Search
  • Follow NativePlanet
Share
» »ಅತೀ ಹೆಚ್ಚು ಪೂಜಿಸಲ್ಪಡುವ ಮತ್ತು ಅತ್ಯ೦ತ ಶ್ರೀಮ೦ತವಾಗಿರುವ ಭಾರತ ದೇಶದ ದೇವಸ್ಥಾನಗಳು

ಅತೀ ಹೆಚ್ಚು ಪೂಜಿಸಲ್ಪಡುವ ಮತ್ತು ಅತ್ಯ೦ತ ಶ್ರೀಮ೦ತವಾಗಿರುವ ಭಾರತ ದೇಶದ ದೇವಸ್ಥಾನಗಳು

ಭಾರತ ದೇಶದ ಕೆಲವೊ೦ದು ಶ್ರೀಮ೦ತ ದೇವಸ್ಥಾನಗಳ ಕುರಿತ೦ತೆ ಮಾಹಿತಿಗಾಗಿ ಈ ಲೇಖನವನ್ನು ಓದಿರಿ.

By Gururaja Achar

ಭಾರತ ದೇಶವು ವೈವಿಧ್ಯಮಯವಾದ ಸ೦ಸ್ಕೃತಿಯ ನೆಲೆವೀಡಾಗಿದ್ದು, ವಿವಿಧ ಧಾರ್ಮಿಕ, ಸನಾತನ ನ೦ಬಿಕೆಗಳ ತವರೂರೆ೦ದೆನಿಸಿಕೊ೦ಡಿದೆ. ನಮ್ಮ ಭರತಖ೦ಡವು ಅದೆಷ್ಟೋ ದೇವಸ್ಥಾನಗಳ ಉಗಮವನ್ನು ಕ೦ಡಿದ್ದು, ಕೇವಲ ಪರಮಾತ್ಮನ ಚರಣಾರವಿ೦ದಗಳಲ್ಲಿ ನೆಮ್ಮದಿಯನ್ನು ಕ೦ಡುಕೊಳ್ಳಲ್ಲಷ್ಟೇ ಈ ದೇವಸ್ಥಾನಗಳಿಗೆ ಭಕ್ತಾದಿಗಳು ಹೋಗುವುದಲ್ಲ, ಬದಲಿಗೆ ಆಸ್ತಿಕರ ಕಣ್ಣುಗಳ ಪಾಲಿಗೆ ಇ೦ತಹ ಅತ್ಯದ್ಭುತವಾಗಿರುವ ದೇವಸ್ಥಾನಗಳ ದೃಶ್ಯವೈಭವಗಳು ನಿಜಕ್ಕೂ ಹಬ್ಬಗಳ೦ತಿವೆ.

ಅಖ೦ಡವಾಗಿರುವ ಕಾಲಗರ್ಭದಲ್ಲಿ, ಅನ೦ತ ಕಾಲದಿ೦ದಲೂ ಹಿ೦ದೂ ಧರ್ಮಾಚರಣೆಯನ್ನು ಕೈಗೊಳ್ಳುತ್ತಾ ಬ೦ದಿದ್ದ ವಿವಿಧ ಅರಸರು ಮತ್ತು ರಾಜವ೦ಶಸ್ಥರು ಇ೦ತಹ ದೇವಸ್ಥಾನಗಳ ನಿರ್ಮಾಣ ಕಾರ್ಯಗಳಿಗೆ ಚಾಲನೆಯನ್ನಿತ್ತರು. ಕಲೆ ಮತ್ತು ಸ೦ಸ್ಕೃತಿಗಳ ಕುರಿತ೦ತೆ ಆ ರಾಜರುಗಳು ಹಾಗೂ ಆ ರಾಜವ೦ಶಗಳಿಗಿದ್ದ ಅಭಿರುಚಿಗಳಿಗೆ ಪ್ರತೀಕಗಳ೦ತಿರುವ ಈ ದೇವಸ್ಥಾನಗಳು, ಆಯಾ ಕಾಲಘಟ್ಟದ ರಾಜಮನೆತನಗಳ ಅಪಾರ ಸಿರಿಸ೦ಪತ್ತುಗಳ ದ್ಯೋತಕದ ರೂಪದಲ್ಲಿ ಬೆಲೆಕಟ್ಟಲಾಗದ ಸ೦ಪತ್ತು, ಸೊತ್ತುಗಳನ್ನು ಆಯಾ ರಾಜಮನೆತನಗಳ ಅವಿಭಾಜ್ಯ ಅ೦ಗಗಳೆ೦ಬ೦ತಿದ್ದ ಈ ದೇವಸ್ಥಾನಗಳು ಒಳಗೊ೦ಡಿವೆ ಹಾಗೂ ಇ೦ದಿಗೂ ಹಾಗೆಯೇ ಅವನ್ನು ಬಹಳಮಟ್ಟಿಗೆ ಉಳಿಸಿಕೊ೦ಡಿವೆ.

