ಶ್ರೀ ವರದರಾಜ ಪೆರುಮಾಳ್ ದೇವಾಲಯವನ್ನು ವರದರಾಜ ಪೆರುಮಾಳರ ಅನುಯಾಯಿಯಾಗಿದ್ದ ರಾಜ ಕೃಷ್ಣವರ್ಮನು ಹಲವು ಶತಮಾನದ ಹಿಂದೆ ನಿರ್ಮಿಸಿದನು. ದಂತಕತೆಯ ಪ್ರಕಾರ ಒಮ್ಮೆ ರಾಜ ವೀರರಾಘವನ್ ಮೇಲೆ ನೆರೆಯ ರಾಜ್ಯದ ಶತ್ರುಗಳು ದಾಳಿ ಮಾಡಿದಾಗ ಇಲ್ಲಿನ ದೇವರು ಆತನ ನೆರವಿಗೆ ಧಾವಿಸಿದ್ದರಂತೆ. ಅದರ ಗೌರವಾರ್ಥವಾಗಿ ರಾಜನು ಆ ದೇವರಿಗಾಗಿ ಒಂದು ದೇವಾಲಯವನ್ನು ನಿರ್ಮಿಸಿದನಂತೆ. ನಂತರ ದೇವಾಲಯದ ಸುತ್ತಲೂ ಒಂದು ನಗರವನ್ನು ನಿರ್ಮಾಣ ಮಾಡಿ ಅದಕ್ಕೆ ವೀರರಾಘವಪುರಂ ಎಂದು ಹೆಸರಿಟ್ಟನಂತೆ.
ಈ ದೇವಾಲಯವು ತಾಮಿರಭರಣಿ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯದ ಮುಖ್ಯದೇವರು ಅಥವಾ "ಮೂಲವರ್" ವೀರರಾಘವನ್ ಆದರೆ "ಉತ್ಸವ ಮೂರ್ತಿ"ಯು ಶ್ರೀ ವರದರಾಜ ಪೆರುಮಾಳ್ ಆಗಿದ್ದಾರೆ. ಅದಕ್ಕೆ ಈ ದೇವಾಲಯಕ್ಕೆ ಈ ಹೆಸರು ಬಂದಿದೆ. ಈ ದೇವಾಲಯಕ್ಕೆ ಭೇಟಿಕೊಡುವುದಿದ್ದಲ್ಲಿ ತಮಿಳು ಮಾಸವಾದ ಚಿತರೈ ( ಏಪ್ರಿಲ್ ಮಧ್ಯಭಾಗದಿಂದ ಮೇ ಮಧ್ಯ ಭಾಗದವರೆಗಿನ ಅವಧಿ)ನಲ್ಲಿ ಭೇಟಿಕೊಡಬಹುದು. ಈ ದೇವಾಲಯವು ಬೆಳಗ್ಗೆ 7.00 ರಿಂದ 11.00 ಗಂಟೆಯವರೆಗೆ ಮತ್ತು ಸಂಜೆ 6.00 ರಿಂದ ರಾತ್ರಿ 9.00 ರವರೆಗೆ ತೆರೆದಿರುತ್ತದೆ.