ಸಾಮಾನ್ಯವಾಗಿ ಬಹುತೇಕರಿಗೆ ದೇವಾಲಯ ವಿನ್ಯಾಸದ ಮುಖ್ಯ ಲಕ್ಷಣದ ಕುರಿತು ಕೇಳಿದಾಗ ಗೋಪುರ ಎಂದು ಹೇಳುತ್ತಾರೆ. ಆದರೆ ಶಿಖರ ಅಥವಾ ವಿಮಾನ ಮತ್ತು ಗೋಪುರಗಳಿಗೆ ವಿಶೇಷವಾದ ವ್ಯತ್ಯಾಸವಿರುತ್ತದೆ ಎಂಬುದು ಕೆಲವರಿಗೆ ಮಾತ್ರ ಗೊತ್ತಿರುವ ವಿಚಾರವಾಗಿದೆ.
ಗೋಪುರಗಳು ದೇವಸ್ಥಾನದ ಕಳೆಯನ್ನು ಹೆಚ್ಚಿಸುವ ಪ್ರಮುಖ ರಚನೆಗಳಾದರೂ ಅವು ಪ್ರವೇಶ ದ್ವಾರದ ಕಮಾನು ಇಲ್ಲವೆ ದೈವ ಸನ್ನಿಧಿಯ ಸ್ವಾಗತ ಕಮಾನುಗಳಂತೆ ಕಾರ್ಯ್ಯ ನಿರ್ವಹಿಸುತ್ತವೆ. ಆದರೆ ಶಿಖರಗಳು ಅಥವಾ ವಿಮಾನಗಳು ದೇವಸ್ಥಾನದ ಮೂಲ ದೈವ ಸನ್ನಿಧಿಯಾದ ಗರ್ಭಗೃಹದ ಮೇಲೆ ನೇರವಾಗಿ ನಿರ್ಮಿತವಾದ ರಚನೆಗಳಾಗಿರುತ್ತವೆ.
ನಿಮಗಿಷ್ಟವಾಗಬಹುದಾದ : ಕರ್ನಾಟಕದ ಆಕರ್ಷಕ ದೇಗುಲ ಗೋಪುರಗಳು
ಭಾರತ ದೇಶವನ್ನು ಹಿಂದಿನಿಂದಲೂ ಆಳಿದ ಹಿಂದೂ ಸಾಮ್ರಾಜ್ಯಗಳು ಅಪಾರ. ದೇಶದ ವಿವಿಧ ಭಾಗಗಳಲ್ಲಿ ಶಕ್ತಿಶಾಲಿಯಾಗಿ ಹಲವು ಶತಕಗಳ ಕಾಲ ಆಳಿದ ವಿವಿಧ ಹಿಂದೂ ಸಾಮ್ರಾಜ್ಯಗಳ ವಾಸ್ತುಶಿಲ್ಪ ಶೈಲಿಯು ವಿಭಿನ್ನವಾಗಿರುವುದನ್ನು ಕಾಣಬಹುದು.
ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ದ್ರಾವಿಡ ಶೈಲಿಯ ವಾಸ್ತುಶಿಲ್ಪವಿದ್ದರೆ ಉಳಿದೆಡೆ ನಗರ, ವೇಸರ ರೀತಿಯ ವಾಸ್ತುಶೈಲಿಯನ್ನು ಕಾಣಬಹುದು. ದೇವಾಲಯಗಳಿಗೆ ಹಿಂದೆ ರಾಜರುಗಳು ಪ್ರಾಮುಖ್ಯತೆ ನೀಡುತ್ತಿದ್ದರಿಂದ ಇಂದು ವಿಭಿನ್ನ ಹಾಗೂ ಮನಸೆಳೆ ಕಲಾತ್ಮಕತೆಯಿಂದ ಕೂಡಿದ ಸಹಸ್ರಾರು ದೇವಾಲಯಗಳ ಒಟ್ಟಾರೆ ರಚನೆಗಳನ್ನು ಭಾರತ ದೇಶಾದ್ಯಂತ ಕಾಣಬಹುದು.