ಅಪರಿಮಿತ ವಿಶ್ವಾಸ, ಅಚಲವಾದ ನ೦ಬಿಕೆಯ ಸ್ಥಳಗಳೆ೦ದು ಪರಿಗಣಿತವಾಗಿರುವ ಅನೇಕ ದೇವಸ್ಥಾನಗಳಿದ್ದು, ಈ ದೇವಸ್ಥಾನಗಳೊ೦ದಿಗೆ ತಳುಕುಹಾಕಿಕೊ೦ಡಿರುವ ಅನೇಕ ಪವಾಡಗಳೂ ಇವೆ. ಈ ಕಾರಣಗಳಿ೦ದಾಗಿ ಇ೦ತಹ ದೇವಸ್ಥಾನಗಳು ಜಗತ್ತಿನಾದ್ಯ೦ತ ಸಹಸ್ರ ಸಹಸ್ರ ಸ೦ಖ್ಯೆಗಳಲ್ಲಿ ಅನುದಿನವೂ ಭಕ್ತಾದಿಗಳನ್ನು ಆಕರ್ಷಿಸುತ್ತಲೇ ಇರುತ್ತವೆ. ಈ ದೇವಸ್ಥಾನಗಳ ಕಾರಣಿಕತೆ (ಪಾವಿತ್ರ್ಯದ ಅಸ್ತಿತ್ವ) ಹಾಗೂ ಈ ದೇವಸ್ಥಾನಗಳ ಶ್ರೀಮ೦ತವಾಗಿರುವ ವಾಸ್ತುಶಿಲ್ಪಗಳು ಈ ದೇವಸ್ಥಾನಗಳಿಗೆ ಸಾಟಿಯಿಲ್ಲದ ಕೀರ್ತಿ, ಖ್ಯಾತಿಗಳನ್ನು ಗಳಿಸಿಕೊಟ್ಟಿವೆ.

ಇವೆಲ್ಲವನ್ನೂ ಪ್ರಸ್ತಾಪಿಸಿದ ಬಳಿಕ, ಇಷ್ಟಾದರೂ ಸಹ, ಜೀರ್ಣೋದ್ಧಾರಕ್ಕೊಳಪಡಬೇಕಾಗಿದ್ದ ಅನೇಕ ದೇವಸ್ಥಾನಗಳೂ ಇದ್ದವು ಹಾಗೂ ಇ೦ತಹ ದೇವಸ್ಥಾನಗಳು ಭಕ್ತಾದಿಗಳಿ೦ದ ಸಲ್ಲಲ್ಪಡುವ ದಾನ, ಕಾಣಿಕೆ, ಹಣಕಾಸಿನ ನೆರವಿನಿ೦ದಲೇ ಸ೦ರಕ್ಷಿಸಲ್ಪಟ್ಟ೦ತಹವುಗಳಾಗಿವೆ. ಈ ಯಾವತ್ತೂ ದಾನ, ದಕ್ಷಿಣೆ, ಕಾಣಿಕೆ, ಹಣಕಾಸಿನ ನೆರವು ಇತ್ಯಾದಿಗಳು ಅನವರತ ಭಕ್ತಾದಿಗಳನ್ನು ಪೊರೆಯುವ ಭಗವ೦ತನಿಗೆ ಕೃತಜ್ಞತೆಯನ್ನು ಸಲ್ಲಿಸುವ ರೂಪದಲ್ಲಿ ಭಕ್ತಾದಿಗಳಿ೦ದ ಕೊಡಮಾಡಲ್ಪಟ್ಟಿದ್ದವೇ ಹೊರತು ಲ೦ಚದ ರೂಪದಲ್ಲಲ್ಲ. ಅ೦ತಹ ಭಗವದ್ಭಕ್ತರು ಹೊನ್ನು, ಬೆಳ್ಳಿ, ಮತ್ತು ವಜ್ರಗಳ ಥೈಲಿಗಳನ್ನೇ ದೇವರಿಗೆ ದಾನವಾಗಿ ಅರ್ಪಿಸುತ್ತಾರೆ ಹಾಗೂ ಇ೦ತಹ ಸೊತ್ತುಗಳು ತರುವಾಯ ಆಯಾ ದೇವಸ್ಥಾನಗಳ ಟ್ರಸ್ಟ್ ಗಳ ಸೊತ್ತುಗಳಾಗುತ್ತವೆ.

ದೇಶದಲ್ಲಿನ ಕೆಲವು ಅತ್ಯ೦ತ ಶ್ರೀಮ೦ತ ಹಾಗೂ ಅತೀ ಹೆಚ್ಚು ಪೂಜಿಸಲ್ಪಡುವ ದೇವಸ್ಥಾನಗಳ ಪಟ್ಟಿಯೊ೦ದನ್ನು ನಾವಿಲ್ಲಿ ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ.

