ಅಂದು ದಂಡಕಾರಣ್ಯ ಪ್ರದೇಶವಾಗಿದ್ದ ದಾಂಡೇಲಿ ಇಂದು ಅನೇಕ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದಟ್ಟವಾದ ಅರಣ್ಯ ಪ್ರದೇಶ, ವಿವಿಧ ಪ್ರಾಣಿ ಸಂಕುಲ, ಹೊಸ ಹೊಸ ರೆಸಾರ್ಟ್ಗಳ ಉದಯ ಇವೆಲ್ಲವೂ ಪ್ರವಾಸಿಗನಿಗೆ ಹೊಸ ಪ್ರಪಂಚದ ಪರಿಚಯ ಮಾಡಿಕೊಡುತ್ತವೆ. ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯ ಒಂದು ಕೈಗಾರಿಕಾ ಸಾಂದ್ರಿತ ಊರು. ಇಲ್ಲಿ ಅನೇಕ ಕಾರ್ಖಾನೆಗಳ ಜೊತೆಗೆ ರಮ್ಯವಾದ ವನ್ಯ ಜಗತ್ತು ಬೆಸೆದು ಕೊಂಡಿರುವುದನ್ನು ನೋಡಬಹುದು.
ನಿಜ, ಪಶ್ಚಿಮ ಘಟ್ಟದ ಹಸಿರು ಗಿರಿವನಗಳ ಸಾಲಿನಲ್ಲಿ ನಿಲ್ಲುವ ದಾಂಡೇಲಿಯಲ್ಲಿ ಅನೇಕ ಪ್ರಸಿದ್ಧ ಸ್ಥಳಗಳಿವೆ. ಹೊಸ ಹೊಸ ಜಾಗಗಳನ್ನು ವೀಕ್ಷಿಸುವುದರ ಜೊತೆಗೆ ಆಟವಾಡಿ ದಣಿಯಲು ಹಲವಾರು ಮಾರ್ಗಗಳಿವೆ. ವನ್ಯ ಜಗತ್ತಿನಲ್ಲಿ ಒಮ್ಮೆ ಸುತ್ತಾಡಿದ ಸುಂದರ ಅನುಭವ ನಮ್ಮದಾಗುತ್ತದೆ. ಇದು ಕರ್ನಾಟಕದಲ್ಲೇ ಎರಡನೇ ದೊಡ್ಡ ವನ್ಯಜೀವಿ ಧಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಾಂಡೇಲಿಯ ವನ್ಯ ಜೀವಿ ಧಾಮವನ್ನು ಹುಲಿಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ವನ್ಯ ಜೀವಿ ಧಾಮದಲ್ಲಿ ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ ಸೇರಿದಂತೆ ಅನೇಕ ಪ್ರಾಣಿ ಸಂಕುಲವಿದೆ. ಹಾಗೆಯೇ 300ಕ್ಕೂ ಅಧಿಕ ಪಕ್ಷಿ ಸಂಕುಲಕ್ಕೆ ಆಶ್ರಯ ನೀಡಿದೆ.
ವಿಶೇಷ ಆಕರ್ಷಣೆಗಳು
ಬಿಳಿ ನೊರೆಯಂತಹ ನೀರಿನಲ್ಲಿ ಜಲಕ್ರೀಡೆಯಾದ ರಾಫ್ಟಿಂಗ್, ಕೇಯಕಿಂಗ್, ಕನೋಯಿಂಗ್ ಸೇರಿದಂತೆ ಅನೇಕ ಆಟಗಳನ್ನು ಆಡಬಹುದುದು. ವಿಶಾಲವಾದ ಜಾಗದಲ್ಲಿ ಹರಿದು ಸಾಗುತ್ತಿರುವ ನೀರಿನಲ್ಲಿ ಆಡುತ್ತಿದ್ದರೆ, ಮನದ ದಣಿವೆಲ್ಲಾ ನೀರಿನಲ್ಲಿಯೇ ಹರಿದು ಹೋಗುತ್ತದೆ. ಇಲ್ಲಿಯ ಗುಡ್ಡ ಗಾಡು ಪ್ರದೇಶದಲ್ಲಿ ಸೈಕಲ್ ಸವಾರಿ, ಚಾರಣಗಳನ್ನು ಮಾಡಬಹುದು.
ಹತ್ತಿರದಲ್ಲಿರುವ ಉಳವಿ, ಸುಪಾ ಡ್ಯಾಮ್, ಸಿಂಥೇರಿ ರಾಕ್ಸ್, ಕವಲ ಗುಹೆ ದಾಂಡೇಲಿಗೆ ಹತ್ತಿರವಿದೆ. ದಾಂಡೇಲಿಗೆ ಒಮ್ಮೆ ಬಂದರೆ ಈ ಎಲ್ಲಾ ಪ್ರದೇಶವನ್ನು ನೋಡಿಕೊಂಡು ಸಾಗಬಹುದು. ಇಲ್ಲಿಯ ಇನ್ನೊಂದು ಮುಖ್ಯ ಆಕರ್ಷಣೆ ಎಂದರೆ ಅಣಶಿ ರಾಷ್ಟ್ರೀಯ ಉದ್ಯಾನವನ.
ಸುಲಭ ದಾರಿ
ಬೆಂಗಳೂರಿನಿಂದ 409 ಕಿ.ಮೀ. ದೂರದಲ್ಲಿರುವ ದಾಂಡೇಲಿಗೆ ಅನೇಕ ಬಸ್ ಹಾಗೂ ರೈಲ್ವೆ ಮಾರ್ಗಗಳಿವೆ.