ಆಗಷ್ಟೇ ಆಫೀಸ್ನಿಂದ ಮನೆಗೆ ಹೋಗಿ ಕುಳಿತಿದ್ದೇನೆ. ನನ್ನ ಸ್ನೇಹಿತೆಯೊಬ್ಬಳು ಮೆಸೇಜ್ ಮಾಡಲು ಪ್ರಾರಂಭಿಸಿದಳು... ನಾಳೆ ಭಾನುವಾರ ನಿನ್ನ ಪ್ಲಾನ್ ಏನು ಎನ್ನುವುದರ ಮೂಲಕ ಪೀಠಿಕೆ ಇಟ್ಟಳು. ಏನಿಲ್ಲಾ ಎನ್ನುತ್ತಿದ್ದಂತೆಯೇ, ಸರಿ ಹಾಗಾದರೆ ನಮ್ಮ ಸ್ನೇಹಿತರ ಬಳಗದೊಂದಿಗೆ ಸ್ಕಂದಗಿರಿಗೆ ಹೋಗೋಣ ಎಂದಳು. ಅರೇ! ಅದೆಲ್ಲಿದೆ ಎನ್ನುವ ನನ್ನ ಪ್ರಶ್ನೆಗೆ ಅವಳು ನೀಡಿದ್ದು ಇಷ್ಟೇ... "ನಾಳೆ ನೋಡುವೆಯಂತೆ, ಬೆಳಗ್ಗೆ ಬೇಗ ಎದ್ದು ರೆಡಿಯಾಗು. ನಾವೆಲ್ಲಾ ನಿಮ್ಮ ಮನೆಯ ಹತ್ತಿರ ಬರುತ್ತೇವೆ ಹಾಗೇ ಹೋಗೋಣ ಎಂದಳು. ನನಗೂ ವಾರದಿಂದ ಕೆಲಸದ ಒತ್ತಡದಲ್ಲಿ ಮನಸ್ಸು ಸ್ವಲ್ಪ ದಣಿದಿತ್ತು. ನಾಳೆಯ ಚಾರಣದಿಂದ ಸ್ವಲ್ಪ ಹುಮ್ಮಸ್ಸು ಬರಬಹುದೆಂದು ನಿರ್ಧರಿಸಿದೆ.
ಭಾನುವಾರ ಬೆಳಿಗ್ಗೆ 6 ಗಂಟೆಗೆಲ್ಲಾ ಸ್ನೇಹಿತರ ಕಾರ್ ಹಾರನ್ ಬಡಿಯಲಾರಂಭಿಸಿತು. ಬಂದೆ ಬಂದೆ ಎನ್ನುತ್ತಾ ಕಾರ್ ಹತ್ತಿ ಕುಳಿತಿದ್ದೇ ತಡ... ನಮ್ಮ ಹಾಳು ಮೂಳು ಕಥೆಗಳು ಶುರುವಾಯಿತು. ತಮಾಷೆಯಲ್ಲಿ ಮುಳುಗಿದ್ದ ನಮಗೆ ಒಂದು ಸುಂದರ ತಾಣದ ಹತ್ತಿರ ಬಂದು ನಿಂತಿದ್ದೇ ತಿಳಿಯಲಿಲ್ಲ. ಅರೇ! ಇದ್ಯಾವ ಸ್ಥಳ ಎನ್ನುವ ಪ್ರಶ್ನೆಗೆ ಅಲ್ಲಿಯ ಸ್ಥಳಗಳನ್ನು ತೋರಿಸುತ್ತಲೇ ವಿವರಣೆ ನೀಡಿದಳು ನನ್ನ ಸ್ನೇಹಿತೆ... ನಿಜ, ಆ ಅದ್ಭುತ ಗಿರಿಯನ್ನು ಕಣ್ತುಂಬ ನೋಡಿದ ಸುಂದರ ಅನುಭವ ನನ್ನದು. ಈ ತಾಣದ ಬಗ್ಗೆ ನನಗೆ ತಿಳಿದ ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನೀವೂ ಈ ವಾರದ ರಜೆಯಲ್ಲಿ ಹೋಗಿ ಬನ್ನಿ...
PC: wikipedia.org
ಸ್ಕಂದಗಿರಿ
ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿರುವ ಈ ತಾಣ ಒಂದು ದಿನದ ಚಾರಣಕ್ಕೆ ಸೂಕ್ತ ಜಾಗ. ಚಿಕ್ಕಬಳ್ಳಾಪುರದಿಂದ 3 ಕಿ.ಮೀ. ದೂರದಲ್ಲಿರುವ ಈ ಗಿರಿ ಸುಂದರವಾದ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಇಲ್ಲಿ 18 ನೇ ಶತಮಾನದಲ್ಲಿ ನಿರ್ಮಿಸಿದ್ದ ಒಂದು ಕೋಟೆ ಭಗ್ನಾವಶೇಷ ಸ್ಥಿತಿಯಲ್ಲಿರುವುದನ್ನು ಕಾಣಬಹುದು. ಇದಕ್ಕೆ ಹತ್ತಿರದಲ್ಲೇ ಒಂದು ದೇಗುಲವೂ ಇದೆ.
ಚಿಕ್ಕಬಳ್ಳಾಪುರದಲ್ಲಿ ನೋಡಬೇಕಾದ ಸ್ಥಳಗಳು ಯಾವುವು?
ಈ ಚಾರಣದ ದೂರ ಸುಮಾರು 8 ಕಿ.ಮೀ. ದೂರವಿದ್ದು, ಇದನ್ನು ಹತ್ತಲು ಸುಮಾರು 3 ತಾಸು ಬೇಕಾಗುವುದು. ಗಿರಿಯ ತುದಿಯಲ್ಲಿ ತಲುಪುತ್ತಿದ್ದಂತೆ ಪ್ರಪಂಚದ ಮಧ್ಯ ಭಾಗದಲ್ಲಿ ನಾವು ನಿಂತಿದ್ದೇವೆ ಎನ್ನುವ ಸುಂದರ ಭಾವನೆ ಮನೆಮಾಡುತ್ತದೆ. ಹಾಗೆಯೇ ಇಲ್ಲಿ ನಿಂತು ನಂದಿ ಬೆಟ್ಟವನ್ನು ನೋಡಬಹುದು. ಇಲ್ಲಿರುವ ಕೋಟೆಯ ಅವಶೇಷವೂ ಚಾರಣಕ್ಕೊಂದು ಆಕರ್ಷಣೆ ಎಂದರೆ ತಪ್ಪಾಗಲಾರದು.
PC: flickr.com
ರಾತ್ರಿ ಚಾರಣಕ್ಕೂ ಸೂಕ್ತ
ಕೆಲವರಿಗೆ ರಾತ್ರಿ ಹೊತ್ತಲ್ಲಿ, ತಂಪಾದ ಗಾಳಿಯನ್ನು ಸವಿಯುತ್ತಾ ಬೆಟ್ಟ ಹತ್ತುವ ಖುಷಿಯಿರುತ್ತದೆ. ಅಂತಹವರು ಈ ಬೆಟ್ಟಕ್ಕೆ ಬರಬಹುದು. ಯಾವುದೇ ಅಂಜಿಕೆ ಇಲ್ಲದೆ ಸರಾಗವಾಗಿ 2-3 ಗಂಟೆಗಳ ಕಾಲ ನಿಧಾನವಾಗಿ ಚಾರಣ ಮಾಡಿ, ಅದ್ಭುತ ಅನುಭವ ಪಡೆಯಬಹುದು. ರಾತ್ರಿಯೆಲ್ಲಾ ಬೆಟ್ಟದಲ್ಲಿ ಸಮಯ ಕಳೆದು ಬೆಳಗ್ಗೆ ಸೂರ್ಯೋದಯದ ಸುಂದರ ದೃಶ್ಯವನ್ನು ನೋಡಿ ಹಿಂದಿರುಗಬಹುದು. ಕೆಲವೊಮ್ಮೆ ಭದ್ರತೆಯ ದೃಷ್ಟಿಯಿಂದ ಚಾರಣವನ್ನು ನಿಷೇಧಿಸಿರುತ್ತಾರೆ.
PC: flickr.com
ಸ್ಥಳೀಯರ ಸಹಾಯ
ಇಲ್ಲಿ ಚಾರಣಕ್ಕೆ ಬರುವವರಿಗಾಗಿ ಸ್ಥಳೀಯರು ಬೆಟ್ಟದ ಮೇಲೊಂದು ಅಂಗಡಿಯಿಟ್ಟುಕೊಂಡಿದ್ದಾರೆ. ತಂಪು ಪಾನೀಯಗಳು, ನಾಲಿಗೆಗೆ ರುಚಿಸುವ ಚಿಪ್ಸ್ಗಳಂತಹ ತಿಂಡಿ ಸಿಗುತ್ತವೆ. ಜೊತೆಗೆ ಬೆಟ್ಟದಲ್ಲಿ ಕ್ಯಾಂಪ್ ಫೈರ್ ಹಾಕಿಕೊಂಡು ಸಮಯ ಕಳೆಯಲು ಕಟ್ಟಿಗೆಗಳ ಸಹಾಯ ಮಾಡುತ್ತಾರೆ.
PC: flickr.com
ಸಾಗುವ ದೂರ
ಬೆಂಗಳೂರು-ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ-ಕಲ್ವಾರ-ಸ್ಕಂದಗಿರಿ.
ಬೆಂಗಳೂರಿನಿಂದ ಕಲ್ವಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಸಾಕಷ್ಟು ಬಸ್ ವ್ಯವಸ್ಥೆ ಇರುವುದರಿಂದ ಆರಾಮವಾಗಿ ಸಾಗಬಹುದು.