ಮನಸ್ಸಿಗೆ ಸಂತೋಷವನ್ನು ನೀಡುವ ಸ್ಥಳಕ್ಕೆ ಹೋಗಬೇಕೆನ್ನುವುದು ಎಲ್ಲರ ಬಯಕೆ ಆದರೆ ಎಲ್ಲಿಗೆ ಎನ್ನುವ ಆಯ್ಕೆಯು ನಮ್ಮ ಮುಂದೆ ಬಂದಾಗ ನಿಮಗಾಗಿ ನಮ್ಮ ಆಯ್ಕೆ ಕೇರಳ ರಾಜ್ಯದ ತಿರುವಲ್ಲಾ ಎಂಬ ಪುಟ್ಟ ಪಟ್ಟಣ. ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕೇರಳ ರಾಜ್ಯದಲ್ಲಿರುವ ಪತನಂತಿಟ್ಟ ಜಿಲ್ಲೆಯಲ್ಲಿ, ಮಣಿಮಾಲಾ ನದಿಯ ತಡದಲ್ಲಿರುವ ಪುಟ್ಟ ಹಾಗೂ ಪ್ರಶಾಂತ ಪಟ್ಟಣವೇ ತಿರುವಲ್ಲಾ. ಈ ಪಟ್ಟಣವು ’ದೇವಾಲಯಗಳ ನಗರ’ ಎಂದೇ ಪ್ರಸಿದ್ಧ ವಾಗಿದೆ, ಹಾಗೂ ಹಲವಾರು ದೇವಲಾಯಗಳಿಂದ ಕೂಡಿದ ಈ ಪಟ್ಟಣ ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ನಗರ. ತಿರುವಲ್ಲಾ, ದೇಶದ ಎಲ್ಲಾ ಭಾಗಗಳಿಂದ ಬರುವ ಪ್ರವಾಸಿಗರ ಹಾಗೂ ಭಕ್ತಾದಿಗಳ ಆಕರ್ಷಣೀಯ ಸ್ಥಳವಾಗಿದೆ. ಇಲ್ಲಿರುವ ಪೌರಾಣಿಕ ದೇವಾಲಯ ’ಶ್ರೀ ವಲ್ಲಭ ದೇವಾಲಯ’. ಇದು ’ದಕ್ಷಿಣ ತಿರುಪತಿ’ ಎಂದೇ ಹೆಸರುವಾಸಿಯಾಗಿದೆ. ಈ ಸ್ಥಳದಲ್ಲಿ ಹಳೆಯ ಇತಿಹಾಸವನ್ನು ಹೊಂದಿದ ಪಲೈಕರ ಚರ್ಚ್ ಕಾಣಬಹುದಾಗಿದ್ದು, ಕ್ರಿ.ಶ 52 ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಕ್ರಿಸ್ತ ಧರ್ಮ ಪರಿಚಯವಾದ ಘಟನೆಯನ್ನು ಹೇಳುತ್ತದೆ. ತಿರುವಲ್ಲಾ ನಗರವು ಹಲವಾರು ಕಥೆಗಳನ್ನು, ಪೌರಾಣಿಕ ಹಿನ್ನೆಲೆಯನ್ನು ತನ್ನ ಸಂಪ್ರದಾಯದಲ್ಲಿ ಒಳಗೊಂಡಿದೆ. ಇಲ್ಲಿನ ಪ್ರತಿಯೊಂದು ದೇವಾಲಯ, ಅಲ್ಲಿ ಆಚರಿಸಲಾಗುವ ಹಬ್ಬಗಳು, ಹಾಗೂ ಹೆಸರುಗಳಲ್ಲಿಯೂ ಒಂದೊಂದು ಕಥೆಗಳಿವೆ. ಇಲ್ಲಿನ ಕಥೆಯು ತಿರುವಾಂಕೂರಿನ ಮಹಾರಾಜರಿಂದ ಪ್ರಾರಂಭವಾಗುತ್ತದೆ. ಮೊದಲು ಈ ನಗರವು ಶ್ರೀ ವಲ್ಲಭಪುರಂ ಎಂದಿದ್ದು ನಂತರ ಅದನ್ನು ತಿರುವಲ್ಲಭಪುರಂ ಎಂದೂ ಕರೆಯಲಾಗುತ್ತಿದ್ದು ಇತ್ತೀಚಿಗೆ ತಿರುವಲ್ಲಾ ಎಂದು ಮರು ನಾಮಕರಣ ಮಾಡಲಾಗಿದೆ. ಇನ್ನೊಂದು ನಂಬಿಕೆಯಂತೆ ಇಲ್ಲಿನ ದೇವತೆ ತಿರು ವಲ್ಲಭಂ ಅಥವಾ ವಿಷ್ಣು ವಿನ ಹೆಸರಿನಿಂದ ತಿರುವಲ್ಲಾ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ತಿರುವಲ್ಲಾವನ್ನು ವಿಷ್ಣುವಿನ ನಗರ ಎಂದೇ ಹೆಚ್ಚಾಗಿ ಗುರುತಿಸಲ್ಪಡುತ್ತದೆ.
