನು ಅತೀವವಾಗಿ ಗೌರವಿಸುತ್ತಿದ್ದ ವಿಲ್ವಮಂಗಲಂ ಸ್ವಾಮಿಯಾರ್ ಗುರುಗಳೊಂದಿಗೆ ವಿಹರಿಸುತ್ತಿದ್ದನು. ವಿಲ್ವಮಂಗಲರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರು ಹಾಗೂ ಪ್ರಸ್ತುತ ದೇವಾಲಯ ಸ್ಥಳ ತಲುಪುತ್ತಿದ್ದಂತೆಯೆ ಅವರಿಗೆ ಕೃಷ್ಣನ ಕೊಳಲಿನಿಂದ ಹೊರ ಹೊಮ್ಮುತ್ತಿರುವ ಇಂಪಾದ ನಾದ ಕೇಳಿಸಿತು.

ಚಿತ್ರಕೃಪೆ: Vinayaraj

ಅಶ್ವತ್ಥ ಮರ

ಅಶ್ವತ್ಥ ಮರ

ಅಲ್ಲೆ ಹತ್ತಿರದಲ್ಲಿದ್ದ ಅಶ್ವತ್ಥ ವೃಕ್ಷದಿಂದ ಕೊಳಲಿನ ನಾದವು ಹೊರಹೊಮ್ಮುತ್ತಿದುದನ್ನು ಗಮನಿಸಿದ ವಿಲ್ವಮಂಗಲಂ ಭಾವ ಪರವಶರಾಗಿ ಅದನ್ನು ಕೇಳತೊಡಗಿದರು ಹಾಗೂ ತಮ್ಮ ಜ್ಞಾನ ದೃಷ್ಟಿಯಿಂದ ಇಲ್ಲಿ ಕೃಷ್ಣನ ಆವಾಸವಿರುವುದನ್ನು ಮನಗಂಡರು. ಈ ವಿಷಯ ಅವರೊಡನಿದ್ದ ತಂಪುರನ್ ರಾಜನಿಗೆ ಗೊತ್ತಾಗಿ ಇಲ್ಲಿ ದೇವಾಲಯದ ನಿರ್ಮಾಣ ಮಾಡಿದನೆಂಬ ಪ್ರತೀತಿಯಿದೆ.

ಚಿತ್ರಕೃಪೆ: Vinayaraj

ಇಲ್ಲಿಗೆ ಬಂದ ಗುರುವಾಯೂರು ಕೃಷ್ಣ

ಇಲ್ಲಿಗೆ ಬಂದ ಗುರುವಾಯೂರು ಕೃಷ್ಣ

1789 ರ ಸಂದರ್ಭದಲ್ಲಿ ಗುರುವಾಯೂರು ಪ್ರಾಂತದಲ್ಲಿ ಟಿಪ್ಪು ಸುಲ್ತಾನನ ಆಕ್ರಮಣ ಉಂಟಾದ ಸಂದರ್ಭದಲ್ಲಿ ಗುರುವಾಯೂರಿನ ಪ್ರಸಿದ್ಧ ಕೃಷ್ಣನ ವಿಗ್ರಹವನ್ನು ರಕ್ಷಿಸುವ ಉದ್ದೇಶದಿಂದ ಅಂಬಲಪುಳದ ಈ ದೇವಾಲಯದಲ್ಲಿ ತಂದಿಡಲಾಗಿತ್ತು. ಹಾಗೆಯೆ ಇದು ಸುಮಾರು ಹನ್ನೆರಡು ವರ್ಷಗಳ ಕಾಲ ಇಲ್ಲಿತ್ತೆಂದು ಇತಿಹಾಸದಿಂದ ತಿಳಿದುಬರುತ್ತದೆ.

ಚಿತ್ರಕೃಪೆ: Vinayaraj

ಕೃಷ್ಣ ಬರುತ್ತಾನೆ

ಕೃಷ್ಣ ಬರುತ್ತಾನೆ

ಹಾಗಾಗಿಯೆ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ನಂಬಿಕೆಯು ಪ್ರಚಲಿತದಲ್ಲಿದೆ. ಅದೇನೆಂದರೆ ಪ್ರತಿ ದಿನ ಮಧ್ಯಾಹ್ನ ಅಂಬಲಪುಳದ ಪಾರ್ಥಸಾರಥಿಗೆ ಆರತಿಯು ನೆರವೇರಿದ ನಂತರ ಅದನ್ನು ದರ್ಶಿಸಲು ಹಾಗೂ ಪ್ರಸಾದ ಸ್ವೀಕರಿಸಲೆಂದು ಗುರುವಾಯೂರಪ್ಪನು ಇಲ್ಲಿಗೆ ಭೇಟಿ ನೀಡುತ್ತಾನಂತೆ!