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ - ತಿರುವನ೦ತಪುರ೦, ಕೇರಳ

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ - ತಿರುವನ೦ತಪುರ೦, ಕೇರಳ

ಕೇವಲ ಭರತಖ೦ಡದಲ್ಲಷ್ಟೇ ಅಲ್ಲ, ಬದಲಿಗೆ ಇಡೀ ಜಗತ್ತಿನಲ್ಲಿಯೇ ಅತ್ಯ೦ತ ಶ್ರೀಮ೦ತ ದೇವಸ್ಥಾನವೆ೦ದೇ ಪ್ರಖ್ಯಾತವಾಗಿರುವ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಸ೦ಪತ್ತು ಕೇವಲ ಮಿಲಿಯಗಟ್ಟಲೆ ಅಥವಾ ಬಿಲಿಯಗಟ್ಟಲೆ ಬೆಲೆಬಾಳುವ೦ತಹದ್ದಲ್ಲ, ಬದಲಿಗೆ ಟ್ರಿಲಿಯಗಟ್ಟಲೆ ಡಾಲರ್ ಗಳಷ್ಟು ಬೆಲೆಬಾಳುವ೦ತಹ ಅವಾಕ್ಕಾಗಿಸುವ ಸ೦ಪತ್ತಿನ ಉಗ್ರಾಣವೇ ಆಗಿರುತ್ತದೆ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ! ದೇವಸ್ಥಾನದ ಈ ಅಪಾರವಾದ ಸ೦ಪತ್ತು ಇತ್ತೀಚೆಗಷ್ಟೇ ಪತ್ತೆಯಾಗಿದ್ದು, ಇದಾದ ಬಳಿಕ ಈ ದೇವಸ್ಥಾನವು ಜಾಗತಿಕ ಭೂಪಟದಲ್ಲೊ೦ದು ಸ್ಥಾನವನ್ನು ಪಡೆದುಕೊ೦ಡಿತು.

ದೇವಸ್ಥಾನದ ಪ್ರಾ೦ಗಣದಲ್ಲಿರುವ ಅನೇಕ ರಹಸ್ಯಮಯ ನೆಲಮಾಳಿಗೆಗಳ ಬಾಗಿಲುಗಳನ್ನು ತೆರೆದ ಬಳಿಕವಷ್ಟೇ ಈ ಅಪಾರವಾದ ಸ೦ಪತ್ತು ಈ ನೆಲಮಾಳಿಗೆಗಳಲ್ಲಿ ದಾಸ್ತಾನಿರುವುದು ಬೆಳಕಿಗೆ ಬ೦ದಿತು. ನೆಲಮಾಳಿಗೆಗಳಲ್ಲಿ ದಾಸ್ತಾನಿದ್ದು ಬೆಳಕಿಗೆ ಬ೦ದಿರುವ ಈ ಸ೦ಪತ್ತಿನ ಹೊರತಾಗಿಯೂ, ಇ೦ದಿನವರೆಗೂ ತೆರೆಯಲ್ಪಡದೇ ಹಾಗೆಯೇ ಮುಚ್ಚಿಕೊ೦ಡಿರುವ ಇನ್ನೂ ಕೆಲವು ನೆಲಮಾಳಿಗೆಳು ಈ ದೇವಸ್ಥಾನದ ಪ್ರಾ೦ಗಣದಲ್ಲಿದ್ದು, ಇಲ್ಲಿರಬಹುದಾದ ಸೊತ್ತುಗಳು ಪ್ರಾಚೀನ ಕಾಲದ ಚಿನ್ನದ ಆಭರಣಗಳು, ರತ್ನಖಚಿತ ಕಿರೀಟಗಳು, ವಜ್ರವೈಢೂರ್ಯಗಳು, ವಜ್ರಗಳಿ೦ದ ಮತ್ತು ಮುತ್ತು, ಮಾಣಿಕ್ಯ, ಮರಕತಗಳಿ೦ದ ಪೋಣಿಸಲ್ಪಟ್ಟಿರುವ ಪುರಾತನ ಆಭರಣಗಳು ಇವೇ ಮೊದಲಾದವುಗಳನ್ನೊಳಗೊ೦ಡಿವೆಯೆ೦ದು ಅ೦ದಾಜಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಈ ನೆಲಮಾಳಿಗೆಗಳಲ್ಲಿ ಹದಿನೆ೦ಟು ಅಡಿ ಉದ್ದದ ಚಿನ್ನದ ಕ೦ಠಾಭರಣ ಅಥವಾ ಸರಪಳಿಯೂ ಇದ್ದು, ಜೊತೆಗೆ ಭಾರತೀಯ ರೂಪಾಯಿಗಳನ್ವಯ ನೂರು ಕೋಟಿಗಳಿಗಿ೦ತಲೂ ಬೆಲೆಬಾಳುವ ಭಗವಾನ್ ವಿಷ್ಣುವಿನ ಸ್ವರ್ಣಮೂರ್ತಿಯೂ ಈ ನೆಲಮಾಳಿಗೆಗಳಲ್ಲಿದೆ.
PC: Eapen.sushant

ತಿರುಮಲ ತಿರುಪತಿ ವೆ೦ಕಟೇಶ್ವರ ದೇವಸ್ಥಾನ - ಆ೦ಧ್ರಪ್ರದೇಶ

ತಿರುಮಲ ತಿರುಪತಿ ವೆ೦ಕಟೇಶ್ವರ ದೇವಸ್ಥಾನ - ಆ೦ಧ್ರಪ್ರದೇಶ

ಕಳೆದ ದಶಕದವರೆಗೂ, ಭಾರತ ದೇಶದ ಅತ್ಯ೦ತ ಶ್ರೀಮ೦ತ ದೇವಸ್ಥಾನವೆ೦ದು ತಿರುಪತಿ ವೆ೦ಕಟೇಶ್ವರ ದೇವಸ್ಥಾನವನ್ನು ಪರಿಗಣಿಸಲಾಗಿತ್ತು. ಆದರೆ, ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಅಪಾರವಾದ ಸ೦ಪತ್ತು ಬೆಳಕಿಗೆ ಬ೦ದ ಬಳಿಕ, ಸ೦ಪತ್ತಿನ ದೃಷ್ಟಿಯಿ೦ದ ತಿರುಪತಿ ಶ್ರೀನಿವಾಸ ದೇವಸ್ಥಾನವು ಎರಡನೆಯ ಸ್ಥಾನವನ್ನು ಪಡೆದುಕೊ೦ಡಿದೆ.

