ಹಿಂದುಗಳು ಪೂಜಿಸುವ ದೇವ ದೇವತೆಯರ ಸಂಖ್ಯೆ ಅಪಾರ. ಮುಖ್ಯವಾಗಿ ತ್ರಿಮೂರ್ತಿಗಳನ್ನು ಅಂದರೆ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನನ್ನು ಪೂಜಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಶಿವ ಹಾಗೂ ವಿಷ್ಣುವನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ ಅವರಿಗೆಂದೆ ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಾರತದಾದ್ಯಂತ ದೇವಾಲಯಗಳಿರುವುದನ್ನು ಕಾಣಬಹುದು.
ನಿಮಗಿಷ್ಟವಾಗಬಹುದಾದ : ನೂತನ ತೆಲಂಗಾಣ ರಾಜ್ಯದ ಪ್ರವಾಸಿ ಸ್ಥಳಗಳು
ಬ್ರಹ್ಮನಿಗೆ ಮುಡಿಪಾದ ದೇವಾಲಯಗಳು ಇವೆಯಾದರೂ ಬೆರಳಣಿಕೆಯಷ್ಟು ಮಾತ್ರ. ಇನ್ನು ಈ ತ್ರಿಮೂರ್ತಿಗಳ ಮಡದಿಯರಿಗೂ ಸಹ ಮುಡಿಪಾದ ಸಾವಿರಾರು ದೇವಾಲಯಗಳಿರುವುದನ್ನು ಕಾಣಬಹುದು. ಈ ವಿಭಾಗದಲ್ಲೂ ಅಚ್ಚರಿಯೆಂಬಂತೆ ಬ್ರಹ್ಮ ದೇವರ ಪತ್ನಿಯಾದ ಸರಸ್ವತಿಗೆ ಮುಡಿಪಾದ ದೇವಾಲಯಗಳು ಅತ್ಯಂತ ವಿರಳ ಹಾಗೂ ಅಪರೂಪ.
ಚಿತ್ರಕೃಪೆ: RameshSharma
ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ಅಪರೂಪವಾದ ದೇವಾಲಯದ ಕುರಿತು ತಿಳಿಸಲಾಗಿದೆ. ಈ ದೇವಾಲಯವು ಜ್ಞಾನ ದೇವತೆ ಎಂದೆ ಮನ್ನಣೆಗಳಿಸಿರುವ ಬ್ರಹ್ಮ ದೇವರ ಪತ್ನಿಯಾದ ಸರಸ್ವತಿ ದೇವಿಗೆ ಮುಡಿಪಾಗಿದೆ. ಅಕ್ಷರ ಅಭ್ಯಾಸಂ ಹಿಂದುಗಳಲ್ಲಿ ಪಾಲಿಸಲಾಗುವ ಒಂದು ಸಂಪ್ರದಾಯವಾಗಿದ್ದು ಮೊದಲ ಬಾರಿಗೆ ಮಕ್ಕಳ ಅಕ್ಷರಾಭ್ಯಾಸದ ಕ್ರಮವನ್ನು ಪ್ರಾರಂಭಿಸಲಾಗುತ್ತದೆ ಹಾಗು ಈ ಸಂಪ್ರದಾಯಕ್ಕೆ ಈ ದೇವಾಲಯ ಪ್ರಸಿದ್ಧವಾಗಿದೆ.
ಚಿತ್ರಕೃಪೆ: Bhaskaranaidu
ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯಲ್ಲಿರುವ ಬಾಸರ ಎಂಬ ಪಟ್ಟಣದಲ್ಲಿ ಸರಸ್ವತಿ ದೇವಿಯ ಈ ದೇವಾಲಯವಿದೆ. ಜ್ಞಾನ ಸರಸ್ವತಿ ದೇವಾಲಯ ಎಂದು ಕರೆಯುತ್ತಾರೆ. ಸ್ಥಳ ಪುರಾಣದಂತೆ ಹಿಂದೆ ವ್ಯಾಸ ಮುನಿಗಳು ತಮ್ಮ ಶಿಷ್ಯರೊಂದಿಗೆ ಕುರುಕ್ಷೇತ್ರ ಯುದ್ಧದ ನಂತರ ಶಾಂತಿ ಅರಸಿ ಈ ಕ್ಷೇತ್ರಕ್ಕೆ ಬಂದು ಇಲ್ಲಿನ ಪ್ರಶಾಂತ ಪರಿಸರಕ್ಕೆ ಮನಸೋತು ಇಲ್ಲಿಯೆ ತಂಗಿದ್ದರು. ಅವರು ದಿನದ ಬಹು ಹೊತ್ತು ಪ್ರಾರ್ಥನೆಯಲ್ಲೆ ಕಳೆಯುತ್ತಿದ್ದರಿಂದ ಈ ಸ್ಥಳಕ್ಕೆ ವಾಸರ ಎಮ್ಬ ಹೆಸರಿತ್ತು.
