"ರಾಹು" ಅಂದರೆ ಕೆಟ್ಟದ್ದು ಎಂದು ಭಾವಿಸಿರುವ ಈ ಜನರ ಮಧ್ಯೆ, ಅವನಿಗಾಗಿ ದೇವಸ್ಥಾನ ಕಟ್ಟಿಸಿ ಪ್ರತಿನಿತ್ಯ ಪೂಜಿಸುವ ಜನರೂ ಇದ್ದಾರೆ ಎಂದರೆ ? ಅಚ್ಚರಿ ಎನಿಸುವುದು ಖಚಿತ. ಹಾಗೆ ರಾಹುವಿನ ಪೂಜೆಗೈಯುತ್ತಿರುವ ಜನ, ತಮಿಳು ನಾಡಿನ ತಿರುನಾಗೇಶ್ವರಂನವರು. ತಂಜಾವೂರು ಜಿಲ್ಲೆಯಲ್ಲಿನ ಪಂಚಾಯತ್ ಪಟ್ಟಣವಾದ ತಿರುನಾಗೇಶ್ವರಂ, ಕುಂಬಕೋಣಂನಿಂದ ಪೂರ್ವಕ್ಕೆ ಕೇವಲ 8 ಕಿ.ಮೀ ದೂರದಲ್ಲಿದೆ. ಪ್ರತೀ ವರ್ಷ ಅತಿ ಹೆಚ್ಚು (ಸುಮಾರು 220 ಸೆ.ಮೀ) ಮಳೆ ಪಡೆಯುವ ಈ ಪ್ರದೇಶದ ಮಣ್ಣು ಅತ್ಯಂತ ಫಲವತ್ತಾಗಿದೆ. ಗೋದಿ, ಬತ್ತ, ಮೆಕ್ಕೆಜೋಳಗಳು ಇಲ್ಲಿನ ಪ್ರಮುಖ ಆಹಾರ ಬೆಳೆಗಳಾಗಿದ್ದು, ಮಾವು ಹಾಗು ತೆಂಗಿನ ತೋಟಗಳೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ತಿರುನಾಗೇಶ್ವರಂನಲ್ಲಿ ನೋಡಲು ಏನೇನಿದೆ?
ತಿರುನಾಗೇಶ್ವರಂನಲ್ಲಿ ಮುಖ್ಯವಾಗಿ ಎರಡು ದೇವಾಲಯಗಳಿವೆ. ಒಂದು "ನಾಗನಾಥಸ್ವಾಮಿ"ಯ ದೇವಾಲಯವಾದ ಶೈವಿತ್ಯೈ ದೇವಾಲಯ. ಹಾಗು ಮತ್ತೊಂದು ಒಪ್ಪಿಲಿಯಪ್ಪನ್ ದೇವಾಲಯವಾದ ವೈಷ್ಣವಿತ್ಯೈ ದೇಗುಲ. ಶೈವಿತ್ಯೈ ದೇವಾಲಯದಲ್ಲಿ, ಭಗವಾನ ಶಿವ ತನ್ನ ಪತ್ನಿ ಪಾರ್ವತಿ ಸಮೇತನಾಗಿ "ನಾಗನಾಥಸ್ವಾಮಿ" ಎಂಬ ಹೆಸರಿನಲ್ಲಿ ಪೂಜಿಸಿ ಕೊಳ್ಳುವನು. ಇದೇ ದೇಗುಲದಲ್ಲಿ ಮಾನವ ರೋಪಿಯಾದ ರಾಹುವಿನ ಪ್ರತಿಮೆಯೂ ಇದ್ದು, ಪ್ರತಿದಿನ ರಾಹುಕಾಲದಲ್ಲಿ ಈ ಮೂರ್ತಿಗೆ ಕ್ಷೀರಾಭಿಷೇಕ ನಡೆಯುವುದು ಇಲ್ಲಿನ ವಿಶೇಷ. ಯಾರ ಜಾತಕದ ಮೇಲೆ ರಾಹು ತನ್ನ ಕೆಟ್ಟದೃಷ್ಟಿ ಬೀರುವನೋ ಅವನ ಜೀವನದಲ್ಲಿ ಅಪಾರ ತೊಂದರೆಗಳು ಎದುರಾಗುವವು ಎಂಬ ನಂಬಿಕೆ ಇದೆ. ಆದ್ದರಿಂದ, ಎಲ್ಲ ರೀತಿಯ ದುರದೃಷ್ಟಗಳನ್ನು ಹೋಗಲಾಡಿಸೆಂದು ನಾಗನಾಥಸ್ವಾಮಿ ದೇವಾಲಯದಲ್ಲಿ ರಾಹುವನ್ನು ಪೂಜಿಸುವರು.