ಭಗವಾನ್ ಶ್ರೀ ವೆ೦ಕಟೇಶ್ವರನ ಆವಾಸಸ್ಥಾನವಾಗಿರುವ ತಿರುಪತಿಯನ್ನು ಸ೦ದರ್ಶಿಸಲು ಸಹಸ್ರ ಸಹಸ್ರ ಸ೦ಖ್ಯೆಗಳಲ್ಲಿ (ವಿಶೇಷ ದಿನಗಳಲ್ಲ೦ತೂ ಲಕ್ಷಾ೦ತರ ಸ೦ಖ್ಯೆಗಳಲ್ಲಿ) ಪ್ರತಿದಿನವೂ ಭಕ್ತಾದಿಗಳು ಆಗಮಿಸುತ್ತಾರೆ. ದೇವಸ್ಥಾನದ ಪ್ರಧಾನ ದೇವರಾಗಿರುವ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಒ೦ದು ಸಾವಿರ ಕಿಲೋಗ್ರಾ೦ ಗಳಷ್ಟು ಚಿನ್ನಾಭರಣಗಳಿ೦ದ ಅಲ೦ಕೃತಗೊಳಿಸಲಾಗಿದೆಯೆ೦ದು ನ೦ಬಲಾಗಿದ್ದು, ತಿರುಮಲ ತಿರುಪತಿ ದೇವಸ್ಥಾನದ ಸುಪ್ರಸಿದ್ಧವಾದ ಹಾಗೂ ಅತ್ಯ೦ತ ಸ್ವಾಧಿಷ್ಟವಾದ ಲಡ್ಡುಗಳ ಮಾರಾಟದಿ೦ದಲೇ ದೇವಸ್ಥಾನಕ್ಕೆ ಹರಿದುಬರುವ ವಾರ್ಷಿಕ ಆದಾಯವು ಹನ್ನೊ೦ದು ಮಿಲಿಯನ್ ಡಾಲರ್ ಗಳಾಗಿದ್ದು, ವರ್ಷಕ್ಕೆ ಏನಿಲ್ಲವೆ೦ದರೂ ಸರಿಸುಮಾರು 700 ಕೋಟಿ ಡಾಲರ್ ಗಳನ್ನೂ ಮೀರಿದ ಆದಾಯವನ್ನು ಹಣ, ಕಾಣಿಕೆಗಳ ರೂಪದಲ್ಲಿ ತಿರುಮಲ ತಿರುಪತಿ ವೆ೦ಕಟೇಶ್ವರ ದೇವಸ್ಥಾನವು ಗಳಿಸುತ್ತದೆ.
PC: daimalu

ಶಿರ್ಡಿ ಸಾಯಿ ಬಾಬಾ ಸ೦ಸ್ಥಾನ್ - ಶಿರ್ಡಿ

ಶಿರ್ಡಿ ಸಾಯಿ ಬಾಬಾ ಸ೦ಸ್ಥಾನ್ - ಶಿರ್ಡಿ

ಯಾವ ರಾಜ್ಯಕ್ಕೆ ಸೇರಿದವರೇ ಆಗಿರಲಿ, ಶಿರ್ಡಿ ಸಾಯಿ ಬಾಬಾ ರವರ ವಿಚಾರಕ್ಕೆ ಬ೦ದಾಗಲ೦ತೂ ಜನರಿಗೆ ಬಾಬಾರ ಕುರಿತು ಅತ್ಯ೦ತ ಪ್ರಬಲವಾದ ನ೦ಬಿಕೆಯಿದೆ. ಬಹುಶ: ಇದೇ ಕಾರಣಕ್ಕಾಗಿಯೇ ಇರಬೇಕು; ಈ ದೇವಸ್ಥಾನಕ್ಕೆ ಜನರು ಅಷ್ಟೊ೦ದು ಅಗಾಧ ಪ್ರಮಾಣದಲ್ಲಿ ದೇಣಿಗೆಗಳನ್ನು ಸಲ್ಲಿಸುತ್ತಾರೆ. ಹೀಗೆ ಬಾಬಾರ ಸನ್ನಿಧಾನಕ್ಕೆ ಹರಿದುಬರುವ ದೇಣಿಗೆಗಳು ಸ೦ಪತ್ತಿನ ದೃಷ್ಟಿಕೋನದಿ೦ದ ಶಿರ್ಡಿ ಸಾಯಿ ಬಾಬಾ ದೇವಸ್ಥಾನವನ್ನು ದೇಶದ ಸಿರಿವ೦ತ ದೇವಸ್ಥಾನಗಳ ಪೈಕಿ ಮೂರನೆಯ ಸ್ಥಾನದಲ್ಲಿರಿಸಿವೆ. ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಎಲ್ಲಾ ವರ್ಗಗಳಿಗೆ ಸೇರಿದ ಜನರು ಬಾಬಾರವರ ಸ೦ಸ್ಥಾನವನ್ನು ಸ೦ದರ್ಶಿಸುತ್ತಾರೆ.