ನಿಮಗಿಷ್ಟವಾಗಬಹುದಾದ : ಕರ್ನಾಟಕದಲ್ಲಿರುವ ಶಿವನ ಅತಿ ಪುರಾತನ ಹಾಗೂ ಅನನ್ಯ ದೇವಾಲಯಗಳು
ಇಂತಹ ದೇವಾಲಯ ರಚನೆಗಳಲ್ಲಿ ಕೇಲವು ಪ್ರಮುಖ ದೇವಾಲಯಗಳು ತಮ್ಮ ಅದ್ಭುತ ಹಾಗೂ ಕಲಾತ್ಮಕತೆಯಿಂದ ಕೂಡಿದ ಶಿಖರಗಳಿಂದಾಗಿ ಇತಿಹಾಸ ಪ್ರಿಯ ಹಾಗೂ ಕಲೆಯನ್ನು ಪ್ರೀತಿಸುವ ಅದೆಷ್ಟೊ ಪ್ರವಾಸಿಗರನ್ನು ಕೇವಲ ಸ್ವದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ.
ನಿಮಗೂ ಸಹ ಈ ವಿಶಿಷ್ಟ ಶಿಖರಗಳುಳ್ಳ ಭಾರತದ ಪ್ರಮುಖ ದೇವಾಲಯಗಳ ಕುರಿತು ತಿಳಿಯಲು ಅಥವಾ ಅವುಗಳನ್ನೊಮ್ಮೆಯಾದರೂ ನೋಡಿ ಅತಿ ಪುರಾತನದಿಂದಲೆ ನಮ್ಮಲ್ಲಿದ್ದ ಕಲಾತ್ಮಕತೆಯ ಪ್ರತಿಭೆಗಳನ್ನು ಆಸ್ವಾದಿಸುವ ಬಯಕೆಯಿದ್ದಲ್ಲಿ ಈ ಲೇಖನವನ್ನೊಮ್ಮೆ ಓದಿ. ನಮ್ಮ ಪೂರ್ವಜರ ಕಲಾ ನೈಪುಣ್ಯತೆಯ ಕುರಿತು ಮುಂದಿನ ಪೀಳಿಗೆಗೆ ಮನದಟ್ಟಾಗುವಂತೆ ತಿಳಿಸುವಲ್ಲಿ, ಇದು ನಮ್ಮ ಜವಾಬ್ದಾರಿಯುತ ಸೇವೆಯಾಗಬಹುದು.
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಹುಮಾ ಶಿವ ದೇವಾಲಯ : ಇದನ್ನು ಪ್ರೀತಿಯಿಂದ "ಲೀನಿಂಗ್ ಟೆಂಪಲ್ ಆಫ್ ಹುಮಾ" ಎಂದು ಕರೆಯುತ್ತಾರೆ. ಶಿವನಿಗೆ ಮುಡಿಪಾದ ಈ ದೇವಾಲಯ ಶಿಖರವು ಒಂದು ನಿರ್ದಿಷ್ಟ ದಿಕ್ಕಿಗೆ ವಾಲಿರುವುದರಿಂದ ಈ ರೀತಿ ಕರೆಯಲಾಗುತ್ತದೆ. ಈ ದೇವಾಲಯವಿರುವುದು ಒಡಿಶಾ ರಾಜ್ಯದ ಸಂಭಲಪುರ ಪಟ್ಟಣದ ದಕ್ಷಿಣಕ್ಕೆ 32 ಕಿ.ಮೀ ದೂರದಲ್ಲಿರುವ ಹುಮಾ ಎಂಬ ಗ್ರಾಮದಲ್ಲಿ. ಈ ರೀತಿಯಾಗಿ ಇದು ಜಗತ್ತಿನಲ್ಲಿಯೆ ಏಕೈಕ ವಾಲಿದ ದೇವಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.
ಚಿತ್ರಕೃಪೆ: AkkiDa
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಮಹಾನದಿ ನದಿಯ ದಂಡೆಯ ಮೇಲೆ ಸ್ಥಿತವಿರುವ ಈ ದೇವಾಲಯ ಸಂಕೀರ್ಣದಲ್ಲಿ ಇತರೆ ಕೆಲವು ಚಿಕ್ಕ ದೇಗುಲಗಳಿವೆ. ಅದರಲ್ಲೂ ವಿಚಿತ್ರವೆಂದರೆ ಮುಖ್ಯ ದೇವಾಲಯ ಶಿಖರ ಒಂದೆಡೆ ವಾಲಿದ್ದರೆ ಇತರೆ ದೇಗುಲಗಳ ಶಿಖರಗಳು ಮತ್ತೊಂದೆಡೆ ವಾಲಿರುವುದನ್ನು ಕಾಣಬಹುದು. ಈ ವಾಲುವಿಕೆಗೆ ಇದೆ ನಿರ್ದಿಷ್ಟ ಕಾರಣ ಎಂದು ಇನ್ನೂ ಕಂಡುಕೊಳ್ಳಲಾಗಿಲ್ಲ. ಆದರೆ ತಜ್ಞರ ಪ್ರಕಾರ ಭೂ ಆಳದಲ್ಲಿ ಆಗಿರಬಹುದಾದ ಭೂಕಂಪನಗಳು ಕಾರಣವಾಗಿರಬಹುದಂತೆ.