ನಂತರ ಇಲ್ಲಿ ಮರಾಠಿ ಪ್ರಭಾವ ಬಂದು ಕ್ರಮೇಣವಾಗಿ ಆ ಹೆಸರು ಬಾಸರ ಎಂದಾಯಿತೆಂದು ಹೇಳಲಾಗುತ್ತದೆ. ಅಲ್ಲದೆ ಇಂದಿನ ಕರ್ನಾಟಕ ಪ್ರಾಂತ್ಯದ ನಂದಗಿರಿ ರಾಜ್ಯವನ್ನಾಳುತ್ತಿದ್ದ ಬಿಜಿಯಾಲುಡು ಎಂಬ ರಾಜ ಬಾಸರದಲ್ಲಿರುವ ಸರಸ್ವತಿ ದೇವಿ ದೇವಾಲಯದ ನಿರ್ಮಾತೃ ಎಂದು ಇತಿಹಾಸ ಹೇಳುತ್ತದೆ. ಮಂಜಿರಾ ಹಾಗೂ ಗೋದಾವರಿ ನದಿಗಳ ಸಂಗಮ ಸ್ಥಳದಲ್ಲಿ ನಿರ್ಮಿಸಲಾದ ಮೂರು ದೇವಾಲಯಗಳಲ್ಲಿ ಇದೂ ಒಂದು.
ಚಿತ್ರಕೃಪೆ: Bhaskaranaidu
ಹಿಂದು ಧರ್ಮದಲ್ಲಿ ಮಕ್ಕಳು ಶಿಕ್ಷಣ ಪಡೆಯಲು ಪ್ರಾಪ್ತ ವಯಸ್ಕರಾದಾಗ ದೇವರ ಸನ್ನಿಧಿಯಲ್ಲಿ ಅವರಿಗೆ ಅಕ್ಷರ ಜ್ಞಾನದ ಕುರಿತು ಮೊದಲ ಬಾರಿಗೆ ಅಭ್ಯಾಸ ಮಾಡಿಸಲಾಗುತ್ತದೆ. ಇಲ್ಲಿಂದ ಆ ಮಗು ಶಿಕ್ಷಣ ಪಡೆಯಲು ಸಿದ್ಧ ಎನ್ನುವುದರ ಸಂಕೇತವಾಗಿದೆ ಈ ಆಚರಣೆ. ಈ ಆಚರಣೆಯನ್ನು ಈ ದೇವಾಲಯದಲ್ಲಿ ಪ್ರಮುಖವಾಗಿ ಮಾಡಲಾಗುತ್ತದೆ, ಏಕೆಂದರೆ ಸರಸ್ವತಿಯು ಜ್ಞಾನದ ಅಧಿದೇವತೆ ಎಂಬುದು ಹಿಂದುಗಳಲ್ಲಿ ನಂಬಿಕೆಯಿದೆ.
ಬಾಸರ ಪಟ್ಟಣವು ಹೈದರಾಬಾದ್ ನಗರದಿಂದ 210 ಕಿ.ಮೀ ದೂರವಿದ್ದು ಬಾಸರಕ್ಕೆ ತೆರಳಲು ರಾಜ್ಯ ಸರ್ಕಾರಿ ಬಸ್ಸುಗಳು ಲಭ್ಯವಿದೆ. ಆದರೂ ರೈಲಿನಲ್ಲಿ ಈ ದೇವಾಲಯಕ್ಕೆ ಅತಿ ಸುಲಭವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ತಲುಪಬಹುದು. ಬಾಸರ ರೈಲು ನಿಲ್ದಾಣ ಹೊಂದಿದ್ದು ಹೈದರಾಬಾದಿನಿಂದ ಸಾಕಷ್ಟು ರೈಲುಗಳು ಇಲ್ಲಿಗಿವೆ. ಈ ನಿಲ್ದಾಣದಿಂದ ಶೇರ್ ಆಟೊಗಳ ಮೂಲಕ 2.4 ಕಿ.ಮೀ ದೂರವಿರುವ ದೇವಾಲಯ ತಲುಪಬಹುದು.