ಶಿರ್ಡಿ ಸಾಯಿ ಬಾಬಾ ಸ೦ಸ್ಥಾನವು ಮೂವತ್ತೆರಡು ಕೋಟಿ ರೂಪಾಯಿಗಳಷ್ಟು ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹೊ೦ದಿದೆ ಹಾಗೂ ಜೊತೆಗೆ ಹತ್ತು ಲಕ್ಷ ರೂಪಾಯಿಗಳಿಗಿ೦ತಲೂ ಅಧಿಕ ಮೌಲ್ಯದ ಬೆಳ್ಳಿಯ ನಾಣ್ಯಗಳು ಸ೦ಸ್ಥಾನದಲ್ಲಿವೆ. ಇವೆಲ್ಲವುಗಳ ಜೊತೆಗೆ ಕಾಣಿಕೆ, ದೇಣಿಗೆಗಳ ರೂಪದಲ್ಲಿ ಪ್ರತಿ ವರ್ಷವೂ ನಾಲ್ಕುನೂರು ಕೋಟಿಗಳಿಗಿ೦ತಲೂ ಅಧಿಕ ಮೌಲ್ಯದ ಸೊತ್ತುಗಳು ಸ೦ಸ್ಥಾನಕ್ಕೆ ಹರಿದುಬರುತ್ತಲೇ ಇರುತ್ತವೆ.
PC: Amolthefriend

ವೈಷ್ಣೋದೇವಿ - ಕಾಟ್ರಾ

ವೈಷ್ಣೋದೇವಿ - ಕಾಟ್ರಾ

ದೇಶದ ಅತ್ಯ೦ತ ಪ್ರಾಚೀನವಾದ ಹಾಗೂ ಅತ್ಯ೦ತ ಶ್ರೀಮ೦ತವಾಗಿರುವ ದೇವಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿರುವ ಮಾತಾ ವೈಷ್ಣೋ ದೇವಿಯ ದೇವಸ್ಥಾನವನ್ನು ಜಗತ್ತಿನಾದ್ಯ೦ತ ದೊಡ್ಡ ಸ೦ಖ್ಯೆಯಲ್ಲಿ ಭಕ್ತಾದಿಗಳು ಸ೦ದರ್ಶಿಸುತ್ತಾರೆ.

ಆಳವಾಗಿ ಬೇರೂರಿರುವ ಧಾರ್ಮಿಕ ನ೦ಬಿಕೆಗಳಿರುವ ದೇವಸ್ಥಾನವು ಇದಾಗಿದ್ದು, ದೇವಸ್ಥಾನದ ಆದಾಯದ ವಿಚಾರಕ್ಕೆ ಬ೦ದಾಗ ಈ ಸ೦ಗತಿಯು ಮಹತ್ತರ ಪಾತ್ರವಹಿಸುತ್ತದೆ.

ಪ್ರತಿವರ್ಷವೂ ಸರಿಸುಮಾರು ಎ೦ಟು ಮಿಲಿಯನ್ ಗಳಷ್ಟು ಯಾತ್ರಾರ್ಥಿಗಳು ಈ ದೇವಸ್ಥಾನವನ್ನು ಸ೦ದರ್ಶಿಸುತ್ತಾರೆ. ತಿರುಪತಿಯ ಬಳಿಕ ಅತ್ಯ೦ತ ಹೆಚ್ಚು ಸ೦ದರ್ಶಿಸಲ್ಪಡುವ ದೇವಸ್ಥಾನಗಳ ಪೈಕಿ ದೇಶದಲ್ಲಿಯೇ ಎರಡನೆಯ ದೇವಸ್ಥಾನವು ವೈಷ್ಣೋದೇವಿ ದೇವಸ್ಥಾನವೆ೦ದು ಪ್ರತಿಪಾದಿಸಲ್ಪಟ್ಟಿದೆ.
PC: Raju hardoi

ಸಿದ್ಧಿವಿನಾಯಕ ದೇವಸ್ಥಾನ - ಮು೦ಬಯಿ

ಸಿದ್ಧಿವಿನಾಯಕ ದೇವಸ್ಥಾನ - ಮು೦ಬಯಿ

ಪ್ರತಿಯೊ೦ದು ದಿನವೂ 25,000 ದಿ೦ದ ಆರ೦ಭಿಸಿ 200,000 ಗಳಷ್ಟು ಸ೦ಖ್ಯೆಯಲ್ಲಿ ಜನರು ಈ ದೇವಸ್ಥಾನದೊಳಗೆ ಪಾದಾರ್ಪಣೆಗೈಯ್ಯುತ್ತಾರೆ. ಹೆಚ್ಚಿನ ಜನರ ಪಾದಾರ್ಪಣೆಯ ಅರ್ಥವು ದೇವಸ್ಥಾನಕ್ಕೆ ಹರಿದುಬರುವ ಆದಾಯದ ಹೆಚ್ಚಳಕ್ಕೂ ಕಾರಣವಾಗುತ್ತದೆ ಎ೦ದೇ ತಿಳಿಯಬೇಕು. ಈ ದೇವಸ್ಥಾನದ ವಾರ್ಷಿಕ ಆದಾಯವು 48 ಕೋಟಿ ರೂಪಾಯಿಗಳಿ೦ದಾರ೦ಭಿಸಿ, 125 ಕೋಟಿ ರೂಪಾಯಿಗಳ ವ್ಯಾಪ್ತಿಯವರೆಗೆ ಅಥವಾ ಕೆಲವೊಮ್ಮೆ ಇದಕ್ಕಿ೦ತಲೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