ಚಿತ್ರಕೃಪೆ: Vinayaraj

ಕೃಷ್ಣ ವೇಷ ತೊಟ್ಟ

ಕೃಷ್ಣ ವೇಷ ತೊಟ್ಟ

ಇನ್ನೂ ಈ ದೇವಾಲಯದ ದಂತಕಥೆ ಇನ್ನಷ್ಟು ರೋಚಕವಾಗಿದೆ. ಕಥೆಯ ಪ್ರಕಾರ, ಹಿಂದೆ ಈ ಪ್ರದೇಶ ಆಳುತ್ತಿದ್ದ ರಾಜ ಅಪ್ರತಿಮ ಕೃಷ್ಣನ ಭಕ್ತ ಹಾಗೂ ಚದುರಂಗದಾಟ ಪ್ರಿಯ. ಆತನನ್ನು ಪರೀಕ್ಷಿಸಲೆಂದು ಒಮ್ಮೆ ಕೃಷ್ಣನು ಒಬ್ಬ ಸಾಧುವಿನ ವೇಷ ತೊಟ್ಟು ಅವನ ಆಸ್ಥಾನಕ್ಕೆ ಆಗಮಿಸುತ್ತಾನೆ.

ಚಿತ್ರಕೃಪೆ: Vinayaraj

ಸಾಧು ಸವಾಲು

ಸಾಧು ಸವಾಲು

ಹೀಗೆ ಬಂದ ಸಾಧುವನ್ನು ರಾಜನು ಗೌರವದಿಂದ ಸ್ವಾಗತಿಸುತ್ತಾನೆ. ತದನಂತರ ಸಾಧು ತಾನು ಚದುರಂಗದಾಟದ ಪ್ರೀಯ ಹಾಗೂ ರಾಜನೊಂದಿಗೆ ಆ ಆಟವಾಡುವ ಸವಾಲು ಹಾಕುತ್ತಾನೆ. ರಾಜನು ಅದಕ್ಕೊಪ್ಪಿ ಮೊದಲೆ ಆ ಸಾಧು ಏನಾದರೂ ಗೆದ್ದರೆ ಏನು ಬೇಕೆಂಬುದು ಗೊತ್ತುಪಡಿಸಲು ತಿಳಿಸುತ್ತಾನೆ.

ಚಿತ್ರಕೃಪೆ: Vinayaraj

ಸಾಧುವಿನ ಆಶಯ

ಸಾಧುವಿನ ಆಶಯ

ಅದಕ್ಕೆ ಆ ಸಾಧು ತಾನು ವ್ಯವಹಾರಿಕ ಬದುಕಿನಿಂದ ದೂರವಿರುವ ಕಾರಣ ಬೇರೆ ಇತರರಿಗೆ ದಾನ ಮಾಡಲು ಚದುರಂಗದ ಒಂದೊಂದು ಮನೆಗೂ ಮೂಟೆ ಅಕ್ಕಿಯನ್ನು ವಿಶೇಷವಾದ ರೀತಿಯಲ್ಲಿ ಕೊಡಬೇಕೆಂದು ಹೇಳುತ್ತಾನೆ. ಆ ಪ್ರಕಾರವಾಗಿ ಒಂದನೆಯ ಮನೆ ಒಂದು ಮೂಟೆ, ಎರಡನೇಯ ಮನೆಗೆ ಎರಡು, ಮೂರನೇಯ ಮನೆಗೆ ನಾಲ್ಕು, ನಾಲ್ಕನೇಯ ಮನೆಗೆ ಎಂಟು, ಐದನೇಯ ಮನೆಗೆ ಹದಿನಾರು ಹೀಗೆ ಸಾಗುತ್ತದೆ.