ಒಂದು ಸಾಂಸ್ಕೃತಿಕ ವೈವಿಧ್ಯತೆ
ಪಾರಂಪರಿಕವಾದ ತಿರುವಲ್ಲಾ ಪಟ್ಟಣವು ಕೇವಲ ದೇವಾಲಯಗಳಿಗೆ ಹಾಗೂ ಅದರ ಚಟುವಟಿಕೆಗಳಿಗೆ ಮಾತ್ರ ಸೀಮಿತವಾದುದಲ್ಲ. ಇಲ್ಲಿ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಎಲ್ಲಾ ಧರ್ಮದ ಆಚರಣೆಯನ್ನು ನೋಡಬಹುದಾಗಿದ್ದು ವೈವಿಧ್ಯಮಯವಾಗಿದೆ. ಹಲವಾರು ಚರ್ಚ್ ಗಳು ದೇವಾಲಯದ ಹತ್ತಿರವೇ ಸ್ಥಾಪಿಸಲಾಗಿದೆ. ಅಲ್ಲದೇ ಕೆಲವು ಹೆಸರುವಾಸಿ ಮಸೀದಿಗಳೂ ಈ ಚಿಕ್ಕ ಪಟ್ಟಣದಲ್ಲಿ ಕಟ್ಟಲಾಗಿದೆ. ಈ ಧರ್ಮಗಳ ಸಮ್ಮಿಳನ ತಿರುವಲ್ಲಾದಲ್ಲಿನ ಏಕೈಕ ಸಂಸ್ಕೃತಿಗೆ ಆಕಾರವನ್ನು ಕೊಟ್ಟಿದೆ. ಇಲ್ಲಿನ ದೇವಾಲಯಗಳು ಪೂಜಿಸುವುದಕ್ಕೆ ಮಾತ್ರವಲ್ಲದೇ ಸಾಮಾಜದ ಆದಾಯ ಹಾಗೂ ಮಾದರಿ ಸಮಾಜವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತಿರುವಲ್ಲಾ ಹಲವಾರು ದೇವಾಲಯಗಳನ್ನು ಹೊಂದಿದ್ದು, ಅಮ್ಮನ್ ಕುಂಡಂ, ಅರತ್ತು, ಚಂದನಕುಂಡಂ, ಚತುವೈಲಕು, ಈಜುನ್ನಾಲತು ಇನ್ನೂ ಅನೇಕ ದೇವಾಲಯಗಳನ್ನು ಇಲ್ಲಿ ಕಾಣಬಹುದು.