ಚಿತ್ರಕೃಪೆ: MKar
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ರಾಮೇಶ್ವರ ಶಿಖರ : ಈ ಅದ್ಭುತ ವಿನ್ಯಾಸದ ಶಿಖರವುಳ್ಳ ರಾಮೇಶ್ವರ ದೇವಸ್ಥಾನವು ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರದಲ್ಲಿದೆ. ಈ ಶಿಖರವು ನಗರ ಶೈಲಿಯ ವಾಸ್ತು ಶಿಲ್ಪ ಹೊಂದಿದ್ದು ತನ್ನ ಕಲಾತ್ಮಕತೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Sanshlistha m
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಕೇಶವ ದೇವಾಲಯ ಶಿಖರ : ಸುಂದರ ಕಲೆಗಳ ಬೀಡು ಬೇಲೂರಿನ ಚೆನ್ನ ಕೇಶವನ ದೇವಾಲಯದಂತೆಯೆ ಈ ಕೇಶವ ದೇವಾಲಯ ಶಿಖರವು ಅತಿ ಸುಂದರ ಕೆತ್ತನೆಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಶಿಖರವು ವೇಸರ ಶೈಲಿಯ ವಾಸ್ತುಶಿಲ್ಪಕ್ಕೆ ಸುಂದರ ಉದಾಹರಣೆಯಾಗಿದೆ. ಈ ದೇವಾಲಯವಿರುವುದು ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿರುವ ಸೋಮನಾಥಪುರದಲ್ಲಿ.
ಚಿತ್ರಕೃಪೆ: Dineshkannambadi
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಮುರುಡೇಶ್ವರ ದೇವಾಲಯ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ಪ್ರಖ್ಯಾತ ಪ್ರವಾಸಿ ಕ್ಷೇತ್ರ. ಇಲ್ಲಿರುವ ಮುರುಡೇಶ್ವರ ದೇವಸ್ಥಾನದ ಶಿಖರವು ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿ. ಸಾಮಾನ್ಯವಾಗಿ ದ್ರಾವಿಡ ಶೈಲಿಯನ್ನು ದಕ್ಷಿಣ ಭಾರತದ ಸಾಕಷ್ಟು ದೇವಾಲಯಗಳಲ್ಲಿ ಕಾಣಬಹುದು.
ಚಿತ್ರಕೃಪೆ: Vedamurthy J
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಮಧ್ಯ ಪ್ರದೇಶ ರಾಜ್ಯದಲ್ಲಿರುವ ಖಜುರಾಹೊ ವಿಶ್ವವಿಖ್ಯಾತಿಗಳಿಸಿದ ಐತಿಹಾಸಿಕ ತಾಣ. ಇದು ವಿಶೇಷವಾಗಿ ಅದ್ಭುತ ಕೆತ್ತನೆಗಳುಳ್ಳ ದೇವಸ್ಥಾನಗಳೂ ಹಾಗೂ ರತಿ ಸಮಾಗಮ ಅನಾವರಣಗೊಳಿಸುವ ಮಿಥುನ ಶಿಲ್ಪಕಲೆಗಳಿಗೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಖಂಡಾರಿಯಾ ಮಹಾದೇವ ದೇವಾಲಯ ಶಿಖರವು ತನ್ನ ವಿಶಿಷ್ಟತೆಯಿಂದ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.