ಚಿತ್ರಕೃಪೆ: Vinayaraj

ಗೊತ್ತಾಗಲೆ ಇಲ್ಲ

ಗೊತ್ತಾಗಲೆ ಇಲ್ಲ

ಮೊದ ಮೊದಲು ಇದರೊಳಗಿದ್ದ ಮರ್ಮ ಅರಿಯದ ರಾಜನು ಸಾಧು ಬಲು ಕಡಿಮೆ ಬಹುಮನವನ್ನು ಬೇಡುತ್ತಿದ್ದಾನೆಂದು ಹೆಚ್ಚುವರಿಯಾಗಿ ಇನ್ನೂ ಕೇಳಲು ಹೇಳಿದಾಗ ಅದಕ್ಕೆ ಸಾಧು ಒಟ್ಟೂ ಸಮ್ಮತಿಸುವುದಿಲ್ಲ. ಕೊನೆಗೆ ಆಟ ಪ್ರಾರಂಭವಾಗುತ್ತದೆ.

ಚಿತ್ರಕೃಪೆ: Vinayaraj

ವಚನ ನೀಡುತ್ತಾನೆ

ವಚನ ನೀಡುತ್ತಾನೆ

ಕೊನೆಗೆ, ಸಾಧು ಇದರಲ್ಲಿ ಗೆದ್ದು ಬೇಡಿಕೆಯನ್ನು ಈಡೇರಿಸಲು ಹೇಳಿದಾಗ, ರಾಜನು ಒಂದೊಂದೆದು ಚದುರಂಗದ ಮನೆಗೆ ಹೇಳಿರುವಂತೆ ಅಕ್ಕಿ ಇಡಲು ಪ್ರಾರಂಭಿಸುತ್ತಾನೆ. ಇನ್ನೂ64 ಮನೆಗಳಿಗೆ ಬೆಕಾದ ಅಕ್ಕಿಯೆ ಅವನಲ್ಲಿಲ್ಲದಿರುವುದು ಆಗ ಅವನ ಅರಿವಿಗೆ ಬರುತ್ತದೆ. ತನ್ನನ್ನು ಕ್ಷಮಿಸಬೇಕೆಂದು ಅದನ್ನು ಭರಿಸುವುದಾಗಿಯೂ ವಚನ ನೀಡುತ್ತಾನೆ.

ಚಿತ್ರಕೃಪೆ: Vinayaraj

ಪಾಲಪಾಯಸಂ

ಪಾಲಪಾಯಸಂ

ಅದಕ್ಕೆ ಸಾಧು ಅವನನ್ನು ಅಶೀರ್ವದಿಸಿ ನಿನಗೆ ಸಾಕಾಗುವಷ್ಟು ಸಮಯ ತೆಗೆದುಕೊ ಪ್ರತಿ ದಿನ ಅನ್ನ ಸಂತರ್ಪಣೆ ಮಾಡುತ್ತ ಆ ಭಾರವನ್ನು ನೀಗಿಸಲು ಪ್ರಯತ್ನಿಸು ಎಂದು ಹೇಳುತ್ತಾನೆ. ಆ ಕಾರಣದಿಂದಾಗಿಯೆ ಇಂದಿಗೂ ಈ ದೇವಾಲಯದಲ್ಲಿ ಪಾಲಪಾಯಸಂ ಎಂಬ ವಿಶೇಷ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಇದು ಅನ್ನ ಹಾಗೂ ಹಾಲಿನಿಂದ ತಯಾರಿಸಲಾದ ಸಿಹಿ ಖಾದ್ಯವಾಗಿದೆ ಹಾಗೂ ಇಲ್ಲಿನ ವಿಶೇಷ.

ಚಿತ್ರಕೃಪೆ: Vinayaraj

ತೊಟ್ಟಿಲು ಕಟ್ಟುತ್ತಾರೆ

ತೊಟ್ಟಿಲು ಕಟ್ಟುತ್ತಾರೆ

ಇನ್ನೊಂದು ನಂಬಿಕೆಯ ಪ್ರಕಾರ, ಮಕ್ಕಳಾಗದ ದಮ್ಪತಿಗಳು ಇಲ್ಲಿಗೆ ಬಂದು ಹರಕೆ ಹೊತ್ತು ತೊಟ್ಟಿಲನ್ನು ಕಟ್ಟಿಸುತ್ತಾರೆ. ಅವರ ಇಚ್ಛೆ ಪೂರ್ಣವಾಗುತ್ತಿದ್ದಂತೆಯೆ ಮತ್ತೆ ಇಲ್ಲಿಗೆ ಬಂದು ತೊಟ್ಟಿಲನ್ನು ಬಿಚ್ಚಿಸುತ್ತಾರೆ.

ಚಿತ್ರಕೃಪೆ: Bhoomi

ಅಪಾರ ಭಕ್ತಸಾಗರ

ಅಪಾರ ಭಕ್ತಸಾಗರ

ಈ ರೀತಿಯಾಗಿ ಅಂಬಲಪುಳ ಕೃಷ್ಣ ದೇವಾಲಯ ಅಥವಾ ಅಂಬಲಪುಳ ಪಾರ್ಥಸಾರಥಿ ದೇವಾಲಯವೆಂದೆ ಇದು ಪ್ರಖ್ಯಾತವಾಗಿದ್ದು ಸಾಕಷ್ಟು ಜನ ಭಕ್ತಾದಿಗಳನ್ನು ಅಕ್ಕ ಪಕ್ಕದ ರಾಜ್ಯಗಳಿಂದಲೂ ಸಹ ಆಕರ್ಷಿಸುತ್ತದೆ.

ಚಿತ್ರಕೃಪೆ: Vinayaraj

ಇಲ್ಲಿಯೆ ಜನನ!

ಇಲ್ಲಿಯೆ ಜನನ!

ಕೇರಳದ ಪ್ರಸಿದ್ಧ ಕಲಾ ಪ್ರದರ್ಶನವಾದ ಓಟ್ಟಂತುಳ್ಳಲ್ ಕಲೆಯು ಜನನವು ಈ ದೇವಾಲಯದೊಂದಿಗೆ ನಂಟನ್ನು ಹಾಕಿಕೊಂಡಿದೆ. ಪ್ರಸಿದ್ಧ ಮಲಯಾಳಂ ಕವಿಯಾದ ಕಲಕ್ಕತುಟು ಕುಂಜನ್ ನಂಬಿಯಾರ್ ಈ ದೇವಾಲಯದಲ್ಲೆ ಈ ಕಲೆಯನ್ನು ಮೊದಲ ಬಾರಿಗೆ ಆವಿಷ್ಕರಿಸಿದರು ಎಂಬ ಪ್ರತೀತಿಯಿದೆ.

ಚಿತ್ರಕೃಪೆ: Mohanraj Kolathapilly

ಇಂದಿಗೂ ಇದೆ!

ಇಂದಿಗೂ ಇದೆ!

ಈ ಕವಿಯು ಬಳಸುತ್ತಿದ್ದ ತಾಮ್ರದ ದೊಡ್ಡ ನಗಾರಿಯೊಂದು ಇಂದಿಗೂ ಇಲ್ಲಿ ಸಂರಕ್ಷಿಸಿಡಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವವರು ಈ ನಗಾರಿಯನ್ನು ಕಾಣಬಹುದು.

ಚಿತ್ರಕೃಪೆ: Vinayaraj

ತುಂಜತು ಎಳುತಂಜನ್

ತುಂಜತು ಎಳುತಂಜನ್

ಮಲಯಾಳಂ ಭಾಷೆಯ ಪಿತಾಮಹ ಎಂತಲೆ ಖ್ಯಾತಿಗಳಿಸಿರುವ ತುಂಜತು ಎಳುತಂಜನ್ ಅವರು ಈ ದೇವಾಲಯದಾವರಣದಲ್ಲಿಯೆ ಕುಳಿತು ರಾಮಾಯಣ ಹಾಗೂ ಮಹಾಭಾರತವನ್ನು ಮಲಲಯಾಳಂನಲ್ಲಿ ಬರೆದಿದ್ದರೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Abilngeorge

ಎಷ್ಟು ದೂರ?

ಎಷ್ಟು ದೂರ?

ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಅಲಪುಳ ಅಥವಾ ಅಲ್ಲೆಪ್ಪಿಯಿಂದ ಕೇವಲ 14 ಕಿ.ಮೀ ಗಳಷ್ಟು ದೂರ್ರದಲ್ಲಿ ಅಂಬಲಪುಳವಿದೆ. ಅಲ್ಲೆಪ್ಪಿಯಿಂದ ಅಂಬಲಪುಳಕ್ಕೆ ನಿರಂತರವಾಗಿ ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಅಂಬಲಪುಳವು ಎರ್ನಾಕುಲಂನಿಂದ 60 ಕಿ.ಮೀ ಹಾಗೂ ತಿರುವನಂತಪುರಂನಿಂದ 120 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Mehul Antani

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X