"ಶಿವ ಶಿವನೆಂದರೆ ಭಯವಿಲ್ಲ... ಶಿವ ನಾಮಕೆ ಸಾಟಿ ಬೇರಿಲ್ಲ...' ಸರ್ವಶಕ್ತನೂ, ಸರ್ವೇಶ್ವರನೂ, ಸರ್ವಾತ್ಮನೂ ಆದ ಆ ಶಿವನನ್ನು ಜಪಿಸಿದರೆ ಸಕಲವೂ ಸಿದ್ಧಿಸುತ್ತದೆ. ಭಕ್ತಿಯಿಂದ ಬೇಡಿಕೊಂಡರೆ ಪರಮಾತ್ಮನು ಎಲ್ಲವನ್ನೂ ನೀಡುತ್ತಾನೆ. ಸರ್ವಮಯನಾದ ಶಿವನು ಸದಾ ಭಕ್ತರ ರಕ್ಷಣೆಗಾಗಿ ಇರುತ್ತಾನೆ. ಮಹಾ ಶಿವರಾತ್ರಿಯಾದ ಇಂದು ಭಕ್ತಿಯಿಂದ ಶಿವಾಲಯಕ್ಕೆ ಹೋದರೆ ನಮ್ಮ ಪಾಪವೆಲ್ಲ ಶಮನವಾಗುತ್ತವೆ. ನಿಗೂಢ ಹಾಗೂ ರಹಸ್ಯಮಯ ಶಿವನ ಸ್ಥಳಗಳು!
ಬೆಂಗಳೂರಿನಲ್ಲಿ ಅನೇಕ ಶಿವಾಲಯಗಳಿವೆ. ಅದರಲ್ಲಿ ಕೆಲವು ಪುರಾತನ ಕಾಲದ್ದಾದರೆ ಇನ್ನೂ ಕೆಲವು ಆಧುನಿಕ ಶಿವಾಲಯಗಳು. ಈ ಎಲ್ಲಾ ಶಿವಾಲಯವು ತನ್ನದೇ ಆದ ವಿಶೇಷ ವಾಸ್ತು ಶಿಲ್ಪಗಳಿಂದ ಕೂಡಿವೆ. ಬೆಂಗಳೂರಿನಲ್ಲಿರುವ ಗವಿಗಂಗಾಧರೇಶ್ವರ ದೇಗುಲ, ಕೆಂಪೋರ್ಟ್ ಶಿವಾಲಯ, ಕಾಡು ಮಲ್ಲೇಶ್ವರ ದೇವಾಲಯವು ಚಿರಪರಿಚಿತಗೊಂಡ ದೇವಾಲಯ. ಇಲ್ಲಿ ಇನ್ನೂ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಅವುಗಳ ಕಿರು ಪರಿಚಯ ಮಾಡಿಕೊಳ್ಳೋಣ...
ಹಲಸೂರು ಸೋಮೇಶ್ವರ ದೇಗುಲ
ಹಲಸೂರಿನ ಈ ದೇಗುಲಯವನ್ನು ನೋಡಿದರೆ ಚೋಳರ ಕಾಲವನ್ನು ನೆನಪಿಸುತ್ತದೆ. ಬೆಂಗಳೂರಿನಲ್ಲಿರುವ ಹಳೆಯ ದೇಗುಲಗಳಲ್ಲಿ ಇದೂ ಒಂದು. ಈ ದೇವಸ್ಥಾನದಲ್ಲಿ ವಿಜಯನಗರ ಅರಸರ ಕಾಲದ ಕಲಾಕೃತಿಯೂ ಅಡಗಿದೆ.
ಗವಿ ಗಂಗಾಧರೇಶ್ವರ ದೇಗುಲ
ಈ ದೇಗುಲವು ಒಂದು ಪುರಾತನ ಕಾಲದ ದೇಗುಲ. ಗವಿ ಪುರದಲ್ಲಿರುವ ಇದು ಅನೇಕ ವಿಶೇಷತೆಯಿಂದ ಕೂಡಿದೆ. ಮಕರ ಸಂಕ್ರಾಂತಿಯ ಸಂಧ್ಯಾ ಸೂರ್ಯ ಕಿರಣವು, ಬಸವನ ಕೋಡಿನ ಮಧ್ಯದಿಂದ ಹೊರ ಹೊಮ್ಮಿ, ಶಿವಲಿಂಗದ ಮೇಲೆ ಬೀಳುತ್ತದೆ. ಇದು ಪ್ರತಿ ವರ್ಷ ಸಂಕ್ರಾಂತಿ ಹಬ್ಬದಂದು ಕಾಣಿಸಿಕೊಳ್ಳುತ್ತದೆ.
