ದಟ್ಟವಾದ ಕಾಡು, ಸುತ್ತಲೂ ಹಸಿರು ಸಿರಿ, ಪ್ರಶಾಂತವಾದ ವಾತಾವರಣ, ಆಗಾಗ ಜೋರಾಗಿ ಬೀಸುವ ಗಾಳಿ, ಆಗೊಮ್ಮೆ-ಈಗೊಮ್ಮೆ ಕೇಳುವ ಪ್ರಾಣಿಗಳ ಘರ್ಜನೆ, ಇಲ್ಲಿ ನಾವೂ ಇದ್ದೇವೆ ಎಂದು ಇಂಪಾಗಿ ಹೇಳುವ ಹಕ್ಕಿಗಳ ಕಲರವ, ಎಷ್ಟೇ ದೂರ ಹಣ್ಣು ಹಾಯಿಸಿದರೂ ಬರೇ ಮರಗಳ ಸಾಲು, ಅಲ್ಲಲ್ಲಿ ಹಾವಂತೆ ಹರಿಯುವ ನೀರಿನ ತೊರೆ... ಅಬ್ಬಾ! ಎಂತಹ ಪ್ರಕೃತಿಯ ಸೌಂದರ್ಯ... ಇಂತಹ ಪರಿಸರದಲ್ಲಿ ಕುಟುಂಬದವರೊಡನೆ/ಸ್ನೇಹಿತರೊಡನೆ ಪ್ರವಾಸಕ್ಕೆ ಬರುವುದು ಎಂದರೆ ನಿಜಕ್ಕೂ ಅದ್ಭುತವೇ...
ಉತ್ತರದಲ್ಲಿ ಪೂರ್ವ ಘಟ್ಟ, ಪಶ್ವಿಮದಲ್ಲಿ ನೀಲಗಿರಿ ಬೆಟ್ಟ, ದಕ್ಷಿಣದಲ್ಲಿ ಮಹಾ ಸಾಗರದಿಂದ ಕೂಡಿರುವ ತಾಣ ತಮಿಳುನಾಡು. ಅದ್ಭುತ ನೈಸರ್ಗಿಕ ಸಂಪತ್ತನ್ನು ಒಳಗೊಂಡ ಈ ಪ್ರದೇಶದಲ್ಲಿ ವನ್ಯ ಜೀವಗಳ ವಾಸವೂ ಹೆಚ್ಚಾಗಿಯೇ ಇವೆ. ಬೆಂಗಳೂರಿನಿಂದ 314.9 ಕಿ.ಮೀ. ದೂರದಲ್ಲಿರುವ ಈ ಪ್ರದೇಶದಲ್ಲಿ ಅನೇಕ ವನ್ಯಜೀವಗಳು ಹಾಗೂ ಹಿನ್ನೀರಿನ ರಾಶಿಯನ್ನು ನೋಡಬಹುದು. ಅವುಗಳಲ್ಲಿ ಅದ್ಭುತ ಸೊಬಗನ್ನು ಹೊಂದಿರುವ ಜೀವರಾಶಿಗಳ ತಾಣದ ಬಗ್ಗೆ ತಿಳಿಯೋಣ...
ಅಣ್ಣಾಮಲೈ ವನ್ಯಧಾಮ
ಕೊಯಿಮತ್ತೂರಿನಿಂದ 108 ಕಿ.ಮೀ. ದೂರದಲ್ಲಿರುವ ಈ ಧಾಮಕ್ಕೆ ಇಂದಿರಾಗಾಂಧಿ ವನ್ಯಧಾಮ ಎಂತಲೂ ಕರೆಯುತ್ತಾರೆ. ಪಶ್ಚಿಮ ಘಟ್ಟಕ್ಕಿಂತಲೂ 1,400 ಮೀ. ಎತ್ತರದಲ್ಲಿರುವ ಈ ತಾಣ 958 ಸ್ಕ್ವೇರ್ ಕಿ.ಮೀ. ವ್ಯಾಪ್ತಿಯಲ್ಲಿದೆ. ಇಲ್ಲಿ ಆನೆ, ಹುಲಿ, ಮುಳ್ಳು ಹಂದಿ, ನರಿ, ಇರುವೆ ಭಕ್ಷಕ, ಕೆಂಪು ಮೀಸೆಯ ಪಿಕಳಾರ, ಕಪ್ಪು ತಲೆಯ ಸೀತೆ ಹಕ್ಕಿ ಸೇರಿದಂತೆ ಅನೇಕ ಬಗೆಯ ಪ್ರಾಣಿ-ಪಕ್ಷಿಗಳನ್ನು ನೋಡಬಹುದು. ಈ ವನ್ಯಧಾಮದಲ್ಲಿ ಮನೋಹರವಾದ ಜಲಧಾರೆಗಳು, ಹುಲ್ಲುಗಾವಲಿನ ಬೆಟ್ಟಗಳು, ಚಹಾ ತೋಟಗಳು ಇವೆ.
PC: flickr.com
ಟಾಪ್ಸ್ಲಿಪ್ ವನ್ಯಧಾಮ
ಈ ವನ್ಯಧಾಮವು ಕೊಯಿಮತ್ತೂರಿನಿಂದ 76 ಕಿ.ಮೀ. ವ್ಯಾಪ್ತಿಯಲ್ಲಿದೆ. ಸಾಗವಾನಿ ಹಾಗೂ ಬಿದಿರುಗಳಿಂದ ಕೂಡಿರುವ ತಾಣ. ಇಲ್ಲಿ ಸುಂದರವಾದ ಅಪರೂಪದ ಕಕ್ಷಿಗಳನ್ನು ವೀಕ್ಷಿಸಬಹುದು. ಅರಣ್ಯ ಇಲಾಖೆಯು ಆನೆ ಸವಾರಿ ಹಾಗೂ ಜೀಪ್ಗಳ ಮೂಲಕ ನವ್ಯ ಜಗತ್ತನ್ನು ಪರಿಚಯಮಾಡಿಸುತ್ತದೆ. ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಈ ವನ್ಯಧಾಮಕ್ಕೆ ಪ್ರವೇಶ ಅವಕಾಶ. ಹತ್ತಿರದಲ್ಲೇ ಅನೇಕ ವಸತಿ ವ್ಯಸ್ಥೆಗಳಿವೆ.
PC: flickr.com
ಅರಿಗ್ನಾರ್ ಅಣ್ಣಾ ಪ್ರಾಣಿಶಾಸ್ತ್ರೀಯ ಉದ್ಯಾನ
ಚೆನ್ನೈ ನಿಂದ 38 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ಉದ್ಯಾನ ಭಾರತದಲ್ಲಿರುವ ಪ್ರಮುಖ ಉದ್ಯಾನಗಳಲ್ಲಿ ಒಂದಾಗಿದೆ. ಆಗ್ನೇಯ ಏಷ್ಯಾದ ಅತಿದೊಡ್ಡ ಪ್ರಾಣಿಶಾಸ್ತ್ರೀಯ ಉದ್ಯಾನ ಎನ್ನುವ ಹಿರಿಮೆಗೆ ಪಾತ್ರವಾಗಿದೆ. 510 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನದಲ್ಲಿ 170ಕ್ಕೂ ಅಧಿಕ ಬಗೆಯ ಪ್ರಾಣಿಗಳನ್ನು ಕಾಣಬಹುದು. ಇಲ್ಲಿ ವನ್ಯ ಜೀವಿಗಳಿಗೆ ಸಂಬಂಧಿಸಿದ ಹಲವಾರು ಪುಸ್ತಕಗಳ ಸಂಗ್ರಹವಿದೆ. ಆನೆಯ ಮೇಲೆ ಸವಾರಿ ಹೋಗಲು ಇಷ್ಟ ಪಡುವವರಿಗೆ ಆನೆ ಸವಾರಿಯೂ ಇದೆ. ಬೆಳಗ್ಗೆ 9ರಿಂದ ಸಂಜೆ 8ರ ವರೆಗೆ ತೆರೆದಿರುತ್ತದೆ.
PC: flickr.com
ವೆದಾನ್ಥನ್ಗಳ ಪಕ್ಷಿಧಾಮ
200 ವರ್ಷಗಳ ಇತಿಹಾಸ ಹೊಂದಿರುವ ಈ ಪಕ್ಷಿಧಾಮದಲ್ಲಿ ಅನೇಕ ಕೆರೆ ಪ್ರದೇಶಗಳಿವೆ. ಇವು ಪಕ್ಷಿಗಳ ಆಹಾರ ಸೇವನೆಗೆ ಅನುಕೂಲವಾಗುತ್ತದೆ ಎನ್ನಲಾಗುತ್ತದೆ. ಇಲ್ಲಿ ಎರಡು ಕಡೆ ಪಕ್ಷಿಗಳ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿವೆ. ಇಲ್ಲಿ ನಿಂತು ರಮಣೀಯ ದೃಶ್ಯಗಳನ್ನು ಸೆರೆ ಹಿಡಿಯಬಹುದು.
PC: wikipedia.org
ಅವಲಾಂಚ್ ಸರೋವರ ಹಾಗೂ ಅಭಯಾರಣ್ಯ
ಊಟಿಯ ನೈಋತ್ಯ ಭಾಗದಿಂದ 23 ಕಿ.ಮೀ. ದೂರದಲ್ಲಿ ಈ ತಾಣವಿದೆ. ವಿಶಾಲವಾದ ಕೆರೆಯಿಂದ ಆವೃತವಾದ ಈ ಅಭಯಾರಣ್ಯ ಪ್ರಕೃತಿ ಪ್ರಿಯರಿಗೆ ಸ್ವರ್ಗತಾಣ. ಈ ಅಭಯಾರಣ್ಯದಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಅರಣ್ಯಾಧಿಕಾರಿಗಳ ವಿಶೇಷ ವಾಹನಗಳಲ್ಲಿಯೇ ಸಾಗಬೇಕು. ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಮಾತ್ರ ತೆರೆದಿರುತ್ತದೆ.