ಚಿತ್ರಕೃಪೆ: Paul Mannix
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಭುವನೇಶ್ವರ ನಗರದಲ್ಲಿರುವ, ಹರಿಹರನಿಗೆ ಮುಡಿಪಾದ ಪ್ರಸಿದ್ಧ ಲಿಂಗರಾಜ ದೇವಸ್ಥಾನದ ವಿಶಿಷ್ಟ ಶಿಖರ. ದೂರದಿಂದಲೆ ಗಮನ ಸೆಳೆವ ಈ ಸುಂದರ ಶಿಖರ ದೇವಸ್ಥಾನಕ್ಕೆ ಸಾಕಷ್ಟು ಜನ ಭಕ್ತರು, ಪ್ರವಾಸಿಗರು ದಿನ ನಿತ್ಯ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Tinucherian
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ವಾಸ್ತುಶಿಲ್ಪ ಹಾಗೂ ತಾಂತ್ರಿಕತೆಯ ಅದ್ಭುತ ಎಂದೆ ಗುರುತಿಸಲ್ಪಡುವ ತಮಿಳುನಾಡಿನ ಅರಿಯಲೂರು ಜಿಲ್ಲೆಯ ಗಂಗೈಕೊಂಡಂ ಚೋಳಪುರಂನಲ್ಲಿರುವ ಬೃಹದೇಶ್ವರ ದೇವಾಲಯದ ಅತಿ ಸುಂದರ ಕೆತ್ತನೆಯ ಶಿಖರ. ಇದೊಂದು ರಾಷ್ಟ್ರೀಯ ಸ್ಮಾರಕವೂ ಹೌದು.
ಚಿತ್ರಕೃಪೆ: Thamizhpparithi Maari
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಮಧ್ಯಪ್ರದೇಶದ ಮಹೇಶ್ವರ ಜಿಲ್ಲೆಯ ಮಹೇಶ್ವರ ನಗರದಲ್ಲಿರುವ ಮಹೇಶ್ವರ ಕೋಟೆ ಸಂಕೀರ್ಣದಲ್ಲಿರುವ ಅಹಿಲ್ಯೇಶ್ವರ ಶಿವಾಲಯದ ಸುಂದರ ಶಿಖರ.
ಚಿತ್ರಕೃಪೆ: Bernard Gagnon
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಮುಂಬೈನ ಮಲಬಾರ್ ಹಿಲ್ ಪ್ರದೇಶದಲ್ಲಿರುವ ಪೌರಾಣಿಕ ಮಹತ್ವವುಳ್ಳ ಬಾಣಗಂಗಾ ಕೊಳದ ಬಳಿಯಿರುವ ದೇವಾಲಯದ ಶಿಖರ.
ಚಿತ್ರಕೃಪೆ: Belasd
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಭೂಡ್ ಸುಇದ್ಧನಾಥ ದೇವಸ್ಥಾನದ ವಿಶಿಷ್ಟಮಯ ಶಿಖರ. ಈ ದೇವಾಲಯವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಖಾನಾಪುರ(ವಿಟಾ) ತಾಲೂಕಿನ ಭೂಡ್ ಎಂಬ ಹಳ್ಳಿಯಲ್ಲಿದೆ. ಇದು ಶಿವನಿಗೆ ಮುಡಿಪಾದ ದೇವಾಲಯವಾಗಿದ್ದು ಈ ಸುತ್ತಮುತ್ತಲಿನ ಸ್ಥಳಗಳಲ್ಲೆ ಪ್ರಭಾವಶಾಲಿ ದೇವಸ್ಥಾನವಾಗಿದೆ. ವರ್ಷಕ್ಕೊಮ್ಮೆ ಚೈತ್ರ ಅಷ್ಟಮಿಯ ಸಂದರ್ಭದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ವಿಶೇಷವೆಂದರೆ ಮೂರನೆಯ ದಿನ ದೇವರಿಗೆ ಭಾಂಗ್ ಅನ್ನು ನೈವೆದ್ಯ (ಒಂದು ರೀತಿಯ ಮದಿರೆ) ಮಾಡಲಾಗುತ್ತದೆ.
ಚಿತ್ರಕೃಪೆ: Sujitkumarpatil
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಗುಜರಾತ್ ರಾಜ್ಯದಲ್ಲಿರುವ ದೇವಭೂಮಿ ದ್ವಾರಕಾ ಜಿಲ್ಲೆಯ ದ್ವಾರಕಾ ಪಟ್ಟಣದಲ್ಲಿರುವ ಕೃಷ್ಣನಿಗೆ ಮುಡಿಪಾದ ದ್ವಾರಕಾಧೀಶ ದೇವಸ್ಥಾನದ ಸುಂದರ ಶಿಖರ. ಇದನ್ನು ಜಗತ್ ಮಂದಿರ ಎಂತಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Kunalmehra7
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಬೆಂಗಳೂರಿನಲ್ಲಿರುವ ಪ್ರಖ್ಯಾತ ಗವಿ ಗಂಗಾಧರೇಶ್ವರ ಗುಹಾ ದೇವಾಲಯದ ಶಿಖರ. ಬಂಡೆಯೊಂದರಲ್ಲಿ ಕೆತ್ತಲಾದ ಗುಹೆಯೊಳಗೆ ಪ್ರವೇಶಿಸಿ ಶಿವಲಿಂಗದ ದರ್ಶನ ಪಡೆಯಬಹುದು. ಆ ಶಿವಲಿಂಗ ಪ್ರತಿಷ್ಠಾಪಿತವಾದ ಸ್ಥಳದ ಮೇಲೆಯೆ ಈ ಸುಂದರ ಶಿಖರದ ನಿರ್ಮಾಣ ಮಾಡಲಾಗಿದೆ.