ವೈಷ್ಣವಿತ್ಯೈ ದೇವಾಲಯವಾದ ಒಲಿಯಪ್ಪನ್ ದೇವಾಲಯವು ವರ್ಷ ಪೂರ್ತಿ ಯಾತ್ರಿಕರನ್ನು ಆಕರ್ಷಿಸುತ್ತದೆ. ಆದರೂ ಎಪ್ರಿಲ್/ಮೇ ನಲ್ಲಿ ನಡೆಯುವ ರಾಮನವಮಿ ಉತ್ಸವಕ್ಕೆ ದೂರದೂರುಗಳಿಂದ ಭಕ್ತರ ದಂಡೇ ಬರುತ್ತದೆ. ಅದರಲ್ಲೂ ನವಮಿಯ ಕೊನೇ ದಿನ ನಡೆಯುವ ಕನಕಾಭಿಷೇಕ ಮತ್ತು ತಿರುಕಲ್ಯಾಣ ಉತ್ಸವಗಳಿಗೆ ಸಾಕ್ಷಿಯಾಗಲು ಸಾವಿರಾರು ಭಕ್ತರು ನೆರೆಯುವರು. ರಾಹುವಿನ ಪೂಜೆ ಅಲ್ಲಿನ ವಿಶೇಷತೆಯಾದರೆ, ಉಪ್ಪಿನ ನಿಷೇಧ ಇಲ್ಲಿನ ವಿಶೇಷತೆ. ಇಲ್ಲಿ ಮಾಡುವ ಯಾವುದೇ ಪ್ರಸಾದ ಅಥವಾ ಅಡಿಗೆಗೆ ಉಪ್ಪನ್ನು ಹಾಕುವುದಿಲ್ಲ. ಉಪ್ಪಿರುವ ಯಾವುದೇ ಪದಾರ್ಥವನ್ನು ದೇವಾಲಯದ ಒಳಗೆ ಕೊಂಡೊಯ್ಯುವುದಿಲ್ಲ.
ತಿರುನಾಗೇಶ್ವರಂನ ಸುತ್ತ ಇರುವ ನವಗ್ರಹ ದೇವಾಲಯಗಳು
ಈಗಾಗಲೇ ತಿರುನಾಗೇಶ್ವರಂನಲ್ಲಿ ಒಂದು ನವಗ್ರಹ ದೇವಸ್ಥಾನವಿರುವುದೆಂದು ತಿಳಿದಿರುವೆವು. ಇನ್ನು ಉಳಿದೆಂಟು ನವಗ್ರಹಗಳೂ ಇದರ ಸುತ್ತಲಿನ ಪ್ರದೇಶಗಳಲ್ಲೇ ಸ್ಥಿತಗೊಂಡಿವೆ. ಶನಿಗ್ರಹದ ಅಧಿಪತಿ ಶನಿದೇವನ ಗುಡಿ ತಿರುನಲ್ಲಾರದಲ್ಲಿದೆ. ಕಂಜಾನೂರಿನಲ್ಲಿ ಶುಕ್ರನ ಗುಡಿ ಇದ್ದರೆ, ಸೂರ್ಯನಾರ್ ಕೊಯ್ಲಿನಲ್ಲಿ ಸೂರ್ಯನ ದೇವಾಲಯವಿದೆ. ಇನ್ನು ಬುಧನ ದೇಗುಲ ತಿರುವೆಂಕಡುನಲ್ಲಿದ್ದರೆ ಚಂದ್ರನದು ತಿಂಗಲೂರಿನಲ್ಲಿದೆ.ಅಂತೆಯೇ ಕೇಝ್ಪೆರುಂಪಲ್ಲಂನಲ್ಲಿ ಕೇತುವಿನ ಗುಡಿಯೂ,ಅಲಂಗುಡಿಯಲ್ಲಿ ಗುರು ಹಾಗು ವೈದೇಸ್ವರನ್ ಕೊಯ್ಲಿಯಲ್ಲಿ ಮಂಗಳನ ದೇವಸ್ಥಾನಗಳಿವೆ.
ತಿರುನಾಗೇಶ್ವರಂನ ಸಂಪರ್ಕ ಹೇಗೆ?
ತಿರುನಾಗೇಶ್ವರಂಗೆ ರೈಲುನಿಲ್ದಾಣದಲ್ಲಿ ಕುಂಬಕೋಣಂ ನಿಲ್ದಾಣ ಹಾಗೂ ವಾಯುನೆಲೆಯಲ್ಲಿ ತ್ರಿಚಿ ವಿಮಾನನಿಲ್ದಾಣ ಹತ್ತಿರದವು. ತಿರುನಾಗೇಶ್ವರಂಗೆ ಬಸ್ ಸಂಪರ್ಕವು ಚನ್ನಾಗಿದ್ದು ಕುಂಬಕೋಣಂನಿಂದ ಬಸ್ ಗಳು ಲಭ್ಯವಿವೆ.