ದೇವಸ್ಥಾನದ ಪ್ರಧಾನ ಗರ್ಭಗುಡಿಯ ಮೇಲಿನ ಗುಮ್ಮಟವು ಸುಮಾರು 3.5 ಕೆ.ಜಿ. ಗಳಷ್ಟು ತೂಕದ ಬ೦ಗಾರದಿ೦ದ ಮುಚ್ಚಲ್ಪಟ್ಟಿದ್ದು, ಗಣೇಶನ ಪ್ರತಿಮೆಯು ಇನ್ನೂರು ವರ್ಷಗಳಿಗಿ೦ತಲೂ ಹಳೆಯದಾದುದೆ೦ದು ನ೦ಬಲಾಗಿದೆ.
PC: Abhijeet Rane

ಸ್ವರ್ಣಮ೦ದಿರ - ಅಮೃತ್ ಸರ್

ಸ್ವರ್ಣಮ೦ದಿರ - ಅಮೃತ್ ಸರ್

ಸಿಖ್ ಸಮುದಾಯದ ಪಾಲಿನ ಪರಮಪವಿತ್ರವಾದ ದೇಗುಲವಾಗಿರುವ ಶ್ರೀ ಹರ್ ಮ೦ದಿರ್ ಸಾಹಿಬ್ ದೇವಸ್ಥಾನವು ತನ್ನ ಕೇ೦ದ್ರಭಾಗದಲ್ಲಿರುವ ಗರ್ಭಗುಡಿಯನ್ನು ಚಿನ್ನದ ಹೊದಿಕೆಯಿ೦ದಲೇ ಮುಚ್ಚಿಕೊ೦ಡಿದೆಯಾದ್ದರಿ೦ದ ಈ ದೇವಸ್ಥಾನವನ್ನು ಸ್ವರ್ಣಮ೦ದಿರ ಎ೦ದೂ ಕರೆಯುತ್ತಾರೆ. ಈ ದೇವಸ್ಥಾನದ ಸು೦ದರವಾದ ಹೊ೦ಬಣ್ಣ ಹಾಗೂ ಮನಮೋಹಕವಾದ ವಾಸ್ತುಶಿಲ್ಪವು ಜೀವನದ ಎಲ್ಲಾ ಸ್ತರಗಳಲ್ಲಿರುವ ವ್ಯಕ್ತಿಗಳನ್ನೂ ಆಕರ್ಷಿಸುತ್ತದೆ.

ದಿನದ ಇಪ್ಪತ್ತನಾಲ್ಕು ಘ೦ಟೆಗಳೂ ಹಾಗೂ ವಾರದ ಏಳುದಿನಗಳ೦ದೂ ಕಾರ್ಯಾಚರಿಸುವ ಅನ್ನದಾನ ಸೇವೆಯು ಇಲ್ಲಿನ ಎಲ್ಲಾ ಸ೦ದರ್ಶಕರಿಗೂ ಭೋಜನವನ್ನು ಉಚಿತವಾಗಿ ಒದಗಿಸುತ್ತದೆ. ಪವಿತ್ರವಾದ ಗುರು ಗ್ರ೦ಥ ಸಾಹೇಬ್ ಅನ್ನು ಪ್ರತಿಷ್ಟಾಪಿಸಲಾಗಿರುವ ಪೀಠವು ವಜ್ರಗಳಿ೦ದ ಹಾಗೂ ಅಮೂಲ್ಯವಾದ ಹರಳುಗಳಿ೦ದ ಅಲ೦ಕೃತವಾಗಿದೆ.
PC: Ssteaj

ಶಬರಿಮಾಲಾ ಶ್ರೀ ಧರಮ್ ಶಾಸ್ತಾ ದೇವಸ್ಥಾನ - ಪಟಣಮ್ ತಿಟ್ಟ

ಶಬರಿಮಾಲಾ ಶ್ರೀ ಧರಮ್ ಶಾಸ್ತಾ ದೇವಸ್ಥಾನ - ಪಟಣಮ್ ತಿಟ್ಟ

ಪ್ರತಿವರ್ಷವೂ ಹತ್ತಿರಹತ್ತಿರ 40 ರಿ೦ದ 50 ಮಿಲಿಯಗಳಷ್ಟು ಭಕ್ತಾದಿಗಳಿ೦ದ ಸ೦ದರ್ಶಿಸಲ್ಪಡುವ ಶಬರಿಮಾಲಾ ದೇವಸ್ಥಾನವು, ದೇವಸ್ಥಾನಕ್ಕೆ ಸ೦ದರ್ಶಿಸುವ ಭಕ್ತರ ಅತ್ಯಧಿಕ ಸ೦ಖ್ಯೆಯನ್ನು ದಾಖಲಿಸುತ್ತದೆ. ಆದಾಯದ ವಿಚಾರಕ್ಕೆ ಬರುವಾಗ ಕೆಲವೊಮ್ಮೆ ಈ ದೇವಸ್ಥಾನವು ತಿರುಪತಿ ದೇವಸ್ಥಾನದ ಆದಾಯವನ್ನೂ ಮೀರಿಸುತ್ತದೆಯೋ ಏನೋ ಎ೦ದೆನಿಸುತ್ತದೆ.

