ತೇನ್ಮಲ ಎಂಬುದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಅತ್ಯಂತ ಪ್ರಸಿದ್ಧ ಜೈವಿಕ ಪ್ರವಾಸಿ ತಾಣವಾಗಿದೆ. ತೇನ್ಮಲ್ ಎಂದರೆ "ಜೇನಿನ ಬೆಟ್ಟ" ಎಂದರ್ಥ. ಈ ಸ್ಥಳವು ಇಲ್ಲಿ ಬಿಡುವ ಜೇನಿಗೆ ಖ್ಯಾತಿ ಪಡೆದಿದೆ. ನಂಬಿಕೆಗಳ ಪ್ರಕಾರ ಈ ಜೇನು ಹಲವಾರು ಔಷಧೀಯ ಗುಣಗಳನ್ನು ಹೊಂದಿರುತ್ತದಂತೆ. ಕೇರಳ ರಾಜಧಾನಿಯಿಂದ 70 ಕಿ.ಮೀ ದೂರದಲ್ಲಿರುವ ಈ ತೇನ್ಮಲವು ಭಾರತದ ಮೊಟ್ಟ ಮೊದಲ ಜೈವಿಕ ಪ್ರವಾಸೋದ್ಯಮ ಯೋಜನೆಯಾಗಿದೆ.
ಜೈವಿಕ ಪ್ರವಾಸೋದ್ಯಮದ ಭಾಗವಾಗಿರುವುದರಿಂದಾಗಿ ಈ ಸ್ಥಳವನ್ನು 5 ಮುಖ್ಯ ವಲಯಗಳನ್ನಾಗಿ ವಿಂಗಡಿಸಲಾಗಿದೆ: ಸಾಂಸ್ಕೃತಿಕ ವಲಯ, ಸಾಹಸ ವಲಯ, ವಿರಾಮ ಕಾಲ ಕಳೆಯುವ ವಲಯ, ಜಿಂಕೆ ಪುನರ್ವಸತಿ ವಲಯ ಮತ್ತು ದೋಣಿ ವಿಹಾರ ವಲಯ ಎಂಬ ಐದು ವಲಯಗಳು ಇಲ್ಲಿವೆ. ಹಲವಾರು ಎಕರೆಗಳ ನಿತ್ಯ ಹರಿದ್ವರ್ಣ ಕಾಡುಗಳನ್ನು ಹೊಂದಿರುವ ತೇನ್ಮಲವು ಭಾರತದ ಒಳಗಿನ ಮತ್ತು ಹೊರಗಿನ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಈ ಜೈವಿಕ ಪ್ರವಾಸಿ ತಾಣವು ಹಲವಾರು ವಿಶಿಷ್ಟ ಸಸ್ಯ ಮತ್ತು ಪ್ರಾಣಿ ಪ್ರಭೇಧಗಳಿಗೆ ಆಶ್ರಯವನ್ನೊದಗಿಸಿದೆ. ಇಲ್ಲಿನ ಗುಡ್ಡಗಾಡು ಪ್ರಾಂತ್ಯವು ದೋಣಿ ವಿಹಾರ, ಹಗ್ಗದ ಸೇತುವೆ, ಚಾರಣ, ಪರ್ವತಾರೋಹಣ, ಬೈಕ್ ಸವಾರಿ ಮತ್ತು ಸಂಗೀತ ಕಾರಂಜಿಯಂತಹ ಹಲವಾರು ಸಾಹಸ ಚಟುವಟಿಕೆಗಳಿಗೆ ಮತ್ತು ಮನೋರಂಜನಾ ಚಟುವಟಿಕೆಗಳಿಗೆ ಅವಕಾಶವನ್ನೊದಗಿಸುತ್ತದೆ.
ವೀಕ್ಷಣಾ ತಾಣಗಳ ಸ್ವರ್ಗ
ತೇನ್ಮಲ ಪ್ರಾಂತ್ಯದಲ್ಲಿ ಹರಿಯುವ ಕಲ್ಲಡ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಪಲರುವಿ ಜಲಪಾತವು ತೇನ್ಮಲವನ್ನು ವಿಹಾರಕ್ಕೆ ಮತ್ತು ಮಧುಚಂದ್ರಗಳಿಗಾಗಿ ಅತ್ಯಂತ ಯೋಗ್ಯ ಸ್ಥಳವನ್ನಾಗಿ ಮಾಡಿದೆ. ಹಲವಾರು ಜಿಂಕೆಗಳ ಪ್ರಭೇಧವನ್ನು ಹೊಂದಿರುವ ಜಿಂಕೆ ಉದ್ಯಾನವನ ಇಲ್ಲಿ ನೋಡ ಬೇಕಾಗಿರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಮರದ ಕುಟೀರಗಳು ಈ ಉದ್ಯಾನವನಕ್ಕೆ ಮಾಂತ್ರಿಕ ಸ್ಪರ್ಶವನ್ನು ಒದಗಿಸಿ, ಇದನ್ನು ಒಂದು ಅತ್ಯುತ್ತಮವಾದ ವಿಹಾರ ತಾಣವನ್ನಾಗಿ ರೂಪಿಸಿವೆ.
ನಕ್ಷತ್ರವನಂ (ಮರಗಳ ನರ್ಸರಿ) , ಅರ್ಯನ್ಕಾವು ಶಾಸ್ತ ದೇವಾಲಯ, ಕುಲತುಪುಳ ಶಾಸ್ತ ದೇವಾಲಯ ಮತ್ತು ಒಂದು ತೂಗು ಸೇತುವೆ ಎಲ್ಲವು ಸೇರಿ ತೇನ್ಮಲವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಿವೆ. ತೇನ್ಮಲಗೆ ರಸ್ತೆ ಸಂಪರ್ಕ ಉತ್ತಮ ರೀತಿಯಲ್ಲಿದೆ. ಇದಕ್ಕೆ ತಿರುವನಂತಪುರಂ ಮತ್ತು ಪುನಲೂರ್ ಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿನ ಮಿತವಾದ ಉಷ್ಣಾಂಶ ಮತ್ತು ಹಿತವಾದ ಹವಾಗುಣವು ಪ್ರವಾಸಿಗರನ್ನು ಎಲ್ಲಾ ಋತುಗಳಲ್ಲಿಯು ತೇನ್ಮಲಗೆ ಬರುವಂತೆ ಪ್ರೇರೇಪಿಸುತ್ತವೆ. ಅಷ್ಟೇ ಅಲ್ಲದೆ ತೇನ್ಮಲವು ಸಾಹಸ ಚಟುವಟಿಕೆಗಳಿಂದ ಮತ್ತು ವಿಹಾರ ತಾಣಗಳಿಂದಾಗಿ ಎಲ್ಲ ಪ್ರವಾಸಿಗರ ಬೇಡಿಕೆಗಳನ್ನು ಮತ್ತು ನಿರೀಕ್ಷೆಗಳನ್ನು ಅಕ್ಷರಶಃ ಪೂರೈಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.