PC: wikipedia.org
ಮುದುಮಲೈ ವನ್ಯ ಜೀವಿ ಅಭಯಾರಣ್ಯ
ಊಟಿಯಿಂದ 37 ಕಿ.ಮೀ, ಮೈಸೂರಿನಿಂದ 92 ಕಿ.ಮೀ. ದೂರದಲ್ಲಿರುವ ಈ ಅಭಯಾರಣ್ಯ ಕರ್ನಾಟಕ ಹಾಗೂ ಕೇರಳದ ಗಡಿ ಪ್ರದೇಶದಲ್ಲಿದೆ. ತೆಪ್ಪಕಡು ಅಭಯಾರಣ್ಯದ ಪ್ರವೇಶದ್ವಾರ. ಇಲ್ಲಿ ಆನೆಗಳ ಶಿಬಿರವು ಇರುವುದರಿಂದ ಆನೆಗಳ ಸವಾರಿಯಲ್ಲಿಯೇ ವನ್ಯಧಾಮದ ಸಣ್ಣ ಪ್ರಯಾಣ ಕೈಗೊಳ್ಳಬಹುದು. ಇಲ್ಲಿ ಚಾರಣ ಹಾಗೂ ಜೀಪ್ಗಳ ಮೂಲಕ ಅಭಯಾರಣ್ಯಕ್ಕೆ ಪ್ರವೇಶಿಸುವಂತಿಲ್ಲ. ಅರಣ್ಯಾಧಿಕಾರಿಗಳು ವ್ಯವಸ್ಥೆ ಮಾಡಿರುವ ಮಿನಿ ಬಸ್ಗಳಲ್ಲಿಯೇ ಹೋಗಬೇಕು. ಇಲ್ಲಿ ಆನೆ ಹುಲಿ, ಕರಡಿ, ಜಿಂಕೆಗಳನ್ನು ಕಾಣಬಹುದು.
PC: wikipedia.org
ಪಾಯಿಂಟ್ ಕ್ಯಾಲಿಮೀಯರ್ ವನ್ಯಜೀವಿ ಅಭಯಾರಣ್ಯ
ಸಮುದ್ರ ತೀರದಲ್ಲಿರುವ ಈ ಅಭಯಾರಣ್ಯ ತಂಜಾವೂರಿನಿಂದ 115 ಕಿ.ಮೀ. ದೂರದಲ್ಲಿದೆ. 21.47 ಸ್ಕ್ವೇರ್ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ತಾಣದಲ್ಲಿ ವಿವಿಧ ಜಾತಿಯ ವಲಸೆ ಬರುವ ಪಕ್ಷಿಗಳನ್ನು ವೀಕ್ಷಿಸಬಹುದು. ಸಮುದ್ರ ತೀರದಲ್ಲಿ ಡಾಲ್ಫಿನ್ ಹಾಗೂ ಆಮೆಗಳನ್ನು ನೋಡಬಹುದು. ಇಲ್ಲಿ ಪ್ರತಿದಿನ ಬೆಳಗ್ಗೆ 6 ರಿಂದ ಸಂಜೆ 5 ರವೆರೆಗೆ ತೆರೆದಿರುತ್ತದೆ.
PC: wikipedia.org
ಅಮೃತಿ ಪ್ರಾಣಿಶಾಸ್ತ್ರೀಯ ಉದ್ಯಾನ
ಹಲವು ಬಗೆಯ ಔಷಧಿ ಸಸ್ಯಗಳನ್ನು ಒಳಗೊಂಡಿರುವ ಈ ಉದ್ಯಾನ ವೆಲ್ಲೂರಿನಿಂದ 27 ಕಿ.ಮೀ. ವ್ಯಾಪ್ತಿಯಲ್ಲಿದೆ. 25 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಪ್ರವಾಸಿಗರಿಗಾಗಿ ವಿಶ್ರಾಂತಿ ಗೃಹಗಳು, ಮಕ್ಕಳ ಆಟದ ಉದ್ಯಾನಗಳನ್ನು ನಿರ್ಮಿಸಲಾಗಿವೆ. ಇಲ್ಲಿ ಹಲವು ಬಗೆಯ ಪ್ರಾಣಿಗಳು ಹಾಗೂ ಜಲಧಾರೆಗಳನ್ನು ವೀಕ್ಷಿಸಬಹುದು. ಇದು ಪ್ರತಿದಿನ ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ತೆರೆದಿರುತ್ತದೆ.
PC: wikipedia.org