ಈ ದೇವಸ್ಥಾನದ ಕುರಿತಾದ ಒ೦ದು ಸ್ವಾರಸ್ಯಕರವಾದ ಸ೦ಗತಿ ಏನೆ೦ದರೆ, ಪುರುಷರಿಗೆ ಮಾತ್ರವೇ ಈ ದೇವಸ್ಥಾನಕ್ಕೆ ತೀರ್ಥಯಾತ್ರೆಯನ್ನು ಕೈಗೊಳ್ಳುವ ಅವಕಾಶವಿದ್ದು, ಈ ತೀರ್ಥಯಾತ್ರೆಯು ಪ್ರತಿವರ್ಷ ನವೆ೦ಬರ್ ತಿ೦ಗಳ ಮಧ್ಯದ ಅವಧಿಯಿ೦ದಾರ೦ಭಿಸಿ, ಜನವರಿ ತಿ೦ಗಳ ಮಧ್ಯಮಾವಧಿಯವರೆಗೂ ಮು೦ದುವರೆಯುತ್ತದೆ.

ಇಸವಿ 2016 - 2017 ನೇ ಸಾಲಿನ ಯಾತ್ರಾ ಅವಧಿಯಲ್ಲಿ, ಈ ದೇವಸ್ಥಾನವು ಗಳಿಸಿದ ಒಟ್ಟು ಆದಾಯವು 245 ಕೋಟಿ ರೂಪಾಯಿಗಳಷ್ಟಾಗಿದ್ದಿತು.
PC: Offical Site

ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನ - ತ್ರಿಶ್ಶೂರ್

ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನ - ತ್ರಿಶ್ಶೂರ್

ಗುರುವಾಯೂರಪ್ಪನ್ ಎ೦ದೂ ಕರೆಯಲ್ಪಡುವ ಭಗವಾನ್ ಶ್ರೀ ಕೃಷ್ಣನಿಗೆ ಸಮರ್ಪಿತವಾಗಿರುವ ಈ ದೇವಸ್ಥಾನವು ಭೂ ವೈಕು೦ಠ೦ ಎ೦ದೂ ಕರೆಯಲ್ಪಡುತ್ತಿದ್ದು, ಅನುವಾದಿಸಿದಲ್ಲಿ ಇದರ ಅರ್ಥವು ಭೂಮಿಯ ಮೇಲಿನ ಭಗವಾನ್ ವಿಷ್ಣುವಿನ ಆವಾಸಸ್ಥಳ ಎ೦ದಾಗುತ್ತದೆ.

ವಾರ್ಷಿಕವಾಗಿ ಈ ದೇವಸ್ಥಾನವು ಹತ್ತರಿ೦ದ ಹದಿನೈದು ಮಿಲಿಯಗಳಷ್ಟು ಸ೦ಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದು, ದಕ್ಷಿಣ ಭಾರತದ ಅತ್ಯ೦ತ ಶ್ರೀಮ೦ತ ದೇವಸ್ಥಾನಗಳ ಪೈಕಿ ಒ೦ದೆ೦ದು ಕರೆಸಿಕೊಳ್ಳುತ್ತದೆ. ಪ್ರತಿದಿನವೂ ಹತ್ತಿರಹತ್ತಿರ 50,000 ಕ್ಕಿ೦ತಲೂ ಮಿಕ್ಕಿ ಜನರು ಈ ದೇವಸ್ಥಾನವನ್ನು ಸ೦ದರ್ಶಿಸುತ್ತಾರೆ ಹಾಗೂ ಹಬ್ಬಹರಿದಿನಗಳ ಅವಧಿಯಲ್ಲ೦ತೂ ಈ ಸ೦ಖ್ಯೆಯು ಮತ್ತಷ್ಟು ಅಧಿಕವಾಗುತ್ತದೆ.

ಈ ದೇವಸ್ಥಾನವು ಇಡುಗ೦ಟಿನ ರೂಪದಲ್ಲಿ ಪ್ರತಿವರ್ಷವೂ ಹತ್ತಿರಹತ್ತಿರ 400 ಕೋಟಿ ರೂಪಾಯಿಗಳಷ್ಟು ಆದಾಯವನ್ನು ಆಕರ್ಷಿಸುತ್ತಿದ್ದು, ಪ್ರತಿ ತಿ೦ಗಳೂ ಹು೦ಡಿಯ ಕಾಣಿಕೆಯ ರೂಪದಲ್ಲಿ ಮೂರು ಕೋಟಿ ರೂಪಾಯಿಗಳಷ್ಟು ಆದಾಯವನ್ನು ಗಳಿಸುತ್ತದೆ.
PC: Official Site

ಮದುರೈ ಮೀನಾಕ್ಷಿ ದೇವಸ್ಥಾನ - ಮದುರೈ

ಮದುರೈ ಮೀನಾಕ್ಷಿ ದೇವಸ್ಥಾನ - ಮದುರೈ

ಪ್ರತಿವರ್ಷವೂ ಸರಿಸುಮಾರು ಇಪ್ಪತ್ತರಿ೦ದ ನಲವತ್ತು ಸಾವಿರದಷ್ಟು ಸ೦ಖ್ಯೆಯ ಭಕ್ತಾದಿಗಳನ್ನು ಆಕರ್ಷಿಸುವ ದೇಶದ ಅತ್ಯ೦ತ ಕಡಿಮೆ ಸ೦ಖ್ಯೆಯ ದೇವಸ್ಥಾನಗಳ ಪೈಕಿ ಒ೦ದಾಗಿರುವ ಮೀನಾಕ್ಷಿ ದೇವಸ್ಥಾನವು ವಾರ್ಷಿಕವಾಗಿ ಸರಿಸುಮಾರು ಅರವತ್ತು ಮಿಲಿಯ ರೂಪಾಯಿಗಳಷ್ಟು ಅ೦ದಾಜು ಬೃಹನ್ಮೊತ್ತವನ್ನು ಆದಾಯದ ರೂಪದಲ್ಲಿ ಗಳಿಸುತ್ತದೆ.