ಚಿತ್ರಕೃಪೆ: Pavithrah
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಮಧ್ಯಪ್ರದೇಶದ ಟೀಕಂಗಡ್ ಜಿಲ್ಲೆಯ ಒರಛಾ ಪಟ್ಟಣದಲ್ಲಿರುವ ವಿಷ್ಣು ದೇವರಿಗೆ ಮುಡಿಪಾದ ಚತುರ್ಭುಜ ದೇವಾಲಯ ಶಿಖರ. ನಾಲ್ಕು ಅವಳಿ ಶಿಖರಗಳನ್ನು ಹೊಂದಿರುವ ಕಾರಣ ಇದನ್ನು ಚತುರ್ಭುಜ ಅಂದರೆ ನಾಲ್ಕು ಬಾಹು ದೇವಾಲಯ ಎಂದು ಕರೆಯಲಾಗುತ್ತದೆ.
ಚಿತ್ರಕೃಪೆ: Yann
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಬನ್ಶೆಬೇರಿಯಾ ಪಟ್ಟಣದಲ್ಲಿರುವ ಹಂಸೇಶ್ವರಿ ದೇವಿ ದೇವಾಲಯದ ವಿಶಿಷ್ಟ ಶಿಖರ. ಇದು ದೇವಿಗೆ ಮುಡಿಪಾದ ದೇವಾಲಯವಾಗಿದೆ.
ಚಿತ್ರಕೃಪೆ: Kinkiniroy2012
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಹಂಸೇಶ್ವರಿ ದೇವಿ ದೇವಾಲಯದ ಬಳಿಯಲ್ಲೆ ಇರುವ ಅನಂತ ಬಸುದೇವನ ದೇವಾಲಯ ಶಿಖರ.
ಚಿತ್ರಕೃಪೆ: Amartyabag
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಬಿ ಆರ್ ಬಿರ್ಲಾ ಹಾಗೂ ವಿಜಯ್ ತ್ಯಾಗಿಯವರಿಂದ ಜಂಟಿಯಾಗಿ ನಿರ್ಮಿತವಾದ ದೆಹಲಿಯ ಲಕ್ಷ್ಮಿ ನಾರಾಯಣ ದೇವಾಲಯದ ಸುಂದರ ಹಾಗೂ ರಂಗು ರಂಗಾದ ಶಿಖರ.
ಚಿತ್ರಕೃಪೆ: Dennis Jarvis
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಮಹಾರಾಷ್ಟ್ರದ ಪುಣೆಯಲ್ಲಿರುವ ಪಾರ್ವತಿ ಬೆಟ್ಟದಲ್ಲಿರುವ ಪಾರ್ವತಿ ದೇವಿ ದೇವಾಲಯದ ಶಿಖರ.
ಚಿತ್ರಕೃಪೆ: Nikhil.kawale
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ತಮಿಳುನಾಡಿನಲ್ಲಿರುವ ಮದುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನದ ಸುವರ್ಣಮಯ ಶಿಖರ.
ಚಿತ್ರಕೃಪೆ: BishkekRocks
ವಿಶಿಷ್ಟ ವಿನ್ಯಾಸಗಳ ಶಿಖರಗಳು:
ಕೇರಳದ ಕಾಸರಗೋಡಿನಲ್ಲಿರುವ ಮಧುರ ದೇಗುಲದ ವಿಶಿಷ್ಟ ಶಿಖರ. ಇದು ಅನಂತೇಶ್ವರ ವಿನಾಯಕನಿಗೆ ಮುಡಿಪಾದ ದೇವಾಲಯವಾಗಿದೆ.
ಚಿತ್ರಕೃಪೆ: Sreejithk2000