ಸಮಯ ಹಾಗೂ ಸ್ವಾದ
ತಿರುವಲ್ಲ ಇಲ್ಲಿನ ಉತ್ತಮ, ಶಾಂತವಾದ ಹಾಗೂ ಆಹ್ಲಾದಕರ ವಾಯುಗುಣಕ್ಕೆ ಹೆಸರುವಾಸಿ. ನೈರುತ್ಯ ಮಾನ್ಸೂನ್ ಗಾಳಿಯು ಅಧಿಕ ಮಳೆಯನ್ನು ತಿರುವಲ್ಲಾ ಪ್ರದೇಶಕ್ಕೆ ಆಗಸ್ಟ್ ತಿಂಗಳಿನಲ್ಲಿ ಕೊಂಡೊಯ್ಯುತ್ತದೆ. ತಿರುವಲ್ಲಾ ಒಂದು ಉಷ್ಣವಲಯದ ಪ್ರಭಾವವನ್ನು ಹೂಂದಿದ್ದರೂ ಆಹ್ಲಾದಕರ ವಾಯುಗುಣವನ್ನು ಹೊಂದಿದೆ. ತಿರುವಲ್ಲಾ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಲು ಸರಿಯಾದ ಸಮಯವೆಂದರೆ ಮಳೆಗಾಲ ಕಡಿಮೆಯಾದ ನಂತರ. ಆಗತಾನೆ ಮಳೆ ಸುರಿಯುವುದು ನಿಂತಿರುವುದರಿಂದ ವಾತಾವರಣವು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಭತ್ತ ಇಲ್ಲಿನ ಪ್ರಮುಖ ಬೆಳೆ. ಮಳೆಗಾಲದ ಕೊನೆಯಲ್ಲಿ ತೆನೆಮೂಡಿರುವ ಭತ್ತದ ಗದ್ದೆಯನ್ನು ನೋಡುವುದೇ ಚಂದ. ಸಾಂಪ್ರದಾಯಿಕ ದಕ್ಷಿಣ ಭಾರತದ ತಿಂಡಿಗಳನ್ನು ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದಂತಹ ಜಾಗ. ಅಕ್ಕಿ ಇಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಅನ್ನ, ತಿರುವಲ್ಲಾದ ಪ್ರಮುಖ ಆಹಾರ ಪದಾರ್ಥ. ದಕ್ಷಿಣ ಭಾರತದ ತಿಂಡಿಗಳೆಂದರೆ ಇಡ್ಲಿ ಮತ್ತು ದೋಸಾ ಎನ್ನುವ ನಂಬಿಕೆ ವಿರುದ್ಧವಾಗಿದೆ ತಿರುವಲ್ಲಾದ ತಿಂಡಿಗಳು. ಪಟ್ಟು, ಮೇಲೋಗರ, ಪಕ್ಕು ಚೆನ್ನಾ ಕರಿ, ಅಪ್ಪಂ/ ಅಪ್ಪ ಇನ್ನೂ ಹಲವಾರು ಭಕ್ಷ್ಯಗಳು ಪ್ರವಾಸಿಗರನ್ನು ಸ್ವರ್ಗದ ದರ್ಶನ ಮಾಡಿಸುತ್ತವೆ. ಅಷ್ಟು ಸ್ವಾದಿಷ್ಟ ತಿನಿಸುಗಳು ಇಲ್ಲಿ ಲಭ್ಯ.
ಕೇರಳದಲ್ಲಿ ಭಾರಿ ಪ್ರಮಾಣದ ಅನ್ನದ ಅಡುಗೆಗಳನ್ನು ಮಾಡಲಾಗುತ್ತದೆ, ತೆಂಗಿನ ಕಾಯಿಯನ್ನು ಬಳಸದೆ ಅವರ ಅಡುಗೆ ಪರಿಪೂರ್ಣವಾಗುವುದೇ ಇಲ್ಲ. ಇಲ್ಲಿನ ಸ್ಥಳೀಯರು ಬಾಯಿ ರುಚಿಗೆ ಹೆಚ್ಚಿನ ಮಹತ್ಚ ಕೊಡುತ್ತಿದ್ದು, ಕಚ್ಚಾ ಮಾವಿನಕಾಯಿ, ಲಿಂಬು/ ಹುಳಿ ಇವುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ತಿರುವಲ್ಲಾ ಸ್ಥಳವು, ನೀವು ಬಿಡುವಿಲ್ಲದಂತೆ ಸಿಹಿ, ಹುಳಿ, ಖಾರಾ, ಕಹಿ, ಮಸಾಲೆ, ತೆಂಗು ಇವುಗಳ ಭಾರಿ ಮಿಶ್ರಣದ ಖಾಧ್ಯಗಳನ್ನು ತಿನ್ನಲು ಸೂಕ್ತವಾದ ಸ್ಥಳ ! ಈ ಸಣ್ಣ ನಗರವು ಹಳೆಯ ವಿಶ್ವದ ಮೋಡಿ ಹಾಗೂ ನೈಸರ್ಗಿಕ ಸೌಂದರ್ಯವನ್ನು ನಿಮಗೆ ನೀಡುತ್ತದೆ. ನೀವು ಮೈಥಾಲಜಿ/ ಪುರಾಣದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದರೆ, ತಿರುವಲ್ಲಾಕ್ಕೆ ಹೋಗಲೇ ಬೇಕು. ಮಹಾ ರಾಜರು ಹಾಗೂ ದೇವಾಲಯ ನಿರ್ಮಾಣದ ಸೊಬಗು ಈ ಸಣ್ಣ ನಗರದಲ್ಲಿ ನಿಮಗಾಗಿ ಕಾಯುತ್ತಿವೆ !