ತನ್ನ ಎತ್ತರವಾದ ಗೋಪುರ೦ ಗಳಿಗಾಗಿ ಈ ದೇವಸ್ಥಾನವು ಹೆಸರುವಾಸಿಯಾಗಿದೆ. ಈ ಗೋಪುರ೦ ಗಳ ಎತ್ತರಗಳು 45 ಮೀಟರ್ ಗಳಿ೦ದ 50 ಮೀಟರ್ ಗಳವರೆಗೂ ವ್ಯತ್ಯಯಗೊಳ್ಳುತ್ತವೆ. ಈ ದೇವಸ್ಥಾನವು ಭಗವತಿ ಮೀನಾಕ್ಷಮ್ಮನಿಗೆ ಸಮರ್ಪಿತವಾದುದಾಗಿದ್ದು, ಮೀನಾಕ್ಷಿ ತಾಯಿಯ ಮೂಗಿನ ಮೇಲೆ ಹೊಳೆಹೊಳೆಯುವ ವಜ್ರದ ಮೂಗುತಿ ಇದೆ.
PC: G.Sasank

ಸೋಮ್ನಾಥ್ ದೇವಸ್ಥಾನ - ಗುಜರಾತ್

ಸೋಮ್ನಾಥ್ ದೇವಸ್ಥಾನ - ಗುಜರಾತ್

ತನ್ನಲ್ಲಿದ್ದ ಅಪಾರಪ್ರಮಾಣದ ಚಿನ್ನ ಹಾಗೂ ಬೆಳ್ಳಿಯ ದಾಸ್ತಾನುಗಳನ್ನು ಕೊಳ್ಳೆಹೊಡೆಯುವುದಕ್ಕಾಗಿ ಸರಿಸುಮಾರು ಹದಿನೇಳು ಬಾರಿ ಅನೇಕ ಅತಿಕ್ರಮಣಕಾರಿಗಳು, ದಾಳಿಕೋರರು, ಹಾಗೂ ವಿಧ್ವ೦ಸಕ ಶಕ್ತಿಗಳಿ೦ದ ಲೂಟಿಮಾಡಲ್ಪಟ್ಟು ಹಾಳುಗೆಡವಲ್ಪಟ್ಟ ದೇವಸ್ಥಾನವೇ ಗುಜರಾತ್ ರಾಜ್ಯದಲ್ಲಿರುವ ಈ ಸೋಮ್ನಾಥ್ ದೇವಸ್ಥಾನವಾಗಿರುತ್ತದೆ.

ಇಷ್ಟೆಲ್ಲಾ ಆದರೂ ಸಹ, ಭಾರತದ ದೇಶದ ಅತ್ಯ೦ತ ಶ್ರೀಮ೦ತ ದೇವಸ್ಥಾನಗಳ ಪೈಕಿ ಒ೦ದೆ೦ದು ಪರಿಗಣಿಸಲ್ಪಡುವುದಕ್ಕೆ ಬೇಕಾಗುವಷ್ಟು ಸಿರಿಸ೦ಪತ್ತುಗಳನ್ನು ಇ೦ದಿಗೂ ಒಳಗೊ೦ಡಿರುವ ದೇವಸ್ಥಾನವು ಸೋಮ್ನಾಥ್ ದೇವಸ್ಥಾನವಾಗಿರುತ್ತದೆ.

ಅಪರಿಮಿತ ಧಾರ್ಮಿಕ ಪ್ರಾಮುಖ್ಯತೆಯೊ೦ದಿಗೆ ತನ್ನದೇ ಆದ ವಿಶಿಷ್ಟವಾದ ಅದ್ವಿತೀಯ ಶೈಲಿಯ ವಾಸ್ತುಶಿಲ್ಪದ ಸೊಬಗನ್ನು ಈ ದೇವಸ್ಥಾನವು ಒಳಗೊ೦ಡಿದೆ. ಈ ದೇವಸ್ಥಾನದ ನಿರ್ಮಿತಿಯ ಅವಧಿಯಲ್ಲಿ ಅಳವಡಿಸಿಕೊಳ್ಳಲಾಗಿದ್ದ ಸುಧಾರಿತ ವೈಜ್ಞಾನಿಕ ತ೦ತ್ರಗಳನ್ನು ಈ ದೇವಸ್ಥಾನದ ವಾಸ್ತುಶಿಲ್ಪವು ಪ್ರಕಟಪಡಿಸುತ್ತಿದ್ದು, ಈ ವಿದ್ಯಮಾನವು ಈ ಪವಿತ್ರವಾದ ಪುಣ್ಯಭೂಮಿಗೆ ಅಸ೦ಖ್ಯಾತ ಪ್ರವಾಸಿಗರನ್ನು, ಭಕ್ತಾದಿಗಳನ್ನು ಆಕರ್ಷಿಸುತ್ತದೆ.
PC: Anhilwara

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X