ಕೆಂಪೋರ್ಟ್ ಶಿವ ದೇಗುಲ
ಬೆಂಗಳೂರಿನ ಒಂದು ಆಕರ್ಷಕ ದೇಗುಲ ಇದು. ಇಲ್ಲಿಯ ಶಿವ ಮೂರ್ತಿಯು 65 ಅಡಿ ಎತ್ತರವನ್ನು ಹೊಂದಿದೆ. ಇಲ್ಲಿ ಗಣೇಶನ ವಿಗ್ರಹವೂ ಇದೆ. ಹಳೆಯ ವಿಮಾನ ನಿಲ್ದಾಣದ ರಸ್ತೆ ಮಾರ್ಗದಲ್ಲಿ ಬರುವ ಈ ದೇಗುಲಕ್ಕೆ ಭಕ್ತ ಹರಿವು ಹೆಚ್ಚಿನ ಸಂಖ್ಯೆಯಲ್ಲಿದೆ.
ದ್ವಾದಶ ಜ್ಯೋತಿರ್ಲಿಂಗ
ಈ ದೇಗುಲದಲ್ಲಿ 12 ಸಣ್ಣ ಸಣ್ಣ ಈಶ್ವರನ ಗುಡಿಯಿದೆ. ಇವು ಭಾರತದಲ್ಲಿರುವ ವಿವಿಧ ಶಿವಾಲಯಗಳನ್ನು ಪ್ರತಿಬಿಂಬಿಸುತ್ತವೆ. ಓಂಕಾರೇಶ್ವರ ಬೆಟ್ಟದ ಮೇಲಿರುವ ಈ ದೇಗುಲ ಹೆಚ್ಚು ಪಾವಿತ್ರತೆಯಿಂದ ಕೂಡಿದೆ.
PC: commons.wikimedia.org
ಕಾಡು ಮಲ್ಲೇಶ್ವರ ದೇಗುಲ
ಮಲ್ಲೇಶ್ವರಂನಲ್ಲಿರುವ ಈ ದೇಗುಲ 17ನೇ ಶತಮಾನದ ಇತಿಹಾಸವನ್ನು ಒಳಗೊಂಡಿದೆ. ಶಿವನನ್ನು ಆರಾಧಿಸುವ ಈ ದೇಗುಲದಲ್ಲಿ ನಂದೀಶ್ವರ ತೀರ್ಥವೂ ಒಂದು ಪ್ರಮುಖ ಆಕರ್ಷಣೆ. ಇಲ್ಲಿ ಬಸವ ವಿಗ್ರಹದ ಬಾಯಿಂದ ಸದಾ ಕಾಲ ನೀರು ಹರಿಯುತ್ತದೆ. ಇದನ್ನು ವೃಷಭಾವತಿ ನದಿ ನೀರು ಎಂದು ಹೇಳುತ್ತಾರೆ.
ಬೇಗೂರು ನಾಗನಾಥೇಶ್ವರ ದೇಗುಲ
ಚೂಳರ ಕಾಲದಲ್ಲಿ ನಿರ್ಮಿಸಲಾದ ಈ ದೇಗುಲ 1300 ವರ್ಷಗಳ ಇತಿಹಾಸವನ್ನು ಹೊಂದಿದೆ. ಪಂಚಲಿಂಗಗಳ ಕ್ಷೇತ್ರ ಎಂದೇ ಹೆಸರಾದ ಇಲ್ಲಿ ಚೋಳೇಶ್ವರ, ನಾಗೇಶ್ವರ, ನಗರೇಶ್ವರ, ಕರ್ಣೇಶ್ವರ, ಕಾಳಿಕಾ ಕಮಟೇಶ್ವರ ಲಿಂಗಗಳಿವೆ.
ಕೋಟೆ ಜಲಕಾಂತೇಶ್ವರ ದೇಗುಲ
ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಇರುವ ಈ ದೇಗುಲ, ಹೆಚ್ಚು ಭಕ್ತರನ್ನು ಒಳಗೊಂಡಿದೆ. ಇಲ್ಲಿ ಶಿವ ಹಾಗೂ ಪಾರ್ವತಿ ಮೂರ್ತಿಯನ್ನು ಪೂಜಿಸಲಾಗುತ್ತದೆ.
ಧರ್ಮಗಿರಿ ಮಂಜುನಾಥ ಸ್ವಾಮಿ ದೇಗುಲ
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಇರುವ ಈ ದೇಗುಲದಲ್ಲಿ ಚಲನಚಿತ್ರ ಹಾಗೂ ಧಾರವಾಹಿಗಳ ಚಿತ್ರೀಕರಣ ಹೆಚ್ಚಾಗಿ ನಡೆಯುತ್ತವೆ. ಈ ದೇಗುಲವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ.